ETV Bharat / state

ಬೆಟ್ಟವನ್ನೇರಿ ದೇವಿರಮ್ಮನ ದರ್ಶನ ಪಡೆದ ಸಹಸ್ರಾರು ಭಕ್ತರು

author img

By

Published : Nov 4, 2021, 7:39 AM IST

devotees worships deviramma at chickmagaluru
ಬೆಟ್ಟವನ್ನೇರಿ ದೇವಿರಮ್ಮನ ದರ್ಶನ ಪಡೆದ ಸಹಸ್ರಾರು ಭಕ್ತರು

ಸಹಸ್ರಾರು ಭಕ್ತರು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವಿರಮ್ಮನ ದರ್ಶನವನ್ನು ಪಡೆದಿದ್ದಾರೆ.

ಚಿಕ್ಕಮಗಳೂರು: ಕಾಫಿನಾಡಿನ ಬೆಟ್ಟವೊಂದರಲ್ಲಿ ದೇವಿ ಶಕ್ತಿ ನೆಲೆಸಿದೆ. ದೀಪಾವಳಿ ವೇಳೆ ದೇವಿ ದರ್ಶನ ಪಡೆದು ಭಕ್ತರು ಧನ್ಯರಾಗುತ್ತಾರೆ. ಆ ಬೆಟ್ಟವನ್ನೇರೋದು ಸವಾಲೆ ಸರಿ. ಹೌದು, ನಾವು ಹೇಳಲಿಕ್ಕೊರಟಿರೋದು ದೇವಿರಮ್ಮನ ಬೆಟ್ಟದ ಬಗ್ಗೆ .

ಪ್ರತಿ ವರ್ಷ ಭಕ್ತರು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವಿರಮ್ಮನ ದರ್ಶನವನ್ನು ಪಡೆಯುತ್ತಾರೆ. ದೇವಿ ದರ್ಶನ ಮಾಡಲು ಬರುವ ಭಕ್ತರು ಸುಮಾರು 8 ಕಿ.ಮೀ ದೂರವನ್ನು ನಡೆದೇ ಕ್ರಮಿಸಬೇಕು. ಬೆಟ್ಟ-ಗುಡ್ಡಗಳ ಸಾಲಿನಲ್ಲಿ, ಮಂಜಿನ ನಡುವೆ, ಬರಿಗಾಲಿನಲ್ಲಿ, ಕಲ್ಲು ಮುಳ್ಳಿನ ದುರ್ಗಮ ಹಾದಿಯಲ್ಲಿ ಹೆಜ್ಜೆಯನ್ನು ಹಾಕಬೇಕು.

ಬೆಟ್ಟವನ್ನೇರಿ ದೇವಿರಮ್ಮನ ದರ್ಶನ ಪಡೆದ ಸಹಸ್ರಾರು ಭಕ್ತರು

ಅದೆಷ್ಟೇ ಕಷ್ಟವಾದ್ರೂ ಮುಂಜಾನೆ 3 ಗಂಟೆಯಿಂದಲೇ ಭಕ್ತರು ನಡೆಯಲು ಶುರು ಮಾಡುತ್ತಾರೆ. ಕೆಲವರು ಬಹಳಾನೇ ಸುಲಭವಾಗಿ ಬೆಟ್ಟವನ್ನು ಏರಿದ್ರೆ, ಹಲವರು ಈ ಬೆಟ್ಟವನ್ನು ಏರಬೇಕಾದ್ರೆ ಪಡೋ ಕಷ್ಟ ಅವ್ರ ಭಕ್ತಿ ಮುಂದೆ ಏನೂ ಅಲ್ಲ. ಈ ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯದಿಂದ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬಂದು ದೇವಿ ದರ್ಶನ ಪಡೆದು ಹೋಗ್ತಾರೆ.

ಬೆಟ್ಟವನ್ನೇರಿ ದೇವಿ ದರ್ಶನ:

ಕೋವಿಡ್​​ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಬೆಟ್ಟವೇರಲು ಹೊರಗಡೆಯಿಂದ ಬರುವ ಭಕ್ತರಿಗೆ ನಿರ್ಬಂಧ ಹೇರಿತ್ತು. ಕೇವಲ ಅಕ್ಕಪಕ್ಕದ ಗ್ರಾಮಸ್ಥರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಆದ್ರೂ ದೇವಿಯ ದರ್ಶನವನ್ನ ಮಾಡಬೇಕೆಂದು ಈ ಬಾರಿ 25ಸಾವಿರಕ್ಕೂ ಹೆಚ್ಚು ಜನರು ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದಿದ್ದಾರೆ. ಕೊರೆಯುವ ಚಳಿ, ಮೈಮೇಲೆ ಬೀಳೋ ಇಬ್ಬನಿ, ಜಾರೋ ಗುಡ್ಡವನ್ನು ಲೆಕ್ಕಿಸದೇ ಸಾವಿರಾರು ಭಕ್ತರು ದೇವಿಯ ದರ್ಶನ ಮಾಡಿ ಧನ್ಯರಾದ್ರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬರಿಗಾಲಲ್ಲಿ ಬೆಟ್ಟವೇರಿ, ದೇವಿ ದರ್ಶನ ಪಡೆಯೋದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಿಸ್ ಮಾಡಿಕೊಳ್ಳಲಿಲ್ಲ. ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕೂಡ ಇದೇ ಮೊದಲ ಬಾರಿಗೆ ಬೆಟ್ಟವನ್ನೇರಿ ಗಮನ ಸೆಳೆದ್ರು.

ಇದನ್ನೂ ಓದಿ: ಶತಮಾನ ಕಂಡ ತುಮರಿ ಸರ್ಕಾರಿ ಶಾಲೆಗೆ ಕಂಟಕವಾಯ್ತಾ ತಹಶೀಲ್ದಾರ್ ಆದೇಶ? : ಗ್ರಾಮಸ್ಥರ ಅಸಮಾಧಾನ

ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನು ದೇವಿಗೆ ಸಮರ್ಪಿಸ್ತಾರೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು ಇಲ್ಲಿನ ವಾಡಿಕೆ.

ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನು ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನು ಆಚರಿಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.