ETV Bharat / state

ತುಳುಗೆ ಕರ್ನಾಟಕದಲ್ಲಿ ಹೆಚ್ಚುವರಿ ಭಾಷೆ ಸ್ಥಾನಮಾನಕ್ಕೆ ಚರ್ಚಿಸಿ ತೀರ್ಮಾನ: ಸಿಎಂ

author img

By ETV Bharat Karnataka Team

Published : Nov 25, 2023, 10:39 PM IST

ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಕಂಬಳ ನಡೆಯಬೇಕು. ನವೆಂಬರ್, ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಿದರೆ ಇನ್ನಷ್ಟು ಜನಪ್ರಿಯತೆ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

will-discuss-on-additional-language-status-for-tulu-in-karnataka-cm-siddaramaiah
ತುಳುಗೆ ಕರ್ನಾಟಕದಲ್ಲಿ ಹೆಚ್ಚುವರಿ ಭಾಷೆ ಸ್ಥಾನಮಾನಕ್ಕೆ ಚರ್ಚಿಸಿ ತೀರ್ಮಾನ: ಸಿಎಂ

ಬೆಂಗಳೂರು: ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ದೊರಕಬೇಕೆಂಬ ಕೋರಿಕೆ ಇದ್ದು, ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಂಗಳೂರು ಕಂಬಳ ಸಮಿತಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಮಾತನಾಡಿದರು. ಕಂಬಳ ಕರಾವಳಿ ಭಾಗದ ಜನಪ್ರಿಯ ಕ್ರೀಡೆ. ಮಂಗಳೂರು, ಉಡುಪಿ ಜಿಲ್ಲೆಗಳ ಜಾನಪದ ಕ್ರೀಡೆ. ಅಶೋಕ್ ರೈ ಅವರ ನೇತೃತ್ವದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕ್ರೀಡೆ ಪ್ರೋತ್ಸಾಹಿಸುವ ಅವಕಾಶ: ಕಂಬಳ ನೋಡಲು ಇಷ್ಟು ಜನರು ಆಗಮಿಸುವ ನಿರೀಕ್ಷೆ ಇರಲಿಲ್ಲ. ಬೆಂಗಳೂರಿನಲ್ಲಿ ಕರಾವಳಿ ಪ್ರದೇಶದವ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಜನರು ಬಂದು ಕಂಬಳ ನೋಡುವ, ಪ್ರೋತ್ಸಾಹಿಸುವ ಅವಕಾಶ ದೊರೆತಿದೆ ಎಂದು ಹೇಳಿದರು.

ಹಿಂದೊಮ್ಮೆ ಉಡುಪಿ ಹಾಗೂ ಬಂಟ್ವಾಳ ಭಾಗದಲ್ಲಿ ಕಂಬಳ ಉದ್ಘಾಟಿಸಿದ್ದನ್ನು ಇದೇ ವೇಳೆ ಸಿದ್ದರಾಮಯ್ಯ ಸ್ಮರಿಸಿದರು. ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಜನರ ಕಲೆಯನ್ನು ಬಹಳ ಜನ ಮೈಗೂಡಿಸಿಕೊಂಡಿದ್ದಾರೆ. ಬಹಳ ಜನ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಇದ್ದಂತೆ ಕಂಬಳದಲ್ಲಿ ಕೋಣಗಳಿಗೆ ನೊಗ ಹಾಕಿ ಓಡಿಸುತ್ತಾರೆ ಎಂದರು.

ಪ್ರತಿ ವರ್ಷ ಬೆಂಗಳೂರಲ್ಲಿ ಕಂಬಳ ನಡೆಯಲಿ: ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಕೋಣ ಸಾಕಲು ಒಂದು ವರ್ಷಕ್ಕೆ 15 ಲಕ್ಷದವರೆಗೆ ವೆಚ್ಚವಾಗುತ್ತದೆ. ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚಾಗುತ್ತದೆ. ನವೆಂಬರ್, ಡಿಸೆಂಬರ್, ಫೆಬ್ರವರಿ ಮಾರ್ಚ್ ತಿಂಗಳುಗಳಲ್ಲಿ ವ್ಯವಸಾಯ ಇಲ್ಲದಿದ್ದಾಗ ಜನ ಜಾನುವಾರುಗಳ ಉತ್ಸವ ಮಾಡಿ ಮನರಂಜನೆ ಪಡೆಯುತ್ತಿದ್ದರು. ಗದ್ದೆಗಳಲ್ಲಿ ಮಣ್ಣನ್ನು ಹದಗೊಳಿಸಿ ಕಂಬಳ ಆಡಿಸುತ್ತಿದ್ದರು. ಕೋಣಗಳನ್ನು ಓಡುವವರಿಗೆ ಅಭ್ಯಾಸವಿರಬೇಕು. ಕ್ರೀಡಾಪಟುವಾಗಿದ್ದರೆ ಮಾತ್ರ ಕೋಣಗಳ ಜೊತೆಗೆ ಓಡಲು ಸಾಧ್ಯ. ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು. ನವೆಂಬರ್, ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಿದರೆ ಜನ ನೋಡುತ್ತಾರೆ. ಇದೊಂದು ಮನರಂಜನೆಯ ಕ್ರೀಡೆಯಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಜಲ್ಲಿಕಟ್ಟು, ಕಂಬಳ ನಡೆಸಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಜನಪ್ರಿಯ ಕ್ರೀಡೆ ಉಳಿಸುವ ಕೆಲಸವಾಗಿದೆ. ಇದನ್ನು ಬೆಳೆಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನಕ್ಕಾಗಿ ನಿವೇಶನ ಕೋರಿದ್ದು, ಇದಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಕಂಬಳ ಉತ್ಸವದಲ್ಲಿ ಪ್ರಾಚ್ಯವಸ್ತುಗಳ ಪ್ರದರ್ಶನ: ಇಲ್ಲಿದೆ ಕಾಂತಾರ ಸಿನಿಮಾದಲ್ಲಿ ಬಳಸಿದ್ದ ಪಂಜುರ್ಲಿ ಮೊಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.