ETV Bharat / state

ಸರ್ಕಾರದಿಂದ ಹೆಚ್ಚುವರಿ ಎಫ್​ಆರ್​ಪಿ ದರದ ಭರವಸೆ: 39 ದಿನದ ಧರಣಿ ಕೈಬಿಟ್ಟ ಕಬ್ಬು ಬೆಳೆಗಾರರು

author img

By

Published : Dec 30, 2022, 10:47 PM IST

ಎಫ್​ಆರ್​ಪಿ ದರ, ಕಾರ್ಖಾನೆಗಳಿಂದ ಹೆಚ್ಚುವರಿ 50 ರೂಪಾಯಿ ಸೇರಿ ಒಟ್ಟು 150 ರೂ ನೀಡಲು ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಹಲವು ದಿನಗಳ ಆಹೋರಾತ್ರಿ ಧರಣಿಯನ್ನು ಕಬ್ಬು ಬೆಳೆಗಾರರು ಕೊನೆಗೊಳಿಸಿದ್ದಾರೆ.

Sugarcane growers gave up their strike
39 ದಿನದ ಆಹೋ ರಾತ್ರಿ ಧರಣಿಯನ್ನು ಕೈಬಿಟ್ಟ ಕಬ್ಬು ಬೆಳೆಗಾರರು

ಬೆಂಗಳೂರು: ಕಬ್ಬಿನ ಎಫ್​ಆರ್​ಪಿ ದರಕ್ಕೆ ಹೆಚ್ಚುವರಿಯಾಗಿ 100 ರೂ ದರವನ್ನು ಉಪ ಉತ್ಪನ್ನಗಳ ಲಾಭದಿಂದ ಹಂಚಿಕೆ ಮಾಡಿರುವುದು ಹಾಗೂ ಯತ್ನಾಲ್ ಉತ್ಪಾದನೆಯ ಕಾರ್ಖಾನೆಗಳು ಹೆಚ್ಚುವರಿವಾಗಿ 50 ರೂ ನೀಡುವುದು ಸೇರಿದಂತೆ ಒಟ್ಟು 150 ರೂ ನೀಡಲು ಆದೇಶ ಹೊರಡಿಸಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ. ಹೀಗಾಗಿ 39 ದಿನದ ಆಹೋರಾತ್ರಿ ಧರಣಿಯನ್ನು ಕಬ್ಬು ಬೆಳೆಗಾರರು ಕೈಬಿಟ್ಟದ್ದಾರೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಸ್ಥಳದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಸಕ್ಕರೆ ಕಾರ್ಖಾನೆಗಳು ಯಾವುದೇ ಮಾನದಂಡವಿಲ್ಲದೆ ಮತ್ತು ಯಾರ ಅನುಮತಿಯೂ ಇಲ್ಲದೆ ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು 250 ರಿಂದ 300 ರೂ ಏರಿಕೆ ಮಾಡಿದೆ. ಹಣದಲ್ಲಿ ಕಾರ್ಖಾನೆಗಳಿಂದ 150 ರೂ ಕಡಿಮೆ ಮಾಡುವ ಆದೇಶವಾದಾಗ ರೈತರ ಕಬ್ಬು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹುಬ್ಬಳ್ಳಿಯಿಂದ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸರ್ಕಾರದ ಆದೇಶ ಪ್ರತಿಯನ್ನು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜನರಲ್ ಮ್ಯಾನೇಜರ್ ಬಸವರಾಜ್ ಸೂಮಣ್ಣನವರ್ ಚಳುವಳಿ ಸ್ಥಳಕ್ಕೆ ಆಗಮಿಸಿ ನೀಡಿದ್ದಾರೆ. ಸಕ್ಕರೆ ಅಭಿವೃದ್ಧಿ ಆಯುಕ್ತರು ಸಹ ಇದೇ ವೇಳೆ ಮೂಬೈಲ್ ನಲ್ಲಿ ಮಾತನಾಡಿ ಧರಣಿ ಕೈ ಬಿಡಬೇಕು ಎಂದು ಮನವಿ ಮಾಡಿದರು ಎಂದು ಹೇಳಿದರು.

ಸರ್ಕಾರದ ಮನವಿಗೆ ಒಪ್ಪಿರುವ ನಾವು, ಬಾಕಿ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರವನ್ನು ಒಂದು ತಿಂಗಳು ಕಾದು ನೋಡುತ್ತೇವೆ. ರಾಜ್ಯದ ಕಬ್ಬು ಬೆಳೆಗಾರರ ಸತತ ರೈತರ ಹೋರಾಟಕೆ ಮಣಿದು ಸರ್ಕಾರ ತಲೆಬಾಗಿದೆ. ಈ ಹೋರಾಟದಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ 905 ಕೋಟಿ ರೂಪಾಯಿ ಹಣ ಹೆಚ್ಚುವರಿ ಸಿಕ್ಕಂತಾಗಿದೆ. ಇದು ರೈತ ಹೋರಾಟಕ್ಕೆ ಸಿಕ್ಕ ಜಯ ಎಂದು ಕುರುಬೂರು ತಿಳಿಸಿದರು.

ಕಳಸಾ- ಬಂಡೂರಿ ಯೋಜನೆಗೆ ಡಿಪಿಆರ್ ಸ್ವಾಗತಾರ್ಹ: ಕಳಸಾ-ಬಂಡೂರಿ ಯೋಜನೆಗೆ ಡಿಪಿಆರ್ ಅನುಮೋದನೆಗೆ ಸ್ವಾಗತ. ಇದು ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ನಾಲ್ಕು ದಶಕಗಳ ಹೋರಾಟದಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಬೆಳಗಾವಿ ಬಾಗಲಕೋಟೆ, ಗದಗ ಜಿಲ್ಲೆಗಳ 3.90 ಟಿಎಂಸಿ ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರ 1300 ಕೋಟಿ ರೂಗಳಿಗೆ ಡಿಪಿಆರ್ ಅನುಮೋದನೆ ಮಾಡಿ ಆದೇಶ ಹೊರಡಿಸಿರುವುದು ಒಳ್ಳೆಯ ಕ್ರಮ ಎಂದು ಹೇಳಿದರು.

ಇದನ್ನೂ ಓದಿ:ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಮೊಲ್ಯಾಸಿಸ್ ಲಾಭಾಂಶ ಹಂಚಿಕೆ, ಪ್ರತಿ ಮೆಟ್ರಿಕ್ ಟನ್​ಗೆ 100 ರೂ. ಹೆಚ್ಚುವರಿ ಪಾವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.