ETV Bharat / state

ಪರಿಸರ ಮಾಲಿನ್ಯ ತಡೆಗೆ ಕಠಿಣ ಕ್ರಮ: ಕೇಂದ್ರ ಪರಿಸರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಚಿವ ಆನಂದ್ ಸಿಂಗ್ ಸೂಚನೆ

author img

By

Published : Mar 24, 2023, 7:15 PM IST

Minister Anand Singh inaugurates electric vehicles
ವಿದ್ಯುತ್ ಚಾಲಿತ ವಾಹನಗಳಿಗೆ ಸಚಿವ ಆನಂದ್ ಸಿಂಗ್ ಚಾಲನೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ. ಅರಣ್ಯ ಇಲಾಖೆಯಲ್ಲಿ ಅತ್ಯಂತ ಕಠಿಣ ಕಾನೂನುಗಳಿವೆ. ಯಾರೇ ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದ ಪರಿಸರ ಖಾತೆ ಸಚಿವ ಆನಂದ್ ಸಿಂಗ್.

ಬೆಂಗಳೂರು: ಪರಿಸರ ಸಂರಕ್ಷಣೆಗೆ ಇನ್ನಷ್ಟು ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಪ್ರವಾಸೋದ್ಯಮ, ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿದ್ಯುತ್ ಚಾಲಿತ ನೂತನ ವಾಹನಗಳಿಗೆ ಚಾಲನೆ ನೀಡಿದ ಬಳಿಕ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅರಣ್ಯ ಇಲಾಖೆಯಲ್ಲಿ ಅತ್ಯಂತ ಕಠಿಣ ಕಾನೂನುಗಳಿವೆ. ಯಾರೇ ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ರಾಸಾಯನಿಕಗಳನ್ನು ಹೊರ ಹಾಕುವ ಕಾರ್ಖಾನೆಗಳಿಗೆ ಒಮ್ಮೆ ಮಂಡಳಿ ನೋಟಿಸ್ ನೀಡಿ, ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತದೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ಕೆಲಸ ಆಗಬೇಕು. ಹೀಗಾಗಿ ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇದರಿಂದ ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆಗಳಿಗೆ ತಕ್ಕಶಾಸ್ತಿ ಆಗುತ್ತದೆ. ಈ ಮೂಲಕ ಪರಿಸರಕ್ಕೆ ಧಕ್ಕೆಯಾಗುವುದನ್ನು ತಡೆಯಬಹುದು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ: ಕಠಿಣ ಕಾನೂನು ಜಾರಿಗೆ ತರುವ ಸಂಬಂಧ ಕೇಂದ್ರ ಪರಿಸರ ಇಲಾಖೆಗೆ ವಿಸ್ತೃತವಾದ ಪ್ರಸ್ತಾವನೆ ಸಲ್ಲಿಸುವಂತೆ ಆನಂದ್ ಸಿಂಗ್ ಅವರು ಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು. ಕಳೆದ ಎರಡು ವರ್ಷದಲ್ಲಿ ಮಂಡಳಿಯಿಂದ ಪರಿಸರ ಮಾಲಿನ್ಯ ತಡೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯುತ್ ಚಾಲಿತ ವಾಹನ ನೀತಿ: ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ನೀತಿ ರೂಪಿಸಿವೆ. ಹೀಗಾಗಿ ಮಂಡಳಿಯ ಕಚೇರಿ ಉಪಯೋಗಕ್ಕಾಗಿ ಹಾಲಿ ಬಳಕೆಯಲ್ಲಿರುವ ಡಿಸೇಲ್ ಅಥವಾ ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಲು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 10 ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಲಾಗಿದೆ. ಬೇರೆ-ಬೇರೆ ಇಲಾಖೆ ಹಾಗೂ ಸರ್ಕಾರದ ಪ್ರತಿಯೊಂದು ಕಚೇರಿಯಲ್ಲಿ ಇಂತಹ ವಿದ್ಯುತ್ ಚಾಲಿತ ವಾಹನಗಳ ಬಳಕೆಯಿಂದ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಹೇಳಿದರು.

ಮೊಬೈಲ್ ಅಫ್ಲಿಕೇಶನ್ ಬಿಡುಗಡೆ: ಇನ್ನು ಮಂಡಳಿಯು ಉದ್ದಿಮೆದಾರರು ತಮ್ಮ ಸಮ್ಮತಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂಥ ನೂತನ ಮೊಬೈಲ್ ಅಪ್ಲಿಕೇಶನ್‌ನನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಆ್ಯಪ್‌ನಲ್ಲಿ ಉದ್ದಿಮೆದಾರರು ಹಾಗೂ ಸಾರ್ವಜನಿಕರು ತಮ್ಮ ನಗರದಲ್ಲಿನ ವಾಯುಗುಣಮಟ್ಟವನ್ನು ತಿಳಿಯಬಹುದು. ಅಲ್ಲದೆ, ಮಂಡಳಿಯ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾಗೂ ಇನ್ನಿತರೆ ಮಾಹಿತಿಗಳನ್ನು ಈ ಮೊಬೈಲ್ ಅಪ್ಲಿಕೇಶನ್‌ಗಳಿಂದ ಪಡೆಯಬಹುದು ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಮಂಡಳಿ ಅಧ್ಯಕ್ಷ ಡಾ.ಶಾಂತ್ ಎ.ತಿಮ್ಮಯ್ಯ, ಸದಸ್ಯ ಕಾರ್ಯದರ್ಶಿ ಎಚ್.ಸಿ.ಗಿರೀಶ್, ಸಿಐಐ ಅಧಿಕಾರಿಗಳಾದ ವಿಜಯ್ ಕೃಷ್ಣನ್ ವೆಂಕಟೇಶ್, ವೆಂಕಟಗಿರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಿಐಐ ಸಂಸ್ಥೆ ಜತೆ ಒಡಂಬಡಿಕೆ: ಕೈಗಾರಿಕೆಗಳಿಗೆ ಅತ್ಯುತ್ತಮ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಕೈಗಾರಿಕೆಗಳಿಗೆ ಗ್ರೀನ್ ರೇಟಿಂಗ್ ವ್ಯವಸ್ಥೆ ವಿನೂತನ ಕಾರ್ಯಕ್ರಮಕ್ಕೆ ಮಂಡಳಿಯು (Confederation of Indian industry) ಸಿಐಐ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡಿರುತ್ತದೆ. ಈ ರೀತಿ ಪರಿಸರ ಪೂರಕ ವ್ಯವಸ್ಥೆ ಅನುಷ್ಠಾನಗೊಳಿಸಲು ಕೈಗಾರಿಕೆಗಳನ್ನು ಸ್ವಯಂ ಪ್ರೇರಿತವಾಗಿ ಪ್ರೇರೇಪಿಸುತ್ತಿರುವುದು ರಾಷ್ಟ್ರದಲ್ಲಿಯೇ ಕರ್ನಾಟಕ ಎರಡನೇ ರಾಜ್ಯವಾಗಿದೆ.

ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಸ್ವಾಗತ: ಇದಕ್ಕೂ ಮುನ್ನ ವಿಕಾಸಸೌಧದ ಮುಂದೆ ಎಲೆಕ್ಟ್ರಿಕ್ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್, ಸಿದ್ದರಾಮಯ್ಯ ಅವರನ್ನು ವಿಜಯನಗರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, 224 ಕ್ಷೇತ್ರದಲ್ಲಿ ಯಾರು, ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅದಕ್ಕೆ ತಮ್ಮ ವಿರೋಧವಿಲ್ಲ. ಸೋಲು-ಗೆಲುವನ್ನು ಜನತೆ ತೀರ್ಮಾನಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೀಸಲಾತಿ ಜಾರಿಗೆ ತರುವ ಕೆಲಸ ಆಗ್ತಾ ಇದೆ: ಎಸ್ಸಿ ಎಸ್ಟಿ ಮೀಸಲಾತಿ ಮಾಡಬೇಕು ಅಂತ ಸರ್ಕಾರದ ಉದ್ದೇಶ ಇತ್ತು. ಕಾಂಗ್ರೆಸ್ ಎಸ್ಸಿ ಎಸ್ಟಿ ಮೀಸಲಾತಿ ವಿರೋಧಿಸಿತ್ತು, ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ನಾನು ಹೆಚ್ಚಿನ ಪ್ರತಿಕ್ರಿಯೆ ಮಾಡಲ್ಲ. ಕಾಂಗ್ರೆಸ್ ಹತಾಶೆಗೊಂಡು ಮೊಸರಿನಲಿ ಕಲ್ಲು ಹುಡುಕುವ ಕೆಲಸ ಮಾಡ್ತಾ ಇದೆ ಎಂದು ಕಿಡಿಕಾರಿದರು.

ಟಾಟಾ ಕಂಪನಿಯ ಸಹಭಾಗಿತ್ವ: ಇವತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇ-ವಾಹನಗಳನ್ನು ಪರಿಸರವನ್ನು ಮಾಲಿನ್ಯ ತಡೆಯಲು ಅಡಿಗಲ್ಲು ಹಾಕಿದ್ದೇವೆ. ಈ ಕಾರ್ಯಕ್ರಮದ ಉದ್ದೇಶ ಎನು ಅಂದರೆ ಇ ವಾಹನ ಬಳಿಕೆ ಮಾಡುವುದರಿಂದ ಪರಿಸರ ಮಾಲಿನ್ಯ ತಡೆಯಬಹುದು. ಈ ಹಿಂದೆ ಚರ್ಚೆ ಮಾಡಿದ್ದೆವು. ಟಾಟಾ ಕಂಪನಿಯ ಸಹಭಾಗಿತ್ವದಲ್ಲಿ ಮಾತಾಡಿಕೊಂಡು, ಟಾಟಾ ಅವರದ್ದೆ ನಿರ್ವಹಣೆ ಇರುತ್ತದೆ. ಪೈಲೆಟ್ ಪ್ರಾಜೆಕ್ಟ್ ಮಾಡಿ, ಬೇರೆ ಇಲಾಖೆಗೆ ಮಾದರಿಯಾಗಿದ್ದೇವೆ ಎಂದು ಹೇಳಿದರು.

ಇದನ್ನೂಓದಿ:ದಾವಣಗೆರೆ ಮಹಾಸಂಗಮ: ಜನರ ಮಧ್ಯದಲ್ಲಿ ವೇದಿಕೆಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ... ಹೇಗಿದೆ ಗೊತ್ತಾ ಬಿಗಿ ಭದ್ರತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.