ETV Bharat / state

ಪ್ರಶ್ನೋತ್ತರ ಕಲಾಪಕ್ಕೆ ಮೊದಲ ಆದ್ಯತೆ ನೀಡಿ: ಸಚಿವರ ವಿರುದ್ಧ ಸ್ಪೀಕರ್ ಅಸಮಾಧಾನ

author img

By

Published : Sep 15, 2022, 6:07 PM IST

ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಪ್ರಕಟಿಸಿ ಎಂದು ಯು ಟಿ ಖಾದರ್​ ಒತ್ತಾಯಿಸಿದರು. ಅಲ್ಲದೇ ಸಚಿವರ ಹಾಜರಾತಿ ಕೊರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಹಾಗೆಯೇ ಸ್ವೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

Speaker displeasure against the minister
ಸ್ಪೀಕರ್ ವಿಶ್ವೇಶ್ವರ ಹೆಗಡೆ

ಬೆಂಗಳೂರು: ಸಚಿವರು, ಶಾಸಕರಿಗೆ ಪ್ರಶ್ನೋತ್ತರ ಕಲಾಪ ಮೊದಲ ಆದ್ಯತೆ ಆಗಬೇಕು ಎಂದು ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಪ್ರಶ್ನೋತ್ತರ ವೇಳೆ ಸಚಿವರ ಹಾಜರಾತಿ ಕೊರತೆಯ ಬಗ್ಗೆ ಪ್ರತಿಪಕ್ಷದ ಉಪನಾಯಕ ಯು ಟಿ ಖಾದರ್, ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ತರಾಟೆಗೆ ತೆಗೆದುಕೊಂಡ ಸಭಾಧ್ಯಕ್ಷರು: ಆಗ ಸಮಾಧಾನಪಡಿಸಿದ ಸಭಾಧ್ಯಕ್ಷರು ಶಾಸಕ ಸಿ.ಎಂ.ಲಿಂಬಣ್ಣನವರ್ ಅವರನ್ನು ಪ್ರಶ್ನೆ ಕೇಳುವಂತೆ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹಾಜರಿರಲಿಲ್ಲ. ನಂಜೇಗೌಡ ಅವರು ಪ್ರಶ್ನೆ ಕೇಳಿದ ವೇಳೆಗೆ ಆಗಮಿಸಿದ ಅವರನ್ನು ಸಭಾಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ತಡವಾಗಿ ಬಂದಿದ್ದೀರಿ. ಪ್ರಶ್ನೋತ್ತರ ಇರುವಾಗ ಬೇರೆ ಯಾವುದೂ ಮುಖ್ಯವಾಗಬಾರದು. ಸದನದ ಪ್ರಶ್ನೋತ್ತರ ವೇಳೆ ಮೊದಲ ಆದ್ಯತೆಯಾಗಬೇಕು ಎಂದು ಸೂಚಿಸಿದರು.

ಆಗ ಅಶ್ವತ್ಥನಾರಾಯಣ ಅವರು, ಮಾಧ್ಯಮದವರೊಂದಿಗೆ ಮಾತನಾಡಬೇಕಾಗಿದ್ದರಿಂದ ವಿಳಂಬವಾಯಿತು ಎಂದು ಕಾರಣ ಹೇಳಿದಾಗ ಸಭಾಧ್ಯಕ್ಷರು ಮೇಲಿನಂತೆ ಸೂಚಿಸಿದರು. ಇದಕ್ಕೂ ಮುನ್ನ ಪ್ರತಿಪಕ್ಷಗಳ ಶಾಸಕರು ಸಚಿವರ ಹಾಜರಾತಿ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರ ವಿರುದ್ಧ ಸ್ಪೀಕರ್ ಅಸಮಾಧಾನ

ಈ ವೇಳೆ ಯು ಟಿ ಖಾದರ್ ಮಾತನಾಡಿ, ಸದನದಲ್ಲಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ಪ್ರಕಟಿಸಿ ಎಂದು ಒತ್ತಾಯಿಸಿದರು.ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ, ಪ್ರಶ್ನೋತ್ತರ ವೇಳೆಗೆ ಬರುವುದಿಲ್ಲ ಎಂದರೆ ಹೇಗೆ? ನೀವೇ ಸಮಾಧಾನ ಹೇಳಿದರೆ ಅವರಿಗೆ ಧೈರ್ಯಬಂದಂತಾಗುತ್ತದೆ ಎಂದರು.

ಬೇಸರ ವ್ಯಕ್ತಪಡಿಸಿದ ಸಭಾಧ್ಯಕ್ಷರು: ಶಾಸಕ ಮಂಜುನಾಥ ಅವರ ಪ್ರಶ್ನೆಗೆ ಉತ್ತರಿಸಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಜರಿರಲಿಲ್ಲ. ಆಗ ಸಭಾಧ್ಯಕ್ಷರು, ಆರೋಗ್ಯ ಸಚಿವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ಆ ಇಲಾಖೆಯ ಕಾರ್ಯದರ್ಶಿಯವರು ಹೇಳಿದ್ದಾರೆ. ಬೇರೆ ಸಚಿವರಿಂದ ಉತ್ತರ ಕೊಡಿಸಲು ಹೇಳಿ ಕಳುಹಿಸಲಾಗಿತ್ತು. ಆದರೂ ಯಾರೂ ಉತ್ತರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸ ಪ್ರಥಮ ದರ್ಜೆ ಕಾಲೇಜು ಇಲ್ಲ: ರಾಜ್ಯದಲ್ಲಿ ಹೊಸದಾಗಿ ಪ್ರಥಮ ದರ್ಜೆ ಕಾಲೇಜು ಆರಂಭಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆ ಶಾಸಕ ಕೆ.ವೈ.ನಂಜೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಈಗಿರುವ ಕಾಲೇಜುಗಳ ಗುಣಮಟ್ಟ ಹೆಚ್ಚಳ ಹಾಗೂ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಶೇ.75ರಷ್ಟು ಕಾಲೇಜುಗಳಲ್ಲಿ 1500ಕ್ಕಿಂತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಕೆಲವು ಕಾಲೇಜುಗಳಲ್ಲಿ ಸೌಲಭ್ಯದ ಕೊರತೆಯಿದೆ. 150 ಸಂಸ್ಥೆಗಳು ಮಾತ್ರ ಮಾನ್ಯತೆ ಪಡೆದಿವೆ. ಹೀಗಾಗಿ ಮೂಲಸೌಕರ್ಯ ಹೆಚ್ಚಿಸುವುದು ಮತ್ತು ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಅಪಾಯಕಾರಿ ವಿದ್ಯುತ್ ಪ್ರಸರಣ ಮಾರ್ಗ ಎತ್ತರ: ಅಪಾಯಕಾರಿ ವಿದ್ಯುತ್ ಪ್ರಸರಣ ಮಾರ್ಗದ ಎತ್ತರವನ್ನು ಹೆಚ್ಚಿಸಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್‍ ಕುಮಾರ್ ವಿಧಾನಸಭೆಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದರು. 220 ಕೆವಿ ಮಾರ್ಗವನ್ನು ಏಕಾಏಕಿ ಬದಲಿಸಲಾಗುವುದಿಲ್ಲಘಿ. ವಿದ್ಯುತ್ ಮಾರ್ಗ ನಿರ್ಮಾಣವಾದ ನಂತರ ಬಡಾವಣೆಗಳು ನಿರ್ಮಾಣವಾಗಿದ್ದರೆ ಸ್ಥಳೀಯ ಆಡಳಿತ ಎನ್‍ಒಸಿ ಪಡೆಯಬೇಕಾಗುತ್ತದೆ ಎಂದರು.

ರಂಗಮಂದಿರ ನಿರ್ಮಾಣ : ಜಿಲ್ಲಾ ರಂಗಮಂದಿರ ನಿರ್ಮಿಸಲು ಮೂರು ಕೋಟಿ ರೂ. ತಾಲ್ಲೂಕು ರಂಗಮಂದಿರ ನಿರ್ಮಿಸಲು ಒಂದು ಕೋಟಿ ರೂ. ಅನುದಾನವನ್ನು ಮಾತ್ರ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್‍ಕುಮಾರ್ ಅವರು, ಪ್ರಶ್ನೋತ್ತರ ಅವಧಿಯಲ್ಲಿ ಎಸ್.ಎ.ರವೀಂದ್ರನಾಥ್ ಅವರ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ ಸೇರಿ ಮೂರು ವಿಧೇಯಕ ಮಂಡನೆ

ರಂಗಮಂದಿ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ಬೇರೆ ಮೂಲಗಳಿಂದ ಬಳಸಿಕೊಳ್ಳಬೇಕು. ರಂಗಮಂದಿರ ಮಂಜೂರಾದ ನಂತರ ನಿರ್ಮಾಣ ವೆಚ್ಚ ಎರಡುಮೂರು ಪಟ್ಟು ಹೆಚ್ಚಳವಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು. ರಾಜ್ಯದ 15 ಜಿಲ್ಲೆಗಳಲ್ಲಿ ರಂಗಮಂದಿರಗಳಿವೆ. 6 ಜಿಲ್ಲೆಗಳಲ್ಲಿ ಪ್ರಗತಿಯಲ್ಲಿವೆ. 10 ಜಿಲ್ಲೆಗಳಲ್ಲಿ ನಿರ್ಮಾಣ ಮಾಡುವುದು ಬಾಕಿ ಇದೆ. ಹೀಗಾಗಿ ರಂಗಮಂದಿರ ನಿರ್ಮಾಣದ ಅಂದಾಜು ಹೆಚ್ಚಳಕ್ಕೆ ಇತಿಶ್ರೀ ಹಾಡುತ್ತೇವೆ. ಎಂದು ಹೇಳಿದರು.

ಸ್ಪೀಕರ್ ಅಸಮಾಧಾನ: ಕಾಮಗಾರಿಗಳು ವಿಳಂಬವಾಗುವುದರಿಂದ ಅಂದಾಜು ವೆಚ್ಚ ಹೆಚ್ಚಾಗುತ್ತದೆ. ಮೂಲ ಅಂದಾಜು ವೆಚ್ಚ ಅವತ್ತಿನ ದರಕ್ಕೆ ಸರಿಯಾಗಿರುತ್ತದೆ. ಪರಿಷ್ಕೃತ ವೆಚ್ಚ ಇಂದಿನ ದರಕ್ಕೆ ಹೊಂದುತ್ತವೆ. ಅಧಿಕಾರಿಗಳು ಸಂವಿಧಾನಬದ್ದ ಜವಾಬ್ದಾರಿಯನ್ನು ಮರೆತಿದ್ದಾರೆ. ಅವರಿಗೆ ಬದ್ದತೆ ಇಲ್ಲ. ಬ್ರಿಟಿಷರು ಬಿಟ್ಟು ಹೋಗಿರುವುದನ್ನು ನಾವು ಮುಂದುವರೆಸುತ್ತಿದ್ದೇವೆ ಎಂದು ಕೆಲವರು ಹೇಳಿದ್ದಾರೆ. ಕಾರ್ಯಾಂಗದವರ ಹೊಣೆಯಲ್ಲ ಎಂಬುದು ನಿರ್ಮಾಣವಾಗಿದೆ. ಚುನಾಯಿತ ಪ್ರತಿನಿಧಿಗಳು ಮೊದಲ ಅಪರಾಧಿಗಳಾಗುತ್ತಿದ್ದೇವೆ. ಆನಂತರದ ಸ್ಥಾನವಾದರೂ ಅವರಿಗೆ ದೊರೆಯಲಬೇಕಿಲ್ಲವೇ? ಅತ್ಯಂತ ಸುರಕ್ಷಿತವಾಗ ಅವರು ನಿವೃತ್ತಿಯಾಗುತ್ತಾರೆ. ಮಾಧ್ಯಮಗಳ ಟಿ ಆರ್ ಪಿ ಹೆಚ್ಚಳಕ್ಕೆ ನಾವು ಗುರಿಯಾಗುತ್ತಿದ್ದೇವೆ ಎಂದು ಸ್ಪೀಕರ್ ಅಸಮಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.