ETV Bharat / state

ರಾಜ್ಯದ ಹಲವೆಡೆ ಮೈ ಕೊರೆಯುವ ಚಳಿ: ಈ ಜಿಲ್ಲೆಗಳಿಗೆ ಶೀತ ಅಲೆ ಯೆಲ್ಲೋ ಅಲರ್ಟ್‌!

author img

By

Published : Jan 10, 2023, 10:17 AM IST

Karnataka weather
ಕರ್ನಾಟಕ ಹವಾಮಾನ

ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುತ್ತಿದೆ. ಎರಡು ದಿನಗಳ ಕಾಲ ಕೆಲವು ಜಿಲ್ಲೆಗಳಿಗೆ ಶೀತ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಹವಾಮಾನ ಇಲಾಖೆ ಮಾಹಿತಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ತುಸು ಹೆಚ್ಚಾಗಿದೆ. ಇಂದು ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣವಿತ್ತು. ಹವಾಮಾನದಲ್ಲಿ ಭಾರಿ​ ಬದಲಾವಣೆ ಕಂಡು ಬಂದಿದ್ದು, ತಂಪು ವಾತಾವರಣದಿಂದ ಪಾರಾಗಲು ಜನರು ಬೆೆಂಕಿ ಕಾಯಿಸಿಕೊಳ್ಳುತ್ತಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಬೀದರ್, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಶೀತ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಪ್ರದೇಶಗಳಿಗೆ ಎಚ್ಚರಿಕೆ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಬೀದರ್ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಉಷ್ಣಾಂಶ ಅಂದರೆ 5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಅತೀ ಕಡಿಮೆ ಉಷ್ಣಾಂಶ ಎಲ್ಲೆಲ್ಲಿ?: ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಅವರು, ರಾಜ್ಯದ ಎಲ್ಲೆಡೆ ಒಣಹವೆ ಮುಂದುವರಿದಿದೆ. ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್‌, ಬಾಗಲಕೋಟೆಯಲ್ಲಿ 6, ಬಳ್ಳಾರಿಯಲ್ಲಿ 7.5, ಧಾರವಾಡದಲ್ಲಿ 9.8, ಹಾಗೂ ಬೆಳಗಾವಿಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಒಳನಾಡಿನ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಅತೀ ಕಡಿಮೆ ಉಷ್ಣಾಂಶ ಕಂಡುಬಂದಿದೆ.

ಬೆಂಗಳೂರಿನ ವಾತಾವರಣ ಹೇಗಿದೆ?: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಶೀತಲ ಮುನ್ನೆಚ್ಚರಿಕೆ ಏನೂ ಇಲ್ಲ. ಬೆಂಗಳೂರಲ್ಲಿ ಇಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 14.3 ಡಿಗ್ರಿ ಇರಲಿದೆ. ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲಿ 26.6, ಕನಿಷ್ಟ 13.8 ದಾಖಲಾಗಿದೆ. ಬೆಂಗಳೂರು ಏರ್ಪೋರ್ಟ್ ಬಳಿ ಗರಿಷ್ಠ 27.4 ಡಿಗ್ರಿ ದಾಖಲಾಗಿದೆ. ಆಕಾಶ ಸಾಮಾನ್ಯವಾಗಿ ನಿರ್ಮಲವಾಗಿರಲಿದೆ. ಇಂದು ಮುಂಜಾನೆ ದಟ್ಟ ಮಂಜು ಕಾಣಿಸಿದೆ. ಈಶಾನ್ಯ ರಾಜ್ಯಗಳಿಂದ ಕಡಿಮೆ ಒತ್ತಡದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಶೀತ ವಾತಾವರಣ ಉಂಟಾಗಿದೆ. ಚಳಿ ತೀವ್ರಗೊಂಡಿದೆ. ಜನರು ಕಾಫಿ ಸೇರಿದಂತೆ ಬಿಸಿ ಬಿಸಿ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಉತ್ತರ ಭಾರತದಲ್ಲಿ ಹೆಚ್ಚಾದ ಚಳಿ: ಉತ್ತರ ಭಾರತದ ಚಳಿ ಬಗ್ಗೆ ಕೇಳೋದೇ ಬೇಡ. ಸ್ವೆಟರ್​, ಶಾಲ್​ ಇಲ್ಲದೇ ಹೊರಗೆ ಕಾಲಿಡುವಂತಿಲ್ಲ. ರಾಜಧಾನಿ ದೆಹಲಿಯಲ್ಲೂ ದಾಖಲೆ ಮಟ್ಟದ ಚಳಿ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಶಾಲೆಗಳ ಚಳಿಗಾಲದ ರಜೆಯನ್ನು ಜನವರಿ 15 ರವರೆಗೂ ವಿಸ್ತರಿಸಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪ್ರತ್ಯೇಕ ಭಾಗಗಳು, ಬಿಹಾರ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಮಧ್ಯಪ್ರದೇಶದಲ್ಲೂ ಚಳಿಯ ತೀವ್ರತೆ ಹೆಚ್ಚಾಗಿದ್ದು, ಜನರು ನಡುಗುತ್ತಿದ್ದಾರೆ. ಈಶಾನ್ಯ ಭಾರತದಿಂದ ಕಡಿಮೆ ಒತ್ತಡದ ಗಾಳಿ ಬೀಸುತ್ತಿರುವ ಕಾರಣ ತೆಲಂಗಾಣದ ಮತ್ತು ಆಂಧ್ರ ಪ್ರದೇಶದಲ್ಲೂ ಹೆಚ್ಚಾದ ತಂಪಾದ ವಾತಾವರಣ ಉಂಟಾಗಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಮೈ ನಡುಗುವ ಚಳಿ: ಸಿರ್ಪುರದಲ್ಲಿ 4.7 ಡಿಗ್ರಿ ತಾಪಮಾನ ದಾಖಲು!

ಕಾನ್ಪುರದಲ್ಲಿ ಚಳಿಗೆ 98 ಮಂದಿ ಸಾವು: ವಿಪರೀತ ಮಂಜು ಕೂಡಿದ ಚಳಿ ಜನರ ಆರೋಗ್ಯದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುತ್ತಿದೆ. ಉಸಿರಾಡಲೂ ಕೂಡ ಕಷ್ಟವಾಗುವ ಚಳಿಯಿಂದಾಗಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಕೆಲ ದಿನಗಳಲ್ಲಿ 98 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವೈದ್ಯರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಭಯಾನಕ ಚಳಿ: ಕಾನ್ಪುರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.