ETV Bharat / bharat

ಭಯಾನಕ ಚಳಿ: ಕಾನ್ಪುರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು!

author img

By

Published : Jan 9, 2023, 11:49 AM IST

ಉತ್ತರ ಪ್ರದೇಶದಲ್ಲಿ ಅತಿಯಾದ ಚಳಿ ಜನರನ್ನು ಹೈರಾಣಾಗಿಸುತ್ತಿದೆ. ಕಾನ್ಪುರದಲ್ಲಿ ಒಂದೇ ವಾರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಇಷ್ಟಕ್ಕೂ ಚಳಿಯಿಂದ ಜನರು ಸಾವನ್ನಪ್ಪಲು ಕಾರಣವೇನು? ವೈದ್ಯರ ಅಭಿಪ್ರಾಯ, ಸಲಹೆ ಈ ವರದಿಯಲ್ಲಿದೆ.

Heart attack due to cold
ಚಳಿಗೆ ಕಾಡಲಿದೆ ಹೃದಯಾಘಾತ

ಕಾನ್ಪುರ: ತಿಂಗಳ ಹಿಂದಿನಿಂದ ಶುರುವಾಗಿರುವ ವಿಪರೀತ ಮಂಜು ಕೂಡಿದ ಚಳಿ ಮೆಲ್ಲನೆ ನೂರಾರು ಜನರ ಪ್ರಾಣವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಮರಗಟ್ಟುವ ಚಳಿಯಿಂದಾಗಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಐದು ದಿನಗಳಲ್ಲಿ 98 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದೇ ವೇಳೆ, ವೈದ್ಯರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕಾನ್ಪುರದಲ್ಲಿ ವರದಿಯಾದ 98 ಸಾವುಗಳಲ್ಲಿ 44 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 54 ರೋಗಿಗಳು ಚಿಕಿತ್ಸೆಗೆ ಮುಂಚೆಯೇ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿಯನ್ನು L.P.S ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನೀಡಿದೆ. ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ಬಿಡುಗಡೆ ಮಾಡಿದ ಮಾಹಿತಿಯಂತೆ, ಕಳೆದೊಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ ತುರ್ತು ನಿಗಾ ಘಟಕ ಮತ್ತು ಹೊರರೋಗ ವಿಭಾಗದಲ್ಲಿ ದಾಖಲಾಗಿದ್ದಾರೆ.

ಆಘಾತಕಾರಿ ಸಂಗತಿ ಏನೆಂದರೆ, ತೀವ್ರ ಶೀತದಿಂದ ಬಳಲುತ್ತಿರುವ ಹದಿನಾಲ್ಕು ರೋಗಿಗಳು ಹೃದಯಾಘಾತದಿಂದ ಶನಿವಾರ ಮೃತಪಟ್ಟರೆ, ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ವೇಳೆ ಆರು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಗೆ, ಮೊದಲೇ ಈ ಹೃದಯಾಘಾತದಿಂದ ಸಾವನ್ನಪ್ಪಿದ 8 ಜನ ರೋಗಿಗಳನ್ನು ಕರೆತರಲಾಗಿತ್ತು. ಕಳೆದ 24 ಗಂಟೆಯಲ್ಲಿ ನಗರದ ಎಸ್‌ಪಿಎಸ್‌ ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 14 ರೋಗಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಖ್ಯವಾಗಿ ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 604 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 54 ಹೊಸ ಮತ್ತು 27 ಹಳೆಯ ರೋಗಿಗಳು ಸೇರಿದ್ದಾರೆ.

ಇದನ್ನೂ ಓದಿ: ಜಾಗ್ರತೆ..! ಚಳಿಗಾಲದಲ್ಲಿ ಪಾರ್ಶ್ವವಾಯು - ಹೃದಯಾಘಾತದ ಪ್ರಮಾಣ ಹೆಚ್ಚಳ

ಹೃದ್ರೋಗ ವಿಭಾಗದ ನಿರ್ದೇಶಕ ವಿನಯ್ ಕೃಷ್ಣ ಪ್ರತಿಕ್ರಿಯಿಸಿ, ಈಗಿರುವ ವಿಪರೀತ ಚಳಿಯ ವಾತಾವರಣದಲ್ಲಿ ರೋಗಿಗಳು ಇದ್ದರೆ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾಕೆಂದರೆ ರೋಗಿಗಳು ಈ ವಾತಾವರಣದ ಕಾರಣಕ್ಕೆ ಬೇಗನೇ ಹೃದಯಾಘಾತಕ್ಕೆ ತುತ್ತಾಗುತ್ತಾರೆ ಎಂದು ತಿಳಿಸಿದ್ದಾರೆ. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಅಧ್ಯಾಪಕರೊಬ್ಬರು ತಿಳಿಸಿರುವಂತೆ, ಶೀತ ವಾತಾವರಣದಲ್ಲಿ ಹೃದಯಾಘಾತವು ವಯಸ್ಸಾದವರಿಗೆ ಮಾತ್ರ ಸೀಮಿತವಾಗಿಲ್ಲ, ಹದಿಹರೆಯದವರೂ ಹೃದಯಾಘಾತಕ್ಕೆ ಒಳಗಾದ ಪ್ರಕರಣಗಳು ನಮ್ಮಲ್ಲಿವೆ. ಹೃದಯಾಘಾತಕ್ಕೆ ವಯಸ್ಸಿನ ಭೇದವಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕುರಿತಾಗಿ ಕಾಳಜಿ ವಹಿಸಬೇಕು. ಹಾಗೆಯೇ ನಿಮ್ಮ ದೇಹವನ್ನು ಈ ಸಮಯದಲ್ಲಿ ಆದಷ್ಟು ಬೆಚ್ಚಗಿಡಬೇಕು ಎಂದು ಸಲಹೆ ನೀಡಿದ್ದಾರೆ.

ಚಳಿಯಿಂದ ಸಾವು ಹೇಗೆ?: ವಿಪರೀತ ಚಳಿಯಿಂದಾಗಿ ಮಾನವನ ದೇಹದಲ್ಲಿನ ರಕ್ತ ಪರಿಚಲನೆಯಲ್ಲಿ ಏರುಪೇರಾಗುತ್ತದೆ. ರಕ್ತದಲ್ಲಿ ಒತ್ತಡವು ಹೆಚ್ಚು-ಕಡಿಮೆ ಆಗುವುದರಿಂದ ನಮ್ಮ ಹೃದಯ ಮತ್ತು ಮಿದುಳಿನ ಕೆಲಸ ನಿಧಾನಗತಿಗೆ ಬರುತ್ತದೆ. ಕೊನೆಗೆ, ರಕ್ತ ಹೆಪ್ಪುಗಟ್ಟಿ ಕಾರ್ಯ ನಿಲ್ಲಿಸುತ್ತದೆ. ಇದರಿಂದ ಹೃದಯಾಘಾತವಲ್ಲದೇ ಮೆದುಳು ಕೂಡಾ ನಿಷ್ಕ್ರಿಯವಾಗುತ್ತದೆ. ಹೀಗಾಗಿ ಜನರು ಸಾವನ್ನಪ್ಪುತ್ತಾರೆ. ಈ ಹೃದಯಾಘಾತ ವಯಸ್ಸಿನ ಮಿತಿಯಿಲ್ಲದೆ ನವಜಾತ ಶಿಶುವಿನಿಂದ ಹಿಡಿದು ಮಧ್ಯವಯಸ್ಕರಲ್ಲದೇ ವೃದ್ಧರವರೆಗೂ ಸಂಭವಿಸುತ್ತದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ: ಉತ್ತರ ಭಾರತದಲ್ಲಿ ದಾಖಲೆಯ ಚಳಿ, ದಟ್ಟ ಮಂಜಿಗೆ ಜನಜೀವನ ಅಸ್ತವ್ಯಸ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.