ETV Bharat / state

ಮರುಕಳಿಸಿದ ಇತಿಹಾಸ: ಆಡಳಿತ ಪಕ್ಷಕ್ಕೆ ಸೋಲು, 1999ರ ನಂತರ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ

author img

By

Published : May 13, 2023, 1:53 PM IST

Updated : May 14, 2023, 9:59 AM IST

Etv Bharat
Etv Bharat

ಕಾಂಗ್ರೆಸ್​ ನಿಚ್ಚಳ ಬಹುಮತ ಪಡೆದಿದ್ದು ರಾಜ್ಯದಲ್ಲಿ ಸರ್ಕಾರ ರಚಿಸಲು ಸಿದ್ಧತೆ ಆರಂಭಿಸಿದೆ. 1999ರಲ್ಲಿ ಕಾಂಗ್ರೆಸ್​ 132 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತ್ತು. ಇದಾದ ನಂತರ ಇದೇ ಮೊದಲ ಬಾರಿಗೆ ಒಂದು ಪಕ್ಷಕ್ಕೆ 133 ಸ್ಥಾನಗಳು ಲಭಿಸುವ ನಿರೀಕ್ಷೆ ಇದೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸರಳ ಬಹುಮತದಿಂದ ಅಧಿಕಾರಕ್ಕೇರಲು ಸಜ್ಜಾಗಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲಿನತ್ತ ಸಾಗಿದೆ. ಈ ಮೂಲಕ ಅಧಿಕಾರದಲ್ಲಿದ್ದ ಪಕ್ಷಕ್ಕೆ ಸತತವಾಗಿ ಎರಡನೇ ಬಾರಿಗೆ ಗದ್ದುಗೆ ಸಿಗದ ಇತಿಹಾಸ ಮರುಕಳಿಸಿದೆ. 1989ರ ನಂತರ ನಡೆದ ಎಲ್ಲ ವಿಧಾನಸಭೆ ಚುನಾವಣೆಗಳಲ್ಲಿಯೂ ಆಡಳಿತ ಪಕ್ಷಕ್ಕೆ ಸೋಲಾಗಿರುವುದನ್ನು ಗಮನಿಸಬಹುದು.

ರಾಜ್ಯದ ವಿಧಾನಸಭೆ ಇತಿಹಾಸದಲ್ಲಿ ಮೊದಲ 6 ಚುನಾವಣೆಗಳನ್ನು ಕಾಂಗ್ರೆಸ್ ಹಾಗೂ ನಂತರದ ಎರಡು ಚುನಾವಣೆಗಳನ್ನು ಜನತಾ ಪಕ್ಷ ಗೆದ್ದಿತ್ತು. ಇದನ್ನು ಬಿಟ್ಟರೆ ಈವರೆಗೂ ಸತತವಾಗಿ ಎರಡು ಬಾರಿ ಯಾವುದೇ ಪಕ್ಷವೂ ರಾಜ್ಯದಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿಲ್ಲ. ಆದರೆ, ಈ ಪರಂಪರೆ ಮುರಿದು ಎರಡನೇ ಬಾರಿ ಅಧಿಕಾರಕ್ಕೆ ಬರಲು ಬಿಜೆಪಿ ರಣತಂತ್ರ ರೂಪಿಸಿತ್ತು. ಆದರೆ, ಮೇಲ್ನೋಟಕ್ಕೆ ಆಡಳಿತಾಡಳಿತ ವಿರೋಧ ಅಲೆಯಲ್ಲಿ ಕೇಸರಿ ಪಾಳಯ ಕೊಚ್ಚಿ ಹೋಗಿದೆ.

Karnataka assembly results: Ruling party has lost all elections since 1989
ಸೋಲು-ಗೆಲುವಿನ ಮಾಹಿತಿ

ರಾಜ್ಯ ರಾಜಕೀಯದ ಇತಿಹಾಸ: ಒಂದರಿಂದ ಆರನೇ ವಿಧಾನಸಭೆವರೆಗೂ ಸತತವಾಗಿ ಕಾಂಗ್ರೆಸ್ ಗೆಲ್ಲುತ್ತಾ ಬಂದಿತ್ತು. ಮೊದಲ ಬಾರಿಗೆ 7ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು, ಜನತಾ ಪಕ್ಷ ಸರ್ಕಾರ ರಚಿಸಿತ್ತು. 8ನೇ ವಿಧಾನಸಭಾ ಚುನಾವಣೆಯಲ್ಲಿಯೂ ಜನತಾ ಪಕ್ಷವೇ ಮರಳಿ ಗದ್ದುಗೆ ಹಿಡಿದಿತ್ತು. ಆದರೆ, 9ನೇ ಚುನಾವಣೆಯಲ್ಲಿ ಮರಳಿ ಕಾಂಗ್ರೆಸ್ ಅಧಿಕಾರಕ್ಕೇರಿತು. 10ನೇ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜನತಾ ದಳ ಅಧಿಕಾರಕ್ಕೆ ಬಂದಿತ್ತು.

11ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, 12ನೇ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಮೊದಲಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನಂತರದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿತ್ತು. 13ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಗದ್ದುಗೆ ಏರಿತು. 14ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳಿತು. 15ನೇ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಬಳಿಕ ಅದು ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಿದೆ.

ನಾಲ್ಕು ದಶಕದ ರಾಜಕೀಯ ಹಿನ್ನೋಟ: 1983ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಿತ್ತು. ಜನತಾ ಪರಿವಾರದ ನಾಯಕ ರಾಮಕೃಷ್ಣ ಹೆಗಡೆ 1983ರ ಜನವರಿ 10 ರಂದು ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ದೂರವಾಣಿ ಕದ್ದಾಲಿಕೆ ಆರೋಪದ ಮೇಲೆ ರಾಜೀನಾಮೆ ನೀಡಿ ಮರು ಚುನಾವಣೆಗೆ ಹೋಗಿದ್ದರು. 1985ರ ಮಾರ್ಚ್ 8ರಂದು 8ನೇ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಜನಾದೇಶ ಪಡೆದು ಸರ್ಕಾರ ರಚನೆ ಮಾಡಿದರು. ಇದಾದ ಬಳಿಕ ಅವರ ರಾಜೀನಾಮೆಯಿಂದ ಅವರದ್ದೇ ಪಕ್ಷದ ಎಸ್ಆರ್​ ಬೊಮ್ಮಾಯಿ 1988ರ ಆಗಸ್ಟ್ 13ರಿಂದ 1989ರ ಏಪ್ರಿಲ್ 21ರವರೆಗೂ ಮುಖ್ಯಮಂತ್ರಿಯಾದರು. ನಂತರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ಹೊಸದಾಗಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಬಂದಿದ್ದತ್ತು. ಆಗ ವೀರೇಂದ್ರ ಪಾಟೀಲ್ 1989ರ ನವೆಂಬರ್ 30ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದರು. ಒಂದೇ ವರ್ಷದಲ್ಲಿ ಅವರನ್ನು ಇಳಿಸಿ 1990ರ ಅಕ್ಟೋಬರ್ 17ರಂದು ಬಂಗಾರಪ್ಪರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ ಅವರನ್ನೂ ಎರಡು ವರ್ಷದಲ್ಲೇ ಕೆಳಗಿಳಿಸಿ 1992ರ ನವೆಂಬರ್ 19 ರಂದು ವೀರಪ್ಪ ಮೊಯ್ಲಿ ಅವರನ್ನು ಸಿಎಂ ಮಾಡಲಾಯಿತು.

Karnataka assembly results: Ruling party has lost all elections since 1989
ಸೋಲು-ಗೆಲುವಿನ ಮಾಹಿತಿ

ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಜನತಾದಳ ಅಧಿಕಾರಕ್ಕೆ ಬಂದಿತು. 1994ರ ಡಿಸೆಂಬರ್ 11ರಂದು ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ದೇವೇಗೌಡರು ಪ್ರಧಾನಿಯಾದ ಹಿನ್ನೆಲೆಯಲ್ಲಿ 1996ರ ಮೇ 31 ರಂದು ಜೆಹೆಚ್ ಪಟೇಲ್ ಮುಖ್ಯಮಂತ್ರಿಯಾದರು. 11ನೇ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 1999ರ ಅಕ್ಟೋಬರ್ 11 ರಂದು ಎಸ್​ಎಂ ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ 12ನೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ವೇದಿಕೆ ನಿರ್ಮಾಣವಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ನಡೆಯದ ಮೋದಿ- ಶಾ ಮ್ಯಾಜಿಕ್​; ಕೈ ಕೊಟ್ಟ ಹೊಸ ಪ್ರಯೋಗ

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ 2004ರ ಮೇ 28ರಂದು ಕಾಂಗ್ರೆಸ್​​ನ ಧರ್ಮಸಿಂಗ್​ ಮುಖ್ಯಮಂತ್ರಿಯಾದರು. ಆದರೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದ ಕಾರಣ 2006 ರ ಫೆಬ್ರವರಿ 3ರಂದು ಜೆಡಿಎಸ್​​ನ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಮೈತ್ರಿ ಒಪ್ಪಂದದಂತೆ 20 ತಿಂಗಳ ನಂತರ ಬಿಜೆಪಿಗೆ ಸಿಎಂ ಸ್ಥಾನ ಬಿಟ್ಟು ಕೊಡಲಿಲ್ಲ. ಆದರೆ, 2007ರ ನವೆಂಬರ್ 12ರಂದು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆಗ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ಕೊಡ್ತಿಲ್ಲ ಎಂದು ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.

ನಂತರ 13ನೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. 2008ರ ಮೇ 30ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಲೋಕಾಯುಕ್ತ ವರದಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಹಾಗಾಗಿ 2011ರ ಆಗಸ್ಟ್ 5ರಂದು ಡಿವಿ ಸದಾನಂದಗೌಡ ಮುಖ್ಯಮಂತ್ರಿಯಾದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಅವರೂ ರಾಜೀನಾಮೆ ನೀಡಿದ್ದರಿಂದ 2012ರ ಜುಲೈ 12ರಂದು ಜಗದೀಶ್ ಶೆಟ್ಟರ್ ಸಿಎಂ ಗಾದಿಗೇರಿದರು.

14ನೇ ವಿಧಾನಸಭೆಗೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತು. 2013ರ ಮೇ 13 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಐದು ವರ್ಷ ಆಳ್ವಿಕೆ ಮಾಡಿದರು. ನಂತರ 15ನೇ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿದ್ದರಿಂದ ಬಿಜೆಪಿ ಸರ್ಕಾರ ರಚಿಸಿತು. 2018ರ ಮೇ 17ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ರಾಜೀನಾಮೆ ನೀಡಬೇಕಾಯಿತು.

ಇದರಿಂದಾಗಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ 2018ರ ಮೇ 23ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದರು. ಆದರೆ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಒಂದೇ ವರ್ಷದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು. 2019ರ ಜುಲೈ 26ರಂದು ಯಡಿಯೂರಪ್ಪ ಸಿಎಂ ಆದರು. ಪಕ್ಷದಲ್ಲಿನ ಬದಲಾವಣೆಗಳಿಂದ ಎರಡು ವರ್ಷಕ್ಕೆ ಬಿಎಸ್​ವೈ ರಾಜೀನಾಮೆ ನೀಡಿದ್ದರಿಂದ 2021ರ ಜುಲೈ 28ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿದರು. ಇದೀಗ 16ನೇ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಜ್ಜಾಗಿದೆ.

ಇದನ್ನೂ ಓದಿ: ಗದ್ದುಗೆ ಗುದ್ದಾಟದಲ್ಲಿ ಮುಗ್ಗರಿಸಿದ ಬಿಜೆಪಿ: ಕಮಲ ಪಡೆಗೆ ನಿರೀಕ್ಷಿತ ಫಲ ನೀಡದ ಹಿಂದುತ್ವ ಕಾರ್ಡ್!

Last Updated :May 14, 2023, 9:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.