ETV Bharat / state

ಗುಜರಾತ್ ಫಲಿತಾಂಶ ಕಾಂಗ್ರೆಸ್​ಗೆ, ಹಿಮಾಚಲ ಪ್ರದೇಶ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಸಂದೇಶ

author img

By

Published : Dec 10, 2022, 11:55 AM IST

Updated : Dec 10, 2022, 1:43 PM IST

ಕಾಂಗ್ರೆಸ್ ಬಿಜೆಪಿ
ಕಾಂಗ್ರೆಸ್ ಬಿಜೆಪಿ

ರಾಜ್ಯದಲ್ಲಿ ಬಿಜೆಪಿಗೆ ಗುಜರಾತ್ ಫಲಿತಾಂಶದಿಂದ ಆತ್ಮವಿಶ್ವಾಸ ಹೆಚ್ಚಿದೆ. ವಾಸ್ತವವಾಗಿ ಗುಜರಾತ್​​ನಲ್ಲಿನ ಬಿಜೆಪಿ ಪರಿಸ್ಥಿತಿಗಿಂತ ಕರ್ನಾಟಕದಲ್ಲಿ ಪಕ್ಷದ ಸ್ಥಿತಿಗತಿ ವಿಭಿನ್ನವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಗುಜರಾತ್ ರಾಜ್ಯದಲ್ಲಿನ ಕಾಂಗ್ರೆಸ್​​ಗಿಂತ ಉತ್ತಮ ಸ್ಥಿತಿಯಲ್ಲಿದ್ದು, ಬಿಜೆಪಿಗೆ ಎಲ್ಲ ಹಂತದಲ್ಲೂ ಪ್ರತಿಸ್ಪರ್ಧೆಯೊಡ್ಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಂಗಳೂರು: ಗುಜರಾತ್ ಫಲಿತಾಂಶದಿಂದ ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಬೀಗುತ್ತಿದೆ. ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷ ಹಿಗ್ಗಿದೆ. ಆದರೆ, ವಾಸ್ತವವಾಗಿ ಗುಜರಾತ್ ಮತ್ತು ಹಿಮಾಚಲ ರಾಜ್ಯಗಳ ವಿಧಾನಸಭೆ ಫಲಿತಾಂಶವು ರಾಜ್ಯದಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಆತ್ಮವಿಶ್ವಾಸದ ಜತೆಗೆ ಎಚ್ಚರಿಕೆಯ ಸಂದೇಶವನ್ನ ಸಹ ನೀಡಿದೆ.

ರಾಜ್ಯದಲ್ಲಿ ಬಿಜೆಪಿಗೆ ಗುಜರಾತ್ ಫಲಿತಾಂಶದಿಂದ ಆತ್ಮವಿಶ್ವಾಸ ಹೆಚ್ಚಿದೆ. ವಾಸ್ತವವಾಗಿ ಗುಜರಾತ್​​ನಲ್ಲಿನ ಬಿಜೆಪಿ ಪರಿಸ್ಥಿತಿಗಿಂತ ಕರ್ನಾಟಕದಲ್ಲಿ ಪಕ್ಷದ ಸ್ಥಿತಿಗತಿ ವಿಭಿನ್ನವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಗುಜರಾತ್ ರಾಜ್ಯದಲ್ಲಿನ ಕಾಂಗ್ರೆಸ್​​ಗಿಂತ ಉತ್ತಮ ಸ್ಥಿತಿಯಲ್ಲಿದ್ದು, ಬಿಜೆಪಿಗೆ ಎಲ್ಲಾ ಹಂತದಲ್ಲೂ ಪ್ರತಿಸ್ಪರ್ಧೆಯೊಡ್ಡುವ ಸಾಮರ್ಥ್ಯ ಹೊಂದಿದೆ.

ಹಿಮಾಚಲ ಪ್ರದೇಶದಲ್ಲಿ ಆಡಳಿತ ಪಕ್ಷ ಬಿಜೆಪಿ ಪ್ರಧಾನಿ ಮೋದಿ ಅಲೆಯ ನಡುವೆಯೂ ಅಧಿಕಾರ ಉಳಿಸಿಕೊಳ್ಳಲು ವಿಫಲವಾಗಿದ್ದು, ರಾಜ್ಯದಲ್ಲಿ ಹಿಮಾಚಲ ರಾಜ್ಯದ ಫಲಿತಾಂಶ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳಿವೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಹಿರಿಯ ಪತ್ರಕರ್ತ ಸಿದ್ದರಾಜು

ಹಿರಿಯ ಪತ್ರಕರ್ತರಾದ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಂ. ಸಿದ್ದರಾಜು ಅವರು ಗುಜರಾತ್ ಫಲಿತಾಂಶ ರಾಜ್ಯದಲ್ಲಿ ಪರಿಣಾಮ ಬೀರದು. ಕರ್ನಾಟಕದ ರಾಜಕೀಯ ಇತಿಹಾಸ ಗಮನಿಸಿದಾಗ ಆಡಳಿತದಲ್ಲಿರುವ ಪಕ್ಷ ಎರಡನೇ ಅವಧಿಗೆ ಸತತವಾಗಿ ಅಧಿಕಾರಕ್ಕೆ ಬಂದ ನಿದರ್ಶನಗಳಿಲ್ಲ. 1985 ರಿಂದ ಇಲ್ಲಿಯತನಕ ಅಧಿಕಾರದಲ್ಲಿರುವ ಪಕ್ಷ ಮತ್ತೆ ಗೆದ್ದು ಅಧಿಕಾರಕ್ಕೆ ಬಂದ ಉದಾಹರಣೆಗಳಿಲ್ಲವೆಂದು ಹೇಳುತ್ತಾರೆ.

(ಓದಿ:ಮೋದಿ ಮನವಿಗೆ ಗುಜರಾತ್ ಮಣೆ; ಹಿಮಾಚಲದಲ್ಲಿ ನಡೆಯದ ಕೇಸರಿ ಕಮಾಲ್: ಕಾರಣಗಳಿವು..)

ಕರ್ನಾಟಕದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿ ಅಧಿಕಾರಕ್ಕೆ ತಂದಿದ್ದ ಹಿರಿಯ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದು ಬಿಜೆಪಿಗೆ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವುದು ಹಿರಿಯ ರಾಜಕೀಯ ವಿಶ್ಲೇಷಕ ಸಿದ್ದರಾಜು ಅವರ ಅಭಿಮತ.

ಗುಜರಾತ್ ಫಲಿತಾಂಶ ಪರಿಣಾಮ ಬೀರಲ್ಲ: ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಆಡಳಿತ ವಿರೋಧಿ ಅಲೆಯಿದೆ. ಒಮ್ಮೆಯೂ ಬಿಜೆಪಿ ಸ್ವಂತ ಶಕ್ತಿ ಮೇಲೆ ಸಂಪೂರ್ಣ ಬಹುಮತಗಳಿಸಿ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ಎರಡು ಭಾರಿ ಅಧಿಕಾರಕ್ಕೆ ಬಂದರೂ ಹಿಂಬಾಗಿಲ ಮೂಲಕವೇ ಅಧಿಕಾರಕ್ಕೆ ಬಂದಿದೆ.

ಆಪರೇಷನ್ ಕಮಲ ನಡೆಸಿ ಪ್ರಜಾಪ್ರಭುತ್ವ ವಿರೋಧಿ ನಡೆಯಿಂದಲೇ ಆಡಳಿತ ಚುಕ್ಕಾಣಿ ಹಿಡಿದಿದೆ. ಬರಲಿರುವ ಚುನಾವಣೆಯಲ್ಲಿ ಈ ಎಲ್ಲ ಅಂಶಗಳಿಂದ ಮತದಾರರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದಲ್ಲಿ ಉತ್ತಮ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷ ಬರುವ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ.

ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರದು. ಬದಲಿಗೆ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದ ಪ್ರಭಾವ ಚುನಾವಣೆಯಲ್ಲಿ ಕಂಡುಬರಲಿದೆ ಎಂದು ಕಾಂಗ್ರೆಸ್​ನ ಮುಖಂಡರಾದ ಮಾಜಿ ಸಚಿವ ಹೆಚ್ ಆಂಜನೇಯ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಾದವನ್ನು ಬಿಜೆಪಿ ನಾಯಕರು ಒಪ್ಪಲು ಸಿದ್ಧರಿಲ್ಲ. ಗುಜರಾತ್ ರಾಜ್ಯದ ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಖಂಡಿತ ಪ್ರಭಾವ ಬೀರಲಿದೆ. ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಿನ ಹುಮ್ಮಸ್ಸು ಬಂದಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಹೆಚ್ಚಿನ ಸೀಟು ಗಳಿಸಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವುದು ಬಿಜೆಪಿ ವಕ್ತಾರ ಎಸ್ ಪ್ರಕಾಶ್ ಅವರ ಅಚಲ ನಿಲುವು.

ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಉದಾಹರಣೆಗಳಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಬಿಜೆಪಿ ಈ ಬಾರಿ ಆ ಸಂಪ್ರದಾಯವನ್ನು ಮುರಿಯಲಿದೆ. ಇದೇನು ಅಲಿಖಿತ ನಿಯಮವಲ್ಲ ಎನ್ನುವುದು ಈಟಿವಿ ಭಾರತಕ್ಕೆ ತಿಳಿಸಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆಯಾದರೂ ಅಲ್ಲಿ ಬಿಜೆಪಿ ಸಹ ತೀವ್ರ ಪೈಪೋಟಿ ನೀಡಿದೆ. ಗುಜರಾತ್​ನಲ್ಲಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಬಗ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಎಚ್ಚರಿಕೆ ವಹಿಸಬೇಕಾಗಿದೆ. ಆಪ್ ಪಾರ್ಟಿ ಗುಜರಾತ್​ನಲ್ಲಿ ಕಾಂಗ್ರೆಸ್ ಮತಗಳನ್ನು ಕಬಳಿಸಿದಂತೆ ರಾಜ್ಯದಲ್ಲಿಯೂ ಕಾಂಗ್ರೆಸ್ ಮತಗಳನ್ನು ಚದುರಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದರ ಲಾಭ ಬಿಜೆಪಿಗೆ ಆದರೆ ಕಾಂಗ್ರೆಸ್ ಪಕ್ಷ ಆಡಳಿಕ್ಕೆ ಬರಲು ತೊಡಕಾಗುವ ಲಕ್ಷಣಗಳನ್ನೂ ಅಲ್ಲಗಳೆಯುವಂತಿಲ್ಲ.

(ಓದಿ: ಕರ್ನಾಟಕದತ್ತ ಮೋದಿ - ಅಮಿತ್ ಶಾ ಚಿತ್ತ: ಸಿದ್ದವಾಗ್ತಿದೆ ಎಲೆಕ್ಷನ್ ಆ್ಯಕ್ಷನ್ ಪ್ಲಾನ್! )

Last Updated :Dec 10, 2022, 1:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.