ETV Bharat / state

ಮಹಾಘಟಬಂಧನ್ ಸಭೆಗೆ ‘‘ಅವರು ಬಂದರೆ ನಾವು ಬರಲ್ಲ‘‘ ಎಂದರು : ದೇವೇಗೌಡ

author img

By

Published : Jul 25, 2023, 5:20 PM IST

Updated : Jul 25, 2023, 5:55 PM IST

ಕೆಲವು ಕಾಂಗ್ರೆಸ್​ ನಾಯಕರೇ ಮಹಾಘಟಬಂಧನ್​ ಸಭೆಗೆ ನಾನು ಬರುವುದಕ್ಕೆ ಇಷ್ಟಪಡಲಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಆರೋಪಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು

ಬೆಂಗಳೂರು : 'ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆಗೆ (ಮಹಾಘಟಬಂಧನ್ ) ದೇವೇಗೌಡರು ಬಂದರೆ ನಾವು ಬರುವುದಿಲ್ಲ ಎಂದು ಸ್ಥಳೀಯ ಕಾಂಗ್ರೆಸ್​ನ ಕೆಲ ನಾಯಕರು ಧಮಕಿ ಹಾಕಿದ್ದರಿಂದ ತಮಗೆ ಆಹ್ವಾನ ನೀಡಲಿಲ್ಲ ಎಂದು' ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಾಂಗ್ರೆಸ್ ನಾಯಕರೇ ನಾನು ಬರುವುದಕ್ಕೆ ಇಷ್ಟ ಪಡಲಿಲ್ಲ‌. ನಾನು ಬಂದರೆ ನಾವು ಬರಲ್ಲ ಅಂತ ಕಾಂಗ್ರೆಸ್​ನ ಕೆಲವರು ಹೇಳಿದ್ರು. ಹಾಗಾಗಿ ನಾನು ಹೋಗಲಿಲ್ಲ. ನಿತೀಶ್ ಕುಮಾರ್, ಶರದ್ ಪವಾರ್ ಎಲ್ಲರೂ ನನ್ನ ಸ್ನೇಹಿತರೇ. ಅವರು ನನ್ನನ್ನು ಕರೆದಾಗ ಬರುವುದಿಲ್ಲ ಎಂದು ಹೇಳಿದೆ. ಶರತ್ ಪವಾರ್ ಇಲ್ಲಿಗೆ ಬಂದು ಹೋದ್ರು, ಈಗ ಏನಾಗಿದೆ. ಇಲ್ಲಿಗೆ ಬಂದು ಹೋದ ಮೇಲೂ ಅವರು ಎನ್​ಡಿಎಗೆ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಪರಿಸ್ಥಿತಿ ಏನಾಗುತ್ತದೆ ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್ ವಿರುದ್ಧ ಕಿಡಿ : ಸಮಯ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸೆಕ್ಯುಲರ್ ಅಂತೆ ಕಾಣುತ್ತದೆ. ಆ ಪಕ್ಷಕ್ಕೆ ಅವಶ್ಯಕತೆ ಬಂದಾಗ ಜೆಡಿಎಸ್ ನಾನ್ ಸೆಕ್ಯುಲರ್ ಆಗಿ ಕಾಣುತ್ತದೆ. ಮಂಡ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಸಹಕಾರ, ಜೆಡಿಎಸ್‌ಗೆ ಕೊಕ್. ಯಾವುದೋ ಬೇಜವಾಬ್ದಾರಿ ಪತ್ರಿಕೆ. ನಿಮಗೆ ಬೇಕು ಅಂದಾಗ ಬೇಕಾದಂತೆ ಬರೀತೀರಾ ಎಂದು ಕಿಡಿಕಾರಿದರು. ಕಾಂಗ್ರೆಸ್​ನವರು ಸತ್ಯವಂತರು, ನೀತಿವಂತರು, ಅವರಿಗೆ ಬೇಕಾದಾಗ ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸೇತರ ಸರ್ಕಾರ ಬಂದಿದ್ದು 1983 ರಲ್ಲಿ. 18 ಬಿಜೆಪಿ, 8 ಕಮ್ಯುನಿಸ್ಟ್, 5 ಪಕ್ಷೇತರರು. ಮೊದಲ ಬಾರಿಗೆ 1983ರಲ್ಲಿ ಕಾಂಗ್ರೆಸೇತರ ಸರ್ಕಾರ ರಚನೆ ಮಾಡಲಾಯ್ತು. ಆಗ ಬಿಜೆಪಿ ಬೆಂಬಲ ಪಡೆದು ಸರ್ಕಾರ ಮಾಡಿದ್ದೆವು. ಅಂದು ರಾಮಕೃಷ್ಣಹೆಗಡೆ ಅವರು ಬಿಜೆಪಿ ಜೊತೆ ಸಂಬಂಧ ಮಾಡಿರಲಿಲ್ಲವೇ?. ಆಗ ಸಿದ್ದರಾಮಯ್ಯ ಕಾವಲು ಸಮಿತಿ ಅಧ್ಯಕ್ಷ ಆಗಿದ್ರು. ನಾನು ಬಿಜೆಪಿ ಬೆಂಬಲಿತ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವನಾಗಿದ್ದೆ. ಯಾವ ಯಾವ ಸಂದರ್ಭದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿದೆ. ಹೇಳಿ ಇಬ್ರಾಹಿಂ ಅವರೇ ಹೇಳೋಕೆ ಕಷ್ಟಾನಾ, ಅಂತ ಪಕ್ಕದಲ್ಲೇ ಇದ್ದ ಇಬ್ರಾಹಿಂ ಪ್ರಶ್ನೆ ಮಾಡಿದರು. ರಾಮಕೃಷ್ಣ ಹೆಗಡೆ ಅವರು ಬಿಜೆಪಿ ಜೊತೆ ಹೋಗಿ ಮುಖ್ಯಮಂತ್ರಿ ಆಗಲಿಲ್ಲವೇ?, ಕುಮಾರಸ್ವಾಮಿ ಮಾತ್ರನಾ ಅವರ ಜೊತೆ ಹೋಗಿದ್ದು ಎಂದು ತಿರುಗೇಟು ನೀಡಿದರು.

ಜೆಡಿಎಸ್ ಅನ್ನು ಮುಗಿಸಲು ಸಾಧ್ಯವಿಲ್ಲ : ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷವನ್ನು ಅಳಿಸಬಹುದು ಅಂತ ಅಂದುಕೊಂಡಿದ್ದರೆ ಅದು ಭ್ರಮೆ. ಅದು ಸಾಧ್ಯವಿಲ್ಲ. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನೇನಾಗಿದೆ ಅಂತ ಜಿ ಟಿ ದೇವೇಗೌಡರು ವಿವರವಾಗಿ ಹೇಳಿದ್ದಾರೆ. ಕಾಂಗ್ರೆಸ್ ನವರ ಅಧಿಕಾರಕ್ಕೆ ಏನೆಲ್ಲಾ ಮಾಡಿದರು ಅಂತ ಹೇಳಿದ್ದಾರೆ. ಅಂದಿನಿಂದ 1983 ರಿಂದ ಇಲ್ಲಿಯವರೆಗೂ ಜೆಡಿಎಸ್ ಇದೆ. ನಾನು ಸಿಎಂ, ಪ್ರಧಾನಿ ಆದೆ. ಕುಮಾರಸ್ವಾಮಿ ಸೇರಿದಂತೆ ಅನೇಕರು ಸಿಎಂ ಆಗಿದ್ದಾರೆ. ಕೆಲವರು ಮಂತ್ರಿಗಳಾಗಿದ್ದಾರೆ.

ನಮ್ಮ 19 ಶಾಸಕರು, 7 ವಿಧಾನಪರಿಷತ್ ಸದಸ್ಯರ ಜೊತೆ ಕುಳಿತು ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಪಕ್ಷ ಸಂಘಟನೆ ಮಾಡಲು ಜಿ ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ರಾಜ್ಯಾದ್ಯಂತ ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದರ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಒಂದುಗೂಡಿಸೋ ಕೆಲಸ ಮಾಡಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಹೋರಾಟ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂಬುದು ಗೊತ್ತಿಲ್ಲ. ಆದರೆ, ಯಾವುದೇ ಪಕ್ಷದೊಂದಿಗೆ ನಾವು ಚುನಾವನಾ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಯಾವ ರೀತಿ ಹೋರಾಟ ಮಾಡಬೇಕೆಂಬುದು ಮುಂದೆ ತೀರ್ಮಾನ ಮಾಡುತ್ತೇವೆ. ಈ ಹಿಂದೆ ಮನಮೋಹನ್ ಸಿಂಗ್ ಅವರು ಮೂರು ಸ್ಥಾನ ಕಡಿಮೆ ಇದೆ ಬೆಂಬಲ ಕೊಡಿ ಎಂದು ಕೇಳಿದ್ದರು. ಆಗ ನಾನು ಯಾವ ಷರತ್ತು ಹಾಕದೇ ಸ್ಥಿರ ಸರ್ಕಾರಕ್ಕಾಗಿ ಬೆಂಬಲ ಕೊಟ್ಟೆ ಎಂಬುದನ್ನು ನೆನಪು ಮಾಡಿದರು. ಮುಂದೆ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ನೋಡುತ್ತೇನೆ. ನಂತರ ತೀರ್ಮಾನ ಮಾಡುತ್ತೇನೆ. ನಾವು ಪಕ್ಷ ಉಳಿಸುತ್ತೇವೆ. ಜನರ ಋಣ ತೀರಿಸಲು ಜೆಡಿಎಸ್ ಹೋರಾಟ ಮಾಡಲಿದೆ ಎಂದು ನುಡಿದರು.

28 ಲೋಕಸಭಾ ಕ್ಷೇತ್ರಗಳಿವೆ. ಯಾವ ಕ್ಷೇತ್ರದಲ್ಲಿ ನಮಗೆ ಎಲ್ಲಿ ಶಕ್ತಿ ಇದೆ. ನಮ್ಮ ಸೋತ ಅಭ್ಯರ್ಥಿಗಳ ಜೊತೆಯೂ ಚರ್ಚೆ ಮಾಡುತ್ತೇವೆ. ಅಭ್ಯರ್ಥಿ ಯಾರಿದ್ದಾರೆ ಅನ್ನೋದನ್ನ ನೋಡಿ ಅಭ್ಯರ್ಥಿ ಹಾಕುತ್ತೇವೆ ಎಂದರು. ವಿಧಾನಸಭೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ಬಿಜೆಪಿ ಅಧಿಕೃತ ಪ್ರತಿಪಕ್ಷ. ನಮ್ಮದು ಅನಧಿಕೃತ ಪ್ರತಿಪಕ್ಷ. ಸಮಸ್ಯೆಗಳು ಬಂದಾಗ ಒಂದಾಗಿ ಮಾತನಾಡಿದ್ದಾರೆ. ಒಂದಕ್ಕೊಂದು ಸಂಬಂಧ ಕಲ್ಪಿಸುವುದು ಬೇಡ ಎಂದು ಹೇಳಿದರು.

ನೈಸ್ ವಿಚಾರದಲ್ಲಿ ನೈತಿಕ ಪಾಠ : ನೈಸ್ ರಸ್ತೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ಧೇ ಪಕ್ಷದ ಹಿರಿಯ ಮುಖಂಡ ಟಿ ಬಿ ಜಯಚಂದ್ರ ನೇತೃತ್ವದ ಸದನ ಸಮಿತಿ ನೀಡಿರುವ ವರದಿ ಬಗ್ಗೆ ದೃಢವಾದ ನಿಲುವು ಹೇಳುತ್ತಿಲ್ಲ. ಪತ್ರಕರ್ತರಿಗೆ ಉಪದೇಶ ಮಾಡುತ್ತಿದ್ದಾರೆ. ಜಯಚಂದ್ರ ವರದಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಪತ್ರಕರ್ತರಿಗೆ ನೈತಿಕ ಪಾಠ ಮಾಡುವವರಿಗೆ ನೈತಿಕತೆ ಇಲ್ಲವೇ? ಎಂದು ಸಿದ್ದರಾಮಯ್ಯ ಹೆಸರು ಹೇಳದೇ ಗೌಡರು ಚಾಟಿ ಬೀಸಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸದನ ಸಮಿತಿ ರಚನೆ ಮಾಡಲಾಗಿತ್ತು. ಸದನ ಸಮಿತಿ ವರದಿಯಲ್ಲಿ 11,660 ಎಕರೆ ವಾಪಸ್ ಕೊಡಲು ವರದಿ ನೀಡಿದೆ. ಯಾರ ಭೂಮಿ ಇದು?, ಭೂಮಿ ವಾಪಸ್ ಪಡೆಯಲು ಸಿದ್ದರಾಮಯ್ಯ ಅವರಿಗೆ ಏನು ಕಷ್ಟ. ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಬರುವ ಹಣವನ್ನು ಐದು ಗ್ಯಾರಂಟಿ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬಹುದಲ್ಲವೇ, ಕೋಟ್ಯಂತರ ರೂ. ಹಣ ಇದರಲ್ಲಿ ಬರುತ್ತದೆ. ಸಿದ್ದರಾಮಯ್ಯ ಅವರೇ ನೀವು ಮಾತಾಡೋ ಮಾತು ಹೃದಯದ ಅಂತರಾಳದಿಂದ ಬರಬೇಕು. ಅಧಿಕಾರ ಇರುತ್ತೆ, ಹೋಗುತ್ತೆ. ನೈತಿಕತೆ ಮುಖ್ಯ ಎಂದರು.

ಶಿಕ್ಷಕರ ಕ್ಷೇತ್ರದಿಂದ ಎ ಪಿ ರಂಗನಾಥ್ ಜೆಡಿಎಸ್ ಅಭ್ಯರ್ಥಿ : ಮುಂಬರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ವಕೀಲ, ಜೆಡಿಎಸ್ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ಎ ಪಿ ರಂಗನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಇದೇ ವೇಳೆ ದೇವೇಗೌಡರು ಘೋಷಣೆ ಮಾಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ಮಾಜಿ ಸಚಿವ ಜಿ. ಟಿ ದೇವೇಗೌಡ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ. ಎ ಶರವಣ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಜೆಡಿಎಸ್​ - ಬಿಜೆಪಿ ಮೈತ್ರಿ ಊಹಾಪೋಹಕ್ಕೆ ತೆರೆ ಎಳೆದ ದೇವೇಗೌಡರು

Last Updated :Jul 25, 2023, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.