ETV Bharat / state

ಕಾಂಗ್ರೆಸ್​ನ ಒಬ್ಬೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಗೆ ಆಗುವುದಿಲ್ಲ: ಡಿ ಕೆ ಶಿವಕುಮಾರ್ ಟಾಂಗ್​​

author img

By ETV Bharat Karnataka Team

Published : Nov 8, 2023, 7:10 PM IST

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಎಂಬ ಎರಡು ಅಧಿಕಾರ ಶಕ್ತಿ ಕೇಂದ್ರಗಳಿದ್ದು, ಸತೀಶ್ ಜಾರಕಿಹೊಳಿಯವರು ಮೂರನೇ ಶಕ್ತಿ ಕೇಂದ್ರವಾಗಿ ಸೃಷ್ಠಿಯಾಗುತ್ತಿದ್ದಾರಾ? ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಒಬ್ಬರೇ ಸಿಎಂ, ಒಬ್ಬರೇ ಕೆಪಿಸಿಸಿ ಅಧ್ಯಕ್ಷ, ಇದಕ್ಕೆ ಉಪಮುಖ್ಯಮಂತ್ರಿ ಪಟ್ಟ ಜೋಡಿಸಿಕೊಂಡಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು/ ನವದೆಹಲಿ : “ನಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯಿಂದ ಆಗುವುದಿಲ್ಲ. ಇದು ವಿಫಲ ಯತ್ನ ಎಂದು ಅವರಿಗೂ ಚೆನ್ನಾಗಿ ಗೊತ್ತಿದೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಲು ಬಿಜೆಪಿ ಸಜ್ಜಾಗುತ್ತಿದ್ದು, ಫಡ್ನವೀಸ್ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸಭೆ ನಡೆದಿದೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆಯಂತಲ್ಲ’ ಎಂದು ಕೇಳಿದ ಪ್ರಶ್ನೆಗೆ, “ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೇ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಅವರ ಪಕ್ಷದ, ನಾಯಕತ್ವದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅದನ್ನು ಹೊರಗೆ ಹೇಳಿಕೊಳ್ಳಲು ಆಗದೇ, ಇಂತಹ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿಯವರು ಯಾರೋ ಬಂದಂತೆ, ಹೋದಂತೆ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಕೆಲಸಗಳಿಗೆ, ಕುಶಲೋಪರಿ ವಿಚಾರಿಸಲು ಅನೇಕರು ಬಂದಿರುತ್ತಾರೆ. ಆದರೆ ಮನೆಯಿಂದ ಹೊರಗೆ ಬಂದು ರಾಜಕೀಯ ವಿಚಾರಕ್ಕೆ ಬಂದಿದ್ದೇ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಚಲಾವಣೆಯಲ್ಲಿ ಇರಬೇಕಾದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ” ಎಂದರು.

ಬಿಜೆಪಿಯ ಎಲ್ಲಾ ನಡೆಯೂ ಗೊತ್ತಿದೆ : ಸರ್ಕಾರ ಬೀಳಿಸುವ ಯತ್ನ ಮಹಾರಾಷ್ಟ್ರದಿಂದ ನಡೆದಿದೆ. ರಾಜ್ಯದ ನಾಯಕರು ಅಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆಯೇ ಎಂದು ಮರುಪ್ರಶ್ನಿಸಿದಾಗ, “Hundred Things happens, Congress Party will digist (ನೂರಾರು ಬೆಳವಣಿಗೆಗಳು ನಡೆಯುತ್ತವೆ. ಇದೆಲ್ಲವನ್ನು ಕಾಂಗ್ರೆಸ್ ಪಕ್ಷ ಅರಗಿಸಿಕೊಳ್ಳುತ್ತದೆ). ಇದರ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾಗಿದೆ. ನೂರು ಸಭೆ ಮಾಡಿರಲಿ, ಮಾಡದಿರಲಿ. ಅವರ ಎಲ್ಲಾ ನಡೆಯೂ ನನಗೆ ಗೊತ್ತಿದೆ. ಬಿಜೆಪಿಯ ನಾಯಕರು ತಮ್ಮದೇ ಕಷ್ಟದಲ್ಲಿದ್ದಾರೆ. ಒಂದಷ್ಟು ಜನ ನಿರುದ್ಯೋಗಿಗಳು ಇದ್ದಾರಲ್ಲಾ, ಅವರು ಚಪಲಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿದರು.

ನಮ್ಮಿಂದ ಅಲ್ಲಿಗೆ ಹೋದವರೇ, ಈ ಆಪರೇಷನ್ ಕೆಲಸ ಮಾಡುತ್ತಿರುವುದು : ಕಾಂಗ್ರೆಸ್ ಪಕ್ಷದ ಶಾಸಕರು ಈ ಸಭೆಗಳಲ್ಲಿ ಭಾಗವಹಿಸಿದ್ದಾರೆಯೇ ಎಂದು ಕೇಳಿದಾಗ, “ನಮ್ಮ ಶಾಸಕರು ಯಾರೂ ಹೋಗಿಲ್ಲ. ಮೊದಲಿನಿಂದ ಏಜೆಂಟ್ ಕೆಲಸ ಮಾಡುತ್ತಿದ್ದವರು, ನಮ್ಮ ಶಾಸಕರನ್ನು ಸ್ವತಃ ಹುಡುಕಿಕೊಂಡು ಬಂದಿದ್ದಾರೆ. ಯಾರು, ಯಾರ ಬಳಿ ಬಂದು ಮಾತನಾಡಿದ್ದಾರೆ. ಅವರೆಲ್ಲಾ ನಮ್ಮ ಬಳಿ ಬಂದು ಮಾಹಿತಿ ನೀಡಿದ್ದಾರೆ. ನಮ್ಮಿಂದ ಹಿಂದೆ ಅಲ್ಲಿಗೆ ಹೋದವರೇ ಈ ಆಪರೇಷನ್ ಕೆಲಸ ಮಾಡುತ್ತಿರುವುದು” ಎಂದರು.

ಕರ್ನಾಟಕ ಜಗಳಕ್ಕೆ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಹೇಳಿರುವ ಬಗ್ಗೆ ಕೇಳಿದಾಗ, “ಪ್ರಧಾನಿಗಳು ನಮ್ಮನ್ನು ನೆನೆಸಿಕೊಳ್ಳುತ್ತಿದ್ದಾರಲ್ಲ ಅಷ್ಟೇ ಸಾಕು. ನಮ್ಮ ಗ್ಯಾರಂಟಿ, ಕೆಲಸ, ಒಗ್ಗಟ್ಟು ಅವರ ನಿದ್ರೆ ಕೆಡಿಸಿದೆ. ಇದು ಸಂತೋಷದ ವಿಚಾರ, ಅವರಿಗೆ ಅಭಿನಂದನೆಗಳು. ಅದಕ್ಕೆ ಮುಖ್ಯಮಂತ್ರಿ ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ” ಎಂದು ಪ್ರತಿಕ್ರಿಯಿಸಿದರು.

ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ವಿಚಾರದ ಬಗ್ಗೆ ಕೇಳಿದಾಗ, “ನಾನು ಕಾಂಗ್ರೆಸ್ ಪಕ್ಷ ಎನ್ನುವ ಕುಟುಂಬದ ಮುಖ್ಯಸ್ಥ. ಪಕ್ಷದ ಸಾಕಷ್ಟು ಕೆಲಸಗಳು ಇರುತ್ತವೆ. ಅದಕ್ಕೆ ನಾನೇ ಒಂದಷ್ಟು ಜನ ನಾಯಕರ ಮನೆಗೆ ಹೋಗುತ್ತೇನೆ. ಅಥವಾ ನನ್ನ ಮನೆಗೆ ಕರೆಯುತ್ತೇನೆ. ರಾಮಲಿಂಗಾರೆಡ್ಡಿ, ಪರಮೇಶ್ವರ್ ಅವರ ಮನೆಗೆ ಹೋಗುತ್ತೇನೆ. ಅವರುಗಳೇ ನನ್ನ ಮನೆಗೆ ಬರುತ್ತೇನೆ ಎಂದಾಗ, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದ ಸಂದರ್ಭಗಳೂ ಇವೆ. ಅದೇ ರೀತಿ ಸತೀಶ್ ಜಾರಕಿಹೊಳಿ ಅವರೇ ಮನೆಗೆ ಬರುತ್ತೇನೆ ಎಂದಿದ್ದರು. ಅದಕ್ಕೆ ಬೇಡ, ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಹೋದೆ. ನಾನೊಬ್ಬ ಪಕ್ಷದ ಅಧ್ಯಕ್ಷ, ಅದಕ್ಕೆ ಭೇಟಿಯಾಗಿದ್ದೇನೆ” ಎಂದರು.

ಸಾಮಾನ್ಯವಾಗಿ ಕುಟುಂಬದ ಮುಖ್ಯಸ್ಥನ ಮನೆಗೆ ಸದಸ್ಯರು ಬರುತ್ತಾರೆ, ನೀವೇ ಅವರ ಮನೆಗೆ ಹೋಗಿದ್ದು ಏಕೆ? ಎಂದಾಗ “ನಮ್ಮ ಮನೆಯಲ್ಲಿ ಮಾತನಾಡಲು ಸಮಯವೇ ಇಲ್ಲ. ನಮ್ಮ ಕಾರ್ಯಕರ್ತರಿಗೆ ಸರಿಯಾಗಿ ಸಮಯ ಕೊಡಲು ಆಗುತ್ತಿಲ್ಲ. ಅದಕ್ಕಾಗಿ ಅವರ ಬಳಿ ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು.

ಒಬ್ಬರೇ ಸಿಎಂ, ಒಬ್ಬರೇ ಕೆಪಿಸಿಸಿ ಅಧ್ಯಕ್ಷರು: ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಎನ್ನುವ ಎರಡು ಅಧಿಕಾರ ಶಕ್ತಿ ಕೇಂದ್ರಗಳಿದ್ದು, ಸತೀಶ್ ಜಾರಕಿಹೊಳಿ ಅವರು ಮೂರನೇ ಶಕ್ತಿ ಕೇಂದ್ರವಾಗಿ ಸೃಷ್ಟಿಯಾಗುತ್ತಿದ್ದಾರಾ? ಎಂದಾಗ “ರಾಜ್ಯದಲ್ಲಿ ಒಬ್ಬರೇ ಸಿಎಂ, ಒಬ್ಬರೇ ಕೆಪಿಸಿಸಿ ಅಧ್ಯಕ್ಷ. ಇದಕ್ಕೆ ಉಪಮುಖ್ಯಮಂತ್ರಿ ಪಟ್ಟ ಜೋಡಿಸಿಕೊಂಡಿದೆ” ಎಂದು ಸ್ಪಷ್ಟಪಡಿಸಿದರು.

2028ರಲ್ಲಿ ನಾನೇ ಸಿಎಂ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದಾಗ, “ಆಸೆ ಪಡುವುದರಲ್ಲಿ ತಪ್ಪೇನಿದೆ. ಈಗ ಕೊಟ್ಟಿರುವ ಅಧಿಕಾರವನ್ನು 5 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿ, ಮುಂದಿನ ಬಾರಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕಿಂತ ಬೇರೇನಿದೆ?” ಎಂದು ತಿಳಿಸಿದರು.

ಇಂತಹ ಪರಿಸ್ಥಿತಿ ಅವರಿಗೆ ಏಕೆ ಬಂತು; ಡಿಕೆಶಿ ಪ್ರಶ್ನೆ: ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಡಿ ಕೆ ಶಿವಕುಮಾರ್ ಎಳೆದುಕೊಂಡು ಬಿಡುತ್ತಾರೆ ಎಂಬ ಮಾತುಗಳು ಇದ್ದಾಗ ಹಾಸನಾಂಬ ದರ್ಶನ ಪಡೆದು ಕುಮಾರಸ್ವಾಮಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರಲ್ಲ ಎಂದು ಕೇಳಿದಾಗ, “ಇಂತಹ ಪರಿಸ್ಥಿತಿ ಅವರಿಗೆ ಏಕೆ ಬಂತು?. ನಾವು ಅವರ ಸುದ್ದಿಗೆ ಹೋಗಿಲ್ಲ, ನಮ್ಮಲ್ಲೇ 136 ಜನ ಹಾಗೂ ಪಕ್ಷೇತರರ ಬೆಂಬಲ ಇದೆಯಲ್ಲಾ? ಅವರಿಗೆ ಒಗ್ಗಟ್ಟು ಪ್ರದರ್ಶಿಸುವ ಪರಿಸ್ಥಿತಿ ಏಕೆ ಬಂತು?” ಎಂದು ಕೇಳಿದರು.

ನೀವು ಏನಿಲ್ಲ ಎಂದು ಹೇಳುತ್ತಿದ್ದೀರಿ. ಆದರೆ ಸಿಎಂ ಸಿದ್ದರಾಮಯ್ಯ ಅವರು ಬಹಳಷ್ಟು ಜನ ಬಿಜೆಪಿ, ಜೆಡಿಎಸ್​ನವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎನ್ನುತ್ತಿದ್ದಾರೆ ಎಂದಾಗ “ಇದೆ, ನಾನು ಇಲ್ಲ ಎಂದು ಹೇಳಿಲ್ಲವಲ್ಲ. ನ. 15ಕ್ಕೆ ಪಕ್ಷ ಸೇರ್ಪಡೆ ಇದೆ. ನ.14 ರ ಸಂಜೆ ತಿಳಿಸುತ್ತೇವೆ. ನೀವು ಯಾರೋ ಬರುತ್ತಾರೆ ಎಂದು ಹೇಳಿದರಲ್ಲ” ಎಂದರು.

ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರನ್ನು ವಿಮುಕ್ತಿಗೊಳಿಸಬೇಕು, ಅವರೇ ಸರ್ಕಾರಕ್ಕೆ ಕಳಂಕ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆರೋಪ ಮಾಡಿರುವ ಬಗ್ಗೆ ಕೇಳಿದಾಗ “ನನಗೆ ಅವರ ಭೇಟಿಯ ನಂತರ ಈ ವಿಚಾರ ತಿಳಿಯಿತು. ನನಗೆ ಯಾವುದೇ ಪತ್ರ ತಲುಪಿಲ್ಲ, ಅದರ ಬಗ್ಗೆ ವಿಚಾರಿಸಿ ಹೇಳುತ್ತೇನೆ. ಹಿರಿಯರಾದ ಕೆಂಪಣ್ಣ ಅವರು ಭೇಟಿ ಮಾಡಿ, ಒಂದಷ್ಟು ಸಲಹೆ ನೀಡಿದರು. ಸೀನಿಯಾರಿಟಿ ಮೇಲೆ ಹಣ ನೀಡಿ ಎಂದು ಸಲಹೆ ನೀಡಿದ್ದಾರೆ. ಅವರು ನೀಡಿರುವ ಸಲಹೆ ಸಮಯೋಚಿತವಾಗಿದೆ” ಎಂದು ನುಡಿದರು.

ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ: ಸದಾಶಿವ ಆಯೋಗ ವರದಿ ಜಾರಿಗೆ ಮತ್ತೊಮ್ಮೆ ಕೂಗು ಎದ್ದಿದೆ. ಎಡಗೈ ಸಮುದಾಯದವರು ಬೆಳಗಾವಿಯಲ್ಲಿ ಬೃಹತ್ ಸಮಾವೇಶಕ್ಕೆ ಸಜ್ಜಾಗುತ್ತಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಈ ವಿಚಾರಕ್ಕೆ ಬದ್ದವಾಗಿದೆ. ಚುನಾವಣೆಗೂ ಮುಂಚಿತವಾಗಿ, ಚಿತ್ರದುರ್ಗದ ಸಮಾವೇಶದಲ್ಲಿ ಒಂದಷ್ಟು ನಿರ್ಣಯಗಳನ್ನು ತೆಗೆದುಕೊಂಡಿದ್ದೆವು. ಹಂತ, ಹಂತವಾಗಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಒಂದೇ ದಿನದಲ್ಲಿ ಮಾಡಲು ಯಾರ ಕೈಯಲ್ಲೂ ಆಗುವುದಿಲ್ಲ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಸುಮ್ಮನೆ ಹೇಳುತ್ತಿದ್ದರು, ಆದರೆ ನಾವು ಹಿಂದಿನ ಬಜೆಟ್ ನಲ್ಲಿ ಯಾವ ಕೆಲಸಗಳು ಇದ್ದವೋ ಅದನ್ನು ಮುಂದುವರೆಸಿದಿದ್ದೇವೆ. ಹೊಸ ಕೆಲಸ ಮಾಡಲು ನಾವು ಹೊಸ ಬಜೆಟ್ ಕೊಟ್ಟಿಲ್ಲವಲ್ಲ? ಆದರೆ ಗ್ಯಾರಂಟಿಗಳ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಬರುವ ಡಿಸೆಂಬರ್ ವೇಳೆಗೆ ಮುಖ್ಯಮಂತ್ರಿಗಳು ಒಂದಷ್ಟನ್ನು ನಿಭಾಯಿಸೋಣ ಎಂದು ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.

ಪಂಚರಾಜ್ಯ ಚುನಾವಣೆಯಲ್ಲಿ ಎಷ್ಟು ರಾಜ್ಯಗಳನ್ನು ಗೆಲ್ಲಬಹುದು ಎಂದು ಕೇಳಿದಾಗ, “ಐದು ರಾಜ್ಯಗಳನ್ನೂ ಗೆಲ್ಲುತ್ತೇವೆ. ಮಿಜೋರಾಂ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲ. ಆದರೆ ಮಿಕ್ಕ ರಾಜ್ಯಗಳನ್ನು ಗೆಲ್ಲುತ್ತೇವೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೆಚ್​​ಡಿಕೆ ಎನ್​ಡಿಎಯಿಂದ ಆಚೆ ಬಂದು ನನಗೆ ಬೆಂಬಲ ನೀಡುವ ಬಗ್ಗೆ ಮಾತನಾಡಲಿ: ಶಿವಕುಮಾರ್ ಡಿಚ್ಚಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.