ETV Bharat / state

ಮುಖ್ಯವಾಹಿನಿಗೆ ಬರಲಿಚ್ಚಿಸುವವರು ನಕ್ಸಲರ ಶರಣಾಗತಿ ಮತ್ತು ಪುರ್ನವಸತಿ ಸಮಿತಿ ಸಂಪರ್ಕಿಸಿ: ಬಂಜೆಗೆರೆ ಜಯಪ್ರಕಾಶ್ - Dr Banjagere Jayaprakash

author img

By ETV Bharat Karnataka Team

Published : May 16, 2024, 8:26 PM IST

Updated : May 16, 2024, 8:55 PM IST

ನಕ್ಸಲ್ ಶರಣಾಗತಿ ಮತ್ತು ಪುರ್ನವಸತಿ ರಾಜ್ಯ ಮಟ್ಟದ ಸಮಿತಿಯನ್ನು ಸರ್ಕಾರ ಪುನರ್ ರಚಿಸಿದೆ ಎಂದು ಸಮಿತಿ ಸದಸ್ಯರಾದ ಡಾ. ಬಂಜೆಗೆರೆ ಜಯಪ್ರಕಾಶ್ ಹೇಳಿದ್ದಾರೆ.

dr-banjagere-jayaprakash
ಡಾ. ಬಂಜೆಗೆರೆ ಜಯಪ್ರಕಾಶ್ (ETV Bharat)

ಡಾ. ಬಂಜೆಗೆರೆ ಜಯಪ್ರಕಾಶ್ (ETV Bharat)

ಶಿವಮೊಗ್ಗ : ಮುಖ್ಯವಾಹಿನಿಗೆ ಬರಲಿಚ್ಚಿಸುವ ನಕ್ಸಲರು ಸರ್ಕಾರದಿಂದ ರಚನೆಯಾಗಿರುವ ನಕ್ಸಲರ ಶರಣಾಗತಿ ಮತ್ತು ಪುರ್ನವಸತಿ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಸಮಿತಿ ಸದಸ್ಯರಾದ ಡಾ. ಬಂಜೆಗೆರೆ ಜಯಪ್ರಕಾಶ್ ಅವರು ತಿಳಿಸಿದ್ದಾರೆ.

ಶಿವಮೊಗ್ಗ ಪ್ರೆಸ್​ಟ್ರಸ್ಟ್​ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತ ಮಾಹಿತಿ ನೀಡಿದ ಅವರು, ಈ ಹಿಂದೆ 14 ಜನ ನಕ್ಸಲರು ತಮ್ಮ ಶಸ್ತ್ರಾಸ್ತ್ರ ಬಿಟ್ಟು ಮುಖ್ಯವಾಹಿನಿಗೆ ಬಂದು, ಈಗ ಬೇರೆ ಬೇರೆ ವೇದಿಕೆಯಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶಸ್ತ್ರಾಸ್ತ್ರ ಹೋರಾಟದ ಮೂಲಕ ಕ್ರಾಂತಿಯನ್ನು ಸಾಧಿಸುತ್ತೇವೆ ಹಾಗೂ ಸಮಾಜದಲ್ಲಿ ತೀವ್ರಗಾಮಿ ಬದಲಾವಣೆಯನ್ನು ತರುತ್ತೇವೆ ಎನ್ನುವುದರಲ್ಲಿ ಕೆಲವು ಬಿಕ್ಕಟ್ಟುಗಳಿವೆ ಎಂದರು.

ಅದು ಕೆಲವು ತಾತ್ವಿಕವಾದದ್ದು ಮತ್ತು ಕೆಲವು ಸನ್ನಿವೇಶ, ಪರಿಸ್ಥಿತಿ, ಅಂತಾರಾಷ್ಟ್ರೀಯ ಸಂದರ್ಭಕ್ಕೆ ಸಂಬಂಧಪಟ್ಟಂತೆ, ಹಿಂಸಾಚಾರವನ್ನು ಒಂದು ಮಾರ್ಗವನ್ನಾಗಿ ಮಾಡಿಕೊಂಡು ಹಿಂದೆ ಹೋರಾಟಗಳು ನಡೆದಿವೆ. ಇನ್ನೂ ಕೆಲವು ಕಡೆ ನಡೆಯುತ್ತಿದೆ. ಒಟ್ಟಾರೆ ಅವುಗಳ ಫಲಿತಾಂಶ ಏನೂ ಅಂತ ನೋಡಿದ್ರೆ, ಅಸಂಖ್ಯಾತ ಯುವಕರು, ಅದರಲ್ಲೂ ಆದಿವಾಸಿಗಳು, ದಲಿತರು, ಹಿಂದೂಳಿದ ಜಾತಿಯವರು ಅತ್ಯಂತ ಪ್ರತಿಭಾಶಾಲಿಗಳು ಸೇರಿದ್ದಾರೆ. ಕಷ್ಟ ಜೀವಿಗಳು ಸೇರಿದ್ದಾರೆ. ಅವರುಗಳ ಪ್ರಾಣತ್ಯಾಗ ಹಾಗೂ ಇತ್ಯಾದಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಆದ್ದರಿಂದ ಸಮಿತಿಯವರು ಹೇಳುವುದು ಸೈದ್ದಾಂತಿಕ ಭಿನ್ನಾಭಿಪ್ರಾಯಕ್ಕಾಗಿ ಹಾಗೂ ಇತರ ಕಾರಣಗಳಿದ್ದಾಗಿ, ನಿಮ್ಮ ಹೋರಾಟದ ಹಾದಿಯನ್ನು ಬದಲಾಯಿಸಿ ಮುಖ್ಯವಾಹಿನಿಗೆ ಬರಬೇಕು ಅಂತ ಇದ್ದರೆ, ನಿಮ್ಮ ಸೇರ್ಪಡೆ ಪ್ರಕ್ರಿಯೆಗಾಗಿ ಸರ್ಕಾರವೇ ಒಂದು ಸಮಿತಿ ರಚಿಸಿದೆ. ನಕ್ಸಲರು ಮುಖ್ಯವಾಹಿನಿಗೆ ಬರುವ ಹಾದಿಯನ್ನು ಸುಗಮ ಮಾಡುವುದು ನಮ್ಮ ಸಮಿತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮುಖ್ಯವಾಹಿನಿಯಲ್ಲಿ ಸರಿಯಾದ ಕಾರಣಗಳಿಗೆ, ಸುಗಮ ಹೋರಾಟ ಮುಂದುವರೆಸಲು ಯಾವುದೇ ಅಡ್ಡಿ ಇರುವುದಿಲ್ಲ. ಇದರಿಂದ ಅವರು ನಂಬಿರುವ ಸಿದ್ದಾಂತ ಬಿಟ್ಟು ಪ್ರಜಾತಾಂತ್ರಿಕ ಮಾರ್ಗದಲ್ಲಿ ಹೋರಾಟ ಮಾಡಬಹುದು ಅಂತ ನಂಬಿಕೆ ಬಂದಿದೆ. ಕೆಲವರು ತೀವ್ರ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇರೆ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ ಎಂದರು.

ಅನಿವಾರ್ಯ ಕಾರಣಗಳಿಂದ ಹೋರಾಟದಲ್ಲಿ ಮುಂದುವರೆಯಲು ಆಗದೇ ಹೋದಾಗ, ತಮ್ಮ ನಿಲುವುಗಳು ಬದಲಾವಣೆ ಆಗಿರುವಾಗ ಅವರು ಖಂಡಿತವಾಗಿ ಮುಖ್ಯವಾಹಿನಿಗೆ ಬರಬಹುದು. ಅವರಿಗೆ ಸರ್ಕಾರದ ಕಡೆಯಿಂದ ದೂರೆಯಬಹುದಾದ ಕಾನೂನು ಬದ್ದ ರಕ್ಷಣೆ ಒದಗಿಸಲು ಈ ಸಮಿತಿ ಸಿದ್ದವಿದೆ. ಅವರ ಮುಂದಿನ ಜೀವನಕ್ಕೆ ಅಗತ್ಯವಾಗಿರುವಂತಹ ಪುರ್ನವಸತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಅವರು ಮುಖ್ಯವಾಹಿನಿಯಲ್ಲಿ ಸಮಾಜದ ಜೊತೆ ಇದ್ದು ತಮ್ಮ ಹೋರಾಟವನ್ನು, ಆಶಯವನ್ನು ಮುಂದುವರೆಸಲು ಅವಕಾಶವಿದೆ. ಅದನ್ನು ಬಳಸಿಕೊಳ್ಳುವುದಕ್ಕೆ ಯಾರು ಇಷ್ಟಪಡುತ್ತಿದ್ದಾರೆ. ಅವರು ನಮ್ಮನ್ನು ಸಂರ್ಪಕಿಸಬಹುದು. ಅವರಿಗೆ ಮುಖ್ಯ ವಾಹಿನಿಗೆ ಬರುವ ಎಲ್ಲಾ ಅವಕಾಶವನ್ನು ನಾವು ಮಾಡಿಕೊಡುತ್ತೇವೆ ಎಂದರು‌.

ಆದರೆ, ಕಾನೂನು ಪ್ರಕ್ರಿಯೆ ಏನ್ ಇರುತ್ತದೆಯೋ ಅದು ನಡೆಯುತ್ತದೆ. ಯಾರು ಸಹ ಅದಕೊಸ್ಕರ ಹಿಂಜರಿಯಬೇಕಿಲ್ಲ. ಹಿಂದೆ ಶರಣಾಗತಿಯಾದವರು ಈಗ ಮುಖ್ಯವಾಹಿನಿಯಲ್ಲಿ ತಮ್ಮ ಹೋರಾಟವನ್ನು ನಡೆಸುತ್ತಿದ್ದಾರೆ. ಈಗ ಇರುವ ಒಳ್ಳೆಯ ಅವಕಾಶವನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಹೋರಾಟ ಮಾಡುವ ಅವಕಾಶವನ್ನು ಬಳಸಿಕೊಳ್ಳಬೇಕೆಂದರು.

ಈ ಬಗ್ಗೆ ಮಾತನಾಡಿದ ಸಮಿತಿಯ ಇನ್ನೋರ್ವ ಸದಸ್ಯ ಪಾರ್ವತಿಶ ಬಿಳಿದಾಳೆ ಅವರು, ಕಳೆದ ಒಂದು ತಿಂಗಳಿನಿಂದ ಸುಬ್ರಮಣ್ಯ ಅರಣ್ಯ ಭಾಗದಲ್ಲಿ ನಾಲ್ಕೈದು ಜನರ ಶಸ್ತ್ರಾಸ್ತ್ರ ತಂಡ ಕಂಡಿದೆ ಎಂದು ಮಾಹಿತಿ ಇತ್ತು.‌ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ಕೇಂದ್ರಿಕೃತರಾಗಿದ್ದಾರೆ ಎಂಬ ಮಾಹಿತಿ ಇದೆ. ಕಳೆದ ಒಂದು ತಿಂಗಳಿನಿಂದ ಅರಣ್ಯ ಪ್ರದೇಶದ ಗಡಿ ಭಾಗದಿಂದ ಬಂದು ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆಂಬ ಮಾಹಿತಿ ಕೇಳಿದ್ದೇವೆ. ಕರ್ನಾಟಕದಲ್ಲಿ ಒಟ್ಟು 8 ಜನ ಸಕ್ರೀಯ ನಕ್ಸಲರು ಇದ್ದಾರೆ ಎಂಬ ಮಾಹಿತಿ ಇದೆ ಎಂದರು.

ಪಾರ್ವತೀಶ ಬಿಳಿದಾಳೆ (ETV Bharat)

ಅವರನ್ನು ಸಂರ್ಪಕಿಸುವ ಪ್ರಯತ್ನವನ್ನು ನಮ್ಮ ಸಮಿತಿ ಮಾಡಿದೆ. ಸರ್ಕಾರ ನಿಮಗೆ ಒಂದು ಪ್ಯಾಕೇಜ್ ನೀಡಿದೆ. ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ಸಮಿತಿ ಮಧ್ಯಸ್ಥಿಕೆ ವಹಿಸುತ್ತದೆ ಎಂದು ತಿಳಿಸಿದೆ. ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದರೆ ಅದನ್ನು ನಿರ್ವಹಿಸಲಾಗುವುದು. ಸರ್ಕಾರ ಕರ್ನಾಟಕದವರಿಗೆ ಹಾಗೂ ಹೊರ ರಾಜ್ಯದವರಿಗೆ ಪ್ರತ್ಯೇಕ ಪ್ಯಾಕೇಜ್ ನೀಡುವುದಾಗಿ ತಿಳಿಸಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಮಿತಿ ಸದಸ್ಯರು ಹಾಗೂ ವಕೀಲರಾದ ಶ್ರೀಪಾಲ್, ಶರಣಾಗತಿಯಾದವರು ಕಾನೂನು ಹೋರಾಟಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಆಂತಕದಲ್ಲಿದ್ದಾರೆ. 14 ಜನರಲ್ಲಿ ಕನ್ಯಾಕುಮಾರಿ ಹೊರತು ಪಡಿಸಿ ಉಳಿದವರ ಪ್ರಕರಣಗಳು ಇತ್ಯರ್ಥವಾಗಿವೆ ಎಂದರು.

ಶ್ರೀಪಾಲ್ (ETV Bharat)

ಕೆಲವರು ಬೇಲ್ ಮೇಲೆ ಹೊರಗಿದ್ದಾರೆ. ಸರ್ಕಾರ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿ ಇಂತಹ ಪ್ರಕರಣಗಳಿಗೆ ಫಾಸ್ಟ್ ಟ್ರಾಕ್ ಕೋರ್ಟ್​ಗಳನ್ನು ರಚನೆ ಮಾಡಲು ವಿನಂತಿಸಿದ್ದೇವೆ. ಮುಖ್ಯವಾಹಿನಿಗೆ ಬಂದ್ರೆ ಆದಷ್ಟು ಬೇಗ ಪ್ರಕರಣ ಇತ್ಯರ್ಥವಾಗಬೇಕು ಹಾಗೂ ಪ್ರಕರಣಗಳಿಗಾಗಿ ವಕೀಲರುಗಳನ್ನು ನೇಮಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ದಕ್ಷಿಣ ಕನ್ನಡ-ಕೊಡಗು ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ: ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್

Last Updated :May 16, 2024, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.