ETV Bharat / state

ಜಿಲ್ಲಾ ಸಮಿತಿಗಳೊಂದಿಗಿನ ಸಭೆ ಮುಕ್ತಾಯ: ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ

author img

By

Published : Apr 2, 2023, 10:02 PM IST

bjp-core-committee-meeting-with-district-committees-ends
ಜಿಲ್ಲಾ ಸಮಿತಿಗಳೊಂದಿಗಿನ ಸಭೆ ಮುಕ್ತಾಯ: ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ..!

ನಗರದ ಹೊರವಲಯದಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟ್​ನಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು ಮತ್ತು ಜಿಲ್ಲಾ ಕೋರ್ ಕಮಿಟಿ ಸದಸ್ಯರ ಜೊತೆ ಸಭೆ ನಡೆಯಿತು.

ಬೆಂಗಳೂರು: ಅಭ್ಯರ್ಥಿಗಳ ಆಯ್ಕೆ ಕುರಿತು ಗೋಲ್ಡನ್ ಪಾಮ್ ರೆಸಾರ್ಟ್​ನಲ್ಲಿ ಇಡೀ ದಿನ ಜಿಲ್ಲಾ ಕೋರ್ ಕಮಿಟಿಗಳ ಜೊತೆ ಬಿಜೆಪಿ ನಾಯಕರ ಸಭೆ ನಡೆಯಿತು. ಗೋವಿಂದರಾಜನಗರದ ಜೊತೆಗೆ ಚಾಮರಾಜನಗರದಲ್ಲೂ ಸೋಮಣ್ಣ ಹೆಸರು ಪ್ರಸ್ತಾಪವಾಯಿತು. ಸಿದ್ದರಾಮಯ್ಯ ವಿರುದ್ಧ ಸಮರ್ಥ ಅಭ್ಯರ್ಥಿ ಹಾಕುವ ಚರ್ಚೆ ಸೇರಿದಂತೆ 110 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಿ ಜಿಲ್ಲಾ ಸಮಿತಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ‌, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ ಕೋರ್ ಕಮಿಟಿ ಸದಸ್ಯರು ಜಿಲ್ಲಾ ಕೋರ್ ಕಮಿಟಿಗಳ ಜೊತೆ ಸಭೆ ನಡೆಸಿದರು.

ಬೆಂಗಳೂರು ದಕ್ಷಿಣ: ಜಯನಗರದಲ್ಲಿ ಆಕಾಂಕ್ಷಿಗಳಾದ ಎನ್.ಆರ್. ರಮೇಶ್, ವಿವೇಕ್.ರೆಡ್ಡಿ, ಸಿ.ಕೆ. ರಾಮಮೂರ್ತಿ, ಎಸ್.ಕೆ. ನಟರಾಜ್ ಹೆಸರು ಪ್ರಸ್ತಾಪವಾದರೆ, ಬಸವನಗುಡಿಯಲ್ಲಿ ಶಾಸಕ ರವಿಸುಬ್ರಹ್ಮಣ್ಯ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಹೆಸರು ಪ್ರಸ್ತಾಪವಾಯಿತು. ಚಿಕ್ಕಪೇಟೆಯಲ್ಲಿ ಶಾಸಕ ಉದಯ ಗರುಡಾಚಾರ್, ಎನ್.ಆರ್. ರಮೇಶ್ ಹೆಸರು ಉಲ್ಲೇಖಗೊಂಡಿದ್ದು, ಗೋವಿಂದರಾಜನಗರದಲ್ಲಿ ಸಚಿವ ವಿ. ಸೋಮಣ್ಣ ಹೆಸರು ಮಾತ್ರ ಪ್ರಸ್ತಾಪವಾಯಿತು. ವಿಜಯನಗರದಲ್ಲಿ ಎಚ್. ರವೀಂದ್ರ ಜತೆ ಇನ್ನೊಬ್ಬ ಆಕಾಂಕ್ಷಿ ಹೆಸರಿದ್ದು, ಆನೇಕಲ್​ನಲ್ಲಿ ಡಾ.ಸಂದೀಪ್, ಕೆ.ಶಿವರಾಂ ಸೇರಿ 9 ಆಕಾಂಕ್ಷಿಗಳ ಹೆಸರು ಪ್ರಸ್ತಾಪಗೊಂಡವು.

ಬೆಂಗಳೂರು ದಕ್ಷಿಣದಲ್ಲಿ ಶಾಸಕ ಕೃಷ್ಣಪ್ಪ ಹೆಸರು, ಬೊಮ್ಮನಹಳ್ಳಿಯಲ್ಲಿ ಶಾಸಕ‌ ಸತೀಶ್ ರೆಡ್ಡಿ ಹೆಸರು ಮಾತ್ರ ಪ್ರಸ್ತಾಪವಾಗಿದ್ದು, ಬೊಮ್ಮನಹಳ್ಳಿಯಲ್ಲಿ ಅನಿಲ್ ಶೆಟ್ಟಿ, ಆರ್. ಶ್ರೀಧರ ರೆಡ್ಡಿ, ದೇವದಾಸ್ ಹೆಸರು ಉಲ್ಲೇಖವಾಯಿತು. ಇದೇ ವೇಳೆ ಕ್ಷೇತ್ರವಾರು ರಾಜಕೀಯ ಚಿತ್ರಣದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ: ಎರಡು ಜಿಲ್ಲೆಗಳ ಕೋರ್ ಕಮಿಟಿ ಸಭೆಯನ್ನು ಒಟ್ಟಿಗೆ ನಡೆಸಲಾಯಿತು. ಎರಡೂ ಜಿಲ್ಲೆಗಳಲ್ಲಿ ಕಳೆದ ಬಾರಿಯ ಸ್ಥಿತಿ ಮತ್ತು ಈ ಬಾರಿಯ ಸ್ಥಿತಿ ಏನಿದೆ ಎಂದು ಎರಡೂ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮೂಲಕ ವಿವರ ಪಡೆಯಲಾಯಿತು. ನಂತರ ಆಕಾಂಕ್ಷಿಗಳ ಪಟ್ಟಿಯ ಬಗ್ಗೆ ಚರ್ಚಿಸಲಾಯಿತು. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರತಿ ಬಾರಿ ಕಾಂಗ್ರೆಸ್ ಕ್ರಿಶ್ಚಿಯನ್ ಸಮುದಾಯಕ್ಕೆ ಟಿಕೆಟ್ ಕೊಡುತ್ತಿತ್ತು. ಈ ಬಾರಿ ಕಾಂಗ್ರೆಸ್ ಬೇರೆ ಸಿದ್ಧತೆ ಮಾಡಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಪುತ್ತೂರು, ಸುಳ್ಯ ಸೇರಿದಂತೆ ಅಪಸ್ವರ ಇರುವ ಎರಡು ಮೂರು ಕ್ಷೇತ್ರಗಳ ಸಮಸ್ಯೆಯನ್ನು ಅಭ್ಯರ್ಥಿ ಘೋಷಣೆಗೆ ಮುನ್ನವೇ ಪರಿಹರಿಸಬೇಕು, ಇಲ್ಲದಿದ್ದರೆ ಅಭ್ಯರ್ಥಿ ಘೋಷಣೆ ಆದ ಬಳಿಕ ಚುನಾವಣಾ ಕೆಲಸದ ಬದಲು ಸಮಸ್ಯೆ ಪರಿಹರಿಸುತ್ತಲೇ ಕುಳಿತುಕೊಳ್ಳಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೋರ್ ಕಮಿಟಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ರಾಮನಗರ ಜಿಲ್ಲೆ: ಸಿಎಂ ಬೊಮ್ಮಾಯಿ‌ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಶ್ರಮ ಹಾಕಿದರೆ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ಅಭಿಪ್ರಾಯಕ್ಕೆ ಒಪ್ಪಿಕೊಂಡು ಕೆಲಸ ಮಾಡುವ ಬಗ್ಗೆ ಸಿಎಂ ಸಭೆಯಲ್ಲಿ ಭರವಸೆಯ ಮಾತುಗಳನ್ನಾಡಿದರು. ಮಾಗಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ಮಂಜುನಾಥ್ ವಿರುದ್ಧ ಜನ ವಿರೋಧಿ ಅಲೆ ಎಂದು ಸಭೆಯಲ್ಲಿ ಹೇಳಿದ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಮನ್ಸುಖ್​ ಮಾಂಡವೀಯ, ಎಚ್ಚರಿಕೆ ವಹಿಸುವ ಸಲಹೆ ನೀಡಿದರು.

ಕೊಡಗು ಜಿಲ್ಲೆ: ಸಭೆಯಲ್ಲಿ ಅಭ್ಯರ್ಥಿಗಳ ಬದಲಾವಣೆ ವಿಚಾರದ ಕುರಿತು ಅಭಿಪ್ರಾಯ ವ್ಯಕ್ತವಾಯಿತು. ಹಾಲಿ ಇಬ್ಬರು ಶಾಸಕರ ಬದಲಾಗಿ ಈ ಬಾರಿ ಬೇರೆಯವರಿಗೆ ಕೊಡುವ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಇದೆ ಎಂದು ಸಭೆಯಲ್ಲಿ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಹೇಳಿದರು. ಹಾಲಿ ಶಾಸಕರು 5 ಬಾರಿ, 3 ಬಾರಿ ಗೆದ್ದು ಬಂದಿದ್ದಾಗಿದೆ. ಈ ಬಾರಿ ಯುವ ಮುಖಕ್ಕೆ ಅವಕಾಶದ ಬಗ್ಗೆ ಸಾರ್ವಜನಿಕ ಮತ್ತು ಕಾರ್ಯಕರ್ತರ ಮನಸ್ಸಿನಲ್ಲಿದೆ ಎಂದು ಸಭೆಯಲ್ಲಿ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಅಭಿಪ್ರಾಯ ತಿಳಿಸಿ ಆಕಾಂಕ್ಷಿಗಳ ಹೆಸರುಗಳನ್ನು ಸಭೆಗೆ ತಿಳಿಸಿದರು.

ವರ್ತೂರು ಪ್ರಕಾಶ್​ಗೆ ಬಿಜೆಪಿ ಟಿಕೆಟ್ ಫಿಕ್ಸ್: ಕೋಲಾರದಲ್ಲಿ ಇರುವ ಆರು ಕ್ಷೇತ್ರಗಳ ಪೈಕಿ 5ರಲ್ಲಿ ಆಯ್ಕೆ ಕಗ್ಗಂಟಾಗಿದೆ. ಕೋಲಾರದಲ್ಲಿ ವರ್ತೂರು ಪ್ರಕಾಶ್​ಗೆ ಬಿಜೆಪಿ ಟಿಕೆಟ್ ಫಿಕ್ಸ್ ಆಗಿದೆ. ಕೋರ್ ಕಮಿಟಿ ಸದಸ್ಯರಿಂದ ವರ್ತೂರು ಪ್ರಕಾಶ್ ಮೇಲೆ ಒಲವು ವ್ಯಕ್ತವಾಗಿದ್ದು, ಮಾಲೂರು ಕ್ಷೇತ್ರದಲ್ಲಿ ಗೊಂದಲ ಮುಂದುವರಿದಿದೆ. ಮಾಲೂರಿನಲ್ಲಿ ಕಳೆದ ವರ್ಷ ಬಿಜೆಪಿ ಸೇರಿದ್ದ ಮಾಜಿ ಶಾಸಕ ಮಂಜುನಾಥ್ ಗೌಡ ಹಾಗೂ ಹೂಡಿ ವಿಜಯಕುಮಾರ್ ನಡುವೆ ಟಫ್ ಫೈಟ್ ಇದೆ ಎನ್ನುತ್ತಾ ಮಾಲೂರಲ್ಲಿ ಯಾರಿಗೆ ಟಿಕೆಟ್ ಎಂಬ ನಿರ್ಧಾರವನ್ನು ಹೈಕಮಾಂಡ್​​ಗೆ ಬಿಡುವ ನಿರ್ಧಾರಕ್ಕೆ ಸದಸ್ಯರು ಬಂದಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ ಪತ್ನಿ ಶೈಲಜಾ, ಮಾಜಿ ಶಾಸಕ ವೈ ಸಂಪಂಗಿ, ಮೋಹನ್ ಕೃಷ್ಣ, ಕೆಜಿಎಫ್ ಶ್ರೀನಿವಾಸ್, ಕಮ್ಮಸಂದ್ರ ಸುರೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕೋಲಾರದಲ್ಲಿ ಆಪ್ತರಿಗೆ ಟಿಕೆಟ್ ಕೊಡಿಸಲು ಸಚಿವ ಮುನಿರತ್ನ ಹಾಗೂ ಸಂಸದ ಮುನಿಸ್ವಾಮಿ ನಡುವೆ ಪೈಪೋಟಿ ಏರ್ಪಟ್ಟಿದೆ. ಮುಳಬಾಗಿಲು ಕ್ಷೇತ್ರದಲ್ಲಿ ಮಾಜಿ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಶೀಗೆಹಳ್ಳಿ ಸುಂದರ್, ಮಡಿಯನೂರು ಶ್ರೀನಿವಾಸ್, ವೆಂಕಟೇಶ್ ಮೌರ್ಯ ಹೆಸರುಗಳು ಚರ್ಚೆಯಾದವು. ಶ್ರೀನಿವಾಸಪುರದಲ್ಲಿ ಇತ್ತೀಚೆಗೆ ಪಕ್ಷ ಸೇರಿದ್ದ ಶ್ರೀನಿವಾಸ್ ರೆಡ್ಡಿ ಪರ ಹೆಚ್ಚು ಒಲವು ಇದ್ದು, ಶ್ರೀನಿವಾಸಪುರದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ ಸ್ವತಃ ಆಕಾಂಕ್ಷಿಯಾಗಿದ್ದಾರೆ. ಈ ಎಲ್ಲರ ಹೆಸರುಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

ಮೈಸೂರು ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ: ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕೋರ್ ಕಮಿಟಿ ಸಭೆ ಒಟ್ಟಿಗೆ ನಡೆಯಿತು. ವರುಣಾ ಕ್ಷೇತ್ರದ ಅಕಾಂಕ್ಷಿಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು, ವರುಣಾ ಕ್ಷೇತ್ರಕ್ಕೆ ಇಂದು ಒಟ್ಟು 5 ಆಕಾಂಕ್ಷಿಗಳ ಹೆಸರು ಉಲ್ಲೇಖ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಸಿದ್ದರಾಮಯ್ಯ ಮತ್ತೆ ವರುಣಾ ಕ್ಷೇತ್ರಕ್ಕೆ ವಾಪಸಾಗುವ ನಿರೀಕ್ಷೆ ಇದೆ.

ಹೀಗಾಗಿ ಕ್ಷೇತ್ರಕ್ಕೆ ಬಿಗಿಯಾದ ಅಭ್ಯರ್ಥಿ ಕೊಡಬೇಕು, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರಂತಹವರಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ ಹೆಚ್ಚು ಅನುಕೂಲ ಆಗಲಿದೆ ಎಂದು ಕೋರ್ ಕಮಿಟಿ ಸಭೆಯಲ್ಲಿ ಮೈಸೂರು ಗ್ರಾಮಾಂತರ ಜಿಲ್ಲೆಯಿಂದ ಅಭಿಪ್ರಾಯ ವ್ಯಕ್ತವಾಯಿತು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಶಕ್ತಿ ಇದೆ ಎಲ್ಲರೂ ಒಪ್ಪುವ ಮತ್ತು ಸಂಘಟನೆ ಒಪ್ಪುವ ಅಭ್ಯರ್ಥಿಯನ್ನು ಕೊಟ್ಟರೆ ನಾವು ಕೆಲಸ ಮಾಡಲು ಸುಲಭ, ಪಕ್ಷ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಗಮನ ಹರಿಸಬೇಕು ಎಂದು ಮೈಸೂರು ನಗರ ಜಿಲ್ಲೆಯಿಂದ ಕೋರ್ ಕಮಿಟಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು‌. ಇತರೆ ಕ್ಷೇತ್ರಗಳ ಆಕಾಂಕ್ಷಿಗಳ ವಿಚಾರದ ಬಗ್ಗೆಯೂ ಚರ್ಚೆ ನಡೆಯಿತು.

ಚಾಮರಾಜನಗರ ಜಿಲ್ಲಾ ಬಿಜೆಪಿ ಕೋರ್ ಕಮಿಟಿ: ಸಭೆಯಲ್ಲಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಚಿವ ವಿ. ಸೋಮಣ್ಣ ಹೆಸರು ಕೂಡಾ ಪ್ರಸ್ತಾಪವಾಯಿತು. ಚಾಮರಾಜನಗರ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲೂ ಸಚಿವ ಸೋಮಣ್ಣ ಹೆಸರಿದ್ದು, ಚಾಮರಾಜನಗರ ಕ್ಷೇತ್ರಕ್ಕೆ ಐವರು ಆಕಾಂಕ್ಷಿಗಳ ಹೆಸರು ಇರುವುದನ್ನು ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದರು. ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಸೇರಿದಂತೆ ತಲಾ 2 ಆಕಾಂಕ್ಷಿಗಳ ಹೆಸರು ಉಲ್ಲೇಖ ಮಾಡಿ ಚರ್ಚಿಸಲಾಯಿತು.

ಮಂಡ್ಯ ಜಿಲ್ಲಾ ಬಿಜೆಪಿ ಕೋರ್ ಕಮಿಟಿ: ಸಭೆಯಲ್ಲಿ ನಾಗಮಂಗಲ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಹೆಸರು ಮಾತ್ರ ಪ್ರಸ್ತಾಪ, ಕೆ.ಆರ್.ಪೇಟೆ ಕ್ಷೇತ್ರಕ್ಕೆ ಸಚಿವ ನಾರಾಯಣ ಗೌಡ ಹೆಸರು ಮಾತ್ರ ಪ್ರಸ್ತಾಪ, ಮಂಡ್ಯ ಕ್ಷೇತ್ರಕ್ಕೆ ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಚಂದಗಾಲು ಶಿವಣ್ಣ ಮತ್ತು ವಿದ್ಯಾ ನಾಗೇಂದ್ರ ಹೆಸರು ಪ್ರಸ್ತಾಪ, ಮದ್ದೂರು ಕ್ಷೇತ್ರಕ್ಕೆ ಸ್ವಾಮಿ ಮತ್ತು ರೂಪಾ ಹೆಸರು ಪ್ರಸ್ತಾಪ, ಮಳವಳ್ಳಿ ಕ್ಷೇತ್ರಕ್ಕೆ ಮುನಿರಾಜು ಮತ್ತು ಬಿ.ಸೋಮಶೇಖರ್ ಹೆಸರು ಪ್ರಸ್ತಾಪ, ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಇಂಡವಾಳು ಸಚ್ಚಿದಾನಂದ ಮತ್ತು ನಂಜುಂಡೇಗೌಡ ಹೆಸರು, ಮೇಲುಕೋಟೆ ಕ್ಷೇತ್ರಕ್ಕೆ ಇಂದ್ರೇಶ್ ಹೆಸರು ಮಾತ್ರ ಪ್ರಸ್ತಾಪವಾಯಿತು.

ಬಿಜೆಪಿ ಸೇರದ ಶಿವರಾಮೇಗೌಡ: ಬಿಜೆಪಿ ಸೇರಲು ಗೋಲ್ಡನ್ ಪಾಮ್ಸ್ ರೆಸಾರ್ಟ್​ಗೆ ಆಗಮಿಸಿದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ರೆಸಾರ್ಟ್​ನಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ವಾಪಸ್ ಆದರು. ನಾಗಮಂಗಲ ಕ್ಷೇತ್ರದ ವಿಚಾರವಾಗಿ ಮಾತುಕತೆ ನಡೆಸಿ ನಂತರವೇ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಬಿಜೆಪಿ ನಾಯಕರ ಅಭಿಪ್ರಾಯದ ಮೇರೆಗೆ ಇಂದು ಪಕ್ಷ ಸೇರದೆ ವಾಪಸಾದರು.

ಫೈಟರ್ ರವಿ ಟಿಕೆಟ್ ಗಿಟ್ಟಿಸಲು ಸರ್ಕಸ್: ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಫೈಟರ್ ರವಿ ಟಿಕೆಟ್ ಗಿಟ್ಟಿಸಲು ಸರ್ಕಸ್ ನಡೆಸಿದ್ದು, ಈ ವಿಚಾರದಲ್ಲಿ ಅಂತಿಮ ನಿರ್ಧಾರದ ನಂತರ ಶಿವರಾಮೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಹಾಗಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಿಜೆಪಿ ಸೇರ್ಪಡೆ ಮುಂದೂಡಿಕೆ ಮಾಡಲಾಗಿದ್ದು, ರಾಜ್ಯ ಬಿಜೆಪಿ ಕಚೇರಿಯಲ್ಲಿ ಇನ್ನೆರಡು ದಿನಗಳಲ್ಲಿ ಪುತ್ರ ಚೇತನ್ ಗೌಡ ಜತೆ ಶಿವರಾಮೇಗೌಡ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಕೋರ್ ಕಮಿಟಿಗಳ ಜೊತೆ ಸಭೆ ನಡೆಸಿದ ರಾಜ್ಯ ಕೋರ್ ಕಮಿಟಿ ನಾಳೆ ಪ್ರತ್ಯೇಕವಾಗಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಾಮರ್ಶೆ ನಡೆಸಲಿದೆ. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚಿಸಿ ಪಟ್ಟಿಯನ್ನು ಹೈಕಮಾಂಡ್​ಗೆ ಕಳಿಸಲಾಗುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಚುನಾವಣೆಯಿಂದ ಚುನಾವಣೆಗೆ ಸದೃಢವಾಗಿ ಬೆಳೆದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.