ETV Bharat / state

ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಚುನಾವಣೆಯಿಂದ ಚುನಾವಣೆಗೆ ಸದೃಢವಾಗಿ ಬೆಳೆದ ಬಿಜೆಪಿ

author img

By

Published : Apr 2, 2023, 8:56 PM IST

operation-kamala-from-bjp-govt
ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಚುನಾವಣೆಯಿಂದ ಚುನಾವಣೆಗೆ ಸಧೃಡವಾಗಿ ಬೆಳೆದ ಬಿಜೆಪಿ

2008 ಮತ್ತು 2019ರಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಿದಾಗಲೂ ಆಪರೇಷನ್​ ಕಮಲದ ಮೂಲಕವೇ ಸರ್ಕಾರ ರಚಿಸಿದೆ. ಇದರಿಂದಾಗಿ ಬಿಜೆಪಿ ರಾಜ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಬಂದಿದೆ.

ಬೆಂಗಳೂರು : ಖಾಯಂ ಪ್ರತಿಪಕ್ಷ ಸ್ಥಾನಮಾನದ ಖ್ಯಾತಿ ಗಳಿಸಿದ್ದ ಬಿಜೆಪಿ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಯಾರೂ ಊಹಿಸದ ರೀತಿ ಪ್ರಾದೇಶಿಕ ಪಕ್ಷದ ಜೊತೆ ಮೈತ್ರಿಯ ಮೂಲಕ ಆಡಳಿತ ಪಕ್ಷದ ಸ್ಥಾನಮಾನ ಪಡೆದುಕೊಂಡಿತು. ವಚನ ಭ್ರಷ್ಟತೆಯ ಅಸ್ತ್ರದೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದ ಬಿಜೆಪಿ ನಂತರ ಆಪರೇಷನ್ ಕಮಲದ ಮೂಲಕವೇ ಕುರ್ಚಿ ಭದ್ರಪಡಿಸಿಕೊಂಡು ರಾಜ್ಯದಲ್ಲಿ ಸದೃಢವಾಗಿ ಬೆಳೆದು ನಿಂತಿದೆ. ಈ ಕುರಿತ ಪಕ್ಷಿನೋಟ ಇಲ್ಲಿದೆ.

ರಾಜ್ಯದಲ್ಲಿ ಅಷ್ಟಾಗಿ ಪ್ರಾಬಲ್ಯ ಹೊಂದಿರದಿದ್ದ ಬಿಜೆಪಿ 1983 ರಿಂದಲೂ ಪ್ರತಿನಿಧಿಗಳನ್ನು ಹೊಂದಿದ್ದರೂ ಅಧಿಕೃತ ಪ್ರತಿಪಕ್ಷದ ಸ್ಥಾನ ಸಿಕ್ಕಿದ್ದು 1994 ರಲ್ಲಿ. ಅಂದು 115 ಸ್ಥಾನ ಪಡೆದು ಜನತಾದಳ ಸರ್ಕಾರ ರಚಿಸಿದರೆ ಆಡಳಿತಾರೂಢವಾಗಿದ್ದ ಕಾಂಗ್ರೆಸ್ 34 ಸ್ಥಾನಕ್ಕೆ ಕುಸಿತವಾಗಿತ್ತು. ಬಿಜೆಪಿ 40 ಸ್ಥಾನ ಗಳಿಸಿ ಪ್ರತಿಪಕ್ಷ ಸ್ಥಾನವನ್ನು ಅಲಂಕರಿಸಿತು. 1999ರ ಚುನಾವಣೆಯಲ್ಲಿ ಕೂಡ ಬಿಜೆಪಿ ಭವಿಷ್ಯ ಬದಲಾಗಲಿಲ್ಲ. 44 ಸ್ಥಾನಗಳನ್ನು ಮಾತ್ರ ಪಡೆದಿತ್ತು.ಆದರೆ ಆಡಳಿತಾರೂಢ ಜನತಾದಳ ಇಬ್ಬಾಗವಾಗಿದ್ದರೆ ಜೆಡಿಯು 18, ಜೆಡಿಎಸ್ 10 ಸ್ಥಾನ ಮಾತ್ರ ಪಡೆದಿದ್ದರಿಂದ ಎರಡನೇ ಸ್ಥಾನ ಪಡೆದ ಬಿಜೆಪಿಗೆ ಎರಡನೇ ಬಾರಿ ಪ್ರತಿಪಕ್ಷ ಸ್ಥಾನ ಲಭ್ಯವಾಯಿತು.

2004ರ ಚುನಾವಣೆ ಬಿಜೆಪಿ ಪಾಲಿಗೆ ಹೊಸ ದಿಕ್ಕು ಕೊಟ್ಟ ಚುನಾವಣೆಯಾಯಿತು. ಬಿಜೆಪಿ 79 ಸ್ಥಾನ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಡಳಿತಾರೂಢ ಕಾಂಗ್ರೆಸ್ 65, ಜೆಡಿಎಸ್ 58 ಸ್ಥಾನ ಪಡೆದುಕೊಂಡವು. ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಮೊದಲ ಬಾರಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಕಾಂಗ್ರೆಸ್,ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಧರಂಸಿಂಗ್ ಮುಖ್ಯಮಂತ್ರಿಯಾಗಿ ಮತ್ತು ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾದರು. ಆಗ ದೊಡ್ಡ ಪಕ್ಷವಾದರೂ ಪ್ರತಿಪಕ್ಷದ ಸಾಲಿನಲ್ಲಿ ಕೂರಬೇಕಾಯಿತು.

2006ರಲ್ಲಿ ಬದಲಾದ ರಾಜಕೀಯ ವಿದ್ಯಮಾನಗಳಿಂದಾಗಿ ಸಿದ್ದರಾಮಯ್ಯ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ತೊರೆದರು. ನಂತರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್​​ನ ದೊಡ್ಡ ಗುಂಪು ಮೈತ್ರಿ ಸರ್ಕಾರದಿಂದ ಹೊರ ಬಂದು ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಜೊತೆ ಸೇರಿ ಹೊಸದಾಗಿ ಮೈತ್ರಿ ಸರ್ಕಾರ ರಚನೆ ಮಾಡಿತು. 20-20 ಮಾದರಿಯಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದದ ಮೇಲೆ ರಾಜ್ಯದಲ್ಲಿ ಹೊಸ ಮೈತ್ರಿ ಸರ್ಕಾರ ರಚನೆಯಾಯಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಆ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪ್ರತಿಪಕ್ಷದ ಸಾಲಿನಿಂದ ಆಡಳಿತ ಪಕ್ಷದ ಸಾಲಿಗೆ ಬಂದಿತು.

ಒಪ್ಪಂದದಂತೆ 2007ರ ಅಕ್ಟೋಬರ್​​ನಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಾದಾಗ, ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು. ಜೆಡಿಎಸ್ ನಡೆ ವಿರೋಧಿಸಿ ಯಡಿಯೂರಪ್ಪ ಮತ್ತು ಬಿಜೆಪಿಯ ಎಲ್ಲ ಸಚಿವರು ರಾಜೀನಾಮೆ ನೀಡಿದರು. ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಅಕ್ಟೋಬರ್ 5ರಂದು ಬಿಜೆಪಿ ಹಿಂಪಡೆಯಿತು. ನಂತರ ರಾಷ್ಟ್ರಪತಿ ಆಡಳಿತ ಶುರುವಾಯಿತು.

ನವೆಂಬರ್ 7ರಂದು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಭಿನ್ನಮತ ಶಮನಗೊಂಡು ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿತು. ನ. 12, 2007ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ಸಚಿವರಿಗೆ ಖಾತೆ ಹಂಚಿಕೆ ವೇಳೆ ಭಿನ್ನಮತ ಉಲ್ಬಣಗೊಂಡಿತು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮ್ಮಿಶ್ರ ಸರಕಾರ ಅಂತ್ಯಗೊಂಡು, ಯಡಿಯೂರಪ್ಪ ನವೆಂಬರ್ 19, 2007ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.

ನಂತರ ಅಧಿಕಾರ ಹಸ್ತಾಂತರ ಮಾಡದ ಜೆಡಿಎಸ್ ನಡೆ ಖಂಡಿಸಿ ಯಡಿಯೂರಪ್ಪ ನೇತೃತ್ವದಲ್ಲಿ ವಚನಭ್ರಷ್ಟತೆಯ ಅಸ್ತ್ರವನ್ನು ಇಟ್ಟುಕೊಂಡು 2008 ರಲ್ಲಿ ಬಿಜೆಪಿ ಚುನಾವಣೆ ಎದುರಿಸಿತು. 110 ಸ್ಥಾನ ಗಳಿಸಿ ಸರಳ ಬಹುಮತದ ಸಮೀಪಕ್ಕೆ ಬಿಜೆಪಿ ಬಂದಿತು. 6 ಮಂದಿ ಪಕ್ಷೇತರ ಶಾಸಕರ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆದರೆ ಸರ್ಕಾರವನ್ನು ಭದ್ರಪಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲ ನಡೆಸಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರಾಗಿದ್ದ ವಿ.ಸೋಮಣ್ಣ, ಕೊಳ್ಳೇಗಾಲ ನಂಜುಂಡಸ್ವಾಮಿ, ಗುರಪಾದಪ್ಪ ನಾಗಮಾರಪಲ್ಲಿ, ಜಗ್ಗೇಶ್, ಎಸ್.ವಿ.ರಾಮಚಂದ್ರ, ಬಂಗಾರಪೇಟೆ ನಾರಾಯಣಸ್ವಾಮಿ, ಯೋಗೀಶ್ವರ್, ಗೌರಿಶಂಕರ್, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ್, ಚನ್ನಪಟ್ಟಣ ಅಶ್ವಥ್​, ದೊಡ್ಡಬಳ್ಳಾಪುರ ನರಸಿಂಹಸ್ವಾಮಿ, ಆನಂದ್ ಆಸ್ನೋಟಿಕರ್, ಉಮೇಶ್ ಕತ್ತಿ ಅವರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತರಲಾಯಿತು. ಪರಿಣಾಮ 14 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು. ಎರಡು ವರ್ಷದಲ್ಲಿ ಸರ್ಕಾರ ಗಟ್ಟಿಯಾಯಿತು. ಉಪ ಚುನಾವಣೆಗಳ ಮೂಲಕ ಬಹುಮತಕ್ಕೆ ಬೇಕಾದ ಸ್ಥಾನಕ್ಕೂ ಹೆಚ್ಚಿನ ಸ್ಥಾನ ಗಳಿಸಿಕೊಂಡು ಸರ್ಕಾರವನ್ನು ಭದ್ರಪಡಿಸಿಕೊಂಡಿತು.

ಇಷ್ಟಾದರೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಕರ್ನಾಟಕದ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿದ್ದರಿಂದ ಯಡಿಯೂರಪ್ಪ ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡಬೇಕಾಯಿತು. ನಂತರ ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಆದರೆ ಯಡಿಯೂರಪ್ಪ ಬಿಜೆಪಿ ವಿರುದ್ಧ ಮುನಿಸಿಕೊಂಡು ಪಕ್ಷ ತೊರೆದ ಸ್ವತಂತ್ರ ಪಕ್ಷ ಕಟ್ಟಿದ್ದರಿಂದಾಗಿ 2013 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಏಟು ಬಿದ್ದಿತ್ತು. ಆಡಳಿತಾರೂಢ ಪಕ್ಷಕ್ಕೆ ಸಿಕ್ಕಿದ್ದು ಕೇವಲ 40 ಸ್ಥಾನ ಮಾತ್ರ ಅಂದು ಪ್ರತಿಪಕ್ಷ ಸ್ಥಾನವೂ ಬಿಜೆಪಿ ಕೈತಪ್ಪಿ ಜೆಡಿಎಸ್ ಪಾಲಾಗಿತ್ತು.

ಆದರೆ ಯಡಿಯೂರಪ್ಪ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಗೆ ಮರಳಿದ್ದರಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಬಲಗೊಂಡಿತು. 2018 ರ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಬಹುಮತ ಸಾಬೀತುಪಡಿಸಲು ಆಪರೇಷನ್ ಕಮಲ ಕೈಕೊಟ್ಟಿದ್ದರಿಂದ ರಾಜೀನಾಮೆ ನೀಡಿದರು. ಆದರೆ 2019 ರಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ನಡೆಸುವಲ್ಲಿ ಸಫಲರಾದ ಯಡಿಯೂರಪ್ಪ ಕಾಂಗ್ರೆಸ್ ಜೆಡಿಎಸ್ ನ 17 ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ರಚನೆ ಮಾಡಿದರು. 104 ಬಲವಿದ್ದ ಬಿಜೆಪಿ 17 ಶಾಸಕರ ರಾಜೀನಾಮೆ ನಂತರ ಸರ್ಕಾರ ರಚಿಸಿತು. ನಂತರ ನಡೆದ ಉಪ ಚುನಾವಣೆಯಲ್ಲಿ 13 ಸ್ಥಾನ ದಕ್ಕಿಸಿಕೊಂಡಿತು. ಒಬ್ಬ ಪಕ್ಷೇತರ, ಬಿಎಸ್ಪಿ ಸೇರಿ 15 ಸದಸ್ಯರ ಬಲದಲ್ಲಿ ಸರ್ಕಾರ ಭದ್ರಪಡಿಸಿಕೊಂಡಿತು. 104 ರಿಂದ 117ಕ್ಕೆ ತನ್ನ ಸಂಖ್ಯೆಯನ್ನು ಬಿಜೆಪಿ ಹೆಚ್ಚಿಸಿಕೊಂಡಿತು.

2008ರಲ್ಲಿ ಮೊದಲ ಬಾರಿ ಸ್ವತಂತ್ರವಾಗಿ ಸರ್ಕಾರ ರಚಿಸಿದಾಗಲೂ ಆಪರೇಷನ್ ಕಮಲದ ಮೂಲಕವೇ ಸರ್ಕಾರವನ್ನು ಗಟ್ಟಿಯಾಗಿಸಿದ್ದ ಬಿಜೆಪಿ 2019ರಲ್ಲಿ ಎರಡನೇ ಬಾರಿಗೆ ಸ್ವತಂತ್ರವಾಗಿ ಸರ್ಕಾರ ರಚಿಸಿದಾಗಲೂ ಆಪರೇಷನ್ ಕಮಲದ ಮೂಲಕವೇ ಸರ್ಕಾರವನ್ನು ಗಟ್ಟಿಗೊಳಿಸಿದ್ದಲ್ಲದೆ ಪಕ್ಷವನ್ನೂ ಸುಭದ್ರವಾಗಿ ರಾಜ್ಯದಲ್ಲಿ ನೆಲೆ ನಿಲ್ಲಿಸುವಲ್ಲಿ ಸಫಲವಾಗಿದೆ.

ಇದನ್ನೂ ಓದಿ : ನೀತಿ ಸಂಹಿತೆಯ ಬಿಸಿ: ಬಿ ಎಲ್ ಸಂತೋಷ್ ಭಾಷಣಕ್ಕೆ ಅಧಿಕಾರಿಗಳ ಅಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.