ETV Bharat / state

ಬಹು ಬೆಳೆ ಬೇಸಾಯದಿಂದ ಹಾವೇರಿ ರೈತನಿಗೆ ಲಕ್ಷ ಲಕ್ಷ ಆದಾಯ - Multi Cropping

author img

By ETV Bharat Karnataka Team

Published : May 13, 2024, 12:28 PM IST

Updated : May 13, 2024, 1:00 PM IST

ಹಾವೇರಿ ರೈತ ತನ್ನ ಜಮೀನಿನಲ್ಲಿ ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದಿದ್ದಾರೆ. ಈ ಯಶಸ್ವಿ ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು ಬೇಕೇ? ಈ ಸುದ್ದಿ ನೋಡಿ.

ಬಹುಬೆಳೆ ಬೇಸಾಯ
ಬಹುಬೆಳೆ ಬೇಸಾಯ (Etv Bharat)

ಬಹು ಬೆಳೆ ಬೇಸಾಯದಿಂದ ರೈತನಿಗೆ ಲಕ್ಷ ಲಕ್ಷ ಆದಾಯ (ETV Bharat)

ಹಾವೇರಿ: ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ ಸೇರಿದಂತೆ ಕೃಷಿಯ ಹಲವು ಪದ್ಧತಿಗಳಿಗೆ ರೈತರು ಸಾಮಾನ್ಯವಾಗಿ ಹೆಚ್ಚು ಗಮನ ನೀಡುವುದಿಲ್ಲ. ಈ ಬಗ್ಗೆ ರೈತರು ಚಿತ್ತ ಹರಿಸಿದರೆ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ ಎನ್ನುವುದು ಕೃಷಿ ತಜ್ಞರ ಮಾತು. ಆದರೆ ರೈತರು ಮಾತ್ರ ಈ ರೀತಿಯ ವೈವಿಧ್ಯಮಯ ಕೃಷಿಯತ್ತ ಮುಖ ಮಾಡುವುದು ಕಡಿಮೆ. ಆದರೆ ಇದೇ ಬಹುಬೆಳೆ ಬೇಸಾಯದ ಮೂಲಕ ಹಾವೇರಿ ತಾಲೂಕಿನ ಆಲದಕಟ್ಟಿಯ ರೈತ ಚಂದ್ರಶೇಖರ ಅಗಡಿ ಬಂಪರ್ ಬೆಳೆ ಬೆಳೆದಿದ್ದಾರೆ.

ಈ ರೈತ ತಮ್ಮ ಎರಡು ಎಕರೆ ಜಮೀನಿನಲ್ಲಿ ಹಸಿಮೆಣಸಿನಕಾಯಿ, ಒಂದು ಎಕರೆಯಲ್ಲಿ ಮಾವು, ಅಡಿಕೆ, ಚಿಕ್ಕು, ಕಬ್ಬು ಸೇರಿದಂತೆ ಬಹುಬೆಳೆ ಬೆಳೆದು ಫಸಲು ತೆಗೆದಿದ್ದಾರೆ. ಇವರು ಬೆಳೆದ ಹಸಿಮೆಣಸಿನಕಾಯಿಗೆ ಬಂಪರ್ ಬೆಲೆಯೂ ಬಂದಿದೆ. ಪ್ರತಿ ಎಕರೆಗೆ ಒಂದು ಲಕ್ಷ ರೂಪಾಯಿಯಂತೆ ಆದಾಯ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ರೈತ ಚಂದ್ರಶೇಖರ ಹಸಿಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಆದರೆ ಪ್ರಸ್ತುತ ವರ್ಷ ಬಿಸಿಲಿನ ಪ್ರಖರತೆ ಅಧಿಕವಾಗಿದ್ದು ರೋಗ-ರುಜಿನಗಳೂ ಅಧಿಕವಾಗಿದ್ದವು. ಈ ಸಂದರ್ಭದಲ್ಲಿ ಇವರ ಕೈ ಹಿಡಿದಿದ್ದು ಸಾವಯುವ ಕೃಷಿ ಪದ್ದತಿ ಮತ್ತು ಜೈವಿಕ ಗೊಬ್ಬರಗಳು.

ಹೌದು, ಚಂದ್ರಶೇಖರ ತಮ್ಮ ಜಮೀನುಗಳಿಗೆ ಬಳಸುವುದು ತಿಪ್ಪೆ ಗೊಬ್ಬರ ಮತ್ತು ಕೋಳಿಗೊಬ್ಬರ. ತಮ್ಮ ಮನೆಯಲ್ಲಿ ಜಾನುವಾರುಗಳ ಗೊಬ್ಬರ ಕಡಿಮೆಯಾದರೆ ಬೇರೆ ರೈತರಿಂದ ತಿಪ್ಪೆಗೊಬ್ಬರ ಖರೀದಿಸಿ ಚಂದ್ರಶೇಖರ ತಮ್ಮ ಜಮೀನಿಗೆ ಹಾಕಿದ್ದಾರೆ. ಇದರ ಪರಿಣಾಮ ಎರಡು ಎಕರೆಯಲ್ಲಿ ಹಸಿಮೆಣಸಿನಕಾಯಿ ಗಿಡಗಳು ನಳನಳಿಸುತ್ತಿವೆ. ಜೊತೆಗೆ ಗಿಡಗಳ ತುಂಬಾ ಮೆಣಸಿನಕಾಯಿ ಬಿಟ್ಟಿದ್ದು ರೈತನಿಗೆ ಅಧಿಕ ಲಾಭ ಸಿಕ್ಕಿದೆ. ಮೊದಲ ಬಾರಿ 40 ಕ್ವಿಂಟಲ್ ಹಸಿಮೆಣಸಿನಕಾಯಿ ಕಟಾವ್ ಮಾಡಲಾಗಿದೆ. ಎರಡನೇ ಬಾರಿಯೂ 40 ಕ್ವಿಂಟಲ್ ಕಟಾವ್ ಮಾಡಿದ್ದಾರೆ. ಉಳಿದಂತೆ, ಇನ್ನೂ 20 ಕ್ಟಿಂಟಲ್ ಹಿಡಿದರೆ ಈ ವರ್ಷ ಎರಡು ಎಕರೆಗೆ ನೂರು ಕ್ವಿಂಟಲ್ ಹಸಿಮೆಣಸಿನಕಾಯಿ ಬೆಳೆದಂತಾಗುತ್ತದೆ.

ಕಳೆದ ಬಾರಿ ಮಾರಾಟ ಮಾಡಿದಾಗ ಕ್ವಿಂಟಲ್‌ಗೆ 3,500 ರೂಪಾಯಿ ದರದಂತೆ ಹಸಿಮೆಣಸಿನಕಾಯಿ ಮಾರಾಟ ಮಾಡಿದ್ದಾರೆ. ಈ ಬಾರಿ ಕ್ವಿಂಟಲ್‌ಗೆ 3,000 ದರದಂತೆ ಆದಾಯ ಲಭಿಸಿದೆ. ಜೈವಿಕ ಉತ್ಪನ್ನಗಳ ಬಳಕೆಯಿಂದ ಅಧಿಕ ಇಳುವರಿ ಪಡೆದಿದ್ದೇವೆ ಎನ್ನುತ್ತಾರೆ ರೈತ ಚಂದ್ರಶೇಖರ.

ಉಷ್ಣಾಂಶ ಅಧಿಕವಾದಾಗ ಮೆಣಸಿನಕಾಯಿ ಬೆಳೆಯಲ್ಲಿ ರಸಹೀರುವ ಕೀಟಗಳು ಅಧಿಕ. ಕೆಂಪುನೊಣ ಬಿಳಿಜೇಡಗಳ ಕಾಟವೂ ವಿಪರೀತ. ಇದರಿಂದ ಗಿಡಕ್ಕೆ ಎಲೆಮುಟುರು ರೋಗ ಮತ್ತು ಕಾಯಿಗಳ ಗಾತ್ರ ಕಡಿಮೆ ಗಾತ್ರವಾಗಿ ಇಳುವರಿ ಕುಂಠಿತವಾಗುತ್ತದೆ. ಆದರೆ ಚಂದ್ರಶೇಖರ್ ಅವರು​ ಸಾವಯುವ ಗೊಬ್ಬರ ಮತ್ತು ಜೈವಿಕ ಉತ್ಪನ್ನಗಳ ಬಳಕೆಯಿಂದ ಗಿಡಗಳನ್ನು ಹಲವು ರೋಗಗಳಿಂದ ರಕ್ಷಿಸಿದ್ದಾರೆ. ಜೊತೆಗೆ ಬೂದಿರೋಗ, ಕೀಟಭಾದೆ ಹಾಗೂ ಶಿಲೀಂಧ್ರ ಭಾದೆಯಿಂದ ಮೆಣಸಿನಕಾಯಿ ಬೆಳೆ ರಕ್ಷಿಸಿಕೊಂಡಿದ್ದಾರೆ.

ಪರಿಣಾಮ, ಇವರ ಎರಡೆಕರೆ ಜಮೀನಿನಲ್ಲಿ ಹಸಿಮೆಣಸಿನಕಾಯಿ ಇಳುವರಿ ಉತ್ತಮವಾಗಿ ಬಂದಿದ್ದು ಒಳ್ಳೆ ಆದಾಯ ದೊರೆತಿದೆ. ಇದಕ್ಕೆಲ್ಲ ರಾಸಾಯನಿಕ ಉತ್ಪನ್ನಗಳ ಕಡಿಮೆ ಬಳಕೆ ಮತ್ತು ಹೆಚ್ಚು ಜೈವಿಕ ಉತ್ಪನ್ನಗಳ ಅಧಿಕ ಬಳಕೆ ಕಾರಣ ಎನ್ನುತ್ತಾರೆ ಚಂದ್ರಶೇಖರ ಅಗಡಿ. ಒಟ್ಟಿನಲ್ಲಿ ಇವರ ಈ ಬಹುಬೆಳೆ ಪದ್ಧತಿ, ಸಾವಯುವ ಹಾಗೂ ಜೈವಿಕ ಉತ್ಪನ್ನಗಳ ಬಳಕೆ ಉಳಿದ ಜಿಲ್ಲೆಯ ರೈತರಿಗೆ ಮಾದರಿಯಾಗಿದೆ.

ಇದನ್ನೂ ಓದಿ: ಕಾದು ಕೆಂಡವಾಗಿದ್ದ ರಾಯಚೂರು ಈಗ ಕೂಲ್​ ಕೂಲ್​: ಎಪಿಎಂಸಿಯಲ್ಲಿಟ್ಟಿದ್ದ ಭತ್ತ ನೀರಿನಲ್ಲಿ ಹೋಮ - Thunderstorm in Raichur

Last Updated :May 13, 2024, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.