ETV Bharat / state

ಹೈಕಮಾಂಡ್ ತಲುಪಿದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ನಾಳೆಯಿಂದ 2 ದಿನ ದೆಹಲಿಯಲ್ಲಿ ಮಹತ್ವದ ಸಭೆ

author img

By

Published : Apr 6, 2023, 6:09 PM IST

Updated : Apr 6, 2023, 6:28 PM IST

ರಾಜ್ಯ ಚುನಾವಣಾ ಸಮಿತಿ ಫೈನಲ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ.

bjp-candidate-list-reached-hign-command
ಹೈಕಮಾಂಡ್ ಅಂಗಳ ತಲುಪಿದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ನಾಳೆಯಿಂದ ಎರಡು ದಿನ ದೆಹಲಿಯಲ್ಲಿ ಮಹತ್ವದ ಸಭೆ..!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್​ನಿಂದ ಎರಡು ಪಟ್ಟಿಗಳ ಮೂಲಕ 166 ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದ್ದು, ಜೆಡಿಎಸ್​ನಿಂದ 93 ಆಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಆದರೆ ಬಿಜೆಪಿಯಿಂದ ಇನ್ನೂ ಸಹ ಅಭ್ಯರ್ಥಿಗಳ ಘೋಷಣೆ ಆಗಬೇಕಿದ್ದು, ಆಯ್ಕೆ ಪ್ರಕ್ರಿಯೆಯು ರಾಜ್ಯದ ಹಂತವನ್ನು ಮುಗಿಸಿ ಇದೀಗ ದೆಹಲಿ ಅಂಗಳ ತಲುಪಿದೆ. ರಾಜ್ಯ ಚುನಾವಣಾ ಸಮಿತಿಯಿಂದ ಪರಿಶೀಲನೆ ಪೂರ್ಣಗೊಂಡಿದ್ದು, ಕೋರ್ ಕಮಿಟಿಯ ಒಮ್ಮತದ ನಿರ್ಧಾರದೊಂದಿಗೆ ಪಟ್ಟಿಯನ್ನು ದೆಹಲಿಗೆ ಕಳುಹಿಸಿ ಕೊಡಲಾಗಿದೆ. ಏಪ್ರಿಲ್ 8ರಂದು ನಡೆಯುವ ಕೇಂದ್ರ ಸಂಸದೀಯ ಮಂಡಳಿ ಸಭೆಗೂ ಮೊದಲೇ ಪೂರ್ವಭಾವಿಯಾಗಿ ನಾಳೆಯೇ ಮೊದಲ ಹಂತದ ಸಭೆ ನಡೆಯಲಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

ನಗರದ ಹೊರವಲಯದ ಖಾಸಗಿ ರೆಸಾರ್ಟ್​ನಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆ ಪೂರ್ಣಗೊಂಡಿದ್ದು, ಅಪೂರ್ಣಗೊಂಡಿದ್ದ 6-8 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ರಾಜ್ಯ ಸಮಿತಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ರಾಜ್ಯ ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆ ಮುಗಿದಿದೆ. ಪ್ರತಿ ಕ್ಷೇತ್ರಗಳಿಗೂ ಮೂವರು ಹೆಸರು ಫೈನಲ್ ಮಾಡಿದ ರಾಜ್ಯ ಕೋರ್ ಕಮಿಟಿ ನಾಯಕರು ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ಮೊದಲ ಹೆಸರು ಯಾವುದೇ ವಿವಾದ ಇಲ್ಲದ, ಆರೋಪ ಇಲ್ಲದ, ವಯೋಮಿತಿ ಮೀರದ ಹಾಲಿ ಶಾಸಕರು ಮತ್ತು ಸೋತ ಕ್ಷೇತ್ರಗಳ ಸಮರ್ಥ ಅಭ್ಯರ್ಥಿ ಹೆಸರನ್ನು ಪ್ರಸ್ತಾಪಿಸಿದ್ದು, ಪ್ರಬಲ ಆಕಾಂಕ್ಷಿಯಾಗಿರುವ ಜಿಲ್ಲಾ ಸಮಿತಿಗಳಿಂದ ಮನ್ನಣೆ ಪಡೆದ ಹೆಸರು ಎರಡನೆಯದ್ದಾಗಿದ್ದು, ತೀವ್ರ ಪೈಪೋಟಿ ಇರುವ ಕಡೆ ಜಿಲ್ಲಾ ಸಮಿತಿಗಳು ಹಾಗು ಸಮೀಕ್ಷೆ ಆಧರಿಸಿ ಮೂರನೇ ಹೆಸರನ್ನು ನಮೂದಿಸಲಾಗಿದೆ.

ರಾಜ್ಯ ಚುನಾವಣಾ ಸಮಿತಿ ಫೈನಲ್ ಮಾಡಿದ ಪಟ್ಟಿಯನ್ನು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ನಾಳೆ ಮಧ್ಯಾಹ್ನ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು ದೆಹಲಿಗೆ ತೆರಳಲಿದ್ದು, ನಾಳೆ ಸಂಜೆಯೇ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಮೊದಲ ಹಂತದಲ್ಲಿ ಸಭೆ ನಡೆಯಲಿದೆ. ಮೊದಲ ಹಂತದ ಸಭೆ ಬಳಿಕ ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಮಂಡಲಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಪ್ರಧಾನಿ ಮೋದಿ ಚೆನ್ನೈ ಪ್ರವಾಸ: ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 8 ರಂದು ಮಧ್ಯಾಹ್ನ ಚೆನ್ನೈ ಪ್ರವಾಸಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆಯೇ ಸಂಸದೀಯ ಮಂಡಳಿ ಸಭೆ ನಡೆಸಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಾಗುತ್ತದೆ ಎಂದು ಬಿಜೆಪಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಅಂದು ಚರ್ಚೆ ಅಪೂರ್ಣವಾದಲ್ಲಿ ಏಪ್ರಿಲ್ 9 ರಂದು ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ಪ್ರಧಾನಿ ಮೋದಿ ವಾಪಸಾಗಲಿದ್ದು, ಅಂದು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.

ಹಾಗಾಗಿ, ಏಪ್ರಿಲ್ 8 ರಂದೇ ಸಭೆ ಮುಗಿದಲ್ಲಿ ಅಂದು ರಾತ್ರಿ ಅಥವಾ ಮರು ದಿನ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಅಥವಾ ಏಪ್ರಿಲ್ 9 ರಂದು ಮುಂದುವರೆದ ಸಭೆ ನಡೆದಲ್ಲಿ ಏಪ್ರಿಲ್ 10ರಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈವರೆಗೂ ಮೂರು ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎನ್ನುವ ಚಿಂತನೆಯಲ್ಲಿ ಬಿಜೆಪಿ ಹೈಕಮಾಂಡ್ ಇದೀಗ ತನ್ನ ನಿಲುವು ಬದಲಿಸಿಕೊಂಡು ಎರಡೇ ಪಟ್ಟಿ ಬಿಡುಗಡೆ ಮಾಡಬೇಕು ಎನ್ನುವ ನಿಲುವಿಗೆ ಬಂದಿದೆ ಎನ್ನಲಾಗುತ್ತಿದೆ.

ಮೊದಲ ಹಂತದಲ್ಲಿ 130 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಏಪ್ರಿಲ್ 15ರ ಒಳಗೆ ಬಾಕಿ ಉಳಿದ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಹಾಗು ಅಂತಿಮ ಪಟ್ಟಿ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಕಳೆದ ಬಾರಿ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಕಡೆಯ ಪಟ್ಟಿ ಸಾಕಷ್ಟು ವಿಳಂಬವಾಗಿ ಎಡವಟ್ಟಾಗಿತ್ತು ಹಾಗಾಗಿ ಅದರಿಂದ ಎಚ್ಚೆತ್ತುಕೊಂಡು ಈ ಬಾರಿ ಕನಿಷ್ಟ ನಾಮಪತ್ರ ಸಲ್ಲಿಕೆ ಅವದಿ ಮುಕ್ತಾಯಕ್ಕೂ ಆರು ದಿನ ಮೊದಲೇ ಎಲ್ಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಹೊಸ ಪ್ರಯೋಗ: ಈವರೆಗೂ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ವೀಕ್ಷಕರನ್ನು ಕಳುಹಿಸಿ ಅವರಿಂದ ವರದಿ ಪಡೆದ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸುತ್ತಿದ್ದ ರಾಜ್ಯ ಬಿಜೆಪಿ ಇದೇ ಮೊದಲ ಬಾರಿಗೆ ಮತದಾನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದೆ. ಮಾರ್ಚ್ 31ರಂದು ಎಲ್ಲಾ ಜಿಲ್ಲೆಗಳಲ್ಲಿ ಕ್ಷೇತ್ರವಾರು ಮತದಾನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಏಪ್ರಿಲ್ 1 ಮತ್ತು 2ರಂದು ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ರಾಜ್ಯ ಸಮಿತಿ ಅಭಿಪ್ರಾಯ ಸಂಗ್ರಹ ಮಾಡಿತು.

ಪಟ್ಟಿ ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಆಕಾಂಕ್ಷಿಗಳ ಚಿತ್ತ ಹೈಕಮಾಂಡ್ ನತ್ತ ನೆಟ್ಟಿದೆ. ರಾಜ್ಯದ ನಾಯಕರು ಕೂಡ ಹೈಕಮಾಂಡ್ ಪ್ರಕಟಿಸುವ ಪಟ್ಟಿಯತ್ತ ದೃಷ್ಟಿ ಹರಿಸಿದ್ದಾರೆ.

ಇದನ್ನೂ ಓದಿ: ಗುರುಮಠಕಲ್ ಕ್ಷೇತ್ರ: ಬಾಬುರಾವ್ ಚಿಂಚನಸೂರ್‌ಗೆ ಕಾಂಗ್ರೆಸ್‌ ಟಿಕೆಟ್‌

Last Updated :Apr 6, 2023, 6:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.