ETV Bharat / state

ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ್ ಚಿಂಚನಸೂರ್​ಗೆ ಕಾಂಗ್ರೆಸ್​ ಟಿಕೆಟ್​: ಬಿಜೆಪಿ ಪ್ರತಿಕ್ರಿಯೆ ಏನು?

author img

By

Published : Apr 6, 2023, 4:41 PM IST

Updated : Apr 6, 2023, 9:58 PM IST

Etv congress-candidates-second-list-announced-baburaa-cinchansur-constest-from-gurumatkal
ಗುರುಮಠಕಲ್ ಕ್ಷೇತ್ರ : ಬಾಬುರಾವ್ ಚಿಂಚನಸೂರಗೆ ಒಲಿದ ಟಿಕೆಟ್

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆಗೊಳಿಸಿದೆ. ಯಾದಗಿರಿ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಯಾದಗಿರಿ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಸಾಕಷ್ಟು ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್​​ ತನ್ನ ಅಭ್ಯರ್ಥಿಗಳ ಎರಡು ಹಂತದ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಹಂತದ ಪಟ್ಟಿಯಲ್ಲಿ ಶಹಾಪುರ ಕ್ಷೇತ್ರಕ್ಕೆ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಸುರಪುರ ಕ್ಷೇತ್ರಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಟಿಕೆಟ್​​ ಘೋಷಣೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಯಾದಗಿರಿಗೆ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ್ ಚಿಂಚನಸೂರ್‌ಗೆ ಕಾಂಗ್ರೆಸ್ ಮಣೆ​​ ಹಾಕಿದೆ.

ಗುರುಮಠಕಲ್ ಕ್ಷೇತ್ರಕ್ಕೆ 8 ಜನ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಬಾಬುರಾವ್ ಚಿಂಚನಸೂರು ಅವರಿಗೆ​ ಟಿಕೆಟ್​ ಸಿಕ್ಕಿದೆ. ಚಿಂಚನಸೂರು ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್​​ ಸೇರಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಸಾಧ್ಯತೆ ಕಂಡುಬಂದಿದೆ. ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಪ್ರಬಲ ಎದುರಾಳಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕೋಲಿ ಸಮಾಜಕ್ಕೆ ಟಿಕೆಟ್ ನೀಡುತ್ತಾ ಬಂದಿವೆ. ಇಲ್ಲಿ ಅಲ್ಪಸಂಖ್ಯಾತರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರವು ಯಾದಗಿರಿ ತಾಲ್ಲೂಕಿನ ಸೈದಾಪುರ, ಬಳಿಚಕ್ರ ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿದೆ. ಕಾಂಗ್ರೆಸ್​​ ಭದ್ರಕೋಟೆಯಾಗಿದ್ದ ಗುರುಮಠಕಲ್ 2018ರಲ್ಲಿ ಜೆಡಿಎಸ್​ ಪಾಲಾಗಿತ್ತು. ಬಾಬುರಾವ್ ಚಿಂಚನಸೂರು 2018ರಲ್ಲಿ 24,480 ಮತಗಳಿಂದ ಸೋತ ಬಳಿಕ ಬಿಜೆಪಿ ಸೇರಿದ್ದರು. ಐದು ಬಾರಿ ಶಾಸಕರಾಗಿರುವ ಇವರು ಸಪ್ತ ಖಾತೆಗಳ ಸಚಿವ ಎಂದೇ ಖ್ಯಾತಿ ಪಡೆದಿದ್ದಾರೆ.

ಗುರುಮಠಕಲ್ ಕ್ಷೇತ್ರದ ಮತದಾರರ ವಿವರ: ಪುರುಷರು 1,20,852 ಮತ್ತು ಮಹಿಳೆಯರು 1,21,382 ಒಟ್ಟು 2,42,234 ಮತದಾರರಿದ್ದಾರೆ. ಬಾಬುರಾವ್ ಚಿಂಚನಸೂರ್ ಅವರು ಒಟ್ಟು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ 2 ಅವಧಿಗೆ (1989 ಮತ್ತು 1994), ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ 2 ಅವಧಿಗೆ (2008-2013 ಮತ್ತು 2013-2018) ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಜವಳಿ ಬಂದರು ಮತ್ತು ಒಳನಾಡು ಹಾಗೂ ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸಿದ್ದರಾಮಯ್ಯ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ, 29 ಆಗಸ್ಟ್ 2018 ರಂದು ಬಿಜೆಪಿ ಸೇರಿದ್ದರು.

2018ರಲ್ಲಿ ಚಿಂಚನಸೂರ್​ ಬಿಜೆಪಿ ಸೇರಿದ ನಂತರ, 2022ರ ಜುಲೈ 30ರಂದು ಎಂಎಲ್‌ಸಿ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. 2022ರ ಆಗಸ್ಟ್ 5ರಂದು, ವಿಧಾನ ಪರಿಷತ್ತಿನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2023ರ ಮಾರ್ಚ್ 20ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2023ರ ಮಾರ್ಚ್ 22ರಂದು ಮತ್ತೆ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಈಗ ಚಿಂಚನಸೂರ್‌ಗೆ ಕೈ ಪಕ್ಷ ಟಿಕೆಟ್ ನೀಡಿದ್ದು, ಗುರುಮಠಕಲ್ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ.

ಎಂಎಲ್​​​ಸಿ ಬಾಬುರಾವ್ ಚಿಂಚನಸೂರ್ ಬಿಜೆಪಿ ಬಿಟ್ಟು ಹೋದರೂ ಕಾರ್ಯಕರ್ತರು ಹೆದರಿಕೊಳ್ಳುವ ಅಗತ್ಯವಿಲ್ಲ. ಪಕ್ಷ ಸಂಘಟನೆ ಬಲಿಷ್ಠವಾಗಿದೆ ಎಂದು ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಹೇಳಿದ್ದಾರೆ. ಗುರುಮಠಕಲ್ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಕೆಲವು ಮಹಿಳೆಯರು ಟಿಕೆಟ್​​ ಆಕಾಂಕ್ಷಿಗಳಾಗಿದ್ದು, ನಾಗರತ್ನ ಕುಪ್ಪಿ, ಲಲಿತಾ ಅನಪುರ ರೇಸ್‌ನಲ್ಲಿದ್ದಾರೆ. ಇವರನ್ನು ಹೊರತುಪಡಿಸಿ, ಕಾಡಾ ಮಾಜಿ ಅಧ್ಯಕ್ಷ ಗಿರೀಶ್‌ ಮಟ್ಟೆಣ್ಣನವರ್‌ ತಮಗೆ ಟಿಕೆಟ್‌ ನೀಡಬೇಕು ಎಂದು ಕೋರಿದ್ದಾರೆ. ನರೇಂದ್ರ ರಾಥೋಡ್, ಯೋಗೇಶ್ ಬೆಸ್ತರ್, ಶಿವಾಜಿ ಮೆಟಗಾರ ಹಾಗು ನರಸಿಂಹಲು ನೀರೇಟಿ ಕೂಡಾ ಆಕಾಂಕ್ಷಿಗಳಾಗಿದ್ದಾರೆ. ಇನ್ನು ನರಸಿಂಹಲು ನೀರೇಟಿ ಅವರು ಸ್ಥಳೀಯರೂ ಆಗಿದ್ದು ಬಿಜೆಪಿ ತಾಲ್ಲೂಕು ಬ್ಲಾಕ್ ಅಧ್ಯಕ್ಷರಾಗಿ 5 ಬಾರಿ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು, ಈ ಬಾರಿ ಬಿಜೆಪಿ ಮಣೆ ಹಾಕುವ ನಿರೀಕ್ಷೆ ಇದೆ.

ವಿಜಯಪುರ ಕ್ಷೇತ್ರ ಸಮಾಚಾರ: ಇನ್ನು, ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರದಿಂದ ವಿಠ್ಠಲ ಕಟಕದೊಂಡ, ವಿಜಯಪುರ ನಗರ ಕ್ಷೇತ್ರದಿಂದ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಟಿಕೇಟ್ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್​​ ತನ್ನ ಮೊದಲು ಪಟ್ಟಿಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ಎಂ.ಬಿ.ಪಾಟೀಲ, ಇಂಡಿ ಕ್ಷೇತ್ರದಿಂದ ಯಶವಂತರಾಯಗೌಡ ಪಾಟೀಲ ಹಾಗೂ ಬಸವನಬಾಗೇವಾಡಿ ಕ್ಷೇತ್ರದಿಂದ ಶಿವಾನಂದ ಪಾಟೀಲ, ಮುದ್ದೇಬಿಹಾಳದಿಂದ ಅಪ್ಪಾಜಿ ನಾಡಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು.

ದೇವರಹಿಪ್ಪರಗಿ‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅರ್ಜಿ ಹಾಕಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್.ಪಾಟೀಲ ಅವರಿಗೆ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಟಿಕೆಟ್ ಘೋಷಣೆ ಮಾಡಿಲ್ಲ. ಸಿಂದಗಿ ಕ್ಷೇತ್ರದಲ್ಲಿಯೂ ಅಶೋಕ ಮನಗೂಳಿ ಹಾಗೂ ಶರಣಪ್ಪ ಸುಣಗಾರ ನಡುವೆ ಫೈಟ್ ಇದೆ.

ಕಳೆದ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್​ : ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರದಿಂದ ವಿಠ್ಠಲ ಕಟಕದೊಂಡ, ವಿಜಯಪುರ ನಗರ ಕ್ಷೇತ್ರದಿಂದ ಅಬ್ದುಲ್ ಹಮೀದ್ ಮುಶ್ರೀಪ್ ಅವರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. ಈ ಇಬ್ಬರೂ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಇದನ್ನೂ ಓದಿ : ಕಾಂಗ್ರೆಸ್​ನಿಂದ​ 42​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ

Last Updated :Apr 6, 2023, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.