ತುಮಕೂರು: ಬೆಂಗಳೂರಿನಂತಹ ಮಹಾನಗರಗಳಲ್ಲಿ ಸರ್ವೇಸಾಮಾನ್ಯವಾಗಿರುವ ಅಪರಾಧ ಚಟುವಟಿಕೆಗಳು ತುಮಕೂರು ಜಿಲ್ಲೆಯಲ್ಲಿಯೂ ಬೆಳಕಿಗೆ ಬರುತ್ತಿವೆ. ಶ್ರೀಮಂತ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಬ್ಲಾಕ್ ಮೇಲ್ ಮಾಡುವ ಮೂಲಕ ಹಣಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರಕರಣಗಳು ಆರಂಭವಾಗಿವೆ.
ಇಂತಹ ಚಟುವಟಿಕೆ ತುಮಕೂರು ನಗರದಲ್ಲಿ ಕಂಡುಬಂದಿದ್ದು, ಬೆಂಗಳೂರು ಮೂಲದ ಆರೋಪಿಗಳು ಇದರಲ್ಲಿ ಭಾಗಿಯಾಗಿರುವುದು ಗಮನಾರ್ಹ ಅಂಶ. ಆಗಸ್ಟ್ 8 ರಂದು ಮತ್ತು ಜುಲೈ 9 ರಂದು ತುಮಕೂರು ನಗರದ ಮಂಡಿಪೇಟೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕ್ರಿಮಿನಲ್ ತಂಡ ವ್ಯವಸ್ಥಿತ ಸಂಚು ರೂಪಿಸಿತ್ತು. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆ ಮತ್ತು ತುಮಕೂರು ನಗರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಬರೋಬರಿ 50 ಲಕ್ಷ ರೂ. ಗಳಿಗೆ ದುಷ್ಕರ್ಮಿಗಳು ಉದ್ಯಮಿಗಳಿಗೆ ಬೇಡಿಕೆ ಇರಿಸಿದ್ದರು.
ಬೆಂಗಳೂರಿನ ಯಶವಂತಪುರದ ಮೆಹಬೂಬ್ ಖಾನ್ ಎಂಬಾತನೇ ಈ ಕ್ರಿಮಿನಲ್ ಚಟುವಟಿಕೆಯ ರೂವಾರಿ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತುಮಕೂರಿನ ಅಲಿ ಹುಸೇನ ಶಾನವಾಜ್ ಪಾಷಾ ಮತ್ತು ಸೈಯದ್ ಶವರ್ ಎಂಬುವರೊಂದಿಗೆ ತುಮಕೂರು ನಗರದಲ್ಲಿ ಬೆಂಗಳೂರು ಮಾದರಿಯ ಕ್ರಿಮಿನಲ್ ಚಟುವಟಿಕೆಗೆ ಸಂಚು ರೂಪಿಸಿದ್ದನು.
ಇನ್ನು ಈ ರೀತಿಯಾದ ಅಪರಾಧ ಚಟುವಟಿಕೆಗಳು ಕೊರೊನಾ ಬಿಕ್ಕಟ್ಟಿನ ನಡುವೆ ತುಮಕೂರು ನಗರದಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿರುವ ತುಮಕೂರು ಪೊಲೀಸರು ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಶೋಧ ನಡೆಸಿದ್ದಾರೆ.
ವಾಟ್ಸಾಪ್ ಕಾಲ್ ಮೂಲಕ ಬೆದರಿಕೆ:
ಆರೋಪಿಗಳು ಈಗಾಗಲೇ ಫೋನ್ ಕಾಲ್ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದರು. ಇದರಿಂದ ಪೊಲೀಸರಿಗೆ ಸುಲಭವಾಗಿ ಸಿಕ್ಕಿಬಿಡುತ್ತೇವೆ ಎಂಬ ಉದ್ದೇಶ ಹೊಂದಿದ್ದ ಇವರುಗಳು ವಾಟ್ಸ್ ಆ್ಯಪ್ ಕಾಲ್ ಮೊರೆ ಹೋಗಿದ್ದರು. ಆದರೆ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆರೋಪಿಗಳನ್ನು ಉನ್ನತ ತಂತ್ರಜ್ಞಾನ ಬಳಸಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಾಟ್ಸಪ್ ಕರೆಗಳ ಐಪಿಡಿಆರ್ ಎಂಬ ವಿಶೇಷ ತಂತ್ರಜ್ಞಾನವನ್ನು ಬಳಸಿಕೊಂಡು ಪತ್ತೆಹಚ್ಚಲಾಗಿದೆ.
ಒಟ್ಟಾರೆ ಕ್ರಿಮಿನಲ್ ಗಳು ಎಷ್ಟೇ ತಂತ್ರಜ್ಞಾನವನ್ನು ಬಳಸಿ ಚಟುವಟಿಕೆಗಳನ್ನು ನಡೆಸಲು ಮುಂದಾದರೆ ಪೊಲೀಸರು ಅದನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.