ಬೆಂಗಳೂರು: ನಿರ್ದೇಶಕಿ ರೂಪ ಐಯ್ಯರ್ ನೇತೃತ್ವದಲ್ಲಿ, ಇಂದು ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಉಚಿತ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಉಚಿತ ವ್ಯಾಕ್ಸಿನೇಷನ್ ಶಿಬಿರಕ್ಕೆ ಆರೋಗ್ಯ ಸಚಿವ ಸುಧಾಕರ್, ವಾರ್ತಾ ಇಲಾಖೆ ಸಚಿವ ಸಿ.ಸಿ ಪಾಟೀಲ್ ಹಾಗೂ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತಾ, ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದೆ. ಇದೇ ರೀತಿ 18 ರಿಂದ 45 ವರ್ಷ ವಯಸ್ಸಾದವರಿಗೆ, ಆಯಾ ಸಂಘ ಸಂಸ್ಥೆಗಳೇ ಲಸಿಕೆ ನೀಡುತ್ತಿವೆ. ಬಿಬಿಎಂಪಿ ಸಹಯೋಗದಲ್ಲಿ, ಸುಮಾರು 20 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದರ ಜೊತೆಗೆ ಸಾರಿಗೆ ನೌಕರರು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು ಸೇರಿದಂತೆ 20 ವಲಯದ ವರ್ಗದ 11 ಲಕ್ಷ ಜನರನ್ನು ಗುರುತಿಸಿ ಲಸಿಕೆ ನೀಡಲಾಗುತ್ತೆ ಎಂದರು.
ಇನ್ನು ಅನ್ಲಾಕ್ ವಿಚಾರವಾಗಿ ಪ್ರತಿಕ್ರಿಯಿಸಿದ ಗೌರವ್ ಗುಪ್ತಾ, ಬೆಂಗಳೂರಿಗೆ ನಮ್ಮದೇ ಪ್ರತ್ಯೇಕ ಮಾಡೆಲ್ ಇರಬೇಕು. ನಾವು ಪ್ರತ್ಯೇಕ ಮಾಡೆಲ್ ನಾವು ರೆಡಿ ಮಾಡಿ ಸರ್ಕಾರದ ಗಮನಕ್ಕೆ ತರುತ್ತೇವೆ. ಇನ್ನು ಜನರ ಸಹಕಾರದಿಂದ ಸೋಂಕು ಕಡಿಮೆ ಆಗಿದೆ. ಹಂತ ಹಂತವಾಗಿ ಅನ್ ಲಾಕ್ ವ್ಯವಸ್ಥೆ ಆಗಬೇಕು, ಅದನ್ನ ಸರ್ಕಾರ ತೀರ್ಮಾನ ಮಾಡುತ್ತೆ. ನಾವು ನಮ್ಮ ಸಲಹೆಯನ್ನು ಈಗಾಗಲೇ ಸರ್ಕಾರಕ್ಕೆ ನೀಡಿದ್ದೇವೆ. ಲಸಿಕೆ ಮುಂದಿನ ದಿನಗಳಲ್ಲಿ ಜಾಸ್ತಿ ಬರುತ್ತೆ ಅಂತಾ ಹೇಳಿದರು.
ಹಾಗೇ ಅನ್ ಲಾಕ್ ವೇಳೆ ಬೇರೆ ಬೇರೆ ಊರುಗಳಿಗೆ ಜನ ಬರುತ್ತಾರೆ. ಹೀಗಾಗಿ ಜನ ಮಾಸ್ಕ್ ಧರಿಸಬೇಕು ಅಂತಾ ಗೌರವ ಗುಪ್ತಾ ಹೇಳಿದ್ದಾರೆ.