ETV Bharat / city

ಬಳ್ಳಾರಿ : 10 ದಿನಗಳ ಕಾಲ ನಡೆಯುವ ಕೋಮು ಸೌಹಾರ್ದತೆಯ ಮೊಹರಂ

author img

By

Published : Aug 7, 2022, 10:09 PM IST

ballari-special-muharram-festival-celebration
ಕೋಮು ಸೌಹಾರ್ದತೆಯ ಮೊಹರಂ

ನಮ್ಮ ದೇಶದಲ್ಲಿ ವೈವಿಧ್ಯಮಯ ಆಚರಣೆಗಳನ್ನು ನಾವು ಕಾಣುತ್ತೇವೆ. ಅದೇ ರೀತಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಗಸನೂರಿನಲ್ಲಿ ನಡೆಯುವ ಮೊಹರಂ ಕೂಡ ವಿಶೇಷವಾಗಿದ್ದು, ಇಲ್ಲಿ ಮೆರೆಯುವ ಕೋಮು ಸೌಹಾರ್ದತೆ ನಾಡಿಗೆ ಮಾದರಿಯಾಗಿ ಕಣುತ್ತದೆ.

ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಗಸನೂರಿನಲ್ಲಿ ಮೊಹರಂ ಹಬ್ಬದ ಆಚರಣೆಯು ವಿಶಿಷ್ಟವಾಗಿ ಜರುಗಿತು. ಮೊಹರಂ ಆಚರಣೆಯ ಹಿನ್ನೆಲೆಯಲ್ಲಿ ಇಲ್ಲಿ ಗುದ್ದಲಿ ಹಾಕಿದ ನಂತರದ 10 ದಿನಗಳ ಕಾಲ ಮದ್ಯ, ಮಾಂಸ ನಿಷೇಧ, ಹೆಣ್ಣು ಮಕ್ಕಳು ಹೂ ಮುಡಿಯುವಂತಿಲ್ಲ, ಗ್ರಾಮಸ್ಥರು ಚಪ್ಪಲಿ ಧರಿಸುವಂತಿಲ್ಲ, ಗಂಡ-ಹೆಂಡತಿ ಸಂಸಾರ ಮಾಡುವಂತಿಲ್ಲ, ಮಂಚದ ಮೇಲೆ ಮಲಗುವಂತಿಲ್ಲ, ಇಂತಹ ನಿಯಮಗಳನ್ನು ಪಾಲಿಸಿ ಮೊಹರಂ ಹಬ್ಬವನ್ನು 10 ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಕೋಮು ಸೌಹಾರ್ದತೆಯ ಮೊಹರಂ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿಯೂ 9ನೇ ದಿನ ರಾತ್ರಿ ಆಚರಣೆ ಮಾಡುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ 7ನೇ ದಿನ ಆಚರಣೆಯನ್ನು ಹಗಲು ಹೊತ್ತಿನಲ್ಲಿಯೇ ಆಚರಿಸುವುದು ಇಲ್ಲಿನ ವಿಶಿಷ್ಟತೆಯಾಗಿದೆ. ಹಗಲು ಸರಗಸ್ತಿಯ ಅಂಗವಾಗಿ ಗ್ರಾಮಸ್ಥರು ಪೀರಲದೇವರ ದೇವಸ್ಥಾನದ ಹತ್ತಿರದ ಅಂಗಳದಲ್ಲಿ ಪೀರಲ ದೇವರ ಕುರಿತಾದ ಮೇಲ್ಪದಗಳನ್ನು ಹಾಡುತ್ತಾರೆ. ಹಾಡುಗಾರರ ಹಾಡಿಗೆ ಭಕ್ತರು ಕೈಯಲ್ಲಿ ಸಣ್ಣ ಬಿಂದಿಗೆ ಹಿಡಿದು ಹೆಜ್ಜೆ ಹಾಕುತ್ತ ಸುತ್ತು ಹಾಕುತ್ತಾ ಹಾಡುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.

ಹತ್ತು ದಿನಗಳ ಕಾಲ ನಡೆಯುವ ಕೋಮು ಸೌಹಾರ್ದತೆಯ ಮೊಹರಂ

7ನೇ ದಿನದಂದು ಮಧ್ಯಾಹ್ನದ ನಂತರ ಮಸೀದಿ ಮುಂದೆ ಹಲಗೆ ಬಾರಿಸುತ್ತ ಭಕ್ತರು ತಂಡೋಪ ತಂಡವಾಗಿ ಅಲಾಯಿ ಕುಣಿಯುತ್ತ ಮೈಮರೆಯುತ್ತಾರೆ. ಕೈಗಳಲ್ಲಿ ವಿವಿಧ ಬಣ್ಣಗಳ ಧ್ವಜಗಳನ್ನು ಹಿಡಿದಿರುತ್ತಾರೆ. 101 ಹಲಗೆಗಳನ್ನು ಬಾರಿಸುವ ವ್ಯಕ್ತಿಗಳೂ ಅಲಾಯಿ ಕುಣಿಯ ಸುತ್ತಲೂ ಕುಣಿತದ ಹೆಜ್ಜೆಗಳನ್ನು ಹಾಕುವ ಭಕ್ತರು ವಿಶಿಷ್ಟವಾಗಿ ಕಂಡುಬರುತ್ತಾರೆ.

ನಂತರ ಲಿಂಗಾಯಿತ ಸಮಾಜದ ದೇವರು ಹಿಡಿಯುವ ಬಸಪ್ಪ ತಾತನ ಕುಟುಂಬದ ಸದಸ್ಯರನ್ನು ಕರೆತರಲು ಹೊರಡುತ್ತಾರೆ. ತಾತನನ್ನು ಖೆಡ್ಡಾ ಬಸ್ತಿಯಿಂದ ಮಸೀದಿಗೆ ಕರೆತರಲು ಮುಂದೆ ಸಾಗಿ ಪುನಃ ಹೊನ್ನಪ್ಪನ ಕಟ್ಟೆಗೆ ಬಂದು ಕಾಯಿ ಕರ್ಪೂರ ಸಲ್ಲಿಸುತ್ತಾರೆ. ಮಸೀದಿಯಲ್ಲಿದ್ದ ದೇವರುಗಳನ್ನು ಇಬ್ಬರ ಕೈಯಲ್ಲಿ ಕೊಟ್ಟು ನಂತರ ಅಲಾಯಿ ಆಟವಾಡುತ್ತ ಪೀರಲ ದೇವರ ಮೆರವಣಿಗೆಯು ಊರಲ್ಲಿ ಸವಾರಿ ಹೊರಡುತ್ತದೆ. ಗ್ರಾಮದಲ್ಲಿರುವ ಎಲ್ಲಾ ದೇವಸ್ಥಾನಗಳಿಗೂ ಪೀರಲ ದೇವರು ತೆರಳಿ ಪೂಜೆ ಸಲ್ಲಿಸಿ ನಂತರ ಮಸೀದಿಗೆ ಬರುತ್ತಾರೆ.

ರಾತ್ರಿಯಾಗುತ್ತಿದ್ದಂತೆ ಮಸೀದಿಯ ಆವರಣದಲ್ಲಿ ನೂರಾರು ಭಕ್ತರು ನೂರಾರು ತಮಟೆಗಳ ಸದ್ದಿಗೆ ಹೆಜ್ಜೆ ಹಾಕಿ ಕುಣಿಯುತ್ತಾರೆ. ಮೊಹರಂ ಹಬ್ಬದ 3ನೇ ದಿನದಂದು ಅಲಾಯಿ ಕುಣಿಯನ್ನು ತೆಗೆದು ವಿವಿದ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡಿರುತ್ತಾರೆ. 7ನೇ ಸರಗಸ್ತಿಯ ದಿನದವರೆಗೂ ಹೂವಿನ ಅಲಂಕಾರವಿರುತ್ತದೆ. ಈ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಮೊಹರಂ ಹಬ್ಬಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಸೀಮಾಂಧ್ರ ಪ್ರದೇಶದಿಂದ ಸಾವಿರಾರು ಜನ ಬರುತ್ತಾರೆ.

ಇದನ್ನೂ ಓದಿ : ಕಾವಾಡಿ- ಮಾವುತರ ಸಮಸ್ಯೆ ಬಗೆಹರಿದಿದೆ: ಸಚಿವ ಉಮೇಶ್ ಕತ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.