ETV Bharat / health

'ಯಶಸ್ವಿನಿ' ಯೋಜನೆ ಅಡಿ ಕ್ಯಾನ್ಸರ್​​ ಚಿಕಿತ್ಸೆಗೆ ನೆರವು; ಬಡರೋಗಿಗಳಿಗೆ ವರದಾನ - Cancer treatment in yeshasvini

author img

By ETV Bharat Karnataka Team

Published : May 17, 2024, 2:55 PM IST

Updated : May 17, 2024, 3:07 PM IST

ಸರ್ಕಾರ ಯಶಸ್ವಿನಿ ಯೋಜನೆ ಅಡಿ ಕ್ಯಾನ್ಸರ್​ ದುಬಾರಿ ಚಿಕಿತ್ಸೆಗಳನ್ನು ಸೇರ್ಪಡೆ ಮಾಡಿರುವುದರಿಂದ ಇದು ಬಡರೋಗಿಗಳಿಗೆ ವರದಾನ ಆಗುತ್ತದೆ.

State Government included Cancer treatment in yeshasvini scheme
State Government included Cancer treatment in yeshasvini scheme (Etv bharat kannada)

ಬೆಂಗಳೂರು:‌ ರಾಜ್ಯ ಸರ್ಕಾರ ಕ್ಯಾನ್ಸರ್​​ ಪೀಡಿತರಿಗೆ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ದುಬಾರಿ ಬೆಲೆಯ ಕಿಮೋಥೆರಪಿ ಚಿಕಿತ್ಸೆಯನ್ನು ಯಶಸ್ವಿನಿ ಯೋಜನೆಯಲ್ಲಿ ಸೇರ್ಪಡೆ ಮಾಡುತ್ತಿದೆ. ಇದು ಬಡ ರೋಗಿಗಳ ಪಾಲಿಗೆ ವರದಾನವಾಗಲಿದೆ. ಈಗಾಗಲೇ ರಾಜ್ಯದಲ್ಲಿ 474 ಆಸ್ಪತ್ರೆಗಳು ಈ ನೆಟ್​​ವರ್ಕ್​ ಅಡಿ ಚಿಕಿತ್ಸೆ ನೀಡಲಿದೆ. ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸಿ ಇನ್ನಷ್ಟು ಆಸ್ಪತ್ರೆಗಳನ್ನು ಈ ಯೋಜನೆಯಡಿ ತರಲು ಶ್ರಮವಹಿಸುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರ್ಥಿಕ ಹೊರೆ ಇಳಿಕೆ: ಕ್ಯಾನ್ಸರ್‌ ಚಿಕಿತ್ಸೆ ಪಡೆಯಲು ಆಗದ ಬಡ ರೋಗಿಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಉಚಿತ ಕಿಮೋಥೆರಪಿ ಚಿಕಿತ್ಸೆ ಸಿಗುವಂತೆ ಮಾಡಲಾಗುವುದು. ಇದರ ಜೊತೆಗೆ ಸರ್ಜಿಕಲ್ ಆಂಕೊಲಾಜಿ ಹಾಗೂ ರೇಡಿಯೊ ಥೆರಪಿ ವಿಭಾಗದಿಂದ 261 ಚಿಕಿತ್ಸೆಗಳನ್ನು ಅಳವಡಿಸಿಕೊಂಡು ದುಬಾರಿ ವೆಚ್ಚದ ಕ್ಯಾನ್ಸರ್‌ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ಒದಗಿಸಲಾಗುತ್ತಿದೆ. ಯಶಸ್ವಿನಿ ಯೋಜನೆ ಅಡಿ ಒಂದೇ ವರ್ಷದಲ್ಲಿ 1,796 ಮಂದಿ 5.20 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜನವರಿ 2023ರಿಂದ ಜನವರಿ 2024ರ ಅವಧಿಯಲ್ಲಿ ಕಿಮೋ ಥೆರಪಿ ವಿಭಾಗದಲ್ಲಿ ಒಟ್ಟು ₹1.43 ಕೋಟಿ ವೆಚ್ಚದಲ್ಲಿ 1,097 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ರೇಡಿಯೊ ಥೆರಪಿ ವಿಭಾಗದಲ್ಲಿ ₹1.87 ಕೋಟಿ ವೆಚ್ಚದಲ್ಲಿ 228 ಮಂದಿಗೆ ಹಾಗೂ ಸರ್ಜಿಕಲ್‌ ಅಂಕೊಲಾಜಿ ವಿಭಾಗದಲ್ಲಿ ₹1.90 ಕೋಟಿ ವೆಚ್ಚದಲ್ಲಿ 411 ಮಂದಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

'ಯಶಸ್ವಿನಿ' ಯೋಜನೆಯಡಿ ಗರಿಷ್ಠ ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಕ್ಯಾನ್ಸರ್‌ ಪೀಡಿತ ವ್ಯಕ್ತಿಯು ನೆಟ್​ವರ್ಕ್​ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು.ಈಗಾಗಲೇ ರಾಜ್ಯದಲ್ಲಿ 474 ಆಸ್ಪತ್ರೆಗಳು ಈ ನೆಟ್​ವರ್ಕ್​ ಅಡಿಯಲ್ಲಿವೆ. ನಮ್ಮ ಕಾಂಗ್ರೆಸ್‌ ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸಿ ಇನ್ನಷ್ಟು ಆಸ್ಪತ್ರೆಗಳನ್ನು ಈ ಯೋಜನೆಯಡಿ ತರಲು ಶ್ರಮವಹಿಸುತ್ತಿದೆ ಎಂದು ತಿಳಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಯಶಸ್ವಿನಿ ಯೋಜನೆಯನ್ನು ನಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚು ಬಲಗೊಳಿಸಿದ್ದೇವೆ. ರಾಜ್ಯದ ಕ್ಯಾನ್ಸರ್‌ ಪೀಡಿತರಿಗೆ ದುಬಾರಿ ಚಿಕಿತ್ಸೆಗಳು ಕಡಿಮೆ ವೆಚ್ಚದಲ್ಲಿ ಹಾಗೂ ಉಚಿತವಾಗಿ ಸಿಗುವಂತೆ ಮಾಡಿ ನಮ್ಮ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಕ್ಯಾನ್ಸರ್‌ ರೋಗಿಗಳ ಬೆನ್ನೆಲುಬಾಗಿ ನಿಂತಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

ಇದನ್ನೂ ಓದಿ: ಯಶಸ್ವಿನಿ ಯೋಜನೆಯಡಿ ನೋಂದಣಿಯಾದ ಸದಸ್ಯರ ಸಂಖ್ಯೆ ಎಷ್ಟು..? ಸರ್ಕಾರದ ಮಾರ್ಗಸೂಚಿಯಲ್ಲೇನಿದೆ..?

Last Updated : May 17, 2024, 3:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.