ETV Bharat / bharat

ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು : ಗೆಹ್ಲೋಟ್​, ಬಘೇಲ್​, ಕಮಲ್​ನಾಥ್​ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಖರ್ಗೆ

author img

By ETV Bharat Karnataka Team

Published : Dec 11, 2023, 8:46 PM IST

Etv Bharat
Etv Bharat

ಲೋಕಸಭೆ ಚುನಾವಣೆ ಹಿನ್ನೆಲೆ ವಿವಿಧ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​ ಹೈಕಮಾಂಡ್​ ಹಿರಿಯ ನಾಯಕರಿಗೆ ಮತ್ತೆ ಮಣೆ ಹಾಕುವ ಸಾಧ್ಯತೆ ಇದೆ. ಇದರ ಜೊತೆಗೆ ಯುವ ನಾಯಕರನ್ನು ಚುನಾವಣೆಯಲ್ಲಿ ಸಕ್ರಿಯವಾಗಿ ಬಳಸಿಕೊಳ್ಳುವ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್​ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ನವದೆಹಲಿ : ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಒಂದು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್​ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಛತ್ತೀಸ್​ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಲಭಿಸಿದ್ದು, ತೆಲಂಗಾಣದಲ್ಲಿ ಮಾತ್ರ ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದಾನೆ. ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿದೆ. ರಾಜಸ್ಥಾನದಲ್ಲಿ ನಾಳೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಹಿರಿಯ ನಾಯಕರ ಭವಿಷ್ಯ ನಿರ್ಧರಿಸಲಿರುವ ಖರ್ಗೆ : ಇನ್ನೊಂದೆಡೆ ಕಳೆದ 2018ರಲ್ಲಿ ಮೂರು ರಾಜ್ಯಗಳಲ್ಲೂ ಗೆದ್ದು ಬೀಗಿದ್ದ ಕಾಂಗ್ರೆಸ್​, ಇದೀಗ ಮೂರು ರಾಜ್ಯಗಳಲ್ಲೂ ಅಸ್ತಿತ್ವ ಕಳೆದುಕೊಂಡಿದೆ. ಈ ಸಂಬಂಧ ತಮ್ಮ ಸೋಲನ್ನು ಪರಾಮರ್ಶಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ​ ಹಿರಿಯ ನಾಯಕರಾದ ಕಮಲ್​ನಾಥ್​, ಭೂಪೇಶ್​ ಬಘೇಲ್​ ಮತ್ತು ಅಶೋಕ್​ ಗೆಹ್ಲೋಟ್​ ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್​ ಮತ್ತು ಭೂಪೇಶ್​ ಬಘೇಲ್ ಹಾಗೂ ಮಧ್ಯಪ್ರದೇಶದ ಕಾಂಗ್ರೆಸ್​ ಅಧ್ಯಕ್ಷ ಕಮಲ್​ನಾಥ್​ ಅವರು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಮಧ್ಯೆ ಪರಿಸ್ಥಿತಿ ಬದಲಾವಣೆ ಆಗಿದೆ.

ಸೋಲಿಗೆ ಹೊಣೆಗಾರಿಕೆ ನಿಗದಿಪಡಿಸದ ಕಾಂಗ್ರೆಸ್​ : ಇನ್ನು ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋತಿರುವುದಕ್ಕೆ ಈವರೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ. ಇದು ಪಕ್ಷದ ಒಳಗೆ ಒಂದು ತಪ್ಪು ಸಂದೇಶ ರವಾನಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ಹಿರಿಯ ನಾಯಕರನ್ನು ಹೊಣೆಗಾರರನ್ನಾಗಿ ಮಾಡಿ, ಯುವ ನಾಯಕತ್ವಕ್ಕೆ ಮಣೆ ಹಾಕಿದರೆ ಇದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಭಯ ಇದೆ. ಅಲ್ಲದೆ ಖರ್ಗೆ ಅವರು ಮೂರು ರಾಜ್ಯಗಳಲ್ಲೂ ಕಾಂಗ್ರೆಸ್​ ಸೋಲು ಕಂಡಿರುವ ಬಗ್ಗೆ ಹಿರಿಯ ನಾಯಕರಿಂದ ವಿವರಣೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜಸ್ಥಾನ ಉಸ್ತುವಾರಿ ಸುಖ್​ಜಿಂದರ್​ ಸಿಂಗ್ ಅವರು, ಹೈಕಮಾಂಡ್​ ಈಗಾಗಲೇ ಮೂರು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಪರಿಶೀಲಿಸಿದೆ. ನಾವು ಮೊದಲು ಶಾಸಕಾಂಗ ಪಕ್ಷದ ನಾಯಕನನ್ನು ನಿರ್ಧರಿಸಬೇಕು. ಬಳಿಕ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ ರಾಜಸ್ಥಾನದಲ್ಲಿ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್​ನ ಹಿನ್ನಡೆಗೆ ಪ್ರಮುಖ ಕಾರಣಗಳು : ಪಕ್ಷದ ಒಳಗಿನ ಆಂತರಿಕ ಜಗಳ, ಹಾಲಿ ಶಾಸಕರ ಮೇಲೆ ಅಸಮಾಧಾನ, ಮೂರ ರಾಜ್ಯಗಳಲ್ಲಿ ನಡೆಸಿದ ಚುನಾವಣಾ ಪ್ರಚಾರದ ಕೊರತೆಯು ಕಾಂಗ್ರೆಸ್​ನ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಅಲ್ಲದೇ ಹಿರಿಯ ನಾಯಕರ ಪ್ರಭಾವದಿಂದ ಸೀಟು ಗಿಟ್ಟಿಸಿಕೊಂಡ ಅಭ್ಯರ್ಥಿಗಳು ಸೋತಿದ್ದು, ಕಾಂಗ್ರೆಸ್​ನ ಹಿನ್ನಡೆ ಕಾರಣವಾಯಿತು ಎಂದು ಹೇಳಲಾಗಿದೆ.

ನಾಯಕರ ನಡುವೆ ಆಂತರಿಕ ಕಲಹ : ಅಲ್ಲದೇ ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲೆಟ್​ ನಡುವಿನ ಕಲಹ ಮತ್ತು ಛತ್ತೀಸ್​ಗಢದಲ್ಲಿ ಭೂಪೇಶ್​ ಬಘೇಲ್​ ಮತ್ತು ಟಿ.ಎಸ್​ ಸಿಂಗ್​ ಡಿಯೋ ನಡುವೆ ಕಲಹ ಮತ್ತು ಕಮಲ್​ನಾಥ್​ ಅವರ ಏಕಪಕ್ಷೀಯ ಕಾರ್ಯ ವೈಖರಿ ಕಾಂಗ್ರೆಸ್​ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದು ಏಪ್ರಿಲ್​ ಮತ್ತು ಮೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ. ಮಧ್ಯಪ್ರದೇಶದ 29 ಸ್ಥಾನಗಳಲ್ಲಿ ಕೇವಲ 1 ಸ್ಥಾನ ಹಾಗೂ ಛತ್ತೀಸ್​ಗಢದ 11 ಸ್ಥಾನಗಳಲ್ಲಿ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು.

ಲೋಕಸಭೆ ಚುನಾವಣೆ ಹಿನ್ನೆಲೆ ವಿವಿಧ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​ ಹೈಕಮಾಂಡ್​ ಹಿರಿಯ ನಾಯಕರಿಗೆ ಮತ್ತೆ ಮಣೆ ಹಾಕುವ ಸಾಧ್ಯತೆ ಇದೆ. ಇದರ ಜೊತೆಗೆ ಯುವ ನಾಯಕರನ್ನು ಚುನಾವಣೆಯಲ್ಲಿ ಸಕ್ರಿಯವಾಗಿ ಬಳಸಿಕೊಳ್ಳುವ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್​ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಮಧ್ಯಪ್ರದೇಶ ಸಿಎಂ ಆಗಿ ಮೋಹನ್​ ಯಾದವ್​ ಅಚ್ಚರಿ ಆಯ್ಕೆ: ಇಬ್ಬರಿಗೆ ಡಿಸಿಎಂ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.