ಕರ್ನಾಟಕ

karnataka

ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆ; ಕೊಪ್ಪಳದಲ್ಲಿ ಸಿಡಿಲಿಗೆ ವ್ಯಕ್ತಿ ಬಲಿ - Heavy rain with thunder

By ETV Bharat Karnataka Team

Published : Apr 18, 2024, 7:52 PM IST

ಕೊಪ್ಪಳ, ಗದಗ, ಮಂಡ್ಯ, ವಿಜಯನಗರ ಸೇರಿದಂತೆ ಗುಡುಗು, ಸಿಡಿಲು, ಭಾರಿ ಬಿರುಗಾಳಿ ಸಹಿತ ಮಳೆಯಾಗಿದೆ.

ಹಲವಡೆ ಗುಡುಗು ಸಹಿತ ಭಾರಿ ಮಳೆ
ಹಲವಡೆ ಗುಡುಗು ಸಹಿತ ಭಾರಿ ಮಳೆ

ಕೊಪ್ಪಳ/ಗದಗ/ಮಂಡ್ಯ:ರಾಜ್ಯದ ಹಲವೆಡೆ ಇಂದು ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಕೊಪ್ಪಳ, ಗದಗ, ಮಂಡ್ಯ, ದಾವಣಗೆರೆ, ವಿಜಯನಗರ ಸೇರಿದಂತೆ ಗುಡುಗು, ಸಿಡಿಲು, ಭಾರಿ ಬಿರುಗಾಳಿ ಸಹಿತ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಗುಡುಗು ಸಹಿತ ಭಾರಿ ಮಳೆಯಿಂದ ಓರ್ವ ಮೃತಪಟ್ಟ ಘಟನೆ ನಡೆದಿದೆ. ಕುಷ್ಟಗಿ ತಾಲೂಕಿನ ಕೊರಡಕೇರಿಯ ಅಮೋಘಸಿದ್ದಯ್ಯ ಗುರುವಿನ (32) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಕೊರಡಕೇರಿಯಿಂದ ಜೂಲಕಟ್ಟಿಯಲ್ಲಿ ಕಟ್ಟಿಗೆ ಕಡಿಯಲು ಕೂಲಿ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯಲ್ಲಿಯೂ ಬಿರು ಬಿಸಿಲಿನಿಂದ ಕಂಗೆಟ್ಟಿದ್ದಂತೆ ಜನತೆಗೆ ಮಳೆ ತಂಪೆರೆದಿದೆ. ಮಂಡ್ಯ, ಕೆಆರ್ ಪೇಟೆ, ನಾಗಮಂಗಲ ಸೇರಿದಂತೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಭರ್ತಿಯಾಗಿವೆ. ಮೊದಲ ಮಳೆಯ ಸಿಂಚನದಿಂದ ಜಿಲ್ಲೆಯ ಜನರಲ್ಲಿ ಮಂದಹಾಸ ಮೂಡಿದೆ. ಇಂದಿನಿಂದ ಐದು ದಿನ ರಾಜ್ಯದ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗದಗ ಜಿಲ್ಲೆಯಲ್ಲೂ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಸಂಜೆಯಿಂದ ಮೋಡ ಕವಿದ ವಾತಾವರಣವಿದ್ದು ಗದಗ ನಗರ ಮತ್ತು ರೋಣ ತಾಲೂಕಿನ ಹಲವೆಡೆ ವರುಣನ ಅಬ್ಬರ ಕಂಡುಬಂದಿದೆ. ಮಳೆಯಿಂದ ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನರು ನಿಟ್ಟಿಸಿರು ಬಿಟ್ಟಿದ್ದಾರೆ. ಬರಗಾಲದಿಂದ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅರ್ಧ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ರಸ್ತೆಗಳೆಲ್ಲ ನೀರಿನಿಂದ ಆವೃತಗೊಂಡಿವೆ.

ವಿಜಯನಗರ ಜಿಲ್ಲೆಯ ನಾನಾ ಕಡೆಯೂ ಮಳೆರಾಯ ಕೃಪೆ ತೋರಿದ್ದರೆ, ದಾವಣಗೆರೆ ಜಿಲ್ಲಾ ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಗಾಳಿ ಸಹಿತ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಗಾಳಿ ರಭಸಕ್ಕೆ ಮನೆಗಳ ಶೀಟ್​​ಗಳು ಹಾರಿ ಹೋಗಿವೆ. ಪರಿಣಾಮ ಮನೆ ತುಂಬ ನೀರು ತುಂಬಿಕೊಂಡಿರುವ ಘಟನೆ ಕೂಡ ಜರುಗಿದೆ. ನಗರದ ಹಳೇ ಐಬಿ ಬಳಿ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಭಾರಿ ದುರಂತ ತಪ್ಪಿದೆ. ಇನ್ನೂ ಕೆಲ ಕಡೆ ಮರಗಳು ಧರೆಗುರುಳಿವೆ.‌ ಹರಪನಹಳ್ಳಿ ತಾಲೂಕಿನ ಕಸಬಾ ವ್ಯಾಪ್ತಿಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಜನರಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ:ಬಿರು ಬಿಸಿಲಿಗೆ ಸುಡುತ್ತಿದ್ದ ಧರೆಗೆ ತಂಪೆರೆದ ವರುಣ: ಬೆಣ್ಣೆನಗರಿಯಲ್ಲಿ ವರ್ಷದ ಮೊದಲ ಮಳೆ - Rain Fell In Davangere

ABOUT THE AUTHOR

...view details