ಕರ್ನಾಟಕ

karnataka

'ಡ್ರಗ್ಸ್ ಮುಕ್ತ ಕರ್ನಾಟಕ' ಅಭಿಯಾನ; ಜಪ್ತಿ ಮಾಡಿದ್ದ 36 ಕೋಟಿ ಮೌಲ್ಯದ ಮಾದಕ ವಸ್ತುವಿಗೆ ಬೆಂಕಿ

By ETV Bharat Karnataka Team

Published : Feb 10, 2024, 1:38 PM IST

Updated : Feb 10, 2024, 5:05 PM IST

6 ಜಿಲ್ಲೆಗಳಿಂದ ಸಂಗ್ರಹವಾಗಿದ್ದ 36.65 ಕೋಟಿ ಮೌಲ್ಯದ 3885.5 ಕೆಜಿ ಮಾದಕ ವಸ್ತುಗಳನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್​ ಬೆಂಕಿಗೆ ಹಾಕಿದರು.

destruction-of-drugs-seized-under-drug-free-karnataka-campaign
ಮಾದಕ ವಸ್ತುಗಳನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್​ ಅವರು ಬೆಂಕಿಗೆ ಹಾಕಿದರು.

'ಡ್ರಗ್ಸ್ ಮುಕ್ತ ಕರ್ನಾಟಕ' ಅಭಿಯಾನದಡಿ ಜಪ್ತಿ ಮಾಡಿದ್ದ ಮಾದಕವಸ್ತು ನಾಶ

ನೆಲಮಂಗಲ: ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಕಳೆದೊಂದು ವರ್ಷದಲ್ಲಿ ಜಪ್ತಿ ಮಾಡಲಾಗಿದ್ದ ಮಾದಕ ವಸ್ತುಗಳನ್ನು ಶುಕ್ರವಾರ ಬೆಂಕಿಗಾಹುತಿ ಮಾಡುವ ಮೂಲಕ ನಾಶ ಮಾಡಲಾಯಿತು. ಈ ಕಾರ್ಯಾಚರಣೆಯಲ್ಲಿ 6 ಜಿಲ್ಲೆಗಳಿಂದ ಸಂಗ್ರಹಿಸಲಾಗಿದ್ದ 36.65 ಕೋಟಿ ಮೌಲ್ಯದ 3885.5 ಕೆಜಿ ಮಾದಕ ವಸ್ತುಗಳು ಇದರಲ್ಲಿದ್ದವು. ದಾಬಸ್ ಪೇಟೆಯ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್ (ರಾಮ್ಕಿ) ಕಂಪನಿಯಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಮಾದಕ ವಸ್ತುಗಳನ್ನು ಬೆಂಕಿಗೆ ಹಾಕಿದರು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಮಾದಕ ವಸ್ತುಗಳ ಮಾರಾಟ ಮತ್ತು ದುರ್ಬಳಕೆಯನ್ನು ಹತೋಟಿಯಲ್ಲಿಡಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ "NDPS" ಕಾಯ್ದೆಯಡಿ ಅತ್ಯಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಡ್ರಗ್ಸ್ ಪ್ರಕರಣಗಳಲ್ಲಿ ಒಟ್ಟು 7,403 ಜನ ಆರೋಪಿಗಳನ್ನು ಹಾಗೂ 106 ವಿದೇಶಿಯರನ್ನು ಬಂಧಿಸಿ ಒಟ್ಟು ರೂ.128.98 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಡ್ರಗ್ಸ್ ವಿರುದ್ಧ ಸಮರಕ್ಕೆ ಶಕ್ತಿ ತುಂಬಲು ರಾಜ್ಯಮಟ್ಟದಲ್ಲಿ ಮೇಲ್ವಿಚಾರಣೆಗೆ ಸಿಐಡಿಯಲ್ಲಿ ಎಡಿಜಿಪಿ ಮಟ್ಟದ ಹುದ್ದೆಯನ್ನು ಸೃಜಿಸಲಾಗಿದೆ. ರಾಜ್ಯಾದ್ಯಂತ ಇದೇ ದಿನ, ವಶಪಡಿಸಿಕೊಂಡ ಡ್ರಗ್ಸ್ ವಿನಾಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ" ಎಂದು ಹೇಳಿದರು.

"ವಶಪಡಿಸಿಕೊಂಡ ಡ್ರಗ್ಸ್ ದುರುಪಯೋಗ ಆಗಬಾರದು ಎಂಬ ಕಾರಣಕ್ಕೆ ಪೊಲೀಸ್ ಆಯುಕ್ತರು, ಡಿಸಿಪಿಗಳು ಮತ್ತು ಎಸ್.ಪಿ.ಗಳ ನೇತೃತ್ವದಲ್ಲಿ 'ಡ್ರಗ್ಸ್ ವಿಲೇವಾರಿ ಸಮಿತಿ'ಗಳನ್ನು ರಚಿಸಲಾಗಿದ್ದು, ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದೆ" ಎಂದರು.

ಶುಕ್ರವಾರ ಕೇಂದ್ರ ವಲಯದ 6 ಜಿಲ್ಲೆಗಳ, ದಕ್ಷಿಣ ವಲಯದ 5 ಜಿಲ್ಲೆಗಳ, ಬೆಂಗಳೂರು ನಗರ ಹಾಗೂ ಮೈಸೂರು ನಗರದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಟ್ಟು 3885.5 ಕೆಜಿ ಗಾಂಜಾ, 52.5 ಕೆಜಿ ಎಂಡಿಎಂಎ, ಎಲ್‌ಎಸ್‌ಡಿ, ಹಶಿಸ್, ಗಾಂಜಾ ಆಯಿಲ್, ಹೆರಾಯಿನ್ ಮುಂತಾದ ಮಾದಕ ವಸ್ತುಗಳು ಸೇರಿ ಒಟ್ಟು 36.65 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಗೃಹ ಸಚಿವ, ಡಿಜಿ ಹಾಗೂ ಐಜಿಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಾಶ ಮಾಡಲಾಯಿತು.

ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಒಟ್ಟು 5835.51 ಕೆ.ಜಿ ಗಾಂಜಾ, 7.847 ಕೆಜಿ ಎಮ್‌ಡಿಎಂಎ ಸೇರಿ ಒಟ್ಟು ಮೌಲ್ಯ ರೂ. 42.15 ಕೋಟಿ ವಸ್ತುಗಳನ್ನು ನಾಶ ಮಾಡಲಾಯಿತು. ಅಲ್ಲದೇ, 17 ಕೋಟಿ ರೂ. ಮೌಲ್ಯದ 15 ಕೆಜಿ ಓಪಿಯಮ್ ಅನ್ನು ಎನ್‌ಡಿಪಿಎಸ್ ಕಾಯ್ದೆಯನ್ವಯ ನಾಶ ಮಾಡಲು ಘಾಜೀಪುರಕ್ಕೆ ಕಳುಹಿಸಲಾಯಿತು. ಬೆಂಗಳೂರು ನಗರ, ರೈಲ್ವೆ, ಕೇಂದ್ರ ವಲಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ಕೆಜಿಎಫ್, ಹಾಸನ, ಮಂಡ್ಯ, ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ, ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದ್ದ ಡ್ರಗ್ಸ್ ಇದಾಗಿತ್ತು.

ಈ ವೇಳೆ ಬೆಂಗಳೂರು ನಗರ ಕಮಿಷನರ್ ದಯಾನಂದ್, ಕೇಂದ್ರ ವಲಯ ಐಜಿಪಿ ರವಿಕಾಂತೇ ಗೌಡ, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವಾರು ಜಿಲ್ಲೆಯ 16 ಜನ ಎಸ್ಪಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ:ಐಷಾರಾಮಿ ಜೀವನಕ್ಕೆ ಆಸೆಪಟ್ಟು ಡ್ರಗ್ಸ್​​ ಪೆಡ್ಲರ್​ಗಳಾದ ಇಬ್ಬರು ಯುವತಿಯರ ಬಂಧನ

Last Updated :Feb 10, 2024, 5:05 PM IST

ABOUT THE AUTHOR

...view details