ಕರ್ನಾಟಕ

karnataka

ಪಡಿತರ ವಿತರಣಾ ಕೇಂದ್ರ ತೆರೆಯಲು 52ನೇ ವಯಸ್ಸಲ್ಲಿ SSLC ಪರೀಕ್ಷೆ ಬರೆದ ದಾವಣಗೆರೆ ವ್ಯಕ್ತಿ - SSLC exam

By ETV Bharat Karnataka Team

Published : Mar 28, 2024, 7:03 AM IST

Updated : Mar 28, 2024, 8:01 AM IST

ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ನಿವಾಸಿ ಸಿದ್ದಲಿಂಗಪ್ಪ ಎಂಬವರು ತಮ್ಮ 52ನೇ ವಯಸ್ಸಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಗಮನ ಸೆಳೆದರು.

52 year old Siddalingappa attends the SSLC exam in Davanagere
ಎಸ್ಎಸ್​ಎಲ್​ಸಿ ಪರೀಕ್ಷೆ ಬರೆದ 52 ವರ್ಷದ ಸಿದ್ದಲಿಂಗಪ್ಪ

ದಾವಣಗೆರೆ: ರಾಜ್ಯಾದ್ಯಂತ ಸೋಮವಾರದಿಂದ (ಮಾರ್ಚ್ 25ರಂದು) 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಏಪ್ರಿಲ್ 6ರವರೆಗೆ ಪರೀಕ್ಷೆಗಳು ನಡೆಯಲಿವೆ. ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಶ್ರಮಪಡುತ್ತಿದ್ದಾರೆ. ಈ ನಡುವೆ ಇಲ್ಲೋರ್ವ 'ಸೀನಿಯರ್ ವಿದ್ಯಾರ್ಥಿ' ತಮ್ಮ 52ನೇ ವಯಸ್ಸಿನಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆಗೆ ಹಾಜರಾಗಿ ವಿಶೇಷವಾಗಿ ಗಮನ ಸೆಳೆದಿದ್ದಾರೆ‌.‌

ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಸಿದ್ದಲಿಂಗಪ್ಪ ತಮ್ಮ 52ನೇ ವಯಸ್ಸಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದರು. ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಪರೀಕ್ಷೆ ಆರಂಭವಾಗಿದೆ‌. ಇವರು ವಿಶೇಷಚೇತನರಾಗಿದ್ದು ತಮ್ಮ ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಕುಳಿತು ಪರೀಕ್ಷೆ ಬರೆದಿದ್ದು ವಿಶೇಷವಾಗಿತ್ತು.‌

ಈ ವಯಸ್ಸಲ್ಲಿ ಪರೀಕ್ಷೆ ಬರೆದಿದ್ದೇಕೆ ಗೊತ್ತಾ?: ಸಿದ್ದಲಿಂಗಪ್ಪ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಮಕ್ಕಳು ಕೆಲಕಾಲ ಅಚ್ಚರಿಗೊಂಡರು. ವಿಶೇಷ ಮೀಸಲಾತಿಯಡಿಯಲ್ಲಿ ಪಡಿತರ ವಿತರಣಾ ಕೇಂದ್ರ ತೆರೆಯಲು ಸರ್ಕಾರ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ 35 ವರ್ಷಗಳ ನಂತರ ಸಿದ್ದಲಿಂಗಪ್ಪನವರು ಪಡಿತರ ಅಂಗಡಿ ತೆರೆಯಲು ಪುನಃ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದಲಿಂಗಪ್ಪ, "ಮೊದಲ ಪರೀಕ್ಷೆ ಕನ್ನಡ ವಿಷಯ ಇತ್ತು. ಅದನ್ನು ಉತ್ತಮವಾಗಿ ಬರೆದಿದ್ದೇನೆ. ಪೂರ್ವತಯಾರಿ ವೇಳೆ ಕೆಲವು ಶಿಕ್ಷಕರಿಂದ ಮಾರ್ಗದರ್ಶನ ಪಡೆದಿದ್ದೇನೆ. ವಿದ್ಯಾರ್ಥಿಗಳಿಂದಲೂ ಬೇಕಿರುವ ನೋಟ್ಸ್ ಸಂಗ್ರಹಿಸಿದ್ದೆ. ಚೆನ್ನಾಗಿ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾಗಿದ್ದೇನೆ" ಎಂದು ತಿಳಿಸಿದರು.

ಇದೇ ವೇಳೆ, ಇಂದಿನ ಮಕ್ಕಳು ಶಿಕ್ಷಣ ಪಡೆಯುವಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಕಿವಿಮಾತು ಹೇಳಿದರು.

ಎಸ್ಎಸ್​ಎಲ್​ಸಿ ಪರೀಕ್ಷೆ ಬರೆದ 52 ವರ್ಷದ ಸಿದ್ದಲಿಂಗಪ್ಪ

ಇದನ್ನೂ ಓದಿ:ಯಾದಗಿರಿ: ಮಗನೊಂದಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ತಾಯಿ - SSLC Exam

ಶಿಕ್ಷಕ ಅಮಾನತು: ಎಸ್​ಎಸ್​​​ಎಲ್​ಸಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿದ್ದ ಶಿಕ್ಷಕರೊಬ್ಬರು ಪರೀಕ್ಷಾ ಶಿಸ್ತು, ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಚಿತ್ರಕಲಾ ಶಿಕ್ಷಕ ರಿಯಾಜ್ ಅಹಮದ್ ಅಮಾನತುಗೊಂಡವರು.

ಇದನ್ನೂ ಓದಿ:SSLC, PUC ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​; ಫೇಲಾದ್ರೆ 3 ಬಾರಿ ಅವಕಾಶ, ಪಾಸಾದವರು ಸಹ ಹೆಚ್ಚು ಅಂಕಕ್ಕಾಗಿ ಪರೀಕ್ಷೆ ಬರೆಯಹುದು

ಎಂಕೆಇಟಿಎಲ್​ಕೆ ಪರೀಕ್ಷಾ ಕೇಂದ್ರ ಕೊಠಡಿಗೆ ರಿಯಾಜ್ ಅಹಮದ್ ಅವರನ್ನು ನೇಮಿಸಲಾಗಿತ್ತು.‌ ಈ ವೇಳೆ ಕರ್ತವ್ಯ ಲೋಪ ಕಂಡುಬಂದಿದೆ. ಮೇಲ್ವಿಚಾರಕ ಶಿಕ್ಷಕನನ್ನು ಅಮಾನತುಗೊಳಿಸಿ ಜಿ.ಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಆದೇಶಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ​​ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ: ಡಿಸಿಎಂ ಡಿ ಕೆ ಶಿವಕುಮಾರ್​ ವಿಶ್ವಾಸ - DCM D K Shivakumar

ನಿನ್ನೆ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ರಿಯಾಜ್ ಅಹಮದ್ ಪರೀಕ್ಷಾ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅವರ ಕೊಠಡಿಯಲ್ಲೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಂಭಾಷಣೆಯಲ್ಲಿ ತೊಡಗಿದ್ದು ಕಂಡುಬಂದಿದೆ. ಪ್ರತೀ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದ್ದು, ನೇರ ದೃಶ್ಯಾವಳಿಗಳನ್ನು ಶಿಕ್ಷಣ ಇಲಾಖೆ ಆಯುಕ್ತರು ವೀಕ್ಷಣೆ ಮಾಡಿದ್ದರು. ಆಯುಕ್ತರು ನೀಡಿದ ನಿರ್ದೇಶನದ ಮೇರೆಗೆ ರಿಯಾಜ್ ಅಹಮದ್ ಅವರನ್ನು ಅಮಾನತು ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಸಿಇಒ ಸುರೇಶ್ ಬಿ.ಇಟ್ನಾಳ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಬದಲಾಯಿಸುವ ಪ್ರಶ್ನೆ ಇಲ್ಲ: ಬಿಎಸ್​​​​ವೈ - Lok Sabha Election 2024

Last Updated :Mar 28, 2024, 8:01 AM IST

ABOUT THE AUTHOR

...view details