ಕರ್ನಾಟಕ

karnataka

ಮುಂಬೈ ಇಂಡಿಯನ್ಸ್​ಗೆ ಆಘಾತ; ಐಪಿಎಲ್ ಆರಂಭಿಕ ಪಂದ್ಯಗಳಿಗೆ ಸೂರ್ಯಕುಮಾರ್ ಡೌಟ್

By ETV Bharat Karnataka Team

Published : Mar 19, 2024, 9:21 PM IST

IPL 2024: ಮಂಗಳವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಉತ್ತೀರ್ಣರಾಗಲು ವಿಫಲರಾಗಿದ್ದಾರೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮೂಲಗಳು ತಿಳಿಸಿವೆ.

suryakumar-yadav-fails-fitness-test-at-nca-likely-to-miss-initial-matches-of-ipl-2024
ಐಪಿಎಲ್ ಆರಂಭಿಕ ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ಅಲಭ್ಯ?

ನವದೆಹಲಿ: ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಅವರಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ (ಎನ್‌ಸಿಎ) ಅನುಮತಿ ಪ್ರಮಾಣಪತ್ರ ಲಭಿಸಿಲ್ಲ. ಇದರಿಂದ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್) 2024ರ ಆವೃತ್ತಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದು ಮುಂಬೈ ಇಂಡಿಯನ್ಸ್​ ತಂಡಕ್ಕೆ ಆಘಾತವನ್ನುಂಟು ಮಾಡಿದೆ.

ಸೂರ್ಯಕುಮಾರ್ ಯಾದವ್ ಮಂಗಳವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಗುರುವಾರ ಅವರಿಗೆ ಮತ್ತೊಮ್ಮೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಈ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ಪಾಸಾದರೆ ಮಾತ್ರವೇ ಐಪಿಎಲ್​ನಲ್ಲಿ ಆಡಬಹುದು ಎಂಬುವುದಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಸದ್ಯ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾದ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ಪರವಾಗಿ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲು ಸಾಧ್ಯವಾಗಲ್ಲ. ಮಾರ್ಚ್ 24ರಂದು ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಣಸಲಿದೆ.

33 ವರ್ಷದ ಸ್ಟಾರ್​ ಕ್ರಿಕೆಟಿಗ, ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ 2023ರ ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದರು. ಅನಂತರದಿಂದ ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ. ಜನವರಿಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಯ ಮ್ಯೂನಿಚ್‌ಗೆ ತೆರಳಿದ್ದರು. ಸೋಮವಾರ ಮುಂಬೈನಲ್ಲಿ ನಡೆದ ಮುಂಬೈ ಇಂಡಿಯನ್ಸ್‌ ಪರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಮಾತನಾಡಿ, ಸೂರ್ಯಕುಮಾರ್ ಯಾದವ್ ಅವರ ಫಿಟ್ನೆಸ್ ಕುರಿತು ಅಪ್​ಡೇಟ್​ಗಾಗಿ ಇನ್ನೂ ಕಾಯುತ್ತಿದ್ದೇವೆ ಎಂದು ತಿಳಿಸಿದ್ದರು.

ಸದ್ಯಕ್ಕೆ ಸೂರ್ಯ ಭಾರತೀಯ ಕ್ರಿಕೆಟ್ ತಂಡದ ಮಾರ್ಗದರ್ಶನದಲ್ಲಿದ್ದಾರೆ. ಹಾಗಾಗಿ ನಾವು ಅದರ ಅಪ್​ಡೇಟ್​ಗಾಗಿ ಎದುರು ನೋಡುತ್ತಿದ್ದೇವೆ. ಮೈಕ್ರೋ ಮ್ಯಾನೇಜ್ ಮಾಡಲು ನನಗೆ ಇಷ್ಟವಿಲ್ಲ. ನಾವು ವಿಶ್ವ ದರ್ಜೆಯ ವೈದ್ಯಕೀಯ ತಂಡವನ್ನು ಹೊಂದಿದ್ದೇವೆ, ಅದು ಎಲ್ಲವನ್ನೂ ನಿಯಂತ್ರಿಸುತ್ತದೆ ಎಂದು ಮಾರ್ಕ್ ಬೌಚರ್ ತಿಳಿಸಿದ್ದರು. ಇದೇ ವೇಳೆ, ನಾವು ಈ ಹಿಂದೆ ನಾವು ಕೆಲವು ಫಿಟ್‌ನೆಸ್ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದೇವೆ ಎಂದು ಹೇಳಿದ್ದರು.

ಮತ್ತೊಂದೆಡೆ, ಭಾನುವಾರ ಖುದ್ದು ಸೂರ್ಯಕುಮಾರ್ ಯಾದವ್ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. 'ಶಸ್ತ್ರಚಿಕಿತ್ಸೆ ಆಗಿದೆ. ನಿಮ್ಮ ಕಾಳಜಿ ಮತ್ತು ನನ್ನ ಆರೋಗ್ಯದ ಶುಭಾಶಯಗಳಿಗಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಿಮಗೆ ಹೇಳಲು ನನಗೆ ಸಂತೋಷವಾಗಿದೆ' ಎಂದು 'ಎಕ್ಸ್' ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲು ಉತ್ಸಾಹದಲ್ಲಿರುವ ಯುವ ಪ್ರತಿಭೆಗಳು: ಏನಂದ್ರು ಹೊಸಬರು?

ABOUT THE AUTHOR

...view details