ಕರ್ನಾಟಕ

karnataka

ಕಲಬುರಗಿ: ನಿಂತಿದ್ದ 2 ಖಾಸಗಿ ಬಸ್​ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲು

By ETV Bharat Karnataka Team

Published : Oct 15, 2023, 7:03 AM IST

Updated : Oct 15, 2023, 7:12 AM IST

ಕಲಬುರಗಿಯ ಹಾಗರಗಾ ರಸ್ತೆಯ ಮಹೆಫಿಲ್​ ಎ ಖಾಸ್ ಡಾಬಾದ ಹತ್ತಿರ 2 ಖಾಸಗಿ ಬಸ್​​ಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ.

2 ಖಾಸಗಿ ಬಸ್​ಗೆ ಬೆಂಕಿ
2 ಖಾಸಗಿ ಬಸ್​ಗೆ ಬೆಂಕಿ

ಬೆಂಕಿಗೆ ಧಗಧಗನೆ ಹೊತ್ತಿ ಉರಿಯುತ್ತಿರುವ 2 ಖಾಸಗಿ ಬಸ್​ಗಳು

ಕಲಬುರಗಿ:ಖಾಸಗಿ ಕಂಪನಿಗೆ ಸೇರಿದ ಎರಡು ಸ್ಲೀಪರ್ ಬಸ್​ಗಳಿಗೆ ಬೆಂಕಿ ತಗುಲಿ ಧಗಧಗಿಸಿ ಸುಟ್ಟು ಕರಗಲಾದ ಘಟನೆ ಕಲಬುರಗಿ ನಗರದ ಹಾಗರಗಾ ರಸ್ತೆಯ ಮಹೆಫಿಲ್​ ಎ ಖಾಸ್ ಡಾಬಾದ ಬಳಿ ಶನಿವಾರ ನಡೆದಿದೆ. ಅಕ್ಕಪಕ್ಕದಲ್ಲಿ ನಿಂತಿದ್ದ ಎರಡು ಬಸ್​ಗಳು ಬೆಂಕಿಯ ಕೆನ್ನಾಲೆಗೆಯಿಂದ ಸಂಪೂರ್ಣ ಸುಟ್ಟು ಕರಕಲಾಗಿವೆ. ಹೀಗಾಗಿ ದಟ್ಟವಾದ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ನಗರದ ಹಾಗರಗಾ ರಸ್ತೆಯ ಮಹೆಫಿಲ್ ಎ ಖಾಸ್ ಡಾಬಾದ ಹತ್ತಿರದ ಮೈದಾನದಲ್ಲಿ ಕಳೆದ ನಾಲ್ಕು ತಿಂಗಳಿಂದ ಒಂದೇ ಕಡೆಯಲ್ಲಿ ಎರಡು ಸ್ಲೀಪರ್​ ಬಸ್​ಗಳು ನಿಂತಿದ್ದವು ಎಂದು ತಿಳಿದುಬಂದಿದೆ. ಡಿಸಿಪಿ ಕನಿಕಾ ಶೆಕ್ರೀವಾಲ್, ಎಸಿಪಿ ರಾಜಣ್ಣ ಸೇರಿದಂತೆ ಪೊಲೀಸ್ ಅಧಿಕಾರಿಗಳು‌ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದ್ದಾರೆ. ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲೆಯ ಇನ್ನಿತರ ಘಟನೆಗಳು.. ರೈಲ್ವೆ ಸೇತುವೆ ಕೆಳಗೆ ಯುವಕನ ಶವ ಪತ್ತೆ:ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಮತ್ತು ಸಿರಡೋಣ ಮಧ್ಯದ ರೈಲ್ವೆ ಸೇತುವೆ ಕೆಳಗಡೆ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಮೃತನ ಬಗ್ಗೆ ಇಲ್ಲಿವರೆಗೆ ಯಾವುದೇ ಗುರುತು ಸಿಕ್ಕಿಲ್ಲ. ಅಂದಾಜು 25 ವರ್ಷ ಆಸುಪಾಸಿನ ವಯಸ್ಸಿನ ಯುವಕನಾಗಿದ್ದು, ಚೆಕ್ಸ್ ಶರ್ಟ್ ಧರಿಸಿದ್ದಾನೆ.

ಶವ ಕೊಳೆತು ಸುಮಾರು ಒಂದು ಕಿ.ಮೀ ವರೆಗೆ ದುರ್ವಾಸನೆ ಬೀರುತ್ತಿತ್ತು. ಬೀದರ್-ಕಲಬುರಗಿ ರೈಲು ಪ್ರಯಾಣದ ವೇಳೆ ಕೆಳಗಡೆ ಬಿದ್ದು ಸಾವನ್ನಪ್ಪಿರಬಹುದು ಎಂದು ವಾಡಿ ರೈಲ್ವೆ ಪಿಎಸ್‌ಐ ಎಂ.ಪಾಶಾ ಸಂಶಯ ವ್ಯಕ್ತಪಡಿದ್ದಾರೆ. ಸದ್ಯ ಈ ಕುರಿತು ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಾಣ ಅಂಗಡಿ ಮೇಲೆ ಪೊಲೀಸ್ ದಾಳಿ- 7 ಲಕ್ಷಕ್ಕೂ ಅಧಿಕ ಮೌಲ್ಯದ ಪಟಾಕಿ ಜಪ್ತಿ:ಕಲಬುರಗಿ ನಗರದ ಸರಾಫ್ ಬಜಾರದ ಪ್ರಭಾಕರ ಆರ್. ಸೊಂತ ಕಿರಾಣ ಮತ್ತು ಜನರಲ್ ಫ್ಯಾನ್ಸಿ ಡೆಕೊರೇಟಿವ್ ಅಂಗಡಿಯ ಮೇಲೆ ಬ್ರಹ್ಮಪುರ ಠಾಣೆ ಪೊಲೀಸರು ದಾಳಿ ನಡೆಸಿ ವಿವಿಧ ಬಗೆಯ 7.23 ಲಕ್ಷ ಮೌಲ್ಯದ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ.

ಪಟಾಕಿ ಮಾರಾಟ ಅಂಗಡಿಯಲ್ಲಿ ಪಟಾಕಿ ದಾಸ್ತಾನನ್ನು ಕೆಳಮಹಡಿಯಲ್ಲಿ ಇರಿಸಬೇಕು ಎಂಬ ನಿಯಮವಿದ್ದರೂ ಮೊದಲ ಮಹಡಿಯಲ್ಲಿ ಇರಿಸಲಾಗಿದ್ದು, ಪಟಾಕಿ ಜೊತೆಗೆ ಎಣ್ಣೆ, ಕರ್ಪೂರ, ಬೆಂಕಿ ಪೊಟ್ಟಣ, ಹತ್ತಿ ಇತ್ಯಾದಿ ದಹನಶೀಲ ವಸ್ತುಗಳನ್ನು ಇಡಲಾಗಿತ್ತು. ಹೀಗಾಗಿ ಅಂಗಡಿ ಮಾಲೀಕರಾದ ಪ್ರಭಾಕರ ಸೊಂತ, ಗಣೇಶ ಸೊಂತ ಅವರು ಪಟಾಕಿ ಮಾರಾಟ ಪರವಾನಿಗೆ ಹೊಂದಿದ್ದರೂ ನಿಯಮ ಪಾಲಿಸಿಲ್ಲ ಎಂಬ ಆರೋಪದ ಮೇಲೆ ಪಟಾಕಿ ದಾಸ್ತಾನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಂದಾಪುರ: ಅಕ್ರಮವಾಗಿ ಪಟಾಕಿ ತುಂಬಿದ್ದ 5 ವಾಹನ ವಶಕ್ಕೆ, ಮುಂದುವರಿದ ತನಿಖೆ

Last Updated :Oct 15, 2023, 7:12 AM IST

ABOUT THE AUTHOR

...view details