ಕರ್ನಾಟಕ

karnataka

ಲಿಂಗಾಯತ ಡ್ಯಾಂ ಒಡೆಯಲು ಹತ್ತು ಜನ ಡಿಕೆ ಶಿವಕುಮಾರ್ ಬಂದರೂ ಸಾಧ್ಯವಿಲ್ಲ: ಸಿ.ಸಿ. ಪಾಟೀಲ

By

Published : Apr 22, 2023, 10:45 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕ, ಸಚಿವ ಸಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಕಾಂಗ್ರೆಸ್​ ಪಕ್ಷದ ವಿರುದ್ಧ ಹರಿಹಾಯ್ದರು.

CC Patil
ಸಿ.ಸಿ. ಪಾಟೀಲ್

ಸಚಿವ ಸಿ.ಸಿ.ಪಾಟೀಲ್ ಮಾತನಾಡಿದರು.

ಗದಗ:''ಲಿಂಗಾಯತ ಡ್ಯಾಂ ಒಡೆಯಲು ಇಂತಹ ಹತ್ತು ಮಂದಿ ಡಿ.ಕೆ. ಶಿವಕುಮಾರ್ ಬಂದರೂ ಸಾಧ್ಯವಿಲ್ಲ'' ಎಂದು ಬಿಜೆಪಿ ನಾಯಕ, ಸಚಿವ ಸಿ ಸಿ ಪಾಟೀಲ್ ಸವಾಲು ಹಾಕಿದರು.

ಲಿಂಗಾಯತರ ಡ್ಯಾಂ ಒಡೆದಿದೆ ಎಂಬ ಡಿಕೆಶಿ ಹೇಳಿಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ''ಕಾಂಗ್ರೆಸ್ ಪಕ್ಷ ನಿಂತಲ್ಲಿಯೇ ಕುಸಿಯುತ್ತಿದೆ. ಹೀಗಾಗಿ ಡಿಕೆ ಶಿವಕುಮಾರ್ ಬಿಜೆಪಿಯ ಪಾರಂಪರಿಕ ಮತದಾರರನ್ನು ಹಾಗೂ ಬಿಜೆಪಿಗೆ ಬೆಂಬಲವಾಗಿ ನಿಂತಿರುವ ಲಿಂಗಾಯತರ ಬಗ್ಗೆ ಮಾತನಾಡಿದ್ದಾರೆ. ಲಿಂಗಾಯತ ಸಮಾಜ ಒಡೆದು ಹರಿದು ಕಾಂಗ್ರೆಸ್ ಪಕ್ಷ ಸೇರಿದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಅವರು ಇಷ್ಟು ಅನನುಭವಿ ರಾಜಕಾರಣಿ ಅಂತ ಗೊತ್ತಿರಲಿಲ್ಲ. ಲಿಂಗಾಯತ ಮತಗಳು ಬಿಜೆಪಿ ಎಂಬ ಕಮಲ ಚಿಹ್ನೆಯ ಅಡಿಯಲ್ಲಿ ಬೆಳೆದು ಸುಭದ್ರವಾಗಿವೆ'' ಎಂದರು.

''ಲಿಂಗಾಯತ ಡ್ಯಾಂ ಒಡೆಯಲು ಇಂತಹ ಹತ್ತು ಜನ ಡಿ.ಕೆ. ಶಿವಕುಮಾರ್ ಬಂದರೂ ಸಾಧ್ಯವಿಲ್ಲ. ಲಿಂಗಾಯತರ ನಿಷ್ಠೆ, ಲಿಂಗಾಯತ ಸಮಾಜದ ಬೆಂಬಲ ಯಾವತ್ತೂ ಬಿಜೆಪಿಗೆ ಇದೆ. 10ರಂದು ಡ್ಯಾಂ ಲೇವಲ್ ಗೊತ್ತಾಗುತ್ತೆ. ಪ್ರತಿದಿನ ಡ್ಯಾಂ ಲೇವೆಲ್ ಗೇಜ್ ಮಾಡುತ್ತಿರುತ್ತೇವೆ. ಅದೇ ರೀತಿ 10ರಂದು ಲಿಂಗಾಯತ ಮತಗಳು ಹರಿದು ಬರಲಿವೆ. 13ರಂದು ಗೇಜ್ ಅಳೆಯುವಾಗ ನಿಮ್ಮ ಡ್ಯಾಂ ಖಾಲಿ ಇರುತ್ತದೆ. ಬಿಜೆಪಿ ಪಕ್ಷದ ಲೇವೆಲ್ ಗೇಜ್ ಭರ್ತಿ ಆಗಿರುತ್ತದೆ. ತುಂಬಿ ತುಳುಕುತ್ತಿರುತ್ತೆ'' ಎಂದು ಅವರು ಹೇಳಿದರು.

''ಯಾರೋ ಒಬ್ಬರು ಅಂದ್ರೆ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಕ್ಕೆ ಅವರನ್ನು ಸ್ಟಾರ್ ಕ್ಯಾಂಪೇನ್ ಮಾಡುತ್ತೇವೆ ಎಂದು ಹೇಳಿ ಅವರು ನಮ್ಮ ನಾಯಕರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿ ಪಕ್ಷದ ನಾಯಕನೊಬ್ಬರು ನಿಮ್ಮ ಪಕ್ಷಕ್ಕೆ ಬಂದಿದ್ದರಿಂದ ಶಕ್ತಿ ಬರುತ್ತೆ ಎಂದು ಅಂದುಕೊಂಡರೆ ನೀವು ಎಷ್ಟೊಂದು ಅಶಕ್ತರಿದ್ದೀರಿ ಎಂದು ಅರ್ಥವಾಗುತ್ತದೆ'' ಎಂದು ಅವರು ತಿಳಿಸಿದರು.

ಕಾಂಗ್ರೆಸ್​ ವಿರುದ್ಧ ಸಿ. ಸಿ. ಪಾಟೀಲ ಕಿಡಿ: ''ಲಿಂಗಾಯತರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ನೀವು ಯಾರನ್ನು ಹೇಗೆ ನಡೆಸಿಕೊಂಡಿದ್ದೀರಿ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ವೀರೇಂದ್ರ ಪಾಟೀಲ್ ಅವರನ್ನು ನಡೆಸಿಕೊಂಡ ಕಹಿ ಘಟನೆ ನೆನಪಿದರೆ ಸಾಕು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಅಷ್ಟೇ ಅಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿಯೂ ಕುಳಿತುಕೊಳ್ಳಲ್ಲ'' ಎಂದು ಕಿಡಿಕಾರಿದರು.

ಇದನ್ನೂ ಓದಿ:ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪತ್ನಿ, ಮಗನಿಂದ ಭರ್ಜರಿ ಮತಬೇಟೆ

''ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಧೈರ್ಯದಿಂದ ಹೇಳಿ'' ಎಂದು ಸವಾಲು ಹಾಕಿದರು. ಸಿದ್ದರಾಮಯ್ಯನವರ ಅವಧಿಯಲ್ಲಿ ನಿಮ್ಮ ಪ್ರಬಲ ಸಚಿವರ ಲಿಂಗಾಯತ ಧರ್ಮ ಒಡೆಯುವ ಕೆಲಸದಿಂದ ಕೈ ಸುಟ್ಟುಕೊಂಡಿದ್ದೀರಿ. ಆಗ ಅಂದು ಮುಂಗೈವರೆಗೂ ಸುಟ್ಟಿತ್ತು. ಈಗ ಮುಂದುವರೆದರೆ ಮೊಣಕೈವರೆಗೆ ಸುಟ್ಟುಕೊಳ್ಳುತ್ತಿರಿ'' ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ರಾಮಣ್ಣ ಲಮಾಣಿ ಹೇಳಿಕೆಗೆ ಹಾಗೂ ಕಾಂಗ್ರೆಸ್ ಸೇರ್ಪಡೆಯಾದ ಬಂಡಿ ಸಹೋದರ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಹೆದರಿಕೊಳ್ಳಲು ನಾನು ಭೂತ ಅಲ್ಲ: ಸಚಿವ ಸೋಮಣ್ಣ ವ್ಯಂಗ್ಯ

ABOUT THE AUTHOR

...view details