ಕರ್ನಾಟಕ

karnataka

ನೈತಿಕ ಪೊಲೀಸ್‌ಗಿರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ದಿನೇಶ್ ಗುಂಡೂರಾವ್

By

Published : Aug 15, 2023, 8:19 PM IST

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಅವರು ಮಂಗಳೂರಿನ ನೆಹರೂ ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

Minister Dinesh Gundurao flag hoisted
ಧ್ವಜಾರೋಹಣ ನೆರವೇರಿಸಿದ ಸಚಿವ ದಿನೇಶ್​ ಗುಂಡೂರಾವ್​

ಧ್ವಜಾರೋಹಣ ನೆರವೇರಿಸಿದ ಸಚಿವ ದಿನೇಶ್​ ಗುಂಡೂರಾವ್​

ಮಂಗಳೂರು: ಅಧಿಕಾರಪೂರ್ವದಲ್ಲಿ ರಾಜ್ಯದಲ್ಲಿ ಹೆಚ್ಚಾಗಿರುವ ನೈತಿಕ ಪೊಲೀಸ್​ಗಿರಿಗೆ ಕಡಿವಾಣ ಹಾಕುತ್ತೇವೆ ಎಂದು ಘೋಷಿಸಿದಂತೆ ಇದೀಗ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ ಸೌಹಾರ್ದತೆ ಕೆಡಿಸುವ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಭಾಗವಹಿಸಿ ತನ್ನದೇ ಆದಂತಹ ಕೊಡುಗೆಗಳನ್ನು ನೀಡಿದೆ. ಬ್ರಿಟೀಷ್ ವಸಾಹತುಶಾಹಿ ಆಡಳಿತ ಸ್ಥಾಪನೆಗೆ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವತಂತ್ರ ಸಂಗ್ರಾಮದ ಅಡಿಗಲ್ಲುಗಳು ಹಾಕಲ್ಪಟ್ಟವು.

16ನೇ ಶತಮಾನದಲ್ಲಿ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರು ತುಳುನಾಡಿಗೂ ಆಗಮಿಸಿ ಅವರ ಅಧಿಪತ್ಯವನ್ನು ಹೇರಲು ಮುಂದಾದಾಗ ವಸಾಹತುಶಾಹಿ ಶಕ್ತಿ ಎದುರಾಗಿ ನಿಂತ ತುಳುನಾಡಿನ ವೀರ ಮಹಿಳೆ ಉಳ್ಳಾಲದ ಅಬ್ಬಕ್ಕ ರಾಣಿ, ಪರಕೀಯರ ಆಳ್ವಿಕೆಯನ್ನು ವಿರೋಧಿಸಿ ಮುಂದಿನ ಹೋರಾಟಗಳಿಗೆ ತಳಹದಿಯನ್ನು ಹಾಕುವ ಮೂಲಕ ತುಳುವರ ಆತ್ಮಗೌರವದ ಸಂಕೇತವಾಗಿ ಸ್ಫೂರ್ತಿ ಒದಗಿಸಿತು.

ಮೈಸೂರು ಅಧೀನತೆಗೆ ಒಳಪಟ್ಟ ದಕ್ಷಿಣ ಕನ್ನಡದಲ್ಲಿ ಬ್ರಿಟೀಷರು ಮತ್ತು ಟಿಪ್ಪು ಸುಲ್ತಾನರ ಮಧ್ಯೆ ಮಂಗಳೂರು ಹೋರಾಟದ ಕೇಂದ್ರವಾಗಿ ಮಾರ್ಪಟ್ಟಿತು. ಟಿಪ್ಪು ಸಲ್ತಾನ್ ಮಂಗಳೂರಿನಲ್ಲಿ ಹಡಗುಕಟ್ಟೆ ಮತ್ತು ಸ್ವಂತ ನೌಕಾದಳವನ್ನು ಹೊಂದಿ ಬ್ರಿಟೀಷರನ್ನು ನಿಯಂತ್ರಿಸಿ, ರಾಜಕೀಯ ಹಾಗೂ ಆರ್ಥಿಕ ಅಧಿಪತ್ಯವನ್ನು ಸಾಧಿಸುವುದಕ್ಕೆ ಪ್ರಯತ್ನಿಸಿದರು. ದಕ್ಷಿಣ ಕನ್ನಡದಲ್ಲಿ ಬ್ರಿಟೀಷರು ತಮ್ಮ ಆಡಳಿತದ ಆರಂಭದಲ್ಲೇ ಪ್ರತಿರೋಧಗಳನ್ನು ಎದುರಿಸಬೇಕಾಯಿತು. ಇದೇ ನೆಹರೂ ಮೈದಾನ ಹೇಗೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿತೋ, ಹಾಗೆಯೇ 1947 ಆಗಸ್ಟ್ 15 ರಂದು ಪ್ರಥಮ ಸ್ವಾತಂತ್ಯೋತ್ಸವದ ಆಚರಣೆಗೂ ಸಾಕ್ಷಿಯಾಯಿತು. ನಾವು ಇಂದು ನಮ್ಮ ಹೋರಾಟದ ಮೌಲ್ಯಗಳನ್ನು ಸದಾ ಗಮನದಲ್ಲಿರಿಸಿಕೊಂಡು ಮುಂದುವರಿಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ನಮ್ಮ ಜಿಲ್ಲೆಯ ಪ್ರಮುಖ ಕಸುಬು ಮೀನುಗಾರಿಕೆಯಾಗಿದ್ದು, ಒಟ್ಟು 42 ಕಿ.ಮೀ. ಸಮುದ್ರ ತೀರವಿರುವ ಜಿಲ್ಲೆಯಲ್ಲಿ 66 ಸಾವಿರಕ್ಕೂ ಹೆಚ್ಚಿನ ಮೀನುಗಾರರಿದ್ದಾರೆ. ಅವರ ಅನುಕೂಲಕ್ಕೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ಕರಾವಳಿ ಗ್ಯಾರಂಟಿಗಳಲ್ಲಿ ಈ ಬಾರಿಯ ಆಯವ್ಯಯದಲ್ಲಿ ಹಲವು ಪ್ರೋತ್ಸಾಹಕರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕ್‍ಗಳಲ್ಲಿ 3 ಲಕ್ಷ ರೂ.ಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಸೀಮೆ ಎಣ್ಣೆಯನ್ನು 1.50 ಲಕ್ಷ ಲೀಟರ್​ನಿಂದ 2 ಲಕ್ಷ ಲೀಟರ್​ವರೆಗೆ ಹೆಚ್ಚಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯಿಂದ ಮೀನುಗಾರರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಇದಕ್ಕಾಗಿ 250 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.

ಸಸಿಹಿತ್ಲು ಬೀಚ್ ಅನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವನ್ನಾಗಿಸುವುದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿಯ ಬೀಚ್ ಟೂರಿಸಂ ಅಭಿವೃದ್ಧಿಗೆ ಕಾರ್ಯಪಡೆ ರಚನೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಈ ವರ್ಷ ಪೂರ್ಣಗೊಂಡು ಎಲ್ಲಾ ಸೇವೆಗಳನ್ನು ಒಂದೇ ಸೂರಿನಲ್ಲಿ ಒದಗಿಸಲಾಗುವುದು. ಮುಖ್ಯವಾಗಿ ರಾಜ್ಯದ ಪವಿತ್ರ ತೀರ್ಥ ಸ್ಥಳ ಧರ್ಮಸ್ಥಳದಲ್ಲಿ ಪುಟ್ಟ ವಿಮಾನ ನಿಲ್ದಾಣ (ಏರ್ ಸ್ಟ್ರಿಪ್ ) ನಿರ್ಮಿಸಲು ಮುಂದಾಗಿರುವುದರಿಂದ ಟೂರಿಸಂ ಕೈಗಾರಿಕಾ ವಲಯಕ್ಕೆ ಉತ್ತೇಜನ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಎಸ್ಪಿ ರಿಷ್ಯಂತ್ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:Independence day: ರಿಷಬ್​ ಶೆಟ್ಟಿ ಸೇರಿ ಸ್ಯಾಂಡಲ್​ವುಡ್​ ಗಣ್ಯರಿಂದ ನಾಡಿನ ಜನತೆಗೆ ಶುಭಾಶಯ

ABOUT THE AUTHOR

...view details