ಕರ್ನಾಟಕ

karnataka

ಭಾವನಾತ್ಮಕ ಸಂಬಂಧಗಳಿಗಿಂತ ಪಕ್ಷದ ಹಿತ ಮುಖ್ಯ: ಹೆಚ್.ಡಿ.ಕುಮಾರಸ್ವಾಮಿ

By

Published : Feb 26, 2023, 7:11 AM IST

Updated : Feb 26, 2023, 10:01 AM IST

ಕೊಪ್ಪ ತಾಲೂಕಿನಲ್ಲಿ ನಡೆದ ಜೆಡಿಎಸ್​ ಪಂಚರತ್ನ ರಥಯಾತ್ರೆಯ ವೇಳೆ ಮಾತನಾಡಿದ ಕುಮಾರಸ್ವಾಮಿ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನೇ ಕಣಕ್ಕಿಳಿಸಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಹಾಸನ ಕ್ಷೇತ್ರದ ಬಗೆಗೂ ಮಾತನಾಡಿದರು.

HD Kumaraswamy
ಎಚ್ ಡಿ ಕುಮಾರಸ್ವಾಮಿ

ಜೆಡಿಎಸ್ ಪಂಚರತ್ನ ರಥಯಾತ್ರೆ

ಚಿಕ್ಕಮಗಳೂರು: "ಭಾವನಾತ್ಮಕ ಸಂಬಂಧಗಳಿಗಿಂತ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಹಿತ ಮುಖ್ಯ" ಎಂದು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಶನಿವಾರ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. "ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ನನ್ನ ಕಾರ್ಯಕರ್ತರನ್ನು ಗೌರವಿಸುತ್ತೇನೆ. ಬಿಜೆಪಿಯ ದುರಹಂಕಾರದ ಅಭ್ಯರ್ಥಿಯ ವಿರುದ್ಧ ನಮ್ಮ ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸುತ್ತೇನೆ" ಎಂದರು.

ಇದನ್ನೂ ಓದಿ:ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿವಾದಕ್ಕೆ ನಾಳೆ ಸಿಗಲಿದೆಯೇ ಅಂತಿಮ ರೂಪ?

"ಹಾಸನ ಟಿಕೆಟ್ ಹಂಚಿಕೆಯ ಬಗ್ಗೆ ಯಾರಿಗೂ ಆತಂಕ ಬೇಡ. ನನ್ನ ಹೋರಾಟದ ಬಗ್ಗೆ ಎಲ್ಲಿಯೂ ಲೋಪ ಬರಬಾರದು. ಇಲ್ಲಿಯವರೆಗೂ ಹಾಸನ ರಾಜಕಾರಣದೊಳಗೆ ಇಂಟರ್ಫಿಯರ್ ಆಗಿಲ್ಲ. ಆದರೂ ಕೂಡ ಇಂದು ಮೂಗು ತೂರಿಸುವ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಉಳಿಸಬೇಕಾಗಿದೆ. ದೇವೇಗೌಡರ ಹೆಸರು ಉಳಿಸಬೇಕು. ನಮಗೆ ಭಾವನಾತ್ಮಕ ಸಂಬಂಧಗಳಿಗಿಂತ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಹಿತ ಮುಖ್ಯ" ಎಂದು ತಿಳಿಸಿದರು.

ಹಾಸನದ ಟಿಕೆಟ್​ ಗೊಂದಲವೇನು?: ಹಲವು ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರ ಹಿರಿ ಸೊಸೆ ಭವಾನಿ ರೇವಣ್ಣ ಸತತ ಪ್ರಯತ್ನದಲ್ಲಿದ್ದಾರೆ. ಈ ಬಾರಿ ಹಾಸನದಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿ ಅವರು ಅಖಾಡಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ಅತ್ತಿಗೆ ಭವಾನಿ ರೇವಣ್ಣನವರಿಗೆ ಟೀಕೆಟ್‌​ ನೀಡಲು ಹಿಂದೇಟು ಹಾಕಿದ್ದಾರೆ. ಮೊದಲೇ ಟಿಕೆಟ್​ ಆಕಾಂಕ್ಷಿಯಾಗಿರುವ ಜೆಡಿಎಸ್‌ ಮಾಜಿ ಶಾಸಕ ದಿವಂಗತ ಎಚ್‌.ಎಸ್‌.ಪ್ರಕಾಶ್‌ ಅವರ ಪುತ್ರ ಸ್ವರೂಪ್‌ ಪ್ರಕಾಶ್ ಅವರಿಗೆ ಈ ಬಾರಿ ಟಿಕೆಟ್​ ಎಂದು ಮೊದಲು ಬಿಂಬಿತವಾಗಿತ್ತಲ್ಲದೇ, ಕುಮಾರಸ್ವಾಮಿ ಕೂಡ ಉತ್ಸುಕರಾಗಿದ್ದರು.

ಆದರೆ ಭವಾನಿ ರೇವಣ್ಣ ಯಾವಾಗ ನಾನೇ ಹಾಸನದಲ್ಲಿ ಅಭ್ಯರ್ಥಿ ಎಂದು ಬಹಿರಂಗವಾಗಿ ಸಾರ್ವಜನಿಕ ಸಮಾರಂಭದಲ್ಲಿ ಹೇಳಿಕೊಂಡರೋ ಅಲ್ಲಿಂದ ಜೆಡಿಎಸ್​ ಮತ್ತು ದೇವೇಗೌಡರ ಮನೆಯಲ್ಲಿ ಗೊಂದಲ ಶುರುವಾಗಿದೆ. ಮುಖ್ಯವಾಗಿ, ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡರ ವಿರುದ್ಧ ಅಭ್ಯರ್ಥಿಯಾಗಿ ನಿಲ್ಲುವ ಕನಸು ಕಟ್ಟಿಕೊಂಡಿದ್ದ ಸ್ವರೂಪ್​ಗೆ ಎಲ್ಲಿ ಟಿಕೆಟ್​ ಕೈತಪ್ಪಿ ಹೋಗುತ್ತೋ ಎಂಬ ಭಯವೂ ಶುರುವಾಗಿದೆ. ಟಿಕೆಟ್​ ಘೋಷಣೆಗಿಂತ ಮೊದಲೇ ಭವಾನಿ ಹಾಗು ಪತಿ ಹೆಚ್.ಡಿ.ರೇವಣ್ಣ ಹಾಸನದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇಂದು ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲು ಜೆಡಿಎಸ್​ ಮುಖಂಡರ ಸಭೆ ಕರೆಯಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ರದ್ದಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಹಾಸನ ಜಿಲ್ಲೆ ಮುಖಂಡರ ಸಭೆ ರದ್ದು

Last Updated :Feb 26, 2023, 10:01 AM IST

ABOUT THE AUTHOR

...view details