ಕರ್ನಾಟಕ

karnataka

ಡ್ರಗ್ಸ್ ದಂಧೆಗೆ ಕಡಿವಾಣ... ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು : ಗೃಹ ಸಚಿವ ಡಾ ಜಿ ಪರಮೇಶ್ವರ್

By ETV Bharat Karnataka Team

Published : Dec 12, 2023, 3:13 PM IST

ಹುಕ್ಕಾಬಾರ್​ ನಿಯಂತ್ರಣಕ್ಕೆ ಕಾನೂನು ರೂಪಿಸಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ವಿಧಾನಸಭೆಯಲ್ಲಿ​ ಹೇಳಿದರು.

law-to-regulate-hookah-bar-says-home-minister-dr-g-parameshwar
ಗೃಹ ಸಚಿವ ಡಾ ಜಿ ಪರಮೇಶ್ವರ್

ಡ್ರಗ್ಸ್ ದಂಧೆಗೆ ಕಡಿವಾಣ, ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು : ಗೃಹ ಸಚಿವ ಡಾ ಜಿ ಪರಮೇಶ್ವರ್

ಬೆಳಗಾವಿ/ ಬೆಂಗಳೂರು: ಸರ್ಕಾರ ಡ್ರಗ್ಸ್ ಹಾಗೂ ಮಾದಕ ಪದಾರ್ಥಗಳ ಮಾರಾಟವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆರೋಗ್ಯ, ಆಹಾರ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರವೇ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ರೂಪಿಸುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.

ವಿಧಾನಸಭೆಯಲ್ಲಿ ಇಂದು ಶಾಸಕ ಸಿ ಕೆ ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುಕ್ಕಾ ಬಾರ್ ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ವ್ಯಾಪಾರ ಪರವಾನಗಿ ನೀಡುವುದಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ದಿಂದ ಪರವಾನಗಿ ಪಡೆದು ವ್ಯಾಪಾರಿಗಳು ಹುಕ್ಕಾ ಬಾರ್​ಗಳನ್ನು ನಡೆಸುತ್ತಿದ್ದಾರೆ. ನ್ಯಾಯಾಲಯವು ಕೂಡ ಹುಕ್ಕಾ ಸೇದುವವರಿಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕು ಎಂದು ಹೇಳಿದೆ. ಆದರೆ ನಿಯಂತ್ರಣದ ಬಗ್ಗೆ ಏನೂ ಹೇಳಿಲ್ಲ. ಆದರೂ ಯುವ ಜನಾಂಗದ ಸ್ವಾಸ್ತ್ಯದ ದೃಷ್ಠಿಯಿಂದ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ರೂಪಿಸಲಾಗುವುದು ಎಂದು ಸಚಿವ ಜಿ ಪರಮೇಶ್ವರ್​​ ತಿಳಿಸಿದರು.

ಅಕ್ಟೋಬರ್ 19ರಂದು ಬೆಂಗಳೂರಿನ ಕೊರಮಂಗಲದ ಹುಕ್ಕಾ ಬಾರ್​ನಲ್ಲಿ ಜರುಗಿದ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಕಟ್ಟಡದಿಂದ ಜಿಗಿದ ವ್ಯಕ್ತಿ ಅಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾನೆ. ಮೂರನೇ ಮಹಡಿಯಲ್ಲಿ ಇದ್ದ ಹುಕ್ಕಾ ಬಾರ್​ನಲ್ಲಿ 14 ಸಿಲಿಂಡರ್​​ಗಳನ್ನು ಸಂಗ್ರಹಿಸಲಾಗಿತ್ತು ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ಸುರೇಶ್ ಕುಮಾರ್ ಅವರು, ಹುಕ್ಕಾ ಸೇದುವುದು ಸಿಗರೇಟ್ ಸೇದುವುದಕ್ಕಿಂತಲ್ಲೂ 200 ಪಟ್ಟು ಹೆಚ್ಚು ಹಾನಿ ಮಾಡುತ್ತದೆ ಎಂಬ ವಿಚಾರ ಹಲವು ಅಧ್ಯಯನಗಳಿಂದ ಬಯಲಾಗಿದೆ. ಪಂಜಾಬ್, ರಾಜಸ್ಥಾನ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಹುಕ್ಕಾ ಬಾರ್​ಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಆರೋಗ್ಯ ಸಚಿವ ದಿನೇಶ್‍ ಗುಂಡೂರಾವ್ ಅವರು ಸಹ ಹುಕ್ಕಾ ಬಾರ್ ನಿಷೇಧಕ್ಕೆ ಒಲವು ವ್ಯಕ್ತಪಡಿಸಿದ್ದರು. ಸರ್ಕಾರ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದರು. ಬಳಿಕ ಶಾಸಕ ಸಿ ಕೆ ರಾಮಮೂರ್ತಿ ಮಾತನಾಡಿ, ಯುವ ಜನಾಂಗದ ಹಾದಿ ತಪ್ಪಿಸುತ್ತಿರುವ ಹುಕ್ಕಾ ಬಾರ್​ಗಳನ್ನು ಸರ್ಕಾರ ನಿಷೇಧಿಸಬೇಕೆಂದು ಆಗ್ರಹಿಸಿದರು.

ಹೊಸ ಅಗ್ನಿಶಾಮಕ ಠಾಣೆಗೆ ಪ್ರಸ್ತಾವನೆ: ರಾಜ್ಯದ ಹಲವು ತಾಲೂಕು ಕೇಂದ್ರಗಳಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲು ಶಾಸಕರ ಕಡೆಯಿಂದ ಮನವಿಗಳು ಬಂದಿವೆ. ಈ ಮನವಿಗಳನ್ನು ಪರಿಗಣಿಸಿ ಮುಂದಿನ ಆಯವ್ಯಯದಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಚಿವ ಪರಮೇಶ್ವರ್​ ಹೇಳಿದರು.

ಇದನ್ನೂ ಓದಿ :ಈ ಅಧಿವೇಶನ ಪೂರ್ತಿ ಜನರ ಮೇಲೆ ತೆರಿಗೆ ಹಾಕುವ ಅಧಿವೇಶನವಾಗಿದೆ: ಆರ್.​ ಅಶೋಕ್

ABOUT THE AUTHOR

...view details