ಕರ್ನಾಟಕ

karnataka

ಬೆಳಗಾವಿ: ಆಸ್ತಿಗಾಗಿ ಉಪ್ಪಿಟ್ಟಿನಲ್ಲಿ ಗಂಡನಿಗೆ ವಿಷ ಹಾಕಿದ ಪತ್ನಿ; ಪತಿ ಐಸಿಯುಗೆ, ನಾಯಿ-ಬೆಕ್ಕು ಸಾವು

By

Published : Aug 18, 2023, 9:46 PM IST

Updated : Aug 18, 2023, 10:40 PM IST

ಆಸ್ತಿ ಆಸೆಗಾಗಿ ಪತ್ನಿ ತನ್ನ ಗಂಡನಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಳಗಾವಿಯ ಗೋರಾಬಾಳದಲ್ಲಿ ನಡೆದಿದೆ.

Belagavi Murder Attempt Case
Belagavi Murder Attempt Case

ಬೆಳಗಾವಿ: ಎರಡು ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬಳು, ತನ್ನ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಲೆಗೆ ಯತ್ನಿಸಿದ ಪ್ರಕರಣ ಪತ್ತೆ ಹಚ್ಚುವಲ್ಲಿ ಸವದತ್ತಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಷಪೂರಿತ ಉಪ್ಪಿಟ್ಟು ಸೇವಿಸಿ ಅಸ್ವಸ್ಥರಾಗಿದ್ದ ಸವದತ್ತಿ ತಾಲೂಕಿನ ಗೋರಾಬಾಳ ಗ್ರಾಮದ ನಿಂಗಪ್ಪ ಫಕೀರಪ್ಪ ಹಮಾನಿ (35) ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಸಾವಕ್ಕ (32) ಹಾಗೂ ಇವರ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂಧೋಗಿ (30) ಕೊಲೆಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ.

ಆಗಸ್ಟ್‌ 11ರಂದು ಬೆಳಗ್ಗೆ ಸಾವಕ್ಕ ಪತಿ ನಿಂಗಪ್ಪಗೆ ಉಪಹಾರಕ್ಕಾಗಿ ಉಪ್ಪಿಟ್ಟು ಮಾಡಿದ್ದರು. ಅದನ್ನು ತಿಂದ ಕೆಲವೇ ಗಂಟೆಗಳಲ್ಲಿ ನಿಂಗಪ್ಪ ತೀವ್ರ ಅಸ್ವಸ್ಥರಾಗಿದ್ದರು. ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ವೈದ್ಯರ ಸಲಹೆ ಮೇರೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದರು. ಸದ್ಯ ತೀವ್ರ ನಿಗಾ ಘಟಕದಲ್ಲಿ ನಿಂಗಪ್ಪಗೆ ಚಿಕಿತ್ಸೆ ಮುಂದುವರಿದಿದೆ.

ಇದೇ ಉಪ್ಪಿಟ್ಟು ತಿಂದಿದ್ದ ಒಂದು ನಾಯಿ, ಒಂದು ಬೆಕ್ಕು ಸಾವನ್ನಪ್ಪಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮಾಹಿತಿ ನೀಡಿದರು. ನಿಂಗಪ್ಪ ಅವರ ತಂದೆ ಫಕೀರಪ್ಪ ನೀಡಿದ ದೂರಿನ ಮೇರೆಗೆ ಸವದತ್ತಿ ಪೊಲೀಸರು ತನಿಖೆ ನಡೆಸಿದ್ದಾರೆ.

ಆಕಸ್ಮಿಕವಾಗಿ ನೀರಿಗೆ ಬಿದ್ದ ವ್ಯಕ್ತಿ: ಸವದತ್ತಿಯ ಜೋಗುಳಬಾವಿ ಸತ್ಯಮ್ಮ ದೇವಸ್ಥಾನದ ಬಳಿಯ ಜೋಗುಳಬಾವಿಯಲ್ಲಿ ಇಂದು ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನೀರಿಗೆ ಬಿದ್ದಿರುವ ಘಟನೆ ನಡೆಯಿತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ವಿನಾಯಕಸಿಂಗ್ ರಜಪೂತ (35) ನೀರು ಪಾಲಾದ ವ್ಯಕ್ತಿ.

ನೀರಿಗೆ ಬಿದ್ದ ವ್ಯಕ್ತಿಗಾಗಿ ಶೋಧಕಾರ್ಯ‌

ವಿನಾಯಕ ಸಿಂಗ್‌ ಶ್ರಾವಣ ಮಾಸದ ಪೂಜೆಗಾಗಿ ಕುಟುಂಬಸಮೇತರಾಗಿ ಯಲ್ಲಮ್ಮನಗುಡ್ಡ ಮತ್ತು ಸತ್ಯಮ್ಮ ದೇವಸ್ಥಾನಗಳಿಗೆ ಬಂದಿದ್ದರು. ದೇವಾಲಯಗಳಿಗೆ ತೆರಳುವ ಮೊದಲು ಜೋಗುಳ ಬಾವಿಯಲ್ಲಿ ಸ್ನಾನ ಮಾಡುವುದು ವಾಡಿಕೆ. ಹೀಗೆ ಸ್ನಾನಕ್ಕಿಳಿದ ವಿನಾಯಕ ಸಿಂಗ್‌, ಬಾವಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಈಜಿಕೊಂಡು ಹೋದರು. ಮರಳಿ ಬರುವಾಗ ಈಜಲಾರದೇ ಮಧ್ಯದಲ್ಲೇ ಮುಳುಗಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಈಜುಗಾರರ ನೆರವಿನೊಂದಿಗೆ ಶೋಧಕಾರ್ಯ‌ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಚಿಕ್ಕೋಡಿ: ಹೆತ್ತ ಮಗನ ಕೊಲೆಗೈದ ಮಹಿಳೆಗೆ ಜೀವಾವಧಿ ಶಿಕ್ಷೆ

ಮಹಿಳೆಗೆ ಜೀವಾವಧಿ ಶಿಕ್ಷೆ: ತನ್ನ ಅನೈತಿಕ ಸಂಬಂಧ ಗೊತ್ತಾಯಿತು ಎಂದು ಮಗನನ್ನು ಬಾವಿಗೆ ತಳ್ಳಿ ಕೊಲೆಗೈದ ಮಹಿಳೆಯೊಬ್ಬಳಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 7 ಸಾವಿರ ರೂಪಾಯಿ ದಂಡ ವಿಧಿಸಿ ಇತ್ತೀಚೆಗೆ ಆದೇಶಿಸಿತ್ತು. ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಕರಿಗಾರ (31) ಶಿಕ್ಷೆಗೊಳಗಾದ ಮಹಿಳೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ನಡೆಸಿದ್ದರು.

Last Updated :Aug 18, 2023, 10:40 PM IST

ABOUT THE AUTHOR

...view details