ಕರ್ನಾಟಕ

karnataka

ಸಮಾಜಕ್ಕೆ ಜ್ಞಾನದ ಬೆಳಕು ನೀಡಿದ ಮಹಾನ್ ಸಂತ ಶಿವಕುಮಾರ ಸ್ವಾಮೀಜಿ: ಶಿವರುದ್ರ ಸ್ವಾಮೀಜಿ

By

Published : Apr 1, 2023, 3:43 PM IST

ಸಮಾಜದಲ್ಲಿ ಶಾಂತಿ, ಸೌರ್ಹಾದೆತೆಯಿಂದ ಬದುಕಲು ಮತ್ತು ಜೀವನದಲ್ಲಿ ಸಾಧನೆ ಮಾಡಲು ಶಿವಕುಮಾರ ಸ್ವಾಮೀಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.

116th Birth Anniversary of Shivakumar Swamiji
ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 116ನೇ ಜನ್ಮದಿನಾಚರಣೆ

ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಸಮಾಜದಲ್ಲಿ ಜ್ಞಾನದ ದೀಪಾವಾಗಿ ಬೆಳೆದು ಸಾವಿರಾರು ಜನರ ಬಾಳಿಗೆ ಬೆಳಕಾಗಿ ನಿಂತಿದ್ದರು ಎಂದು ಬೇಲಿ ಮಠದ ಶಿವರುದ್ರ ಸ್ವಾಮೀಜಿ ಹೇಳಿದರು. ಪದ್ಮಭೂಷಣ, ಕರ್ನಾಟಕ ರತ್ನ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 116ನೇ ಜನ್ಮದಿನಾಚರಣೆ ಅಂಗವಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ಜ್ಞಾನ ಸೌಧದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಲ್ಲದೆ, ಮನುಷ್ಯ ಉತ್ತಮ ಪ್ರಜೆಯಾಗಿ ಬದುಕಲು ಗುರುಗಳ ಮಾರ್ಗದರ್ಶನ ಅತ್ಯಂತ ಮುಖ್ಯವಾಗಿರಲಿದೆ. ಪರಮಾತ್ಮ ಎಲ್ಲಿ ವಾಸ ಮಾಡುತ್ತಾನೆ ಎಂದರೆ ಎಲ್ಲರ ಭಕ್ತರ ಹೃದಯದಲ್ಲಿ. ಕಾಯಕ ಮತ್ತು ದಾಸೋಹದ ಮಹತ್ವವನ್ನು ವಿಶ್ವಕ್ಕೆ ಶ್ರೀಗಳು ಸಾರಿದ್ದರು. ಮನುಷ್ಯ ತಾನು ಪಡುವ ಶ್ರಮದಿಂದ, ಬೆವರ ಹನಿಯಿಂದ ದುಡಿದ ಹಣದಲ್ಲಿ ಸ್ವಾಭಿಮಾನಿಯಾಗಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಪ್ರಸ್ತುತದ ಸಮಾಜ ಅತಿ ವೇಗವಾಗಿ ಮುನ್ನುಗ್ಗುತ್ತಿದೆ. ಮನುಷ್ಯ ತನ್ನ ಜೀವನ ಸಾಗಿಸಲು ಹಲವಾರು ಶಕ್ತಿಗಳ ಪ್ರೇರಣೆ ಅಗತ್ಯವಿರಲಿದೆ. ಶಿವಕುಮಾರ ಸ್ವಾಮೀಜಿ ಸಾವಿರಾರು ಬಡ ಜನತೆಗೆ ಅನ್ನ, ಅಕ್ಷರ ಮತ್ತು ಆಶ್ರಯವನ್ನು ನೀಡಿ ಸಮಾಜದಲ್ಲಿ ಶ್ರಮಿಸಿದ ಸಂತರಾಗಿದ್ದರು. ಸಮಾಜದಲ್ಲಿ ಶಾಂತಿ, ಸೌರ್ಹಾದೆತೆಯಿಂದ ಬದುಕಲು ಮತ್ತು ಜೀವನದಲ್ಲಿ ಸಾಧನೆ ಮಾಡಲು ಶಿವಕುಮಾರ ಸ್ವಾಮೀಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಡಾ.ಸಿ.ಎನ್.ಮಂಜುನಾಥ್, ಮನುಷ್ಯ ಮಾಡುವ ಕೆಲಸ ಒಂದು ಪರಮಾತ್ಮ ಮತ್ತು ಇನ್ನೂಂದು ನಮ್ಮಲ್ಲಿರವ ಆತ್ಮಕ್ಕೆ ಮಾತ್ರ ಗೊತ್ತಾಗಲಿದೆ. ನಮ್ಮ ಆತ್ಮತೃಪ್ತಿಯಿಂದ ಕೆಲಸ ಮಾಡಬೇಕು. ಸಂತರು, ಗುರುಗಳ ಆಶೀರ್ವಾದ ಇರಬೇಕು ಆಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.

ಅಲ್ಲದೆ, ಮಕ್ಕಳನ್ನು ಅಂಕಗಳ ಮೇಲೆ ಬೆಳಸಬಾರದು, ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳ ಮೇಲೆ ತಂದೆ, ತಾಯಿಯಂದರ ಒತ್ತಡ ಕಡಿಮೆ ಮಾಡಬೇಕು. ಅವಿಭಕ್ತ ಕುಟುಂಬಗಳ ವಿಭಜನೆ ಹಲವಾರು ಸಮಸ್ಯೆ ಮತ್ತು ರೋಗಗಳಿಗೆ ರಹದಾರಿಯಾಗಿದೆ. ಮನುಷ್ಯ ಶಾಂತಿಯುತ ಜೀವನ ಸಾಗಿಸಬೇಕು, ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಶಿಕ್ಷಣದ ಮೂಲಕ ಸಂಸ್ಕಾರ, ಮಾನವೀಯತೆ ಮತ್ತು ಜ್ಞಾನದ ಮೂಲಕ ಸಮಾಜದ ಮೇಲೆ ಬೆಳಕು ಚಲ್ಲುವ ಕಾರ್ಯವನ್ನು ಮಾಡಿರುವ ಡಾ.ಶಿವಕುಮಾರ ಸ್ವಾಮೀಜಿಯವರು ಸಾಧನೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ವಿವರಿಸಿದರು.

ಇನ್ನು ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜಾ ಸೋಮಣ್ಣರವರು, ಕನ್ನಡಪರ ಹೋರಾಟಗಾರ ಪಾಲನೇತ್ರ, ಮಾಜಿ ಮಹಾನಗರ ಪಾಲಿಕೆ ಸದಸ್ಯ ದಾಸೇಗೌಡ ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಡಾ.ಎಸ್.ರಾಜು, ಮೋಹನ್ ಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಸಿದ್ದಗಂಗಾ ಶಿವಕುಮಾರ ಶ್ರೀಗಳ ಜನ್ಮದಿನ.. 116 ಮಕ್ಕಳಿಗೆ ಸ್ವಾಮೀಜಿಯವರ ಹೆಸರು ನಾಮಕರಣ

ABOUT THE AUTHOR

...view details