ನಾಗ್ಪುರ (ಮಹಾರಾಷ್ಟ್ರ):ಇಲ್ಲಿನವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ನರ್ಗಳು ಸಾಧಿಸಿದ ಮೇಲುಗೈಯಿಂದ ಇನ್ನಿಂಗ್ಸ್ ಹಾಗೂ 132 ರನ್ಗಳ ಭರ್ಜರಿ ಗೆಲುವು ದಾಖಲಾಗಿದೆ. ಈ ಟೆಸ್ಟ್ನಲ್ಲಿ 7 ವಿಕೆಟ್ ಮತ್ತು 70 ರನ್ ದಾಖಲಿಸಿದ ರವೀಂದ್ರ ಜಡೇಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಇದರ ಬೆನ್ನಲ್ಲೆ ಜಡೇಜಾಗೆ ಪಂದ್ಯ ಶುಲ್ಕದ 25 ಶೇಕಡಾ ದಂಡವನ್ನು ಐಸಿಸಿ ವಿಧಿಸಿದೆ.
ರವೀಂದ್ರ ಜಡೇಜಾ ಅವರು ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆ ದಂಡ ವಿಧಿಸಲಾಗಿದೆ. ಆಟದ ಮನೋಭಾವಕ್ಕೆ ವಿರುದ್ಧವಾದ ನಡವಳಿಕೆಯನ್ನು ಪ್ರದರ್ಶಿಸಿದ್ದಕ್ಕಾಗಿ ಪಂದ್ಯದ ಸಂಭಾವನೆಯ ಮೊತ್ತದ ಶೇ 25ರಷ್ಟು ದಂಡವನ್ನು ವಿಧಿಸಿದೆ.
ಫೆಬ್ರವರಿ 9 ಗುರುವಾರದಂದು ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ನ 46 ನೇ ಓವರ್ನಲ್ಲಿ ಜಡೇಜಾ ತನ್ನ ತೋರು ಬೆರಳಿಗೆ ಸಿರಾಜ್ ಏನ್ನನ್ನೋ ಹಚ್ಚುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿತ್ತು. ವಿಡಿಯೋದಲ್ಲಿ ರವೀಂದ್ರ ಜಡೇಜಾ ಅವರು ಮೊಹಮ್ಮದ್ ಸಿರಾಜ್ ಅವರ ಅಂಗೈಯಿಂದ ವಸ್ತುವನ್ನು ತೆಗೆದುಕೊಂಡು ಅದನ್ನು ಅವರ ಎಡಗೈಯ ತೋರು ಬೆರಳಿಗೆ ಉಜ್ಜುವುದು ಕಂಡುಬಂದಿದೆ.
ಸ್ಪಿನ್ನರ್ ಜಡೇಜಾ ತನ್ನ ಬೌಲಿಂಗ್ ಕೈಯ ತೋರು ಬೆರಳಿನ ಮೇಲೆ ಊತಕ್ಕೆ ಕ್ರೀಮ್ ಹಚ್ಚುತ್ತಿದ್ದರು ಎಂದು ಭಾರತ ತಂಡದ ಮ್ಯಾನೇಜ್ಮೆಂಟ್ ವಿವರಿಸಿದೆ. ಮೈದಾನದ ಅಂಪೈರ್ಗಳ ಅನುಮತಿ ಕೇಳದೆಯೇ ಇದನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಜಡೇಜಾ ಅವರು ಆನ್ ಫೀಲ್ಡ್ನಲ್ಲಿ ಊತಕ್ಕೆ ಕ್ರೀಮ್ ಹಚ್ಚಿಕೊಂಡಿರುವುದನ್ನು ಐಸಿಸಿ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫರಿ ಪೈಕ್ರಾಫ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ತನಿಖೆಗೆ ಅಗತ್ಯ ಇಲ್ಲ ಎಂದು ಐಸಿಸಿ ತಿಳಿಸಿದೆ.
ಬಾಲ್ ಟ್ರಾಂಪರಿಂಗ್ ( ಬೆಂಡನ್ನು ವಿರೂಪ ಗೊಳಿಸುವುದು), ಬಾಲ್ಗೆ ಕ್ರೀಮ್ ಹಚ್ಚುವುದು ಮಾಡಿಲ್ಲ. ಆನ್ ಫೀಲ್ಡ್ನ ಅಂಪೈರ್ನ ಅನುಮತಿ ಪಡೆಯದೇ ಊತದ ಮುಲಾಮ್ ಹಚ್ಚಿದ್ದಾರೆ. ಪಂದ್ಯದ ಗತಿ ಬದಲಾಯಿಸುವ ದುಉದ್ದೇಶದಿಂದ ಈ ನಡವಳಿಕೆ ಆಗಿರಲಿಲ್ಲ. ಹೀಗಾಗಿ 25 ಶೇಕಡಾ ದಂಡವನ್ನು ಮಾತ್ರ ಐಸಿಸಿ ವಿಧಿಸಿದೆ. 41.3 ನಿಯಮ ಉಲ್ಲಂಘನೆ ಆಗಿಲ್ಲ ಎಂದು ಸಹ ತಿಳಿಸಿದೆ. ಆನ್ ಫೀಲ್ಡ್ ಅಂಪೈರ್ಗಳಾದ ನಿತಿನ್ ಮೆನನ್ ಮತ್ತು ರಿಚರ್ಡ್ ಇಲ್ಲಿಂಗ್ ವರ್ತ್, ಥರ್ಡ್ ಅಂಪೈರ್ ಮೈಕಲ್ ಗಾಫ್ ಮತ್ತು ನಾಲ್ಕನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ಅವರು ಈ ಬಗ್ಗೆ ಆರೋಪ ಮಾಡಿದ್ದರು.
ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಲ ಮಿಂಚು: ಮೂರು ಇನ್ನಿಂಗ್ಸ್ನ 30 ವಿಕೆಟ್ನಲ್ಲಿ 24 ಸ್ಪಿನ್ನರ್ಗಳ ಪಾಲಾಗಿದೆ. ಆರು ವಿಕೆಟ್ ಮಾತ್ರ ವೇಗದ ಬೌಲರ್ಗಳು ಪಡೆದು ಕೊಂಡಿದ್ದಾರೆ. ಜಡೇಜಾ ಎರಡು ಇನ್ನಿಂಗ್ಸ್ನಿಂದ 7 ವಿಕೆಟ್ ಗಳಿಸಿದರೆ, ಅಶ್ವಿನ್ 8 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಪರ ಚೊಚ್ಚಲ ಪಂದ್ಯ ಆಡಿದ ಸ್ಪಿನ್ನರ್ ಮರ್ಫಿ ಒಂದೇ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಸ್ಪಿನ್ ಬಲೆಗೆ ಬಿದ್ದ ಕಾಂಗರೂ ಪಡೆ: ಭಾರತಕ್ಕೆ ಇನಿಂಗ್ಸ್, 132 ರನ್ ಗೆಲುವು