ಕರ್ನಾಟಕ

karnataka

ನಿರ್ದೇಶಕನ ಕ್ಯಾಪ್​ ತೊಟ್ಟ ನಟ ಅರುಣ್ ಕುಮಾರ್​; 'ನೆಲ್ಸನ್​' ಆದ್ರು ವಿನೋದ್ ಪ್ರಭಾಕರ್​​

By ETV Bharat Karnataka Team

Published : Oct 27, 2023, 5:31 PM IST

ಅರುಣ್‌ ಕುಮಾರ್ ಚೊಚ್ಚಲ ನಿರ್ದೇಶನದ, ಮರಿ ಟೈಗರ್​ ವಿನೋದ್​ ಪ್ರಭಾಕರ್ ನಟನೆಯ 'ನೆಲ್ಸನ್' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

mari tiger vinod prabhakar starrer nelson movie
ನೆಲ್ಸನ್

'ಗೊಂಬೆಗಳ ಲವ್‌' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಅರುಣ್‌ ಕುಮಾರ್ ಇದೀಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ಹೆಜ್ಜೆಗೆ 'ನೆಲ್ಸನ್' ಎಂಬ ಶೀರ್ಷಿಕೆ ಇಡಲಾಗಿದ್ದು, 'ರಕ್ತದಲ್ಲಿ ನೆಂದ ದೇವರಕಾಡು' ಎಂಬ ಅಡಿ ಬರಹವಿದೆ. ಇತ್ತೀಚೆಗೆ ಟೀಸರ್​ ಅನ್ನು ಎಂಎಂ ಲೆಗಸಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಟೀಸರ್​ನಲ್ಲಿ ಮರಿ ಟೈಗರ್​ ವಿನೋದ್​ ಪ್ರಭಾಕರ್​ ಆ್ಯಂಗ್ರಿ ಯಂಗ್‌ಮ್ಯಾನ್​ ಅವತಾರದಲ್ಲಿ ಅಬ್ಬರಿಸಿದ್ದಾರೆ.

ಟೀಸರ್​ ಬಿಡುಗಡೆಗೊಳಿಸಿ ಮಾತನಾಡಿದ ನಟ ಉಪೇಂದ್ರ, "ಟೈಗರ್ ಹವಾ ಆಗಲೂ ಇತ್ತು. ಈಗಲೂ ಇರುತ್ತೇ, ಮುಂದೆಯೂ ಇರುತ್ತದೆ. ನಿಮ್ಮ ತಂದೆಯ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಹೇಳೋದೇನಿಲ್ಲ. ಎಲ್ಲವೂ ಎಕ್ಸ್ಟ್ರಾಡಿನರಿಯಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿ" ಎಂದು ಶುಭ ಹಾರೈಸಿದರು.

ನಟ ವಿನೋದ್ ಪ್ರಭಾಕರ್ ಮಾತನಾಡಿ, "ಉಪೇಂದ್ರ ಅಣ್ಣ ಟೀಸರ್ ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಸಿನಿಮಾ ಮಾಡಲು ಧೈರ್ಯ ಬೇಕು. ಶ್ರೀರಾಮ್ ಸರ್ ನಿಮಗೆ ಧನ್ಯವಾದ. ನಿಮ್ಮ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅರುಣ್ ಕುಮಾರ್ ಅವರು ಬಹಳಷ್ಟು ಫ್ಯಾಷನ್ ಇರುವ ವ್ಯಕ್ತಿ. ಭರತ್ ಸರ್ ವಂಡರ್​ಫುಲ್ ಮ್ಯೂಸಿಕ್. ಸಿನಿಮಾ ಬಗ್ಗೆ ಮುಂದೆ ಮಾತಾಡ್ತೀನಿ. ತೆರೆ ಹಿಂದೆ ಬಹಳಷ್ಟು ಜನ ಕೆಲಸ‌ ಮಾಡಿದ್ದಾರೆ" ಎಂದರು.

"ಲಾಕ್​ಡೌನ್ ಆದ್ಮೇಲೆ ಹಸಿವು, ಅಸಹಾಯಕತೆ ಸಮಯದಲ್ಲಿ 'ನೆಲ್ಸನ್' ಹುಟ್ಟಿಕೊಂಡಿದ್ದು. ಬರೆಯುತ್ತಾ, ಬರೆಯುತ್ತಾ ತುಂಬಾ ಚೆನ್ನಾಗಿ ಕಥೆ ಬೆಳೆಯಿತು. ಮಲಯಾಳಂ, ತಮಿಳು ಇಂಡಸ್ಟ್ರಿಗೆ ಈ ಕಥೆ ಮಾಡೋಣ ಅಂತಿದ್ದೆ. ಆದರೆ ನನಗೆ ತೃಪ್ತಿಯಾಗಲಿಲ್ಲ. ಇಲ್ಲೇ ಏನಾದರೂ ಆಗಬೇಕು ಅದಕ್ಕೆ ಬಂದೆ. ಸ್ನೇಹಿತರ ಮೂಲಕ ನಿರ್ಮಾಪಕರು ಸಿಕ್ಕಿದ್ರು. ನಂಬಿಕೆ ಹುಟ್ಟಿಕೊಂಡಿತು. ಇದುವರೆಗೆ ನನ್ನ ನಂಬಿದ್ದು ಶ್ರೀರಾಮ್ ಸರ್. ನನ್ನ ಟೀಂ ನನ್ನ ಬೆನ್ನೆಲುಬಾಗಿ ನಿಂತರು. ಸಿನಿಮಾ ಈ ಹಂತಕ್ಕೆ ಬರಲು ನನ್ನ ಟೆಕ್ನಿಕಲ್ ಟೀಂ ಬೆಂಬಲವಿದೆ. ವಿನೋದ್ ಸರ್ ಡೆಡಿಕೇಷನ್ ನೋಡಿ ಭಯ ಆಯಿತು. ವಿನೋದ್ ಸರ್ ಸಪೋರ್ಟ್ ತುಂಬಾ ದೊಡ್ಡದಿದೆ. ಸ್ಕ್ರೀನ್ ಪ್ಲೇ, ಕಥೆ ತುಂಬಾ ಸ್ಟ್ರಾಂಗ್ ಆಗಿದೆ" ಎಂದು ನಿರ್ದೇಶಕ ಅರುಣ್ ಕುಮಾರ್ ತಿಳಿಸಿದರು.

ಇದನ್ನೂ ಓದಿ:ಓಂ ಪ್ರಕಾಶ್​ ರಾವ್ ನಿರ್ದೇಶನದ 'ಫೀನಿಕ್ಸ್'​ಗೆ ಮುಹೂರ್ತ; ಇದು ಮಹಿಳಾ ಪ್ರಧಾನ ಸಿನಿಮಾ

ನಿರ್ಮಾಪಕ ನಿರ್ಮಾಪಕ ಬಿ.ಎಂ.ಶ್ರೀರಾಮ್ (ಕೋಲಾರ) ಮಾತನಾಡಿ, "ಉಪ್ಪಿ ಕಾರ್ಯಕ್ರಮಕ್ಕೆ ಬಂದಿದ್ದು ಬಹಳ ಖುಷಿ ಆಯ್ತು. ನಾವು ತುಂಬಾ ಬಡತನದಿಂದ ಮೇಲೆ ಬಂದವರು. ನಾನು ಈ ಮಟ್ಟದಲ್ಲಿ ಬೆಳೆಯಲು ಐದು ಜನರನ್ನು ಸ್ಫೂರ್ತಿಯಾಗಿ ತೆಗೆದುಕೊಂಡೆ. ಅದರಲ್ಲಿ ಉಪ್ಪಿ ಸರ್ ಕೂಡ ಒಬ್ಬರು. ತಂದೆ ತಾಯಿ ಆಶೀರ್ವಾದ ಮಾರ್ಗದರ್ಶನದಿಂದ ಈ ಮಟ್ಟದಲ್ಲಿ ಇದ್ದೀವಿ. ಅರುಣ್ ಅವರನ್ನು ನನ್ನ ಸ್ನೇಹಿತರು ರೆಫರ್ ಮಾಡಿದ್ದರು. ಇದು ಚಾಮರಾಜನಗರದ ಆಚಾರ, ವಿಚಾರ ಅಂಶಗಳು ಇರುವುದರಿಂದ ಕಥೆ ಒಪ್ಪಿಕೊಂಡೆ. ವಿನೋದ್ ಸರ್ ಅಪ್ರೋಚ್ ಮಾಡಿದ್ವಿ. ಕಥೆ ಹೇಳಿದ್ವಿ. ಅವರು ಒಪ್ಪಿಕೊಂಡರು. ಟೀಸರ್ ಮಾಡಿದ ಮೇಲೆ ಅರುಣ್ ಟೀಂ ಮೇಲೆ ಭರವಸೆ ಹೆಚ್ಚಾಯ್ತು" ಎಂದರು.

ಚಿತ್ರಕಥೆ: 'ನೆಲ್ಸನ್'... 'ರಕ್ತದಲ್ಲಿ ನೆಂದ ದೇವರಕಾಡು' ನೈಜ ಘಟನೆಯ ಕಥಾಹಂದರದ ಸಿನಿಮಾ. ಚಾಮರಾಜನಗರ ಜಿಲ್ಲೆಯ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಂಗ್‌ಸ್ಟರ್‌ ಕಥೆ. ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳನ್ನು ಈ ಚಿತ್ರದಲ್ಲಿ ಅರುಣ್ ಕಟ್ಟಿಕೊಡಲಿದ್ದಾರೆ. ವಿಶೇಷ ಅಂದ್ರೆ, ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ಈ ಸಿನಿಮಾದಲ್ಲಿ ನಿಮಗೆ ಕಾಣಸಿಗುತ್ತಾರೆ. ಬಹಳ ಇಂಪ್ರೆಸ್ ಎನಿಸುವ ಟೀಸರ್ ಝಲಕ್​ನಲ್ಲಿ ಛಾಯಾಗ್ರಹಣ ಹಾಗೂ ಸಂಗೀತ ಗಮನ ಸೆಳೆಯುತ್ತಿದೆ.

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಅರುಣ್ ಕುಮಾರ್ ತಮ್ಮಲ್ಲಿರುವ ನಿರ್ದೇಶನದ ಕಲೆಯನ್ನು ನೆಲ್ಸನ್​ನಲ್ಲಿ ಧಾರೆ ಎರೆದಿದ್ದಾರೆ. ಅವರ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್​ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಬಂಡವಾಳ ಹೂಡಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ ಚಿತ್ರಕ್ಕಿದೆ. ಆಕ್ಷನ್ ಟೀಸರ್ ಮೂಲಕ ಧಮಾಕ ಎಬ್ಬಿಸಿರುವ ಚಿತ್ರತಂಡ ನವೆಂಬರ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

ಇದನ್ನೂ ಓದಿ:'ಟಗರು ಪಲ್ಯ' ಸಿನಿಮಾ ರಿಲೀಸ್​: ಮಗಳು ಅಮೃತಾ ಜೊತೆ ಸ್ಟೆಪ್​ ಹಾಕಿದ ನೆನಪಿರಲಿ ಪ್ರೇಮ್​

ABOUT THE AUTHOR

...view details