ETV Bharat / state

ರಾಜಘಟ್ಟ ಗ್ರಾಮದಲ್ಲಿ ಸರಣಿ ಕಳ್ಳತನ: ದೊಣ್ಣೆ ಹಿಡಿದು ಕಾವಲು ನಿಂತ ಗ್ರಾಮದ ಯುವಕರು

author img

By ETV Bharat Karnataka Team

Published : Mar 1, 2024, 1:52 PM IST

Serial theft in Rajghatta village: Village youths stand for security
ರಾಜಘಟ್ಟ ಗ್ರಾಮದಲ್ಲಿ ಸರಣಿ ಕಳ್ಳತನ: ದೊಣ್ಣೆ ಹಿಡಿದು ಕಾವಲು ನಿಂತ ಗ್ರಾಮದ ಯುವಕರು

ಗ್ರಾಮದಲ್ಲಿ ಆಗುತ್ತಿರುವ ಸರಣಿ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡುವುದರ ಜೊತೆಗೆ, ಸ್ವತಃ ಯುವಕರೇ ತಮ್ಮ ಗ್ರಾಮದ ರಕ್ಷಣೆಗೆ ನಿಂತಿದ್ದಾರೆ.

ರಾಜಘಟ್ಟ ಗ್ರಾಮದಲ್ಲಿ ಸರಣಿ ಕಳ್ಳತನ: ದೊಣ್ಣೆ ಹಿಡಿದು ಕಾವಲು ನಿಂತ ಗ್ರಾಮದ ಯುವಕರು

ದೊಡ್ಡಬಳ್ಳಾಪುರ: ಕಳೆದೊಂದು ವಾರದಿಂದ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಮನೆಗಳ್ಳತನ, ಕುರಿ ಮೇಕೆ ಕಳವು, ಬೈಕ್ ಕಳವು, ಆಟವಾಡುತ್ತಿದ್ದ ಮಕ್ಕಳ ಚಿನ್ನಾಭರಣ ಕಳವು, ಕೋಳಿ ಕಳವು, ಸಾಲು ಸಾಲಾಗಿ ಕಳ್ಳತನ ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಇದೀಗ ಗ್ರಾಮದ ರಕ್ಷಣೆಗೆ ಮುಂದಾಗಿರುವ ಯುವಕರ ಗುಂಪು ಕೈಯಲ್ಲಿ ದೊಣ್ಣೆ ಹಿಡಿದು ಕಾವಲು ಕಾಯುತ್ತಿದ್ದಾರೆ.

ದೊಡ್ಡಬಳ್ಳಾಪುರ ನಗರದಿಂದ 9 ಕಿ.ಮೀ ದೂರದಲ್ಲಿರುವ ರಾಜಘಟ್ಟ ಗ್ರಾಮ ಕಳ್ಳತನ ಪ್ರಕರಣಗಳಿಗೆ ಸಾಕ್ಷಿಯಾಗಿದ್ದು, ಸರಣಿ ಕಳ್ಳತನ ಪ್ರಕರಣಗಳಿಂದ ಜನ ಹೊರ ಬರುವುದಕ್ಕೂ ಹೆದರುವಂತಾಗಿದೆ. ಗಾರೆ ಕೆಲಸ ಮಾಡುವ ರಾಜಣ್ಣ ಸೋಮವಾರ ರಾತ್ರಿ ತಮ್ಮ ಮನೆಗೆ ಬೀಗ ಹಾಕಿ ತಮ್ಮನ ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆಯ ಬಾಗಿಲನ್ನು ಗಡಾರಿಯಿಂದ ಮೀಟಿರುವ ಕಳ್ಳರು ಬೀರುವಿನಲ್ಲಿದ್ದ ಒಡವೆಗಳನ್ನು ಕದ್ದೊಯ್ದಿದ್ದಾರೆ. ಇದೇ ರೀತಿ ಅನಿಲ್ ಎಂಬುವರ ಮನೆಯಲ್ಲೂ ಕಳ್ಳತನ ನಡೆದಿದೆ. ಮನೆಗೆ ಬೀಗ ಹಾಕಿದ ಅನಿಲ್ ಕುಟುಂಬ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಮನೆಯ ಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳರು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.

ಗಾರೆ ಒಬಳೇಶ್ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳರ ಪಾಲಾಗಿದೆ. ವೆಂಕಟಸ್ವಾಮಿ ಮತ್ತು ರಾಜಣ್ಣ ಅವರ ಕುರಿ ಮತ್ತು ಮೇಕೆಗಳು ಕಳವಾಗಿವೆ. ಅಲ್ಲದೆ ಗುಮಣ್ಣನವರ 15 ನಾಟಿ ಕೋಳಿಗಳು ಕೂಡ ಕಳವಾಗಿವೆ. ಕುಂಟಮ್ಮನವರ ಮೊಮ್ಮಗಳು ಸ್ನೇಹಿತರ ಜೊತೆ ಆಡುತ್ತಿದ್ದ ವೇಳೆ ಬಾಲಕಿಯ ಕೊರಳಿನಲ್ಲಿದ್ದ ಚಿನ್ನದ ಗುಂಡುಗಳನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಯುವಕರೇ ಗ್ರಾಮದ ರಕ್ಷಣೆಗೆ ಮುಂದಾಗಿದ್ದು, ರಾತ್ರಿ ವೇಳೆ ಕಾವಲು ಕಾಯಲು ತಂಡಗಳನ್ನು ಮಾಡಿಕೊಂಡಿದ್ದಾರೆ. ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಕಾವಲು ಕಾಯಲು ನಿಂತಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ವೇಳ ಕಳ್ಳತನ: ಕುಖ್ಯಾತ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.