ಬೆಂಗಳೂರು : ಪತ್ನಿ ಮತ್ತೊಬ್ಬನ ಜೊತೆ ಓಡಿ ಹೋಗಲು ಸಹಾಯ ಮಾಡಿದ್ದ ಸ್ನೇಹಿತನನ್ನು ಕೊಲೆಮಾಡಿದ್ದ ಆರೋಪಿ ಸಹಿತ ಇಬ್ಬರನ್ನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಾಗಲಗುಂಟೆ ನಿವಾಸಿಗಳಾದ ಕಿರಣ್ (32) ಮತ್ತು ಆತನ ಸ್ನೇಹಿತ ಅಕ್ಷಯ್ (31) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?: ಆರೋಪಿಗಳು ಫೆಬ್ರವರಿ 4ರಂದು ರಾತ್ರಿ ಕೆಂಗೇರಿ ನಿವಾಸಿ ಹೇಮಂತ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆರೋಪಿಗಳ ಪೈಕಿ ಕಿರಣ್ ಸೆಕೆಂಡ್ ಹ್ಯಾಂಡ್ ಬೈಕ್ಗಳ ಮಾರಾಟಗಾರನಾಗಿದ್ದ. ಹೀಗಾಗಿ ಕಿರಣ್ಗೆ ಕೆಂಗೇರಿಯ ಹೇಮಂತ್ ಪರಿಚಯವಾಗಿತ್ತು. ಕೆಲ ದಿನಗಳ ಹಿಂದೆ ಕಿರಣ್ ಪತ್ನಿ ಹೇಮಾ ಎಂಬಾಕೆ ಸದ್ಯ ಕೊಲೆಯಾದ ಹೇಮಂತ್ನ ಸ್ನೇಹಿತ ಮರಿಸ್ವಾಮಿ ಎಂಬಾತನ ಜತೆ ಓಡಿ ಹೋಗಿದ್ದಳು. ಇದಕ್ಕೆ ಹೇಮಂತ್ ಸಹಾಯ ಮಾಡಿದ್ದ ಎಂಬ ಶಂಕೆ ಕಿರಣ್ಗೆ ಮೂಡಿತ್ತು.
ಮನೆಯಿಂದ ಏಕಾಏಕಿ ನಾಪತ್ತೆಯಾದ ತನ್ನ ಪತ್ನಿಗಾಗಿ ಕಿರಣ್ ಎಲ್ಲೆಡೆ ಹುಡುಕಿದ್ದರೂ ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈ ನಡುವೆ ಹೇಮಂತ್, ಕಿರಣ್ಗೆ ಕರೆ ಮಾಡಿ, 'ನಿನ್ನ ಪತ್ನಿ ಮರಿಸ್ವಾಮಿ ಜತೆ ಓಡಿ ಹೋಗಿದ್ದಾಳೆ' ಎಂದಿದ್ದ. ಇದರಿಂದ ಅಚ್ಚರಿಗೊಳಗಾದ ಕಿರಣ್ ಮತ್ತೆ ತನ್ನ ಪತ್ನಿಗಾಗಿ ಶೋಧಿಸಿದರೂ ಸಹ ಪ್ರಯೋಜನೆಯಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಕಿರಣ್ಗೆ ಹೇಮಂತ್ ಮೇಲೆ ಅನುಮಾನ ಮೂಡಿತ್ತು. ಹೀಗಾಗಿ ಅಕ್ಷಯ್ ಜತೆ ಸೇರಿ ಕಿರಣ್ ಫೆಬ್ರವರಿ 4ರಂದು ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿಗೆ ತೆರಳಿ ಹೇಮಂತ್ಗೆ ಕರೆ ಮಾಡಿ ಕರೆಸಿಕೊಂಡಿದ್ದರು. ಬಳಿಕ ಬೈಕ್ನಲ್ಲಿ ಹೇಮಂತ್ನನ್ನು ಕೂರಿಸಿಕೊಂಡ ಆರೋಪಿಗಳು ಮಾರ್ಗ ಮಧ್ಯೆ ಎರಡು ಬಾರ್ಗಳಲ್ಲಿ ಮದ್ಯ ಸೇವಿಸಿ, ಬಳಿಕ ಅಲ್ಲಿಂದ ನೇರವಾಗಿ ಬಾಗಲಗುಂಟೆಯ ಪಾಪಣ್ಣ ಲೇಔಟ್ಗೆ ಹೇಮಂತ್ನನ್ನು ಕರೆ ತಂದಿದ್ದರು.
ಹೇಮಂತ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಕಿರಣ್ ಮತ್ತು ಅಕ್ಷಯ್ ಅಲ್ಲಿ ದೊಣ್ಣೆ ಹಾಗೂ ಕಬ್ಬಿಣದ ವಸ್ತುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಹೇಮಂತ್ ಸ್ವಲ್ಪ ದೂರ ನಡೆದುಕೊಂಡು ಮುಂದೆ ಸಾಗಿದ್ದನು. ಈ ವೇಳೆ, ಗಾಯಗೊಂಡ ಹೇಮಂತ್ನನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಫೆ.5ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಹೇಮಂತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ತನ್ನ ಪತ್ನಿಯನ್ನು ಬೇರೊಬ್ಬನ ಜತೆ ಓಡಿ ಹೋಗಲು ಸಹಾಯ ಮಾಡಿದ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದೇನೆ. ಅದಕ್ಕೆ ಹೇಮಂತ್ ಸಹಾಯ ಮಾಡಿದ್ದ ಎಂದು ಹೇಳಿಕೆ ನೀಡಿದ್ದಾಗಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಮಾಹಿತಿ ನೀಡಿದ್ದಾರೆ.
ಓದಿ: ವ್ಯಕ್ತಿಯನ್ನ ಕೊಲೆ ಮಾಡಿದ ಆರೋಪಿ ಬಂಧನ: ಎಸ್ಪಿ ಮಹಮ್ಮದ್ ಸುಜಿತಾ ಮಾಹಿತಿ