ETV Bharat / state

ವ್ಯಕ್ತಿಯನ್ನ ಕೊಲೆ ಮಾಡಿದ ಆರೋಪಿ ಬಂಧನ: ಎಸ್​ಪಿ ಮಹಮ್ಮದ್ ಸುಜಿತಾ ಮಾಹಿತಿ

author img

By ETV Bharat Karnataka Team

Published : Feb 7, 2024, 6:05 AM IST

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ

ಕೊಲೆ ಪ್ರಕರಣವೊಂದನ್ನು ಬೆನ್ನಟ್ಟಿದ ಹಾಸನದ ಪೊಲೀಸರು ಈ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ರೈಲ್ವೆ ಟ್ರ್ಯಾಕ್​​ನಲ್ಲಿ ಸಾವಿಗೀಡಾದ ವ್ಯಕ್ತಿಯದ್ದು, ಸಹಜ ಸಾವಲ್ಲ, ಅದೊಂದು ಕೊಲೆ ಎಂಬುದು ತನಿಖೆ ವೇಳೆ ಗೊತ್ತಾಗಿರುವುದಾಗಿ ಎಸ್​ಪಿ ಮಹಮ್ಮದ್ ಸುಜಿತಾ ತಿಳಿಸಿದ್ದಾರೆ.

ಹಾಸನ: ತನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುತ್ತಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಜಯಣ್ಣ (32) ಕೊಲೆಯಾದ ವ್ಯಕ್ತಿ. ಅಣ್ಣಯ್ಯ (34) ಕೊಲೆ ಮಾಡಿದ ಆರೋಪಿ. ಪ್ರಕರಣ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ: ನಗರದ ಬಡಾವಣೆಯ ಪೊಲೀಸರು ರಾತ್ರಿ ಗಸ್ತಿನಲ್ಲಿರುವಾಗ ಬಸ್ತೆನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಕೊಲೆಯಾದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು, ಅರಸೀಕೆರೆ ಮೂಲದ ತೂಬಿನಕೆರೆ ಗ್ರಾಮದ ಜಯಣ್ಣ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ, ಬಂಧಿತ ಆರೋಪಿಯು ಕೃತ್ಯದ ಬಗ್ಗೆ ಬಾಯ್ಬಿಟ್ಟಿರುವುದಾಗಿ ಎಸ್​ಪಿ ಮಹಮ್ಮದ್ ಸುಜಿತಾ ಅವರು ತಿಳಿಸಿದ್ದಾರೆ.

ಕೊಲೆ ಮಾಡಿದ ಆರೋಪಿ ಅಣ್ಣಯ್ಯ ಗಂಭೀರ ಪ್ರಕರಣವೊಂದನ್ನು ಎದುರಿಸುತ್ತಿದ್ದ. ಅರಸೀಕೆರೆ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ಆತನ ವಿರುದ್ಧ ದೂರು ಕೂಡ ದಾಖಲಾಗಿತ್ತು. ಜಯಣ್ಣ ಸಾಕ್ಷಿದಾರರಾಗಿದ್ದ. ತನ್ನ ವಿರುದ್ಧ ಸಾಕ್ಷಿ ಹೇಳಲು ಮುಂದಾಗಿದ್ದರಿಂದ ಆರೋಪಿ ಅಣ್ಣಯ್ಯ, ರಾಜಿ ಮಾಡಿಕೊಳ್ಳುವ ನಾಟಕವಾಡಿದ್ದನು. ಅದರಂತೆ ಜಯಣ್ಣನನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ. ಮದ್ಯಪಾನ ಮಾಡಿದ್ದ ಇಬ್ಬರು, ರೈಲ್ವೆ ಟ್ರ್ಯಾಕ್​ ಮೇಲೆ ಕುಳಿತು ಮಾತುಕತೆ ನಡೆಸಿದ್ದರು.

ಈ ವೇಳೆ ಮಾತಿಗೆ ಮಾತು ಬೆಳೆದು ಅಣ್ಣಯ್ಯ ಸಿಟ್ಟಿನಲ್ಲಿ ಜಯಣ್ಣನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಜಯಣ್ಣ, ಸ್ಥಳದಲ್ಲೇ ಮೃತಪಟ್ಟಿರುವ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಮೃತದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದನು. ಈ ಬಗ್ಗೆ ಜಯಣ್ಣನ ತಾಯಿ ಹೇಳಿಕೆ ಆಧಾರ ಮೇಲೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಿದ್ದಿದೆ. ರೈಲ್ವೆ ಟ್ರ್ಯಾಕ್​​ನಲ್ಲಿ ಸಾವಿಗೀಡಾದ ವ್ಯಕ್ತಿಯದ್ದು ಸಹಜ ಸಾವಲ್ಲ, ಅದೊಂದು ಕೊಲೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್​ಪಿ ಮಹಮ್ಮದ್ ಸುಜಿತಾ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿ ಹತ್ಯೆ: ಹು-ಧಾ ಪೊಲೀಸ್​ ಕಮಿಷನರ್​ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.