ETV Bharat / state

ಬಂಟ್ವಾಳ: ತಾಯಿ, ಮಗಳಿಗೆ ಚಾಕು ತೋರಿಸಿ ಮನೆ ದರೋಡೆ; 7 ಆರೋಪಿಗಳು ಸೆರೆ

author img

By ETV Bharat Karnataka Team

Published : Jan 23, 2024, 8:19 AM IST

ಬಂಟ್ವಾಳದ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

bantwala
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು

ಬಂಟ್ವಾಳ(ದಕ್ಷಿಣ ಕನ್ನಡ): ಜನವರಿ 11ರಂದು ಬಂಟ್ವಾಳ ತಾಲೂಕಿನ ವಗ್ಗ ಸಮೀಪ ಸಾಲುಮರದ ಟ್ರೀಪಾರ್ಕ್ ಮುಂಭಾಗದ ಮನೆಯೊಂದಕ್ಕೆ ಬೆಳಿಗ್ಗೆ ಪ್ರವೇಶಿಸಿದ ನಾಲ್ವರು ಮುಸುಕುಧಾರಿಗಳು, ಮನೆಯಲ್ಲಿದ್ದ ಮಹಿಳೆಯರನ್ನು ಚಾಕುವಿನಿಂದ ಬೆದರಿಸಿ ಬಂಗಾರ, ನಗದುಸಹಿತ ಸುಮಾರು 3 ಲಕ್ಷ ರೂಗೂ ಅಧಿಕ ಮೌಲ್ಯದ ಸೊತ್ತುಗಳನ್ನು ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ ಶೆಟ್ಟಿ (21) ಮಂಗಳೂರು ಐಕಳ ಗ್ರಾಮದ ರಾಕೇಶ್ ಎಲ್.ಪಿಂಟೋ (29), ಕಡಬ ಬೆಳ್ಳಂದೂರು ಗ್ರಾಮದ ಎಂ.ಸೀತಾರಾಮ ಯಾನೆ ಪ್ರವೀಣ್ (36), ಸುಧೀರ್ (29) ಹಾಗು ದರೋಡೆಗೈದ ಚಿನ್ನಾಭರಣ ಸ್ವೀಕರಿಸಿದ್ದ ಬಂಟ್ವಾಳ ತಾಲೂಕಿನ ಇರಾ ಗ್ರಾಮದವನಾದ ಪ್ರಸ್ತುತ ಚಿಕ್ಕಮಗಳೂರಿನ ಗೌರಿ ಕಾಲುವೆಯ ನಿವಾಸಿ ಮಹಮ್ಮದ್ ಹನೀಫ್ (49) ಎಂಬಾತನನ್ನು ಬಂಧಿಸಲಾಗಿದೆ. 3,15,000 ರೂ ಮೌಲ್ಯದ ಚಿನ್ನಾಭರಣ, 8 ಲಕ್ಷ ರೂ ಮೌಲ್ಯದ ಇನ್ನೋವಾ ಕಾರು, 2 ಲಕ್ಷ ರೂ ಮೌಲ್ಯದ ಟಾಟಾ ಇಂಡಿಕಾ ಕಾರು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಧರ್ಮಪ್ಪ, ರಾಜೇಂದ್ರ, ಮುಂದಾಳತ್ವದಲ್ಲಿ ಡಿವೈಎಸ್ಪಿ ಎಸ್.ವಿಜಯಪ್ರಸಾದ್ ನೇತೃತ್ವದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ಪುಂಜಾಲಕಟ್ಟೆ ಎಸ್​ಐ ನಂದಕುಮಾರ್, ಗ್ರಾಮಾಂತರ ಎಸ್​ಐ ಹರೀಶ ಎಂ.ಆರ್ ನೇತೃತ್ವದಲ್ಲಿ ಮೂರು ವಿಶೇಷ ಪತ್ತೆ ತಂಡಗಳನ್ನು ರಚಿಸಿದ್ದರು.

ಆರೋಪಿಗಳ ಕ್ರಿಮಿನಲ್ ಹಿನ್ನೆಲೆ: ಆರೋಪಿಗಳ ಪೈಕಿ ಗಣೇಶ ನಾಯ್ಕ 2023ರಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮುಲ್ಕಿಯಲ್ಲಿ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿರುವ ಪ್ರಕರಣದಲ್ಲಿ ಮುಖ್ಯ ಆರೋಪಿ. ಉಳಿದಂತೆ ಸೀತಾರಾಮ ಯಾನೆ ಪ್ರವೀಣ್, ಸುಧೀರ್ ಹಾಗು ಮಹಮ್ಮದ್ ಹನೀಫ್ ವಿರುದ್ದ ದ.ಕ.ಜಿಲ್ಲೆ ಹಾಗು ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.

ದರೋಡೆ ಪ್ರಕರಣದ ವಿವರ: ಫ್ಲೋರಿನ್ ಪಿಂಟೋ ಮತ್ತು ಅವರ ಮಗಳು ಮರಿನಾ ಪಿಂಟೋ ಮಾತ್ರ ಮನೆಯಲ್ಲಿದ್ದಾಗ ಜನವರಿ 11ರ ಬೆಳಿಗ್ಗೆ ಸುಮಾರು 6.30ರ ವೇಳೆಗೆ ನಾಲ್ವರು ಮುಸುಕುಧಾರಿಗಳು ಕಾಲಿಂಗ್ ಬೆಲ್ ಒತ್ತಿದ್ದಾರೆ. ಇದರ ಅರಿವಿಲ್ಲದ ಮನೆಯವರು ಬಾಗಿಲು ತೆಗೆದಾಗ ಕೃತ್ಯ ನಡೆದಿದೆ. ಕಪಾಟಿನಲ್ಲಿ ಇರಿಸಲಾಗಿದ್ದ ಬಂಗಾರ, ನಗದು ಹಾಗೂ ಒಂದು ಮೊಬೈಲ್ ಫೋನ್ ಸೇರಿ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗನಗದು ದೋಚಿದ್ದರು. ಈ ಸಂದರ್ಭದಲ್ಲಿ ಮನೆಯವರು ಕಪಾಟಿನ ಬೀಗದ ಕಿ ನೀಡಿದ್ದಾರೆ. ಬಂಗಾರ ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿತ್ತು.

ಇದನ್ನೂ ಓದಿ: ಬಂಟ್ವಾಳ: ಬೆಳಗ್ಗೆ ಮನೆಗೆ ನುಗ್ಗಿದ ಆಗಂತುಕರು; ತಾಯಿ ಮಗಳಿಗೆ ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.