ETV Bharat / state

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ: ಶಿವಮೊಗ್ಗದಿಂದ ಎರಡನೇ ಬಾರಿ ಗೀತಾ ಸ್ಪರ್ಧೆ​, ನಿರೀಕ್ಷೆಯಂತೆ ಮುದ್ದಹನುಮೇಗೌಡಗೆ ಟಿಕೆಟ್​

author img

By ETV Bharat Karnataka Team

Published : Mar 8, 2024, 9:53 PM IST

Updated : Mar 9, 2024, 1:27 PM IST

Etv Bharat
Etv Bharat

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬೆಂಗಳೂರು ಗ್ರಾಮಾಂತರದಿಂದ ಡಿ ಕೆ ಸುರೇಶ್, ಶಿವಮೊಗ್ಗದಿಂದ ಗೀತಾ ಶಿವರಾಜ್​ಕುಮಾರ್ ಸೇರಿ ರಾಜ್ಯ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಬೆಂಗಳೂರು: ಕಾಂಗ್ರೆಸ್ ಲೋಕಸಭೆ ಚುನಾವಣೆಗಾಗಿ 39 ಅಭ್ಯರ್ಥಿಗಳ ಮೊದಲ‌ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕದ ಏಳು ಕೈ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ನಿರೀಕ್ಷಿತ ಅಭ್ಯರ್ಥಿಗಳ ಹೆಸರನ್ನೇ ಪ್ರಕಟಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಗುರುವಾರ ದೆಹಲಿಯಲ್ಲಿ ಸಿಇಸಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಹೆಸರನ್ನು ಪ್ರಕಟಿಸಲಾಗಿದೆ. ಆ ಮೂಲಕ ಡಿ.ಕೆ.ಸುರೇಶ್ ಲೋಕಸಮರದಲ್ಲಿ ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲಿದ್ದಾರೆ. ಡಿ.ಕೆ.ಸುರೇಶ್ ಸ್ಪರ್ಧಿಸುವುದು ಬಹುತೇಕ ನಿರೀಕ್ಷಿತವಾಗಿತ್ತು.‌ ಆದರೆ, ಡಿ.ಕೆ.ಸುರೇಶ್ ಸ್ವತ: ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮನಸ್ಸಿಲ್ಲ ಎಂದು ಹೇಳುತ್ತಿದ್ದರಿಂದ ಸ್ವಲ್ಪ ಗೊಂದಲ ಉಂಟಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಯಾಗಿ ಆರ್.ಆರ್.ನಗರ ಕ್ಷೇತ್ರದ ಪರಾಜಿತ ಕೈ ಅಭ್ಯರ್ಥಿ ಕುಸುಮಾ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಹೈ ಕಮಾಂಡ್ ಮತ್ತೊಮ್ಮೆ ಡಿ.ಕೆ.ಸುರೇಶ್​​ಗೆ ಮಣೆ ಹಾಕಿದೆ.

ಶಿವಮೊಗ್ಗದಲ್ಲಿ ದೊಡ್ಡಮನೆ ಸೊಸೆಗೆ ಕೈ ಟಿಕೆಟ್: ಶಿವಮೊಗ್ಗ ಕ್ಷೇತ್ರದಿಂದ ನಿರೀಕ್ಷೆಯಂತೆ ಗೀತಾ ಶಿವರಾಜಕುಮಾರ್​​ಗೆ ಟಿಕೆಟ್ ನೀಡಿದೆ. ಆ ಮೂಲಕ ಶಿವಮೊಗ್ಗ ಕ್ಷೇತ್ರದಲ್ಲಿ ಹೈ ಪ್ರೊಫೈಲ್ ಚುನಾವಣಾ ಕದನ ನಡೆಯುವ ನಿರೀಕ್ಷೆ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಿಎಂ ಯಡಿಯೂರಪ್ಪ ಮುಂದೆ ಸೋಲು ಕಂಡಿದ್ದರು. ಇದೀಗ ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್​ ಆಕಾಂಕ್ಷಿಗಳು ಯಾರು?

ಈ ಬಾರಿ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದ್ರೇಶ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಇನ್ನು ಬಿಜೆಪಿಯ ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವರನ್ನು ಕರೆತಂದು ಟಿಕೆಟ್ ನೀಡುವ ಬಗ್ಗೆನೂ ಕಾಂಗ್ರೆಸ್​​ನಲ್ಲಿ ಚರ್ಚೆ ನಡೆದಿತ್ತು. ಕೊನೆಯದಾಗಿ ಸಚಿವ ಮಧು ಬಂಗಾರಪ್ಪ ತಮ್ಮ ಅಕ್ಕನಿಗೆ ಲೋಕಸಭೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಬಿಜೆಪಿಯಿಂದ ಬಹುತೇಕ ಹಾಲಿ ಸಂಸದ ಬಿಎಸ್​​ವೈ ಪುತ್ರ ಬಿ.ಎಸ್.ರಾಘವೇಂದ್ರಗೆ ಟಿಕೆಟ್ ನೀಡುವ ಸಾಧ್ಯತೆ ಇರುವುದರಿಂದ ಶಿವಮೊಗ್ಗ ಲೋಕಸಭೆ ಚುನಾವಣೆ ರಣಕಣ ಕಳೆಗಟ್ಟಲಿದೆ.

ನಿರೀಕ್ಷೆಯಂತೆ ಮುದ್ದಹನುಮೇಗೌಡಗೆ ಟಿಕೆಟ್: ತುಮಕೂರು ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಮುದ್ದಹನುಮೇಗೌಡರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮುದ್ದಹನುಮೇಗೌಡರಿಗೆ ನಿರೀಕ್ಷೆಯಂತೆ ಟಿಕೆಟ್ ನೀಡಲಾಗಿದೆ. ತುಮಕೂರು ಕ್ಷೇತ್ರದಿಂದ ಗೌರಿ ಶಂಕರ್ ಕೂಡ ಟಿಕೆಟ್ ಲಾಬಿ ನಡೆಸಿದ್ದರು. ಆದರೆ, ಹೈಕಮಾಂಡ್ ನಿರೀಕ್ಷೆಯಂತೆ ಮುದ್ದೆಹನುಮೇಗೌಡರಿಗೆ ಮಣೆ ಹಾಕಿದೆ.

ಕಳೆದ ಲೋಕಸಮರದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರ ಸ್ಪರ್ಧೆಯಿಂದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು. ಹೀಗಾಗಿ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೇ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ. ಒಟ್ಟಿನಲ್ಲಿ ತುಮಕೂರು ಕಣ ಈ ಬಾರಿ ಜಿದ್ದಾಜಿದ್ದಿಗೆ ಕಾರಣವಾಗಲಿದೆ.

ಇದನ್ನೂ ಓದಿ: ಚಾಮರಾಜನಗರದಿಂದ ಕೆ.ಶಿವರಾಂ ಪತ್ನಿಗೆ ಲೋಕಸಭಾ ಟಿಕೆಟ್ ನೀಡಿ: ಛಲವಾದಿ ಮಹಾಸಭಾ ಆಗ್ರಹ

ಉಳಿದಂತೆ ವಿಜಯಪುರ ಕೈ ಅಭ್ಯರ್ಥಿಯಾಗಿ ಹೆಚ್.ಆರ್.ಆಲಗೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಹಾಸನ‌ ಲೋಕಸಭೆ ಕ್ಷೇತ್ರದಿಂದ ಶ್ರೇಯಸ್ ಪಾಟೇಲ್, ಹೈ ವೋಲ್ಟೇಜ್ ಲೋಕಸಭೆ ಕ್ಷೇತ್ರ ಮಂಡ್ಯದಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು), ಹಾವೇರಿಯಿಂದ ಆನಂದಸ್ವಾಮಿ ಗಡ್ಡದೇವರಮಠ ಹೆಸರನ್ನು ಪ್ರಕಟಿಸಲಾಗಿದೆ. ಲೋಕಸಭೆ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳ ಬಗ್ಗೆ ನಿನ್ನೆ ನಡೆದ ಕಾಂಗ್ರೆಸ್ ಸಿಇಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ಪೈಕಿ ಇದೀಗ ಏಳು ಹೆಸರನ್ನು ಅಂತಿಮ ಗೊಳಿಸಲಾಗಿದೆ.

ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿಗೆ ತಡೆ: ಇನ್ನುಳಿದಂತೆ ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಹೆಸರು ಪ್ರಕಟಣೆಯನ್ನು ತಡೆ ಹಿಡಿಯಲಾಗಿದೆ. ಜಯಪ್ರಕಾಶ್ ಹೆಗ್ಡೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಹೆಸರನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ಇತ್ತ ಚಿತ್ರದುರ್ಗದಿಂದ ಬಿ.ಎನ್.ಚಂದ್ರಪ್ಪ ಹೆಸರು ಸಿಇಸಿ ಸಭೆಯಲ್ಲಿ ಬಹುತೇಕ ಅಂತಿಮವಾಗಿತ್ತು ಎನ್ನಲಾಗಿದೆ. ಆದರೆ, ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸುವುದನ್ನು ತಡೆಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಲೋಕ ಸಮರಕ್ಕೆ ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ: ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಹೆಸರು ಪ್ರಕಟ

Last Updated :Mar 9, 2024, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.