ETV Bharat / state

ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ: ಪ್ರೀತಮ್ ಗೌಡ

author img

By ETV Bharat Karnataka Team

Published : Jan 27, 2024, 10:55 PM IST

bjp-state-general-secretary-pritam-gowda-reaction-over-executive-meeting
ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ: ಪ್ರೀತಮ್ ಗೌಡ

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮಾಡಿದ ಪ್ರಧಾನಿ ಅವರನ್ನು ಅಭಿನಂದಿಸಲಾಗಿದೆ ಎಂದು ಪ್ರೀತಮ್ ಗೌಡ ತಿಳಿಸಿದರು.

ರಾಜ್ಯ ಬಿಜೆಪಿ ನಡೆಸಿದ ಮಾಧ್ಯಮಗೋಷ್ಠಿ

ಬೆಂಗಳೂರು: ಇಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅಭಿನಂದನೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಖಂಡನಾ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಅವರು ತಿಳಿಸಿದರು.
ಕಾರ್ಯಕಾರಿಣಿ ಸಭೆಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ಪೂರ್ಣಗೊಳಿಸಿದ ನರೇಂದ್ರ ಮೋದಿಯವರನ್ನು ಅಭಿನಂದಿಸಲಾಗಿದೆ. 550 ವರ್ಷಗಳ ಭಾರತೀಯರ, ಹಿಂದೂ ಸಮಾಜದ ಬಹುನಿರೀಕ್ಷಿತ ಬೇಡಿಕೆ ಈಡೇರಿಸಿ ಮಂದಿರ ಲೋಕಾರ್ಪಣೆ ಮಾಡಿದ ಪ್ರಧಾನಿ ಅವರನ್ನು ಅಭಿನಂದಿಸಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ದಲಿತ ವಿರೋಧಿ ನೀತಿ ಖಂಡಿಸಿ ನಿರ್ಣಯ ಅಂಗೀಕರಿಸಿದ್ದೇವೆ. ದಲಿತ ಮತ್ತು ಶೋಷಿತ ವರ್ಗಕ್ಕೆ ಮೀಸಲಿಟ್ಟ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಾಗಿ ಉಪಯೋಗ ಮಾಡಿ ದಲಿತ ಮತ್ತು ಶೋಷಿತರಿಗೆ ವಂಚಿಸಿದ್ದನ್ನು ಖಂಡಿಸಲಾಗಿದೆ. ಈ ನಿರ್ಧಾರದ ವಿರುದ್ಧ ಖಂಡನಾ ನಿರ್ಣಯ ಅನುಮೋದಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ರಾಜ್ಯ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆದು ಸಮಾರೋಪಗೊಂಡಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಕಾರ್ಯಕಾರಿಣಿ ಉದ್ಘಾಟಿಸಿದರು. ಶೇ.85ಕ್ಕೂ ಹೆಚ್ಚು ಹಾಜರಾತಿಯೊಂದಿಗೆ ಸಭೆ ನಡೆದಿದೆ. ಸಂಸದರು, ಶಾಸಕರು, ರಾಜ್ಯ ಪದಾಧಿಕಾರಿಗಳು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಬಂದಿದ್ದರು ಎಂದು ತಿಳಿಸಿದರು.

ಫೆ. 3ರಿಂದ 5ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ: ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಮಾತನಾಡಿ, ಸಭೆಯಲ್ಲಿ ಸುಮಾರು 800 ಜನ ಅಪೇಕ್ಷಿತರು ಭಾಗವಹಿಸಿದ್ದರು. ಫೆ. 3ರಿಂದ 5ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ ನಡೆಸಲು ನಿರ್ಧರಿಸಲಾಗಿದೆ. ವಿಶೇಷವಾಗಿ ಕೇಂದ್ರ ಸರ್ಕಾರದ ಫಲಾನುಭವಿಗಳಾದ ಮಹಿಳೆಯರು, ಸ್ವಸಹಾಯ ಸಂಘಗಳನ್ನು ಭೇಟಿ ಮಾಡಿ ಅವರ ತಾಲೂಕು, ಜಿಲ್ಲಾ ಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ, ಭಾರತಿ ಮುಗ್ದುಂ ಮತ್ತು ನಾನು ಆ ಸಮಿತಿಯಲ್ಲಿದ್ದೇವೆ. ನಾರಿ ಶಕ್ತಿ ವಂದನಾ ಎಂಬ ಈ ಕಾರ್ಯಕ್ರಮವನ್ನು ಫೆ. 25ರೊಳಗೆ ನಡೆಸಲು ತಿಳಿಸಲಾಗಿದೆ ಎಂದರು.

ಪ್ರತಿ ಬೂತ್ ಮಟ್ಟದಲ್ಲಿ ಒಂದು ಅಥವಾ ಎರಡು ಕಡೆ ಗೋಡೆಬರಹ ಬರೆಯಲು ನಿಶ್ಚಯಿಸಲಾಗಿದೆ. 3ನೇ ಬಾರಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ, ಮತ್ತೊಮ್ಮೆ ಮೋದಿ ಎಂಬ ಗೋಡೆಬರಹ ಬರೆಸಲಾಗುವುದು. ಇದಕ್ಕಾಗಿ ತಂಡ ರಚಿಸಿದ್ದು, ನಂದೀಶ್ ರೆಡ್ಡಿ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಡಾ.ಶೈಲೇಂದ್ರ ಬೆಲ್ದಾಳೆ, ಮಹೇಂದ್ರ ಕವತಾಳ, ಹರಿಕೃಷ್ಣ ಸಹ ಸಂಚಾಲಕರಾಗಿರುವರು. ಜನವರಿ 30ರಂದು ಎಲ್ಲ ಪದಾಧಿಕಾರಿಗಳು ಇದನ್ನು ಆಂದೋಲನವಾಗಿ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪಂಚ ಗ್ಯಾರಂಟಿ, ಬರದ ಬರೆ, ಲೋಕಸಭೆ ಚುನಾವಣೆ ಮೇಲೆ ಕಣ್ಣು: 15ನೇ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಕಸರತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.