ETV Bharat / state

ಶೆಟ್ಟರ್-ಮೃಣಾಲ್ ಹೆಸರಿಗಷ್ಟೇ ಅಭ್ಯರ್ಥಿಗಳು: ಲಕ್ಷ್ಮಿ ಹೆಬ್ಬಾಳ್ಕರ್-ಜಾರಕಿಹೊಳಿ ಸಹೋದರರ ನಡುವೆ ಸ್ಪರ್ಧೆ - Belagavi Lok Sabha Election

author img

By ETV Bharat Karnataka Team

Published : Apr 8, 2024, 5:06 PM IST

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಮತ್ತು ಮೃಣಾಲ್ ಹೆಬ್ಬಾಳ್ಕರ್ ಹೆಸರಿಗಷ್ಟೇ ಅಭ್ಯರ್ಥಿಗಳಾಗಿದ್ದು ಇದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಹಣಾಹಣಿ ಎಂದೇ ಬಿಂಬಿಸಲಾಗುತ್ತಿದೆ.

ಬೆಳಗಾವಿ ಲೋಕಸಭೆ ಕ್ಷೇತ್ರ
ಬೆಳಗಾವಿ ಲೋಕಸಭೆ ಕ್ಷೇತ್ರ

ಲಕ್ಷ್ಮಿ ಹೆಬ್ಬಾಳ್ಕರ್- ಜಾರಕಿಹೊಳಿ ಸಹೋದರರ ಪ್ರಚಾರ

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರತ್ಯೇಕವಾಗಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಗೋಕಾಕ ಮತಕ್ಷೇತ್ರದ ಅಕ್ಕತಂಗೇರಹಾಳ ಗ್ರಾಮದಲ್ಲಿ ಮೃಣಾಲ್‌ ಪರ ಪ್ರಚಾರ ನಡೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿ ವಿರುದ್ಧ ಗುಡುಗಿದರು. "ನಾನು ಡೆಲ್ಲಿ ತೋರಿಸ್ತೀನಿ, ಮುಂಬೈ ತೋರಿಸ್ತೀನಿ ಅಂತಾ ಸುಮ್ಮನೆ ಭಾಷಣ ಮಾಡಲ್ಲ. ಕಾಂಗ್ರೆಸ್ ಪಕ್ಷ, ಸಿಎಂ ಸಿದ್ಧರಾಮಯ್ಯ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ನನ್ನ ಮಗನನ್ನು ಡೆಲ್ಲಿಗೆ ಕಳುಹಿಸಿಕೊಟ್ಟರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾನೆ. ಸುಮ್ಮನೆ ಯಾರ ತಂಟೆಗೂ ನಾನು ಹೋಗುವುದಿಲ್ಲ. ಆದರೆ, ನನ್ನ ತಂಟೆಗೆ ಪದೇ ಪದೇ ಬರುತ್ತಿದ್ದಾರೆ. ನನ್ನ ತಂಟೆಗೆ ಬಂದರೆ ಅದಕ್ಕೆ ಜನರೇ ಉತ್ತರ ಕೊಡುತ್ತಾರೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ನಾನು ಹೆಣ್ಮಗಳು, ಬಹಳ ಕಷ್ಟದಿಂದ ಬೆಳೆದು ಬಂದಿದ್ದೇನೆ. ಐದು ಬಾರಿ ಬಿಜೆಪಿಗೆ ಅವಕಾಶ ಕೊಟ್ಟಿದ್ದೀರಿ. ಈ ಬಾರಿ ಕಾಂಗ್ರೆಸ್‌ಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಹುಬ್ಬಳ್ಳಿಯವರು. ಬೆಳಗಾವಿಗೆ ಏನು ಅನ್ಯಾಯ ಮಾಡಿದ್ದಾರೆ ಅಂತಾ ಗೊತ್ತಿದೆ. ನರೇಂದ್ರ ಮೋದಿ ನೋಡಿ ಶೆಟ್ಟರ್‌ಗೆ ಮತ ಕೊಡಿ ಅಂತಿದ್ದಾರೆ. ಶೆಟ್ಟರ್ ಅವರು ಕಾಂಗ್ರೆಸ್‌ಗೆ ಯಾಕೆ ಬಂದರು? ಬಂದು ಬಿಜೆಪಿ, ಮೋದಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಹಿಗ್ಗಾಮುಗ್ಗಾ ಬೈದರು. ಈಗ ಮರಳಿ ಬಿಜೆಪಿಗೆ ಹೋಗಿ ಮೋದಿ ದೇವರು ಅಂತಿದ್ದಾರೆ. ಬಿಜೆಪಿಯಿಂದ ಎಲ್ಲಾ ಅಧಿಕಾರ ಅನುಭವಿಸಿ, ಬಿಜೆಪಿ ಮೋಸ ಮಾಡಿದೆ ಎಂದಿದ್ದರು. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಈಗ ಬೆಳಗಾವಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದರು.

ಶೆಟ್ಟರ್, ಅಂಗಡಿ ಒಂದೇ ನಾಣ್ಯ ಎರಡು ಮುಖಗಳು: ಇತ್ತ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಗೋಕಾಕ್ ಪಟ್ಟಣದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಮಾಜಿ‌ ಸಚಿವ ರಮೇಶ ಜಾರಕಿಹೊಳಿ, ಜಗದೀಶ್ ಶೆಟ್ಟರ್ ಹಾಗೂ ಸುರೇಶ್ ಅಂಗಡಿ ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಾರೆ. ನಾವೂ ರಾಜಕೀಯ ಮಾಡುತ್ತೀವಿ. ಬಿಜೆಪಿ ಹಾಗೂ ಜಾರಕಿಹೊಳಿ ಕುಟುಂಬದ ಮೇಲೆ ನಂಬಿಕೆ ಇಟ್ಟ ಜನರು ಅತೀ ಹೆಚ್ಚು ಲೀಡ್ ಕೊಡುತ್ತಾರೆ. ಈ ದಿನಗಳು ನನಗೆ ಸತ್ವ ಪರೀಕ್ಷೆ. ಬಿಜೆಪಿ ನನಗೆ ಸ್ಥಾನಮಾನ ಕೊಟ್ಟಿದೆ. ನನಗೆ ಶಕ್ತಿ ಬರಬೇಕಾದರೆ ಈ ಚುನಾವಣೆಯಲ್ಲಿ ಗೋಕಾಕಿನಲ್ಲಿ 75 ಸಾವಿರ ಮತ ಲೀಡ್ ಕೊಟ್ಟರೆ ಇನ್ನೂ ಶಕ್ತಿ ಬರುತ್ತದೆ. ಜಗದೀಶ್ ಶೆಟ್ಟರ್ ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೆಟ್ಟರ್​ ಬೆಳಗಾವಿಗೆ ಬಂದು ನಿಂತರೆ ನಿಮಗೇನು ತ್ರಾಸ್?: ಬಾಲಚಂದ್ರ ಜಾರಕಿಹೊಳಿ ಕೂಡ ಅರಭಾವಿ ಕ್ಷೇತ್ರದ ನಾಗನೂರ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಶೆಟ್ಟರ್ ಬೆಳಗಾವಿಯವರಲ್ಲ ಹುಬ್ಬಳ್ಳಿಯವರು. ಅವರ ಅಡ್ರೆಸ್ ಎಲ್ಲಿ ಅಂತ ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ದಿ.ಸುರೇಶ್ ಅಂಗಡಿ ಅವರ ಮನೆಗೆ ಹೋದರೆ ಅದೇ ಶೆಟ್ಟರ್ ಅವರ ಅಡ್ರೆಸ್. ಇನ್ನೂ ಹುಬ್ಬಳ್ಳಿಯವರು ಬೆಳಗಾವಿಗೆ ಬಂದು ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ವ್ಯಂಗ್ಯ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಬಳ್ಳಾರಿ, ರಾಹುಲ್ ಗಾಂಧಿ ವಯನಾಡ್‌ಗೆ ಹೋಗಿ ಸ್ಪರ್ಧೆ ಮಾಡಿದರೆ ನಡೆಯುತ್ತದೆ. ನಮ್ಮ ಬಿಜೆಪಿ ಅಭ್ಯರ್ಥಿ ಶೆಟ್ಟರ್ ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದು ನಿಂತರೆ ನಿಮಗೇನು ತ್ರಾಸ್ ಆಗ್ತೈತಿ? ಎಂದು ಕೇಳಿದರು.

ಇದನ್ನೂ ಓದಿ: 30 ವರ್ಷಗಳ ಕಾಲ ಅವ್ರು ಎಲ್ಲಿದ್ದರು? ; ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಬಿಜೆಪಿ ಅಭ್ಯರ್ಥಿ ಶೆಟ್ಟರ್ ತಿರುಗೇಟು - LOK SABHA ELECTION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.