ETV Bharat / state

ಕಾಂಗ್ರೆಸ್​ನವರು ಮೂಲಭೂತವಾಗಿ ಸಂವಿಧಾನ ತಿರುಚಿದ್ದಾರೆ: ಅನಂತ್​ಕುಮಾರ್​ ಹೆಗಡೆ

author img

By ETV Bharat Karnataka Team

Published : Mar 10, 2024, 10:51 AM IST

Updated : Mar 10, 2024, 12:07 PM IST

anantkumar-hegde
ಅನಂತ್​ಕುಮಾರ್​ ಹೆಗಡೆ

ಕಾಂಗ್ರೆಸ್​ನವರು ಸಂವಿಧಾನ ತಿರುಚಿ, ಬೇಡದೇ ಇರುವುದನ್ನು ತುಂಬಿಸಿದ್ದಾರೆ ಎಂದು ಸಿದ್ದಾಪುರದ ಹಲಗೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತಕುಮಾರ್​​ ಹೆಗಡೆ ಆರೋಪಿಸಿದ್ದಾರೆ.

ಅನಂತ್​ಕುಮಾರ್​ ಹೆಗಡೆ

ಶಿರಸಿ(ಉತ್ತರ ಕನ್ನಡ): ಕಾಂಗ್ರೆಸ್​ನವರು ಮೂಲಭೂತವಾಗಿ ಸಂವಿಧಾನವನ್ನು ಸಂಪೂರ್ಣವಾಗಿ ತಿರುಚಿದ್ದಾರೆ. ಅದರಲ್ಲಿ ಬೇಡದೇ ಇರುವುದನ್ನು ತುಂಬಿಸಿದ್ದಾರೆ ಎಂದು ಸಂಸದ ಅನಂತಕುಮಾರ್​​ ಹೆಗಡೆ ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಈ ಬಾರಿ 400 ಕ್ಕೂ ಹೆಚ್ಚು ಸೀಟ್​ನ್ನು​ ಮೋದಿ ಗೆಲ್ಲಬೇಕು. ಏಕೆಂದರೆ ನಮಗೆ ಲೋಕಸಭೆಯಲ್ಲಿ ಬಹುಮತವಿದೆ. ಆದರೆ ರಾಜ್ಯಸಭೆಯಲ್ಲಿ ಇಲ್ಲ. ಕಾಂಗ್ರೆಸ್​ನವರು ಮೂಲಭೂತವಾಗಿ ಸಂವಿಧಾನವನ್ನು ಸಂಪೂರ್ಣವಾಗಿ ತಿರುಚಿದ್ದಾರೆ. ಅದರಲ್ಲಿ ಬೇಡದೇ ಇರುವುದನ್ನು ತುಂಬಿಸಿದ್ದು, ವಿಶೇಷವಾಗಿ ಇಡೀ ಹಿಂದೂ ಸಮಾಜವನ್ನು ಧಮನಿಸುವಂತಹ ರೀತಿಯಲ್ಲಿ ಕಾನೂನನ್ನು ತಂದಿಟ್ಟಿದ್ದಾರೆ. ಇದೆಲ್ಲವೂ ಬದಲಾಗಬೇಕಾದರೆ, ಬಿಜೆಪಿಗೆ ಈಗ ಇರುವ ಮೆಜಾರಿಟಿಯಲ್ಲಿ ಸಾಧ್ಯವಿಲ್ಲ ಎಂದು ತಿಳಿಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್​ಗೆ ಮೆಜಾರಿಟಿ ಇಲ್ಲ, ಲೋಕಸಭೆಯಲ್ಲಿ ನರೇಂದ್ರ ಮೋದಿಯವರು ಮೆಜಾರಿಟಿ ತರುತ್ತಾರೆ ಎಂದು ನಾವು ಸುಮ್ಮನಿದ್ದರೇ ಗೆಲ್ಲಲು ಸಾಧ್ಯವಿಲ್ಲ. ನಮಗೆ ಲೋಕಸಭೆಯಲ್ಲೂ ಬಹುಮತ ಬೇಕು. ರಾಜ್ಯ ಸಭೆಯಲ್ಲೂ ಬಹುಮತ ಬೇಕು. ರಾಜ್ಯ ಸರ್ಕಾರಗಳಲ್ಲಿಯೂ ಮೆಜಾರಿಟಿ ಬರಬೇಕಾಗುತ್ತದೆ ಎಂದರು.

ಮೊನ್ನೆ ಕರ್ನಾಟಕದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ 3 ಸೀಟು ಕಾಂಗ್ರೆಸ್​ ಗೆದ್ದಿದೆ. ಒಂದು ಸೀಟು ಬಿಜೆಪಿ ಗೆದ್ದಿದೆ. ಅಂದರೆ ಕಾಂಗ್ರೆಸ್​ ಸಂಖ್ಯೆ ಅಧಿಕವಾದಾಗ ನಾವು ಏನೇ ತಿದ್ದುಪಡಿ ಮಾಡಿದರೂ ಕೂಡ ರಾಜ್ಯದಲ್ಲಿ ಪಾಸ್​ ಆಗುವುದಿಲ್ಲ. ನಾವು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)ಯನ್ನು ಜಾರಿಗೆ ತಂದೆವು. ಸುಪ್ರೀಂ ಕೋರ್ಟ್​ ಕೂಡ ಆರ್ಡರ್​ ನೀಡಿತ್ತು. ಅದು ಲೋಕಸಭೆಯಲ್ಲಿ ಪಾಸ್​ ಆಯಿತು, ಆದರೆ ರಾಜ್ಯಸಭೆಯಲ್ಲಿ ಭಾರೀ ಕಷ್ಟದಲ್ಲಿ ಪಾಸ್​ ಆಯಿತು ಎಂದು ತಿಳಿಸಿದರು.

ಸಿಎಎಯನ್ನು ನಮಗೆ ಕಾರ್ಯಗತಗೊಳಿಸಲು ಆಗಲೇ ಇಲ್ಲ. ಈಗ ಅದನ್ನು ಸುಗ್ರೀವಾಜ್ಞೆ ಮೂಲಕ ಮಾಡಬೇಕು ಎಂದು ಸರ್ಕಾರ ಹೊರಟಿದೆ. ಇಲ್ಲವಾದರೆ ದೇಶದಲ್ಲಿ ಕಾನೂನು ವ್ಯವಸ್ಥೆ ನಮ್ಮ ಕೈಯಲ್ಲಿ ಇರುವುದಿಲ್ಲ. ಇದೊಂದು ದೇಶದ್ರೋಹಿ ಆಡಂಬರವಾಗುತ್ತದೆ. 400ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ನಾವು ಗೆದ್ದರೆ, ಅಲ್ಲಿ ಇರುವಂತಹ ವಿಧಾನಸಭೆಯನ್ನು ನಾವು ಗೆಲ್ಲಬಹುದು. ಆಗ ಕನಿಷ್ಟ 20ಕ್ಕೂ ಅಧಿಕ ರಾಜ್ಯಗಳು ನಮಗೆ ಬರುತ್ತವೆ. ಆಗ ರಾಜ್ಯ ಸರ್ಕಾರಗಳಲ್ಲಿಯೂ ಕೂಡ 2/3 ಬಹುಮತ ಬಂದಹಾಗೇ ಆಯಿತು. ಲೋಕಸಭೆ, ರಾಜ್ಯಸಭೆ, ರಾಜ್ಯ ಸರ್ಕಾರಗಳಲ್ಲಿ 2/3 ಬಹುಮತ ಬಂದ್ರೆ ಮಾರಿ ಜಾತ್ರೆ ನೋಡಿ ಹೆಂಗೆ ಇರುತ್ತೆ ಎಂದು ಟಾಂಗ್ ನೀಡಿದರು.

ನಮ್ಮ ದೇಶ ಸರಿ ಆಗಬೇಕು ಎಂದರೆ ನಮ್ಮವರಿಂದಲೇ ಹೊರತು ಬೇರೆ ಅವರಿಂದ ಸಾಧ್ಯವಿಲ್ಲ. ಕಾಂಗ್ರೆಸ್​ನ ಈ ದೇಶದ್ರೋಹಿ ಸರ್ಕಾರ ಹೋಗಬೇಕು. ಜಾತ್ಯಾತೀತರು ಇದನ್ನು ತೀರ್ಮಾನ ಮಾಡಿಲ್ಲ. ತೀರ್ಮಾನ ಮಾಡಿದವರು ನಮ್ಮ ಹಿಂದೂಗಳು ಎಂದರು.

ಕಾರ್ಯಕರ್ತರ ಜೊತೆಗಿನ ಸಭೆ ಬಳಿಕ ಸಿದ್ದಾಪುರದ ಮಂಗನಕಾಯಿಲೆ ಪೀಡಿತ ಪ್ರದೇಶಕ್ಕೆ ಸಂಸದರ ಭೇಟಿ ನೀಡಿದರು. ಕಾಯಿಲೆಯಿಂದ ಮೃತಪಟ್ಟವರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಇದನ್ನೂ ಓದಿ: ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಸಚಿವ ಕೃಷ್ಣ ಬೈರೇಗೌಡ

Last Updated :Mar 10, 2024, 12:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.