ETV Bharat / bharat

ಬಂಗಾಳದಲ್ಲಿ ಟಿಎಂಸಿ ಏಕಾಂಗಿ ಸ್ಪರ್ಧೆ: ಕಾಂಗ್ರೆಸ್‌ನ ಅಧೀರ್‌ ರಂಜನ್‌ ವಿರುದ್ಧ ಮಾಜಿ ಕ್ರಿಕೆಟಿಗ ಯೂಸುಫ್​ ಪಠಾಣ್ ಕಣಕ್ಕೆ

author img

By PTI

Published : Mar 10, 2024, 3:51 PM IST

TMC announces candidate list; cricketer Yusuf Pathan, Kirti Azad among nominees
ಟಿಎಂಸಿ ಏಕಾಂಗಿ ಸ್ಪರ್ಧೆ, ಎಲ್ಲ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿದ ದೀದಿ: ಅಧೀರ್ ರಂಜನ್​ ವಿರುದ್ಧ ಯೂಸುಫ್​ ಕಣಕ್ಕೆ

ಪಶ್ಚಿಮ ಬಂಗಾಳದ ಎಲ್ಲ 42 ಲೋಕಸಭಾ ಕ್ಷೇತ್ರಗಳಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮುಂಬರುವ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ ಎಲ್ಲ 42 ಕ್ಷೇತ್ರಗಳಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ಪಕ್ಷ (ಟಿಎಂಸಿ) ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮಾಜಿ ಕ್ರಿಕೆಟಿಗರಾದ ಕೀರ್ತಿ ಆಜಾದ್, ಯೂಸುಫ್​ ಪಠಾಣ್​ ಸೇರಿದಂತೆ ಅನೇಕ ಹೊಸ ಮುಖಗಳಿಗೆ ಸಿಎಂ ಮಮತಾ ಬ್ಯಾನರ್ಜಿ ಮಣೆ ಹಾಕಿದ್ದಾರೆ.

ಕೋಲ್ಕತ್ತಾದ ಬ್ರಿಗೇಡ್ ಪಾರದ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಪಕ್ಷದ ಬೃಹತ್​ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ, ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಯಿತು. 16 ಹಾಲಿ ಸಂಸದರಿಗೆ ಟಿಕೆಟ್​ ನೀಡಲಾಗಿದೆ. 12 ಮಹಿಳೆಯರಿಗೂ ಅವಕಾಶ ಸಿಕ್ಕಿದೆ.

ಮಾಜಿ ಕ್ರಿಕೆಟಿಗ ಯೂಸುಫ್​ ಪಠಾಣ್ ಅವರನ್ನು ಕಾಂಗ್ರೆಸ್​ ಹಿರಿಯ ನಾಯಕ ಹಾಗು ಹಾಲಿ ಸಂಸದ ಅಧೀರ್ ರಂಜನ್​ ಚೌಧರಿ ಪ್ರತಿನಿಧಿಸುವ ಬಹರಮ್​ಪುರ ಕ್ಷೇತ್ರದಿಂದ ಕಣಕ್ಕಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮತ್ತೊಂದೆಡೆ, 1983ರ ಭಾರತದ ವಿಶ್ವಕಪ್​​ ಕ್ರಿಕೆಟ್​ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಅವರಿಗೆ ಬರ್ಧಮಾನ್​-ದುರ್ಗಪುರ್​ ಲೋಕಸಭೆ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ.

ಮಹುವಾ ಮೊಯಿತ್ರಾಗೂ ಟಿಕೆಟ್: ಇದೇ ವೇಳೆ, ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಗಂಭೀರ ಆರೋಪದ ಮೇಲೆ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದ ಮಹುವಾ ಮೊಯಿತ್ರಾ ಅವರಿಗೂ ಈ ಬಾರಿ ಟಿಕೆಟ್​ ಘೋಷಿಸಲಾಗಿದೆ. ಈ ಹಿಂದೆ ಪ್ರತಿನಿಧಿಸುತ್ತಿದ್ದ ಕೃಷ್ಣನಗರ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಮಹುವಾ ಸ್ಪರ್ಧಿಸಲಿದ್ದಾರೆ. ಹಿರಿಯ ನಟ ಶತ್ರುಘ್ನ ಸಿನ್ಹಾ ಅವರಿಗೆ ಅಸನ್ಸೋಲ್​ ಕ್ಷೇತ್ರದಿಂದ ಮತ್ತೊಮ್ಮೆ ಟಿಕೆಟ್​ ನೀಡಲಾಗಿದೆ.

ನಟಿ, ಹಾಲಿ ಸಂಸದೆ ನುಸ್ರತ್​​ ಜಹಾನ್​ ಅವರನ್ನು ಟಿಎಂಸಿ ಕೈ ಬಿಟ್ಟಿದೆ. ಬಸಿರಹತ್​ ಕ್ಷೇತ್ರವನ್ನು ನುಸ್ರತ್ ಪ್ರತಿನಿಧಿಸುತ್ತಿದ್ದರು. ಆದರೆ, ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಸಂದೇಶ್​ಖಾಲಿ ಪ್ರದೇಶವೂ ಬರುತ್ತದೆ. ಹಾಗಾಗಿ, ಕ್ಷೇತ್ರದಿಂದ ಮಾಜಿ ಸಂಸದ ಹಾಜಿ ನೂರುಲ್​ ಇಸ್ಲಾಂ ಅವರನ್ನು ಟಿಕೆಟ್​ ಕೊಡಲಾಗಿದೆ.

ಕಾಂಗ್ರೆಸ್​ ಜೊತೆಗೆ ಮೈತ್ರಿ ಇಲ್ಲ: ಎಲ್ಲ 42 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಟಿಎಂಸಿ ಕಾಂಗ್ರೆಸ್​ ಜೊತೆಗಿನ ಮೈತ್ರಿಯಿಂದ ಹೊರಬಂದಿದೆ. ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಹೆಸರಲ್ಲಿ ಎಲ್ಲ ಪ್ರತಿಪಕ್ಷಗಳು ಬಿಜೆಪಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದವು. ದೆಹಲಿ, ತಮಿಳುನಾಡು, ಬಿಹಾರದಲ್ಲಿ ಮೈತ್ರಿ ಫಲಪ್ರದವಾಗಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿ ಸ್ಪರ್ಧೆಯಿಂದ ಮೈತ್ರಿ ಮುರಿದು ಬಿದ್ದಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಸೀಟು ಹಂಚಿಕೆ ಯಶಸ್ವಿ: ಕಾಂಗ್ರೆಸ್​ 9, ಡಿಎಂಕೆ 21 ರಲ್ಲಿ ಸ್ಪರ್ಧೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.