ETV Bharat / bharat

ಶ್ರೀಲಂಕಾದ ತಮಿಳು ನಿರಾಶ್ರಿತರು ಮತ್ತು ಸಿಎಎ; ಇಲ್ಲಿದೆ ಪೌರತ್ವ ಸಿಗದೇ ಸಂಕಷ್ಟಕ್ಕೊಳಗಾದವರ ಕಥೆ - Sri Lankan Tamil Refugees

author img

By ETV Bharat Karnataka Team

Published : Apr 11, 2024, 6:16 AM IST

sins-of-omission-how-caa-plays-a-cruel-joke-on-sri-lankan-tamil-refugees
ಶ್ರೀಲಂಕಾದ ತಮಿಳು ನಿರಾಶ್ರಿತರು ಮತ್ತು ಸಿಎಎ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಕೇಂದ್ರ ಸರ್ಕಾರವು ನೆರೆಯ ದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡಿದರೆ, ತಮಿಳುನಾಡಿನಲ್ಲಿ ದಶಕಗಳಿಂದ ನೆಲೆಸಿರುವ ಶ್ರೀಲಂಕಾದಿಂದ ತಮಿಳು ನಿರಾಶ್ರಿತರಿಗೆ ಅಂತಹ ಯಾವುದೇ ನಿಬಂಧನೆಯನ್ನು ಮಾಡಿಲ್ಲ. ಅಧಿಕೃತವಾಗಿ 'ಅಕ್ರಮ ವಲಸಿಗರು' ಎಂದು ಕರೆಯಲ್ಪಡುವ ಈ ಪದವು ಭಾರತೀಯ ನಾಗರಿಕರಾಗುವ ಅವರ ಕನಸುಗಳಿಗೆ ದೊಡ್ಡ ಪೆಟ್ಟಾಗಿದೆ.

ಚೆನ್ನೈ: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಮಸೂದೆ ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಕಳೆದ ತಿಂಗಳು ಅದರ ನಿಯಮಗಳನ್ನು ಜಾರಿಗೆ ತರುವುದಾಗಿ ಮೋದಿ ಸರ್ಕಾರ ಘೋಷಿಸಿದೆ. ಸಿಎಎ ಅಡಿ 2014ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದಿಂದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಪೌರತ್ವವನ್ನು ತ್ವರಿತ ಆಧಾರದ ಮೇಲೆ ನೀಡಲಾಗುತ್ತದೆ.

ತೀವ್ರ ಟೀಕೆಗಳ ನಡುವೆ ಈ ಕಾನೂನಿಗೆ ಹಸಿರು ನಿಶಾನೆ ತೋರಲಾಗಿದೆ. ರಾಜಕೀಯ ಮತ್ತು ಸಾಮಾಜಿಕ ವಲಯಗಳು ಕಾನೂನಿನ ನ್ಯೂನತೆಗಳನ್ನು ಎತ್ತಿ ತೋರಿಸಿ, ಇದನ್ನು ತಾರತಮ್ಯ ಎಂದು ಕರೆದಿವೆ. ಕಾನೂನಿನ ಕುರಿತ ಎತ್ತಲಾದ ಪ್ರಶ್ನೆಗಳಲ್ಲಿ ಅತ್ಯಂತ ಗಮನಾರ್ಹ ಎಂದರೆ, ಅದು ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವುದಿಲ್ಲ ಅಥವಾ ಎಲ್ಲ ನೆರೆಹೊರೆಯವರಿಗೂ ಅನ್ವಯಿಸುವುದಿಲ್ಲ. ಭಾರತದಲ್ಲಿ ಹಲವಾರು ವಲಸಿಗ ಸಮುದಾಯಗಳಿವೆ. ಇವುಗಳು ಸಿಎಎ ವ್ಯಾಪ್ತಿಗೆ ಒಳಪಡುವ ಸ್ಥಿತಿಯಲ್ಲಿದ್ದಾರೆ. ಆದರೆ, ಈ ಆಯ್ದು, ಹೆಕ್ಕುವ ವ್ಯಾಯಾಮದಲ್ಲಿ ಅವರನ್ನು ನಿರ್ಲಕ್ಷಿಸಲಾಗುತ್ತದೆ. ಅಂತಹ ಒಂದು ಸಮುದಾಯವು ಶ್ರೀಲಂಕಾದ ತಮಿಳು ನಿರಾಶ್ರಿತರು. ಸುಮಾರು 60 ಸಾವಿರ ಜನಸಂಖ್ಯೆ ಇದೆ. ಕೆಲವು ಪ್ರಕಟಣೆಗಳಲ್ಲಿ 'ಎಲ್ಲಿಯೂ ಇಲ್ಲದ ಜನರು' ಎಂದು ಕರೆಯಲ್ಪಡುವ ಈ ನಿರಾಶ್ರಿತರು, 1980ರ ದಶಕದಲ್ಲಿ ಭೀಕರವಾದ ಶ್ರೀಲಂಕಾದ ಅಂತರ್ಯುದ್ಧದಿಂದ ಸುರಕ್ಷತೆ ಹುಡುಕಿಕೊಂಡು ಭಾರತಕ್ಕೆ ಆಗಮಿಸಿದ್ದಾರೆ.

ಕಠೋರ ವರ್ತಮಾನ, ಕರಾಳ ಭವಿಷ್ಯ: ಮಧುರೈ ಮತ್ತು ಕೊಯಮತ್ತೂರಿನಲ್ಲಿರುವ ಶಿಬಿರಗಳಿಗೆ ಭೇಟಿ ನೀಡಿದಾಗ ಈ ನಿರಾಶ್ರಿತರು ವಾಸಿಸುತ್ತಿರುವ ಹೀನಾಯ ಸ್ಥಿತಿ ಕಣ್ಣಿಗೆ ರಾಚುತ್ತದೆ. ಕೊಯಮತ್ತೂರಿನ ಪೂಲುವಪಟ್ಟಿ ಶಿಬಿರದಲ್ಲಿ ಸುಮಾರು 1800 ತಮಿಳು ನಿರಾಶ್ರಿತರನ್ನು ತಾತ್ಕಾಲಿಕ ಒಂದು ಅಥವಾ ಎರಡು ಕೋಣೆಗಳ ಸಿಮೆಂಟ್​ ಸೀಟಿನ ಛಾವಣಿಯ ಮನೆಗಳಲ್ಲಿ ಇರಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮನೆಯಲ್ಲಿ ಶೌಚಾಲಯಗಳನ್ನು ಹೊಂದಿಲ್ಲ. ಸಾರ್ವಜನಿಕ ಶೌಚಾಲಯಗಳನ್ನು ಬಳಸಬೇಕಾಗುತ್ತದೆ. ಪ್ರತಿ ನೂರು ನಿರಾಶ್ರಿತರಿಗೆ ಒಂದು ಶೌಚಾಲಯವಿದೆ. ಮಹಿಳೆಯರು ಮತ್ತು ಮಕ್ಕಳು ಸಹ ಅನೈರ್ಮಲ್ಯದ ವಾತಾವರಣದಲ್ಲಿ ವಾಸಿಸಬೇಕಾಗಿದೆ. ಪೌರತ್ವ ಇಲ್ಲದ ಕಾರಣ ಅವಕಾಶಗಳ ಕೊರತೆಯು ಅವರ ಜೀವನ ಮಟ್ಟವನ್ನು ಸುಧಾರಿಸುವ ಪ್ರತಿಯೊಂದು ಪ್ರಯತ್ನಕ್ಕೆ ಅಡ್ಡಿಯಾಗಿದೆ.

ಈ ಶಿಬಿರಗಳಲ್ಲಿರುವ ಯುವಕರು ಉದ್ಯೋಗ ಪಡೆಯುವ ಯಾವುದೇ ಭರವಸೆಯಿಲ್ಲದೇ, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆದರೂ ಅದು ಮರೀಚಿಕೆಯಾಗಿದೆ. ''ನಾನು 11ನೇ ತರಗತಿ ಓದುತ್ತಿದ್ದೇನೆ. ಸರ್ಕಾರಿ ಬ್ಯಾಂಕ್ ಮ್ಯಾನೇಜರ್ ಆಗಲು ಬಯಸುತ್ತೇನೆ. ಆದರೆ, ನಾನು ನಾಗರಿಕನಲ್ಲದ ಕಾರಣ ನಾನು ಅಂತಹ ಉದ್ಯೋಗಗಳನ್ನು ಮುಂದುವರಿಸಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲೂ ಸಾಧ್ಯವಿಲ್ಲ. ನನ್ನ ಶಿಕ್ಷಣವು ಯಾವುದೇ ಪ್ರಯೋಜನಕ್ಕೆ ಬಂದಂತಾಗಿದೆ ಎಂದು ನಾನು ಭಾವಿಸಿದ್ದೇನೆ'' ಎಂದು ಶಿಬಿರದಲ್ಲಿ ವಾಸಿಸುವ ಅನೇಕ ಹದಿಹರೆಯದವರಲ್ಲಿ ಒಬ್ಬರಾದ ಪ್ರೀತಿ (ಹೆಸರು ಬದಲಾಯಿಸಲಾಗಿದೆ) ತಮ್ಮ ಕರಾಳ ಭವಿಷ್ಯದ ಚಿಂತೆ ಹೊರಹಾಕಿದರು.

ನಿರಾಶ್ರಿತ ಮಹಿಳೆಯೊಬ್ಬರು ಮಾತನಾಡಿ, ''ನಾವು 30 ವರ್ಷಗಳಿಂದ ಇಲ್ಲಿದ್ದೇವೆ. ಆದರೆ, ನಾವು ನಮ್ಮ ಮೂಲ ಅವಶ್ಯಕತೆಗಳಾದ ಬಟ್ಟೆ ಮತ್ತು ಆಹಾರವನ್ನು ಮಾತ್ರ ನೋಡಿಕೊಳ್ಳುತ್ತೇವೆ. ನಮಗೆ ಪೌರತ್ವವಿದ್ದರೆ, ನಾವು ಬ್ಯಾಂಕ್ ಸಾಲ ಪಡೆದು ಸ್ವಲ್ಪ ಜಾಗವನ್ನಾದರೂ ಖರೀದಿಸಹುದು. ಇದರಿಂದ ನಮಗೂ ನಮ್ಮ ಮಕ್ಕಳಿಗೂ ಹೆಚ್ಚಿನ ಅನುಕೂಲವಾಗುತ್ತಿತ್ತು'' ಎಂದರು. ''ಬೇರೆ ದೇಶಗಳಿಗೆ ತೆರಳುವವರಿಗೆ 5 ರಿಂದ 10 ವರ್ಷಗಳಲ್ಲಿ ಪೌರತ್ವ ಸಿಗುತ್ತದೆ. ನಾವು 35 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇವೆ. ಆದರೂ ನಮಗೆ ಏನೂ ಇಲ್ಲ. ನಾವು ಈಗ ಶ್ರೀಲಂಕಾಕ್ಕೆ ಹೋದರೂ ಅಲ್ಲಿನ ಪೌರತ್ವ ಇಲ್ಲ. ಅಂದರೆ, ನಮ್ಮ ಜೀವನದ ಕೊನೆಯವರೆಗೂ ನಾವು ನಿರಾಶ್ರಿತರಾಗಿ ಬದುಕಬೇಕಾದ ಅನಿವಾರ್ಯತೆ ಇದೆಯೇ?, ಪೌರತ್ವ ನೀಡುವ ಪಕ್ಷಕ್ಕೆ ನಾವು ಮತ ಹಾಕುತ್ತೇವೆ. ನಾವು ಪೌರತ್ವ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಬೇಡಿಕೊಳ್ಳುತ್ತಿದ್ದೇನೆ. ನಮಗೆ ಬೇರೇನೂ ಅಗತ್ಯವಿಲ್ಲ'' ಎಂದು ಹೇಳಿದರು.

ನರ್ಸ್​​ ಆಗಲು ಬಯಸಿರುವ ಇನ್ನೊಬ್ಬ ಮಹಿಳಾ ನಿರಾಶ್ರಿತೆ, ''ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಖಾಸಗಿ ಉದ್ಯೋಗದ ಮೊರೆ ಹೋಗಬೇಕಾಗಿದೆ. ಅಲ್ಲಿ ಅವರು ಕಡಿಮೆ ಸಂಬಳ ನೀಡುತ್ತಾರೆ. ನನ್ನ ಶೈಕ್ಷಣಿಕ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ಯೋಗಾವಕಾಶ ಸಿಗುತ್ತದೆ. ಆದರೆ, ಪೌರತ್ವ ಇಲ್ಲದ ಕಾರಣ ನಾನು ಅರ್ಹನಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಅತೀ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇನೆ'' ಎಂದು ಅವಲತ್ತುಕೊಂಡರು. ಈ ಶಿಬಿರದಲ್ಲಿರುವ ಇತರ ಅನೇಕ ನಿರಾಶ್ರಿತರು ಸಹ ಉತ್ತಮ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದಾರೆ. ಆದರೆ, ಅವೆರಲ್ಲರೂ ಪೇಂಟರ್ ಆಗಿ, ಹೋಟೆಲ್​ಗಳಲ್ಲಿ ಕೂಲಿ ಕೆಲಸ ಮಾಡಲು ಹೋಗುವುದು ಸಾಮಾನ್ಯವಾಗಿದೆ.

ಸಾಮಾನ್ಯ ಜೀವನಕ್ಕೆ ಅಡೆತಡೆಗಳು: ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅಸಾಧ್ಯವಾಗಿದಿರುವುದಲ್ಲದೇ ಶಿಬಿರಗಳಲ್ಲಿ ವಾಸಿಸುವ ಶ್ರೀಲಂಕಾದ ತಮಿಳರು ಐದು ವರ್ಷಗಳನ್ನು ಮೀರದ, ಗುತ್ತಿಗೆಯನ್ನು ಹೊರತುಪಡಿಸಿ ಭಾರತದಲ್ಲಿ ಸ್ಥಿರ ಆಸ್ತಿ ಹೊಂದಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ. 'ಅಕ್ರಮ ವಲಸಿಗರು' ಎಂಬ ಅವರ ಪ್ರಸ್ತುತ ಸ್ಥಿತಿಯ ಕಾರಣದಿಂದಾಗಿ ದಾಖಲೆರಹಿತ ಆಡಳಿತಾತ್ಮಕ ಸೂಚನೆಗಳಿಂದಾಗಿ ವಾಹನಗಳನ್ನು ಹೊಂದಲು ಅಥವಾ ಭಾರೀ ಮೋಟಾರು ವಾಹನಗಳಿಗೆ ಪರವಾನಗಿಗಳನ್ನು ಪಡೆಯಲು ಸಹ ಸಾಧ್ಯವಾಗುವುದಿಲ್ಲ.

ವಾಹನಗಳ ನೋಂದಣಿಗಾಗಿ ಪ್ರಸ್ತುತ ನಿಯಮಗಳು, ಶ್ರೀಲಂಕಾ ತಮಿಳರಿಗೆ ಸರ್ಕಾರ ನೀಡಿದ ಗುರುತಿನ ಚೀಟಿಯನ್ನು ಸ್ವೀಕರಿಸುತ್ತಿಲ್ಲ. ಇದರಿಂದ ತಮ್ಮ ಹೆಸರಿನಲ್ಲಿ ಲಘು ಮೋಟಾರು ವಾಹನಗಳನ್ನು ನೋಂದಾಯಿಸಲು ಮತ್ತು ಹೊಂದಲು ಆಗುತ್ತಿಲ್ಲ. ಯುವಕರು ಓದು ಪೂರ್ಣಗೊಳಿಸಿದ ನಂತರ ಉದ್ಯೋಗಗಳನ್ನು ಹುಡುಕಲು ಹೋದಾಗ ಜೀವನ ಕಷ್ಟಕರ ಎನಿಸುತ್ತಿದೆ. ತಮಿಳುನಾಡು ಪೊಲೀಸರ ವಿಭಾಗಗಳಲ್ಲಿ ಒಂದಾದ ಕ್ಯೂ ಬ್ರಾಂಚ್ (ಆಂತರಿಕ ಭದ್ರತೆ) ಅವರ ಚಲನವಲನದ ಮೇಲೆ ಕಣ್ಣಿಡಲು ಪ್ರಾರಂಭಿಸಿದೆ. ಶಿಬಿರಗಳ ಮೇಲೆ ನಿಗಾ ವಹಿಸುವ ಕ್ಯೂ ಬ್ರಾಂಚ್ ಪೊಲೀಸ್ ಅಧಿಕಾರಿಗಳು ಈ ಶಿಬಿರಗಳಲ್ಲಿನ ಯುವಕರು ಒಮ್ಮೆ ಕೆಲಸ ಮಾಡಲು ಪ್ರಾರಂಭಿಸಿದರೆ, ಅವರು ಆಡಿಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ಕಟ್ಟುನಿಟ್ಟಾದ ನಿಯಮವನ್ನು ವಿಧಿಸುತ್ತಾರೆ. ಮೂರು ಆಡಿಟ್‌ಗಳಲ್ಲಿ ಕಾಣಿಸಿಕೊಳ್ಳಲು ವಿಫಲವಾದರೆ ಶಿಬಿರದಿಂದ ನಿರ್ದಿಷ್ಟ ವ್ಯಕ್ತಿಯ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.

ಮಾನಸಿಕ ಆರೋಗ್ಯ ಸಮಸ್ಯೆಗಳು: 2022ರ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈ ಕಮಿಷನರ್ (UNHCR) ವಿಶ್ಲೇಷಣೆ ಪ್ರಕಾರ, ಶೇ.47ರಷ್ಟು ನಿರಾಶ್ರಿತ ಮಹಿಳೆಯರು ನಿದ್ರಾಹೀನತೆ, ವೈರಾಗ್ಯ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಹೊಂದಿರುತ್ತಾರೆ. ಇದಕ್ಕೆ ಕಾರಣ ಸಾಲ, ನಿರಾಶ್ರಿತರಾಗಿ ಅವರ ಭವಿಷ್ಯದ ಬಗ್ಗೆ ಚಿಂತೆ, ದೈಹಿಕ ಬೆದರಿಕೆಗಳು, ಮದ್ಯಪಾನ ಮತ್ತು ಕುಟುಂಬದ ಸದಸ್ಯರ ಮಾದಕ ವ್ಯಸನ ಮತ್ತು ಇತರ ವೈವಾಹಿಕ ಸಮಸ್ಯೆಗಳು ಸೇರಿವೆ. ಈ ಮಹಿಳೆಯರಲ್ಲಿ ಶೇ.2ರಷ್ಟು ನಿರಂತರವಾಗಿ, ಶೇ.7ರಷ್ಟು ಆಗಾಗ್ಗೆ ಮತ್ತು ಶೇ.19ರಷ್ಟು ವಿರಳವಾಗಿಯೂ ಮಹಿಳೆಯರು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿರುತ್ತಾರೆ.

ಸಂಖ್ಯೆಗಳು ಏನು ಹೇಳುತ್ತವೆ?: 2021ರಲ್ಲಿ ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ನೆಲೆಸಿರುವ ಶ್ರೀಲಂಕಾ ತಮಿಳರ ಪುನರ್ವಸತಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿತ್ತು. 2023ರ ಸೆಪ್ಟೆಂಬರ್​ನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಮಧ್ಯಂತರ ವರದಿಯನ್ನು ಸಮಿತಿ ಸಲ್ಲಿಸಿತ್ತು. ವರದಿಯ ಪ್ರಕಾರ, ಸುಮಾರು 58,200 ಶ್ರೀಲಂಕಾ ತಮಿಳರು ರಾಜ್ಯಾದ್ಯಂತ 104 ಶಿಬಿರಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 33,400 ನಿರಾಶ್ರಿತರು ಶಿಬಿರಗಳ ಹೊರಗೆ ವಾಸಿಸಲು ನಿರ್ಧರಿಸಿದ್ದಾರೆ ಮತ್ತು ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಅಲ್ಲದೇ, ಸುಮಾರು ಶೇ.45ರಷ್ಟು ನಿರಾಶ್ರಿತರು ಭಾರತದಲ್ಲಿ ಪುನರ್ವಸತಿ ಶಿಬಿರಗಳಲ್ಲೇ ಜನಿಸಿದವರು ಎಂದು ವರದಿ ಬಹಿರಂಗಪಡಿಸಿದೆ. ಶೇ.79ರಷ್ಟು ಜನರು 30 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಶೇ.25ರಷ್ಟು ಶಿಬಿರ ವಾಸಿಗಳು ಮಕ್ಕಳಾಗಿದ್ದರೆ, ಶೇ.8ರಷ್ಟು ಭಾರತೀಯ ನಾಗರಿಕರನ್ನು ಮದುವೆಯಾಗಿದ್ದಾರೆ. ಶೇ.95ರಷ್ಟು ಶ್ರೀಲಂಕಾ ತಮಿಳರು ಆಧಾರ್ ಕಾರ್ಡ್ ಹೊಂದಿದ್ದಾರೆ. ಜನಸಂಖ್ಯೆಯ ಕೇವಲ ಶೇ.1ರಷ್ಟು ಜನರು ಶ್ರೀಲಂಕಾದ ಪಾಸ್‌ಪೋರ್ಟ್ ಹೊಂದಿದ್ದರೆ, ಶೇ.3ರಷ್ಟು ಜನರು ಶ್ರೀಲಂಕಾದ ನಾಗರಿಕರಾಗಿ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ.

ಭಾರತೀಯ ಮೂಲದವರೂ ಸೇರಿದಂತೆ ಶ್ರೀಲಂಕಾದ ತಮಿಳರು ಕಳೆದ ನಾಲ್ಕು ದಶಕಗಳಲ್ಲಿ ಭಾರತೀಯ ಪೌರತ್ವವನ್ನು ಪಡೆಯುವಲ್ಲಿ ಮತ್ತು ಸ್ವಾವಲಂಬಿಗಳಾಗಲು ಪರಿಣಾಮಕಾರಿ ಅವಕಾಶವನ್ನು ಹೊಂದಿಲ್ಲ. ಇವೆರಲ್ಲೂ ಕಾನೂನು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಧ್ಯಂತರ ವರದಿಯು ವಿಶ್ಲೇಷಿಸಿದೆ. ಭಾರತೀಯ ಪೌರತ್ವವನ್ನು ಪಡೆಯಲು ಯಾವುದೇ ಗಣನೀಯ ಕಾನೂನು ಮಾರ್ಗಗಳಿಲ್ಲದೇ, ಶ್ರೀಲಂಕಾದ ತಮಿಳರು, ವಿಶೇಷವಾಗಿ ತಮಿಳುನಾಡಿನಾದ್ಯಂತ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುವವರು ಸ್ಥಳೀಯ ಜನಸಂಖ್ಯೆಯಿಂದ ಪ್ರತ್ಯೇಕವಾಗಿರುತ್ತಾರೆ ಎಂದೂ ವರದಿ ಹೇಳಿದೆ.

ಸಿಎಎ ಮತ್ತು ಶ್ರೀಲಂಕಾ ತಮಿಳು ನಿರಾಶ್ರಿತರು: ಮಧುರೈನ ನಿರಾಶ್ರಿತರ ಶಿಬಿರದ ಸದಸ್ಯ ಸುಂದರ್ (ಹೆಸರು ಬದಲಾಯಿಸಲಾಗಿದೆ) ಮಾತನಾಡಿ, ''ಬಹುತೇಕ ತಮಿಳು ನಿರಾಶ್ರಿತರು ಭಾರತೀಯ ಮೂಲದವರು. ಪೌರತ್ವ ತಿದ್ದುಪಡಿ ಕಾಯ್ದೆಯು ವ್ಯಕ್ತಿಯು 5 ವರ್ಷಗಳ ಕಾಲ ಭಾರತದಲ್ಲಿದ್ದರೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಷರತ್ತು ವಿಧಿಸುತ್ತದೆ. ನಾವು 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಬಗ್ಗೆ ಏನು ಹೇಳುತ್ತದೆ'' ಎಂದು ಪ್ರಶ್ನೆ ಮಾಡಿದರು.

''ಶ್ರೀಲಂಕಾದ ತಮಿಳರಲ್ಲಿ ಎರಡು ಗುಂಪುಗಳಿವೆ. ಶ್ರೀಲಂಕಾ ಮೂಲದವರು ಮತ್ತು ಭಾರತದಿಂದ ಶ್ರೀಲಂಕಾಕ್ಕೆ ಹೋದವರು. ಅದಕ್ಕಾಗಿಯೇ ನಮ್ಮ ಜನನ ಪ್ರಮಾಣಪತ್ರದಲ್ಲಿಯೂ ಭಾರತೀಯ ತಮಿಳರು ಮತ್ತು ಶ್ರೀಲಂಕಾ ತಮಿಳರು ಎಂದು ಎರಡು ವರ್ಗಗಳನ್ನು ಉಲ್ಲೇಖಿಸಲಾಗಿದೆ. ನಮ್ಮೆಲ್ಲರನ್ನೂ ಭಾರತೀಯ ತಮಿಳರು ಎಂದು ಕರೆಯಲಾಗುತ್ತದೆ. ಯುದ್ಧದ ಸಮಯದಲ್ಲಿ ಬಂದ ಶ್ರೀಲಂಕಾದ ಸ್ಥಳೀಯರು ಈಗ ಮರಳಿದ್ದಾರೆ. ಉಳಿದಿರುವವರಲ್ಲಿ ಹೆಚ್ಚಿನವರು ಇಲ್ಲಿ ಈಗ ಭಾರತೀಯ ತಮಿಳರು ಇದ್ದಾರೆ'' ಎಂದು ಅವರು ತಿಳಿಸಿದರು.

''ಮ್ಯಾನ್ಮಾರ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳ ಹಿಂದೂಗಳಿಗೆ ಪೌರತ್ವವನ್ನು ನೀಡುವ ಸಿಎಎ, ಶ್ರೀಲಂಕಾದ ತಮಿಳರಿಗೆ ಪೌರತ್ವವನ್ನು ನಿರಾಕರಿಸುತ್ತದೆ. ಶ್ರೀಲಂಕಾದಲ್ಲಿರುವ ತಮಿಳರು ಭಾರತದಲ್ಲಿ ಹಿಂದೂಗಳೆಂದು ವ್ಯಾಖ್ಯಾನಿಸಲ್ಪಟ್ಟವರು ಪೂಜಿಸುವ ಅದೇ ಮುರುಗನನ್ನು ಪೂಜಿಸುತ್ತಾರೆ. ಇಬ್ಬರ ಸಂಸ್ಕೃತಿಯೂ ಒಂದೇ. ಆದರೆ ಅವರನ್ನು ಹಿಂದೂಗಳೆಂದು ಪರಿಗಣಿಸದೇ ಅವರಿಗೆ ಪೌರತ್ವವನ್ನು ನಿರಾಕರಿಸುವುದು ವಿರೋಧಾಭಾಸವಾಗಿದೆ'' ಎಂದು ಬೇಸರ ವ್ಯಕ್ತಪಡಿಸಿದರು.

ಸಮಿತಿಯ ಶಿಫಾರಸುಗಳು: ಶ್ರೀಲಂಕಾ ತಮಿಳರ ಕುರಿತು ರಚಿಸಲಾದ ಸಲಹಾ ಸಮಿತಿಯ ಮಧ್ಯಂತರ ವರದಿಯು ದೀರ್ಘಾವಧಿಯ ಪರಿಹಾರವಾಗಿ ಹಲವಾರು ಶಿಫಾರಸುಗಳನ್ನು ಪಟ್ಟಿಮಾಡಿದೆ. ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ನ ವಿವಿಧ ತೀರ್ಪುಗಳ ಆಧಾರದ ಮೇಲೆ ಭಾರತೀಯ ಪೌರತ್ವಕ್ಕೆ ಅರ್ಹತೆ ಪಡೆದಿರುವ ಶ್ರೀಲಂಕಾ ತಮಿಳರ ಪಟ್ಟಿಯನ್ನು ಒಟ್ಟುಗೂಡಿಸಲು ತಮಿಳುನಾಡು ಸರ್ಕಾರಕ್ಕೆ ವರದಿ ಶಿಫಾರಸು ಮಾಡಿದೆ.

ಶ್ರೀಲಂಕಾದ ಪ್ರಜೆಗಳು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವುದನ್ನು ನಿರ್ಬಂಧಿಸುವ ಕೇಂದ್ರ ಗೃಹ ಸಚಿವಾಲಯವು 1986ರಲ್ಲಿ ಹೊರಡಿಸಿದ ಪತ್ರವನ್ನು ಹಿಂಪಡೆಯಲು ಅಥವಾ ರದ್ದುಗೊಳಿಸುವುದಕ್ಕೂ ಶಿಫಾರಸು ಮಾಡಿದೆ. 1983ರಿಂದ ತಮಿಳುನಾಡಿನಲ್ಲಿ ಆಶ್ರಯ ಪಡೆದಿರುವ ಶ್ರೀಲಂಕಾ ತಮಿಳರನ್ನು ಪೌರತ್ವ ಕಾಯ್ದೆ-1955ರ ಪ್ರಕಾರ ಅಕ್ರಮ ವಲಸಿಗರ ಅಡಿ ತರಲಾಗಿದೆ. ಇದನ್ನು ಪರಿಶೀಲಿಸಬೇಕು ಮತ್ತು ಶ್ರೀಲಂಕಾ ತಮಿಳರ ಪ್ರವೇಶವನ್ನು ಗೃಹ ವ್ಯವಹಾರಗಳ ಸಚಿವಾಲಯದ ಒಪ್ಪಿಗೆಯೊಂದಿಗೆ ಕೈಗೊಂಡಿರುವುದರಿಂದ ಇದನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

ಸಿಎಎ ಅಡಿಯಲ್ಲಿ ಪೌರತ್ವ ನೀಡಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡುವಂತೆಯೇ, ತಮಿಳು ನಿರಾಶ್ರಿತರ ಮೇಲಿನ ಮಧ್ಯಂತರ ವರದಿಯಲ್ಲಿನ ಸಮಿತಿಯು ಪೌರತ್ವ ಅರ್ಜಿಗಳನ್ನು ವ್ಯವಹರಿಸುವಾಗ ಪೌರತ್ವ ಕಾಯ್ದೆಯ ಸೆಕ್ಷನ್ 16ರ ಅಡಿ ಅಧಿಕಾರದ ನಿಯೋಗವನ್ನು ತಮಿಳುನಾಡು ಸರ್ಕಾರ ಕೇಳಬಹುದು ಎಂದು ಶಿಫಾರಸು ಮಾಡಲಾಗಿದೆ.

ತಮಿಳುನಾಡು ಸರ್ಕಾರವು ನ್ಯಾಯವ್ಯಾಪ್ತಿಯ ನಿರಾಶ್ರಿತರ ತಹಶೀಲ್ದಾರ್‌ಗಳ ಅಡಿಯಲ್ಲಿ ಮತ್ತು ಪುನರ್ವಸತಿ ಕಮಿಷನರೇಟ್‌ನ ಮೇಲ್ವಿಚಾರಣೆಯಲ್ಲಿ ನೋಡಲ್ ಘಟಕಗಳನ್ನು ಸ್ಥಾಪಿಸಬಹುದು. ಭಾರತೀಯ ಮೂಲದ ತಮಿಳರು ಸೇರಿದಂತೆ ಶ್ರೀಲಂಕಾದ ತಮಿಳರಿಗೆ ತಮ್ಮ ಪೌರತ್ವ ಅರ್ಜಿಗಳೊಂದಿಗೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಹಾಯ ಮಾಡಲು ಸಮಿತಿಯು ವರದಿಯಲ್ಲಿ ಶಿಫಾರಸು ಮಾಡಿದೆ. ದೇಶದಲ್ಲಿ ಚುನಾವಣಾ ಪ್ರಚಾರದ ಉತ್ತುಂಗದಲ್ಲಿದ್ದಾಗ ಕಚ್ಚತೀವು ವಿವಾದವನ್ನು ಎತ್ತುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಾಯಕರ ಭಾಷಣಗಳಲ್ಲಿ ತಮಿಳು ನಿರಾಶ್ರಿತರ ಸಂಕಟಗಳ ಅಷ್ಟೇನೂ ಉಲ್ಲೇಖ ಕಾಣುತ್ತಿಲ್ಲ. ಈ 60,000 ಜನರು ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಂದಾಗ ಶೂನ್ಯ ಎಂದು ಪರಿಗಣಿಸಿದ್ದಾರೆಯೇ?.

ವರದಿ: ಎಸ್.ಶ್ರೀನಿವಾಸ್​ ಮತ್ತು ಶಿವಕುಮಾರ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.