ಭುವನೇಶ್ವರ: ಒಡಿಶಾದಲ್ಲಿ ಪ್ರಮುಖ ಸವಾಲಾಗಿ ಪರಿಣಮಿಸುತ್ತಿರುವ ಮಾನವ- ಕಾಡಾನೆ ಸಂಘರ್ಷವನ್ನು ತಗ್ಗಿಸುವ ಸಲುವಾಗಿ ರಾಜ್ಯ ಸರ್ಕಾರ ತಮಿಳುನಾಡಿನ ಮೊರೆ ಹೋಗಿದೆ. ಕಾಡಾನೆ ದಾಳಿಯಿಂದ ಹೆಚ್ಚುತ್ತಿರುವ ಮಾನವ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಮಾನವರ ಆವಾಸ ಸ್ಥಾನಗಳಿಗೆ ದಾಳಿಯಿಡುತ್ತಿರುವ ಕಾಡಾನೆಗಳನ್ನು ಓಡಿಸಲು, ಒಡಿಶಾ ಸರ್ಕಾರ ತಮಿಳುನಾಡಿನಿಂದ 4 ಕುಮ್ಕಿ ಆನೆಗಳು ಹಾಗು ಅವುಗಳ ಮಾವುತರನ್ನು ಪೂರೈಸುವಂತೆ ತಮಿಳುನಾಡಿನ ಅರಣ್ಯ ಇಲಾಖೆಯನ್ನು ತುರ್ತಾಗಿ ಸಂಪರ್ಕಿಸಿದೆ.
ಕುಮ್ಕಿ ತರಬೇತಿ ಪಡೆದ ಸಾಕಾನೆಗಳಾಗಿದ್ದು, ಕಾಡಾನೆಗಳನ್ನು ಸೆರೆ ಹಿಡಿಯಲು, ಗಾಯಗೊಂಡ ಅಥವಾ ಸಿಕ್ಕಿಬಿದ್ದ ಕಾಡಾನೆಗಳನ್ನು ರಕ್ಷಿಸಲು, ವೈದ್ಯಕೀಯ ಚಿಕಿತ್ಸೆ ನೀಡಲು ಹಾಗೂ ಅವುಗಳನ್ನು ಶಾಂತಗೊಳಿಸುವ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ತಮ್ಮ ರಾಜ್ಯದ ಸಮಸ್ಯೆ ನಿವಾರಣೆಗೆ ಕುಮ್ಕಿ ಆನೆಗಳನ್ನು ಪೂರೈಸುವಂತೆ ಸಹಾಯ ಕೋರಿ ಒಡಿಶಾದ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸತ್ಯಬ್ರತ ಸಾಹು ಅವರು ತಮಿಳುನಾಡು ಅರಣ್ಯ ಇಲಾಖೆಗೆ ತುರ್ತು ಪತ್ರವನ್ನು ಬರೆದಿದ್ದಾರೆ.
"ಇತ್ತೀಚಿನ ವರ್ಷಗಳಲ್ಲಿ, ಮಾನವ-ಕಾಡಾನೆ ಸಂಘರ್ಷಗಳನ್ನು ತಗ್ಗಿಸುವಲ್ಲಿ ನಾವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಪಡೆಯುವಲ್ಲಿ ನಿಮ್ಮ ಸಹಾಯ, ಈ ಮಾನವ- ಪ್ರಾಣಿ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಮತ್ತು ಮಾನವೀಯವಾಗಿ ಪರಿಹರಿಸಲು ಸಹಾಯ ಮಾಡಬಹುದು. ಕಾಡಾನೆಗಳನ್ನು ಓಡಿಸಲು ಕುಮ್ಕಿ ಆನೆಗಳನ್ನು ಕಾರ್ಯತಂತ್ರವಾಗಿ ಬಳಸಿಕೊಳ್ಳಬಹುದು. ಇದರಿಂದಾಗಿ ಬೆಳೆಗಳಿಗೆ ಹಾಗೂ ಮಾನವ ವಸತಿಗಳಿಗೆ ಹಾನಿ, ಮಾನವ ಮತ್ತು ಆನೆಗಳ ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಇದು ಸಹಾಯವಾಗಬಹುದು. ಈ ಆನೆಗಳನ್ನು ಅರಣ್ಯ ಗಸ್ತು ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೂ ನಿಯೋಜಿಸಬಹುದು" ಎಂದು ಸತ್ಯಬ್ರತ ಸಾಹು ಹೇಳಿದ್ದಾರೆ.
"ತಮಿಳುನಾಡು ಕುಮ್ಕಿ ಆನೆಗಳಿಗೆ ತರಬೇತಿ ನೀಡಿ, ವನ್ಯಜೀವಿ ಸಂರಕ್ಷಣಾ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಯಶಸ್ವಿ ಹಾಗೂ ಶ್ಲಾಘನೀಯ ಕಾರ್ಯಕ್ರಮವನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಂಡು, ಒಡಿಶಾದ ಸಂಘರ್ಷಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲು ನಾಲ್ಕು ಕುಮ್ಕಿ ಆನೆಗಳನ್ನು ನಮಗೆ ಒದಗಿಸಬೇಕು" ಎಂದು ಸತ್ಯಬ್ರತ ಪತ್ರದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ತಮಿಳುನಾಡಿನಲ್ಲಿರುವ ತಮ್ಮ ಸಹವರ್ತಿ ಸುಪ್ರಿಯಾ ಸಾಹು ಅವರಿಗೆ ಪತ್ರ ಬರೆದಿರುವ ಒಡಿಶಾ ಅಧಿಕಾರಿ, ಕುಮ್ಕಿ ಆನೆಗಳು ರಾಜ್ಯದ ವನ್ಯಜೀವಿ ಸಂಘಟನೆಗೆ ಅಮೂಲ್ಯವಾದ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಮತ್ತು ಸಂಘರ್ಷಗಳನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಸಹಾಯ ಮಾಡುತ್ತವೆ. ಒಡಿಶಾದಲ್ಲಿ ತರಬೇತಿ ಪಡೆದ ಮಾವುತರು ಇಲ್ಲದಿರುವುದರಿಂದ ಕುಮ್ಕಿ ಆನೆಗಳ ಆರೈಕೆಗಾಗಿ ಮಾವುತರನ್ನು ನಿಯೋಜಿಸಿ, ಒಡಿಶಾದ ಸ್ಥಳೀಯ ಮಾವುತರಿಗೆ ಕುಮ್ಕಿ ಆನೆಗಳನ್ನು ಪಳಗಿಸಲು ಆರಂಭಿಕ ಬೆಂಬಲವನ್ನು ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ವಿನಂತಿಸಿದೆ.
ಇದನ್ನೂ ಓದಿ: ನಾಡಿನತ್ತ ಕಾಡಾನೆಗಳ ಸವಾರಿ: ಚಾಮರಾಜನಗರ ಗಡಿ ಗ್ರಾಮಗಳಲ್ಲಿ ಬೆಳೆನಾಶದ ಭೀತಿ