ETV Bharat / bharat

ಅಬಕಾರಿ ಕೇಸ್​: ಸಿಬಿಐ ವಿಚಾರಣೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಬಿಆರ್‌ಎಸ್ ನಾಯಕಿ ಕವಿತಾ - KAVITHA

author img

By PTI

Published : Apr 6, 2024, 1:45 PM IST

ಸಿಬಿಐ ವಿಚಾರಣೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಬಿಆರ್‌ಎಸ್ ನಾಯಕಿ ಕವಿತಾ
ಸಿಬಿಐ ವಿಚಾರಣೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಬಿಆರ್‌ಎಸ್ ನಾಯಕಿ ಕವಿತಾ

ತಮ್ಮನ್ನು ಪ್ರಶ್ನಿಸಲು ಸಿಬಿಐಗೆ ಅವಕಾಶ ನೀಡಿದ್ದರ ವಿರುದ್ಧ ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಅವರ ಪುತ್ರಿ ಕೆ.ಕವಿತಾ ಅವರು ಇಲ್ಲಿನ ಕೋರ್ಟ್​ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್​ ಜೈಲಿನಲ್ಲಿ ಬಂಧಿತರಾಗಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಪುತ್ರಿ, ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಸಿಬಿಐ ವಿಚಾರಣೆ ನಡೆಸಲು ಅವಕಾಶ ನೀಡಬಾರದು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.

ಪ್ರಕರಣದಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲು ಕವಿತಾ ಅವರ ವಿಚಾರಣೆಗೆ ಅವಕಾಶ ಕೋರಿದ್ದ ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ಕೋರ್ಟ್​ ಅನುಮತಿ ನೀಡಿದೆ. ಇದರ ವಿರುದ್ಧ ಬಿಆರ್​ಎಸ್​ ನಾಯಕಿ ಸ್ಥಳೀಯ ಕೋರ್ಟ್​ನಲ್ಲಿ ಸವಾಲು ಮಾಡಿದ್ದಾರೆ. ಕವಿತಾ ಅವರು ಈಗಾಗಲೇ ಇಡಿ ಬಂಧನದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಿಬಿಐ ಕೂಡ ಅವರ ವಿರುದ್ಧ ಕೇಸ್​ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದೆ. ಸಿಬಿಐ ಅಧಿಕಾರಿಗಳು ತಮ್ಮನ್ನು ಪ್ರಶ್ನಿಸದಂತೆ ತಡೆಯಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಕವಿತಾ ಅವರ ಪರ ವಾದ ಮಂಡಿಸಿದ ವಕೀಲ ನಿತೇಶ್ ರಾಣಾ ಅವರು, ಸಿಬಿಐ ತಮ್ಮ ಕಕ್ಷಿದಾರರನ್ನು ವಿಚಾರಣೆ ನಡೆಸುತ್ತಿರುವುದು ಕಾನೂನಿನ ವಿರುದ್ಧವಾಗಿದೆ. ಇಡಿ ವಿಚಾರಣೆಯಲ್ಲಿರುವಾಗಲೇ ಸಿಬಿಐ ವಿಚಾರಣೆ ಸಲ್ಲದು ಎಂದು ಕೋರ್ಟ್​ ಮುಂದೆ ವಾದಿಸಿದ್ದಾರೆ. ನ್ಯಾಯಾಲಯಕ್ಕೆ ನಿಜ ಸಂಗತಿಗಳನ್ನು ತಿಳಿಸದೇ, ವಿಚಾರಣೆಗೆ ಅನುಮತಿ ಪಡೆಯಲಾಗಿದೆ. ಇದರಲ್ಲಿ ಕವಿತಾ ಅವರ ವಾದವನ್ನೂ ಆಲಿಸಬೇಕು. ಅಲ್ಲಿಯವರೆಗೂ ಸಿಬಿಐಗೆ ನೀಡಿದ ಅನುಮತಿಯನ್ನು ಹಿಂಪಡೆಯಬೇಕು ಎಂದು ಕೋರಿದ್ದಾರೆ. ಕೋರ್ಟ್​ ಕವಿತಾ ಪರ ಅರ್ಜಿಯನ್ನು ಶನಿವಾರದ ನಂತರ ಆಲಿಸುವ ಸಾಧ್ಯತೆಯಿದೆ.

ಮಧ್ಯಂತರ ಜಾಮೀನಿಗೆ ಮನವಿ: ತಿಹಾರ್​ ಜೈಲಿನಲ್ಲಿರುವ ಕವಿತಾ ಅವರು ಮಧ್ಯಂತರ ಜಾಮೀನು ನೀಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ 16 ವರ್ಷದ ಪುತ್ರನ ಶೈಕ್ಷಣಿಕ ಪರೀಕ್ಷೆಗಳು ನಡೆಯುತ್ತಿದ್ದು, ತಾಯಿಯಾಗಿ ನೈತಿಕ ಬೆಂಬಲದ ಅಗತ್ಯವಿದೆ. ಹೀಗಾಗಿ ತಮಗೆ ಜಾಮೀನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರ 'ಸೌತ್ ಗ್ರೂಪ್​' ಕಂಪನಿಯು ದೆಹಲಿಯ ಮದ್ಯ ನೀತಿ ಹಗರಣದಲ್ಲಿ ಪರವಾನಗಿಗೆ 100 ಕೋಟಿ ರೂಪಾಯಿ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಸಂಬಂಧಿಸಿದಂತೆ ಅವರನ್ನು ಇಡಿ ಅಧಿಕಾರಿಗಳು ಮಾರ್ಚ್ 15 ರಂದು ಹೈದರಾಬಾದ್‌ನಲ್ಲಿನ ಅವರ ಬಂಜಾರಾ ಹಿಲ್ಸ್ ನಿವಾಸದಿಂದ ಬಂಧಿಸಿತ್ತು. ಕಳೆದ ಮಂಗಳವಾರದಿಂದ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ಬಿಆರ್‌ಎಸ್ ಎಂಎಲ್‌ಸಿ ಕವಿತಾ ಪ್ರಶ್ನಿಸಲು ಸಿಬಿಐಗೆ ಕೋರ್ಟ್ ಅನುಮತಿ - MLC Kavitha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.