ETV Bharat / state

ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವ : ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭಾಗಿ

author img

By ETV Bharat Karnataka Team

Published : Jan 2, 2024, 8:37 PM IST

ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಠಾಧೀಶರು ಭಾಗವಹಿಸಿದ್ದರು.

ವಿಜಯಪುರದ ಜ್ಞಾನಯೋಗಾಶ್ರಮ
ವಿಜಯಪುರದ ಜ್ಞಾನಯೋಗಾಶ್ರಮ

ವಿಜಯಪುರ : ನಡೆದಾಡುವ ದೇವರು, ಶತಮಾನದ ಸಂತ, ಖ್ಯಾತ ಪ್ರವಚನಕಾರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗುರುನಮನ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಇತರ ಮಠಾಧೀಶರು, ಸಚಿವರು, ಶಾಸಕರು ಮತ್ತು ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷ ಸಂದಿದೆ. ಈ ಸಂಬಂಧ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಇಂದು ಪುಷ್ಪನಮನ ಕಾರ್ಯಕ್ರಮ ನಡೆಯಿತು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ನಡೆಯಿತು.

ಬಳಿಕ ಗುರುನಮನ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಸಿದ್ದೇಶ್ವರ ಶ್ರೀಗಳ ಪ್ರವಚನದ ಕುರಿತ 20 ಗ್ರಂಥಗಳನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ನಾನು ಇಂದು ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಬಂದಿದ್ದೇನೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಪ್ರೀತಿ, ಗೌರವ ಇದೆ. ಅವರ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ. ನಾನು ಹಿಂದೊಮ್ಮೆ ಶರಣ ಸಾಹಿತ್ಯ ಸಮ್ಮೇಳನಕ್ಕೆ ವಿಜಯಪುರಕ್ಕೆ ಬಂದಿದ್ದೆ ಎಂದರು.

ನಾನು ಬಸವಾದಿ ಶರಣರ ಅನುಯಾಯಿ. ಬಸವಾದಿ ಶರಣರು ನಮ್ಮ ಸಮಾಜದ ಅಂಕುಡೊಂಕುಗಳನ್ನು ತೊಲಗಿಸಿ, ಜಾತಿ ರಹಿತವಾದ ಸಮಾಜದ ಕನಸು ಕಂಡವರು. ಈ ಸಿದ್ದೇಶ್ವರ ಸ್ವಾಮಿಗಳು ಅದೇ ಸಾಲಿನಲ್ಲಿದ್ದರು. ಶ್ರೀಗಳು ಮನುಷ್ಯ ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ಪ್ರವಚನದ ಮೂಲಕ ಸಾರಿದ್ದಾರೆ. ಸಿದ್ದೇಶ್ವರ ಶ್ರೀಗಳು ಜ್ಞಾನವನ್ನು ಸಂಪಾದನೆ ಮಾಡಿದರು. ಅದುವೇ ಮನುಷ್ಯತ್ವದ ಜ್ಞಾನ. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು ಎಂಬುದು ಶ್ರೀಗಳ ಉದ್ದೇಶವಾಗಿತ್ತು. ತಾಯಿ ಮಕ್ಕಳನ್ನು ಪ್ರೀತಿಸುವಂತೆ ಎಲ್ಲರನ್ನೂ ಪ್ರೀತಿಸಬೇಕೆಂಬುದು ಶ್ರೀಗಳ ತತ್ವವಾಗಿತ್ತು. ಶ್ರೀಗಳ ಬದುಕು ನಮಗೆಲ್ಲ ಆದರ್ಶವಾಗಿದೆ. ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀಗಳ ಅಗಲಿಕೆಗೂ ಮುನ್ನ ನಾನು ಇಲ್ಲಿಗೆ ಬಂದಿದ್ದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಎಂ ಬಿ ಪಾಟೀಲ್‌, ಶಿವಾನಂದ ಪಾಟೀಲ್‌, ಎಚ್ ಕೆ ಪಾಟೀಲ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಲಕ್ಷಾಂತರ ಭಕ್ತರು ಆಶ್ರಮಕ್ಕೆ ಆಗಮಿಸಿ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ವೇದಿಕೆಗೆ ಆಗಮಿಸುವ ಮುನ್ನವೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆರಳಿದರು.

ಕಾರ್ಯಕ್ರಮದಿಂದ ಯತ್ನಾಳ್ ಗೈರು : ಸಿದ್ದೇಶ್ವರ ಸ್ವಾಮಿಗಳ ಗುರುನಮನ ಮಹೋತ್ಸವದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಬಸನಗಡ ಪಾಟೀಲ್​ ಯತ್ನಾಳ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇವರ ಬದಲು ಯತ್ನಾಳ್​ ಪುತ್ರ ರಾಮನಗೌಡ ಪಾಟೀಲ್ ಭಾಗಿಯಾಗಿದ್ದರು.

ಆಶ್ರಮಕ್ಕೆ ಹರಿದು ಬಂದ ಭಕ್ತ ಜನಸಾಗರ : ಗುರುನಮನ ಮಹೋತ್ಸವ ಹಿನ್ನೆಲೆ ಆಶ್ರಮಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಜನರು ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಹಾಗೂ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ನಮಸ್ಕರಿಸಿದರು. ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಹಾಗೂ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಆಗಮಿಸಿದ್ದರು.

ಆಶ್ರಮದಲ್ಲಿ ಶ್ರೀಗಳ ಭಾವಚಿತ್ರ ಪ್ರದರ್ಶನ: ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಶ್ರೀಗಳ ಬಾಲ್ಯದ ಹಾಗೂ ವಿವಿಧ ಸ್ಥಳಗಳಲ್ಲಿ ತೆಗೆದಿರುವ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ಭಕ್ತರಿಗೆ ಅನ್ನದಾಸೋಹ : ಗುರುನಮನ ಕಾರ್ಯಕ್ರಮ ಹಿನ್ನೆಲೆ ಆಶ್ರಮದಲ್ಲಿ ಅನ್ನ ದಾಸೋಹ ನಡೆಯಿತು. ಬೆಳಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಅನ್ನ ಸಾಂಬಾರು, ಪಾಯಸ ವ್ಯವಸ್ಥೆ ಮಾಡಲಾಗಿತ್ತು. ಕಳೆದ 9 ದಿನಗಳಿಂದ ನಿರಂತರವಾಗಿ ಅನ್ನದಾಸೋಹ ನಡೆಯುತ್ತಿದೆ.

ಆಶ್ರಮದಲ್ಲಿ ಗ್ರಂಥಾಲಯ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಜ್ಞಾನಯೋಗಾಶ್ರಮದಲ್ಲಿ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು. ಈ ಗ್ರಂಥಾಲಯವು 14 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿದೆ.

ಇದನ್ನೂ ಓದಿ : ಬಾಲರಾಮನ ವಿಗ್ರಹ ಶಿಲೆ, ಶಿಲ್ಪಿ ನಮ್ಮ ಕರುನಾಡಿನ ಹೆಮ್ಮೆ: ಸುಬುಧೇಂದ್ರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.