ಬೆಂಗಳೂರು: ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ.ಬದಲಾವಣೆ ಮಾಡಲಾಗಿದೆ. ಅವರನ್ನು ಆರ್ಎಸ್ಎಸ್ ಸಾಮರಸ್ಯ ಗತಿ ವಿಧಿ ಪ್ರಾಂತ ಸಹ ಸಂಯೋಜಕರಾಗಿ ನೇಮಿಸಲಾಗಿದೆ. ರಾಜೇಶ್.ಜಿ.ವಿ. ಅವರನ್ನು ಜುಲೈ 2022ರಂದು ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಲಾಗಿತ್ತು. ಆರ್ಎಸ್ಎಸ್ ಕಾರ್ಯಕರ್ತ ಹಾಗೂ ತುಮಕೂರು ವಿಭಾಗದ ಪ್ರಚಾರಕರಾಗಿದ್ದ ರಾಜೇಶ್ ಜಿ.ವಿ ಅವರನ್ನು ಇದೀಗ ಆರ್ಎಸ್ಎಸ್ಗೆ ಮರುನಿಯುಕ್ತಿಗೊಳಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯ ಮುನ್ನ ರಾಜೇಶ್ ಅವರನ್ನು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆದರೆ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರ ಪಡೆಯುವಲ್ಲಿ ವಿಫಲವಾಗಿತ್ತು. ಇತ್ತ ಲೋಕಸಭೆ ಚುನಾವಣೆ ವೇಳೆಯೂ ಆರ್ಎಸ್ಎಸ್ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ, ಪ್ರಚಾರಕ್ಕಾಗಿ ಬಳಸುವಲ್ಲಿ ರಾಜೇಶ್ ನಿರೀಕ್ಷಿತ ಯಶ ಕಂಡಿಲ್ಲ ಎಂದು ಹೇಳಲಾಗಿದೆ.
ಪ್ರಚಾರ ಕಾರ್ಯದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ರಾಜೇಶ್ ಜಿ.ವಿ. ಆರ್ಎಸ್ಎಸ್ ಜೊತೆ ಸಮನ್ವಯತೆ ಸಾಧಿಸಿ ಪಕ್ಷ ಸಂಘಟಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕೂಗು ಕೇಳಿ ಬಂದಿತ್ತು. ಜೊತೆಗೆ ಬಂಡಾಯ ಶಮನ ಮಾಡುವಲ್ಲೂ ಸಫಲವಾಗಿಲ್ಲ ಎಂಬ ಅಸಮಾಧಾನವೂ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬದಲಾಯಿಸಿರುವುದು ಅನುಮಾನ ಮೂಡಿಸಿದೆ.
ಆರ್ಎಸ್ಎಸ್ ಪ್ರಾಂತ ಮತ್ತು ವಿಭಾಗ ಪ್ರಚಾರಕ್ ವ್ಯವಸ್ಥೆಯಲ್ಲಿ 12 ಜವಾಬ್ದಾರಿಗಳ ಬದಲಾವಣೆ ಮಾಡಲಾಗಿದೆ.
ರಾಜೇಶ್ ಜಿ.ವಿ. ಪ್ರಾಂತ ಸಹ ಸಾಮರಸ್ಯ ಸಂಯೋಜಕ್
ಅಕ್ಷಯ್ - ಪ್ರಾಂತ ಗ್ರಾಮ ವಿಕಾಸ ಸಂಯೋಜಕ್
ಅನಂತ ಕೃಷ್ಣ - ಮೈಸೂರು ವಿಭಾಗ ಪ್ರಚಾರಕ್
ಕೃಷ್ಣ ಪ್ರಸಾದ್ - ಪ್ರಾಂತ ಬೌದ್ಧಿಕ ಪ್ರಮುಖ್
ಚಂದ್ರಬಾಬು - ಪ್ರಾಂತ ಪ್ರಚಾರಕ್ ಪ್ರಮುಖ್
ಮನೋಹರ್ - ಪ್ರಾಂತ ಕಾರ್ಯಕಾರಿಣಿ ಸದಸ್ಯ
ಉಮೇಶ್ - ಪ್ರಾಂತ ಸೇವಾ ಟೋಳಿ ಸದಸ್ಯ
ಉಮೇಶ್ - ಪ್ರಾಂತ ಕಾಲೇಜು ವಿದ್ಯಾರ್ಥಿ ಪ್ರಮುಖ್
ಬಾಲಕೃಷ್ಣ ಕಿಣಿ - ಘುಮಂತು ಕಾರ್ಯ ಸಂಯೋಜಕ್
ಮಂಜುನಾಥ್ - ಹಾಸನ ವಿಭಾಗ ಪ್ರಚಾರಕ್
ಚಿನ್ಮಯ್ - ಬೆಂಗಳೂರು ಉತ್ತರ ವಿಭಾಗ ಪ್ರಚಾರಕ್
ಅಜಯ್ - ಚಂದಾಪುರ ಭಾಗ ಪ್ರಚಾರಕ್
ಇದನ್ನೂ ಓದಿ: ಪರಿಷತ್ ಚುನಾವಣೆ: ಬಂಡಾಯ ಅಭ್ಯರ್ಥಿ ರಘುಪತಿ ಭಟ್ 6 ವರ್ಷ ಬಿಜೆಪಿಯಿಂದ ಉಚ್ಚಾಟನೆ - BJP Expels Raghupati Bhat