ETV Bharat / state

ಜಾತ್ರೆ ಮಾಡಿ ಸೋಂಕು ಹರಡಿಸಬೇಡಿ- ಅಬ್ಬಿಹಾಳ ಗ್ರಾಮಸ್ಥರಿಗೆ ಅಧಿಕಾರಿಗಳ ಸೂಚನೆ

author img

By

Published : May 23, 2021, 8:23 AM IST

Notice to Abhila Villagers as don't make fair
ಮುದ್ದೇಬಿಹಾಳ ಅಧಿಕಾರಿಗಳ ಸಭೆ

ನಿನ್ನೆ ಅಬ್ಬಿಹಾಳ ಗ್ರಾಮದಲ್ಲಿ ಮೇ. 25ರಂದು ಗ್ರಾಮ ದೇವತೆ ಜಾತ್ರೆ ಮಾಡದಂತೆ ಅರಿವು ಮೂಡಿಸುವ ಅಧಿಕಾರಿಗಳು ಸಭೆ ನಡೆಸಿದರು. ಮೊದಲು ತಿಳಿವಳಿಕೆ ಹೇಳುತ್ತೇವೆ, ನಿಯಮ ಮೀರಿದರೆ ಕ್ರಮ ಜರುಗಿಸುತ್ತೇವೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಮುದ್ದೇಬಿಹಾಳ: ತಾಲೂಕಿನ ಅಬ್ಬಿಹಾಳದಲ್ಲಿ ಮೇ. 25ರಂದು ನಡೆಯಬೇಕಾಗಿದ್ದ ಗ್ರಾಮ ದೇವತೆ ಜಾತ್ರೆಯ ವೇಳೆ ಗ್ರಾಮಸ್ಥರು ನೂರಾರು ಪ್ರಾಣಿಗಳನ್ನು ಬಲಿ ಕೊಡುವ ಉದ್ದೇಶ ಇಟ್ಟುಕೊಂಡಿದ್ದರು ಎಂಬ ಮಾಹಿತಿ ತಿಳಿದುಕೊಂಡ ಪಿಎಸ್​ಐ ಹಾಗೂ ಗ್ರಾ.ಪಂ, ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜಾತ್ರಾ ಕಮಿಟಿಗೆ ನೋಟಿಸ್ ನೀಡಿದ್ದು, ಯಾವುದೇ ಕಾರಣಕ್ಕೂ ಜಾತ್ರೆ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.

ಜಾತ್ರೆ ಬೇಡ - ಅಬ್ಬಿಹಾಳ ಗ್ರಾಮಸ್ಥರಿಗೆ ಅಧಿಕಾರಿಗಳ ಸೂಚನೆ

ತಾಲೂಕಿನ ಅಬ್ಬಿಹಾಳ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರಿಗೆ ಗ್ರಾಮ ದೇವತೆ ಜಾತ್ರೆ ಮಾಡದಂತೆ ಅರಿವು ಮೂಡಿಸುವ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಪಿಎಸೈ ಎಂ.ಬಿ. ಬಿರಾದಾರ, ಇತ್ತೀಚೆಗೆ ತಾಲೂಕಿನ ಬಸರಕೋಡದಲ್ಲಿ ಜಾತ್ರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟವರು ಬಳಿಕ ಸರ್ಕಾರದ ಆದೇಶ ಉಲ್ಲಂಘಿಸಿ ರಥ ಎಳೆಯುವ ವೇಳೆ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಅಂತಹ ತಪ್ಪು ಅಬ್ಬಿಹಾಳ ಗ್ರಾಮದ ಜನರು ಮಾಡಬೇಡಿ ಎಂದು ತಿಳಿ ಹೇಳಿದರು.

ಕೋವಿಡ್​ ಹಳ್ಳಿ ಹಳ್ಳಿಗೂ ಲಗ್ಗೆಯಿಟ್ಟಿದೆ. ಸಣ್ಣ ಮಕ್ಕಳು, ತಾಯಂದಿರು, ವೃದ್ಧರು ಅಪಾಯ ತಂದುಕೊಳ್ಳುವ ಕೆಲಸ ಮಾಡಬಾರದು. ಓರ್ವರಿಗೆ ಸೋಂಕು ತಗುಲಿತೆಂದರೆ ಮನೆ ಮಂದಿಗೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಜೀವ ಉಳಿಸಿಕೊಳ್ಳಲು ನಿಮ್ಮ ಹೊಲ, ಮನೆ ಮಾರಬೇಕಾಗುತ್ತದೆ. ನೀವು ಎಚ್ಚರಿಕೆಯಿಂದ ಇರಬೇಕು. ಯಾವುದೇ ಜಾತ್ರೆ ಉತ್ಸವ ನಡೆಸಬಾರದು. ಮೊದಲು ತಿಳುವಳಿಕೆ ಹೇಳುತ್ತೇವೆ, ನಿಯಮ ಮೀರಿದರೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರಾಣಿ ಬಲಿ ಕೊಡುತ್ತಾರೆ ಎಂಬ ಮಾಹಿತಿ ಬಂದಿದ್ದು, ಅದನ್ನು ಮಾಡಿದ್ದೇ ಆದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಜಗತ್ತು ದುಃಖದಲ್ಲಿ ನರಳುತ್ತಿರುವಾಗ ನೀವು ಜಾತ್ರೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂದು ಪಿಎಸ್​ಐ ತಿಳಿಸಿದರು.

ಇದನ್ನೂ ಓದಿ: ಕೂಡಿಟ್ಟ ಹಣ ಕರಗಿತು; ಕೆಲಸವಿಲ್ಲದೆ ಬದುಕಾಯ್ತು ಬರ್ಬಾದ್‌: ಬಡ, ಮಧ್ಯಮ ವರ್ಗಕ್ಕೆ ಶಾಪವಾದ ಕೊರೊನಾ

ಚೆಕ್​ಪೋಸ್ಟ್​​ಗೆ ಸಿಪಿಐ ಭೇಟಿ: ಸಾರ್ವಜನಿಕರು ಮನೆಯಲ್ಲಿರುವಂತೆ ಸಿಪಿಐ ಆನಂದ ವಾಘಮೋಡೆ ಮನವಿ ಮಾಡಿದರು. ಬಳಿಕ ತಾಲೂಕಿನ ನಾಗಬೇನಾಳ ಬಳಿ ನಿರ್ಮಿಸಿರುವ ಚೆಕ್‌ಪೋಸ್ಟ್​​​ಗೆ ತೆರಳಿ ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಬೇಡಿ ಎಂದು ಅಲ್ಲಿನ ಸಿಬ್ಬಂದಿಗೆ ಹೇಳಿದರು. ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಉದ್ದೇಶಪೂರ್ವಕವಾಗಿ ಯಾರೂ ಕೂಡ ಸಂಚರಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.